ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಕಾದಂಬರಿ ಕುರಿತು ಕರ್ವಾಲೊ ಪೂರ್ಣಚಂದ್ರ ತೇಜಸ್ವಿ ಅರುಣಾ ರಾವ್ [10:21 AM, 11/7/2020] ARUNA RAO: ಪೂರ್ಣ ಚಂದ್ರ ತೇಜಸ್ವಿ ನನ್ನ ಯಾವತ್ತಿನ ಫೇವರೇಟ್ ರೈಟರ್. ಅವರ ಎಲ್ಲ ಕಾದಂಬರಿಗಳೂ ನನ್ನ ಬಳಿ ಇವೆ ಎಂದು ಹೇಳಿಕೊಳ್ಳಲು ನನಗೆ ಖುಷಿ. ಪ್ಯಾಪಿಲಾನ್, ಚಿದಂಬರ ರಹಸ್ಯ, ಅಬಚೂರಿನ ಫೋಸ್ಟ ಆಫೀಸ್, ತಬರನ ಕತೆ, ಅಡ್ವೆಂಚರ್ ಸೀರೀಸ್, ಅಲೆಮಾರಿ ಅಂಡಮಾನ್ ಎಲ್ಲವೂ ನನ್ನ ಪುಸ್ತಕ ಖಜಾನೆಯನ್ನು ಶ್ರೀಮಂತಗೊಳಿಸಿವೆ.ತೇಜಸ್ವಿಯವರ ಕಾದಂಬರಿಗಳು ಕೇವಲ ಮನರಂಜನಾ ಸಾಧನವಾಗಿರದೆ ಬುದ್ದಿಗೆ, ಮಂಥನಕ್ಕೆ ಆಹಾರವನ್ನು ಒದಗಿಸುತ್ತದೆ.ತೀರ ಇತ್ತೀಚೆಗಷ್ಟೇ ಅಂದರಡ ಲಾಕ್ ಡೌನ್ ನ ಅವಧಿಯಲ್ಲಿ ಮೂರನೇ ಬಾರಿಗೆ ಓದಿ ಮುಗಿಸಿದ ‘ಕರ್ವಾಲೋ’ ಕಾದಂಬರಿಯ ಬಗ್ಗೆ ಒಂದಷ್ಟು ಅನಿಸಿಕೆ. ಕರ್ವಾಲೋ ಹೆಸರೇ ಬಹಳ ವಿಚಿತ್ರ. ಕಾದಂಬರಿ ಓದಲು ಕೈಗೆತ್ರುಕೊಳ್ಳುವ ಮೊದಲು ಅದು ಒಂದು ಊರೇ? ಪ್ರಾಣಿಯೇ? ಸಸ್ಯವೇ? ಇವೆಲ್ಲ ಕುತೂಹಲವನ್ನು ಮೂಡಿಸುತ್ತದೆ. ಕಾದಂಬರಿ ಕಾಲು ಭಾಗ ಮುಗಿದ ನಂತರವೇ ನಮಗೆ ಕರ್ವಾಲೋರವರನ್ನು ಪರಿಚಯಿಸುತ್ತಾರೆ ಲೇಖಕರಾದ ತೇಜಸ್ವಿ. ಕಾದಂಬರಿಯ ಆರಂಭದಲ್ಲಿ ಮೂಡುಗೆರೆಯ ಮಲೆ,ಮಳೆ, ಜೇನು ಸಾಕಾಣಿಕೆ, ಆಗಾಗ ಕೆಟ್ಟು ನಿಲ್ಲುವ ಜೀಪು, ಯಾವಾಗಲೂ ಜೊತೆಗಿರುವ ಕಿವಿ( ನಾಯಿ) ಇವೆಲ್ಲದರ ಮಧ್ಯೆ ತಮ್ಮ ಜಮೀನನ್ನು ಮಾರಿಬಿಡಬೇಕೆಂಬ ಲೇಖಕರ ಪ್ರಯತ್ನ ಸಾಗುತ್ತಿರುವಾಗಲೇ ‘ಮಂದಣ್ಣ ಎಂಬ ಪಾತ್ರದ ಪರಿಚಯವಾಗುತ್ತದೆ. ಈತ ಕಾದಂವರಿಯುದ್ದಕ್ಕೂ ಒಬ್ಬ ರಹಸ್ಯ ವ್ಯಕ್ಕಿಯಾಗಿ ಉಳಿದು ಕುತೂಹಲ ಮೂಡಿಸತೊಡಗುತ್ತಾನೆ. ಸಾಮಾನ್ಯ ಜೀನು ಸಾಕಾಣಿಕಾ ಕೆಲಸಗಾರನಾಗಿ, ಸರ್ಕಾರಿ ಪ್ನ್ಯೂನ್ ಕೆಲಸಕ್ಕಾಗಿ ಗೋಗರೆಯುವ ಈತನ ಬಗ್ಗೆ ಸ್ವತ: ತೇಜಸ್ವಿಯವರಿಗೇ ಜಿಗುಪ್ಸೆ. “ಮದುವೆಯಾಗದ ಹೊರತು ಹುಚ್ಚು ಬಿಡದು, ಹುಚ್ಚು ಹೋಗದ ಹೊರತು ಮದುವರಯಾಗದು” ಎಂಬ ಗಾದೆಯಂತೆ ಕೆಲಸ ಸಿಗದ ಹೊರೆತು ರಾಮಣ್ಣನ ಮಗಳು ರಾಮಿಯನ್ನು ಮದುವೆಯಾಗಲಾರದ ಪರಿಸ್ಥಿತಿ ನಿರ್ಮಾಣವಾಗಿ,ಮಂದಣ್ಣ ಯಾವ ಕೆಲಸದಲ್ಲೂ ಆಸಕ್ತಿ ತೋರದೆ ಹೋದುದರಿಂದ ಕರ್ವಾಲೋರಂತಹ ವಿಜ್ಞಾನಿಯೇ ಮುಂದೆ ನಿಂತು ಮಂದಣ್ಣನ ಮದುವೆ ಮಾಡಿಸಬೇಕಾಗುತ್ತದೆ. ಮಂದಣ್ಣನ ಜೊತೆ ಊರು, ಕಾಡುಗಳನ್ನು ಅಲೆಯುವ ತಮ್ಮ ಬಗ್ಗೆ ಜನರು ತಪ್ಪು ತಿಳಿಯುತ್ತಿದ್ದಾರೆಂದು ಗೊತ್ತಿದ್ದರೂ ತಲೆ ಕೆಡಸಿಕೊಳ್ಳದೆ ತಮ್ಮ ಕೆಲಸದ ಕಡೆ ಗಮನ ಹರಿಸುವ ಕರ್ವಾಲೋರ ನಡತೆ ಅನುಕರಣೀಯ.ಮದುವೆಯಾದ ಮಂದಣ್ಣ ಬಟ್ಟಿ ಸಾರಾಯಿ ಕೇಸಿನಲ್ಲಿ ಜೈಲು ಪಾಲಾದಾಗಲೂ ಅವನ ನೆರವಿಗೆ ನಿಲ್ಲುತ್ತಾರೆ ಕರ್ವಾಲೋ. ಇದು ಕಾದಂಬರಿಕಾರರಿಗೆ ಮತ್ತು ಕರ್ವಾಲೋರ ಖಾಸಾ ಫೋಟೋಗ್ರಾಫರ್ .ಪ್ರಭಾಕರನಿಗೂ ಬಹಳ ಸೋಜಿಗವನ್ನುಂಟು ಮಾಡುತ್ತದೆ. ಸ್ವತಃ ಲಾಯರ್ ಗೊನ್ಸಸಾಲ್ ವೆನ್ಸ್, ಕರ್ವಾಲೋರಂತಹ ಗೌರವಾನ್ವಿತ ವ್ಯಕ್ತಿಯನ್ನು ಇಂತಹ ಕೇಸಿನಲ್ಲಿ ಇನ್ವಾಲ್ವ್ ಮಾಡೋದು ಹೇಗೆ? ಎಂದು ಮುಜುಗತ ಪಡುತ್ತಾರೆ. ಆದರೆ ಕರ್ವಾಲೋ ಈ ಬಾರಿಯೂ ಸ್ವಲ್ಪವೂ ಹಿಂಜರಿಯದೆ ಕೋರ್ಟಿಗೆ ಬಂದು ಮಂದಣ್ಣನ ಪರವಾಗಿ ಸಾಕ್ಷಿ ಹೇಳಿ ಅವನನ್ನು ಬಿಡಿಸುತ್ತಾರೆ.ಮಂದಣ್ಣನಿಗೂ ಕರ್ವಾಲೋರಿಗೂ ಇರುವ ಈ ಗಾಢ ಸಂಬಂಧ “ಎತ್ತಣ ಮಾಮರ ಎತ್ತಣ ಕೋಗಿಲೆ” ಎಂದು ಎಲ್ಲರೂ ಹುಬ್ಬೇರಿಸುವಂತಾಗುತ್ತದೆ. ಹಳ್ಳಿ ಗಮಾರನಾದ ಮಂದಣ್ಣನಿಗಾಗಿ ವಿಜ್ಞಾನಿಯಾದ ಕರ್ವಾಲೋ ಎಂತಹ ಸಹಾಯಕ್ಕೂ ಸಿದ್ಧರಾಗಿರುವ ಸಂಗತಿ ಸ್ವತಃ ತೇಜಸ್ವಿಯವರಲ್ಲಿ ಕೂಡ ಆಶ್ಚರ್ಯದ ಜೊತೆಜೊತೆಗೆ ಅನುಮಾನವನ್ನೂ ಹುಟ್ಟಿಸುತ್ತದೆ. ಆದರೆ ಕರ್ವಾಲೋ ನಂತರ ಹೇಳುವ ವಿಷಯವನ್ನು ಕೇಳಿದ ಮೇಲೆ ಅವರು ಮಂದಣ್ಣನ ಬಗ್ಗೆ ಹೊಂದಿರುವ ಆಸಕ್ತಿಗೆ ಕಾರಣ ಸಿಗುತ್ತದೆ. ಅದೇನೆಂದರೆ ಈಗ್ಗೆ ಸಾವಿರದ ಎಂಟುನೂರ ಹದಿನೇಳರಲ್ಲಿ ಒಬ್ಬ ಪಾದ್ರಿ ಆಫ್ರಿಕಾದ ಅರಣ್ಯದಲ್ಲಿ ಕಂಡಿದ್ದ ‘ಫ್ಲೇಯಿಂಗ್ ಲಿಸರ್ಡ’ ನ್ನು ಇತ್ತೀಚೆಗಷ್ಟೇ ನಾರ್ವೆ ಕಾಡುಗಳಲ್ಲಿ ಕಂಡಿದ್ದ ಮಂಜಣ್ಣ. ಈ ವಿಷಯವನ್ನು ಕರ್ವಾಲೋರಿಗೆ ತಿಳಿಸಿದಾಗ ಅವರು ರುಮೇನಿಯಾದ ಫ್ರೊಫೆಸರ್ ರೂವಸ್ಕಿ ಹಾಗೂ ಅಮೇರಿಕೆಯ ಸಂಶೋಧನಾ ಸಂಸ್ಶೆಗಳ ಜೊತೆ ಪತ್ರ ವ್ಯವಹಾರ ನಡೆಸಿದ್ದರು. ಕೂಡಲೇ ಹಲವಾರು ಜಾಗತಿಕ ಸಂಸ್ಥೆಗಳು ಈ ಸಂಶೋಧನೆಗೆ ಧನ ಸಹಾಯ ಮಂಜೂರು ಮಾಡಲು ಮುಂದಾಗಿರುವ ವಿಷಯವನ್ನು ತಿಳಿಸಿದರು. ಆಗ ಲೇಖಕರೂ ಸೇರಿ, ಎಲ್ಲರ ಬಾಯಿಂದ ಮಾತೇ ಹೊರಡುವುದಿಲ್ಲ. ನಂತರ ಅರಣ್ಯದಲ್ಲಿ ಆ ‘ಹಾರುವ ಓತಿ’ ಯ ಅನ್ವೇಷಣೆಗೆ ಬೇಕಾಗುವ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಕರ್ವಾಲೋ, ಮಂಜಣ್ಣ, ಲೇಖಕರು, ಶೀನಪ್ಪ, ಪ್ರಭಾಕರ ಜೊತೆಗೆ ಕಿವಿ, ನಾರ್ವೆಯ ಕಾಡಿಗೆ ಹೊರಡುತ್ತಾರೆ. ಅತ್ಯಂತ ಸುದೀರ್ಘವಾದ ಈಚಲು ಕಾಡನ್ನು‌ ಪ್ರಯಾಸದಿಂದ ದಾಟಿ ,ಓತಿಯ ಹುಡುಕಾಟ ಆರಂಭವಾಗುತ್ತದೆ. ಈ ಮಧ್ಯೆ ಕಾಡಿನಲ್ಲಿ ಹಾವಾಡಿಗರ ಎಂಗ್ಟ ಸಹ ಇವರ ತಂಡವನ್ನು ಸೇರಿಕೊಳ್ಲುತ್ತಾನೆ.ಹಲವಾರು ದಿನಗಳ ನಂತರ ಒಮ್ಮೆ ಲೇಖಕರೊಬ್ಬರೇ ಕುಳಿತಿರುವಾಗ ಅಚಾನಕ್ ‘ಹಾರುವ ಓತಿ’ ಇವರ ಕಣ್ಣಿಗೆ ಬೀಳುತ್ತದೆ. ಇದನ್ನು ಇತರರಿಗೆ ತೋರಿಸಲು ಲೇಖಕರು ಬಹಳ ಪ್ರಯಾಸ ಪಡಬೇಕಾಗುತ್ತದೆ‌. ಏಕೆಂದರೆ ಅದು ಮರದ ಮೇಲೆ ಕುಳಿತಿದ್ದಾಗ ಮರದ ತೊಗಟೆಯ ಬಣ್ಣವನ್ನು ಹೊಂದಿ, ಮರಕ್ಕೂ ಮತ್ತು ಅದಕ್ಕೂ ಕಿಂಚಿತ್ ಕೂಡ ವ್ಯತ್ಯಾಸವೇ ಇರುತ್ತಿರಲಿಲ್ಲ. ಕೊನೆಗೆ ಮಂದಣ್ಣ, ಶೀನಪ್ಪ, ಎಂಗ್ಟನ ಹರಸಾಹಸದ ನಡುವೆಯೂ ಆ ಹಾರುವ ಓತಿ ಅವರ ಕೈಗೆ ಸಿಗದೆ, ತಪ್ಪಿಸಿಕೊಂಡು ಕಾಡಿನ ಅನಂತದಲ್ಲಿ ಲೀನವಾಗಿಬಿಡುತ್ತದೆ. ಪ್ರಭಾಕರ ತನ್ನ ಕ್ಯಾಮರಾನಲ್ಲಿ ಒಂದಷ್ಟು ಫೋಟೋಗಳನ್ನು ತೆಗೆದದಷ್ಟೇ ಲಾಭವಾಗುತ್ತದೆ. ಒಟ್ಟಾರೆಯಾಗಿ ಇಡೀ ಕಾದಂಬರಿಯ ಉದ್ದಕ್ಕೂ ಕುತೂಹಲವನ್ನು ಕಾಯ್ದುಕೊಂಡು ಓದುಗರನ್ನು ತುದಿಗಾಲಲ್ಲಿ ನಿಲ್ಲಿಸುವ ಕುತೂಹಲಕಾರಿ ಕಾದಂಬರಿಯಲ್ಲಿ ಮಂದಣ್ಣನ ಮದುವೆಯ ಹಾಸ್ಯವೂ ಸೇರಿ ಓದುಗರನ್ನು ರಂಜಿಸುತ್ತದೆ. ********************** ಅರುಣ ರಾವ್

Read Post »

ಇತರೆ, ಲಹರಿ

ಲಹರಿ ಅಕ್ಕ , ನೀನು ಯಾರಿಗೆ ಮಗಳಾಗಿದ್ದೆ ? ವೀಣಾ ದೇವರಾಜ್   ಮಗಳೇ ನೀನು ಯಾರಿಗೆ ಮಗಳಾಗಿದ್ದೆ. ಮಗಳ ಪ್ರೀತಿ ನಿನಗೆ ಗೊತ್ತೇ. ಅದನ್ನು ಎಂದಾದರೂ ಅನುಭವಿಸಿದ್ದೀಯಾ. ಹೇಗಿರಬಹುದೆಂದು ಯೋಚಿಸಿದ್ದೀಯ ಅಥವಾ ಬಯಸಿದ್ದೆಯ? ಒಮ್ಮೆ ಯೋಚಿಸಿ ನೋಡೋಣ… ಹಾಂ,ಸಿನೆಮಾದಲ್ಲಿ,, ಪುಟಾಣಿ ಪಾಪು , ಅದೇನು ಚೆಂದ,ಅಪ್ಪ ಅಮ್ಮನ ಮುದ್ದು ಮಗು ತಮ್ಮಿಷ್ಟದಂತೆ  ಅದನ್ನು ಸಿಂಗರಿಸಿದ್ದಾರೆ ನೋಡಿದವರೆಲ್ಲಿ ಕಣ್ಣುಬಿಟ್ಟು ದೃಷ್ಟಿ ತಾಗುವುದೋ ಎಂದು ದೃಷ್ಟಿಬೊಟ್ಟನ್ನೂ  ಇಟ್ಟಿದ್ದಾರೆ. ಒಂದು ನಿಮಿಷವೂ ಒಂಟಿಯಾಗಿ ಬಿಟ್ಟಿಲ್ಲ. ಇನ್ನೇನು ಶಾಲೆಗೆ ಸೇರಿಸುವ ವಯಸ್ಸು ಬಂತು, ಪೋಷಕರು ಗಟ್ಟಿ ಧೈರ್ಯಮಾಡಿ ಶಾಲೆಗೆ ಕಳಿಸುತ್ತಾರೆ. ಅವಳ ಒಂದೊಂದೇ ಹೊಸಹೊಸ ಕಲಿಕೆಗಳನ್ನು ನೋಡಿ ಬೀಗುತ್ತಾರೆ. ಅಪ್ಪ, ಇವಳು ಎಲ್ಲಾ ನನ್ನಂತೆ ಅಂತಾನೆ , ಅಮ್ಮ ಇಲ್ಲ ಅವ್ಳು ನನ್ನಂತೆ ಅನ್ನುತ್ತಾಳೆ. ಮನೆಗೆ ಬಂಡ ಕೂಡಲೇ ಅಪ್ಪ, ಅಮ್ಮ ತುತ್ತು ಮಾಡಿ ಉಣಿಸುತ್ತಾರೆ ಆಟವಾಡಿಸುತ್ತಾರೆ , ಅವಳಾಡುವ ಆಟದಲ್ಲಿ ತಾವೂ ಭಾಗಿಯಾಗಿ ಖುಷಿಪಡುತ್ತಾರೆ. ಅವಳು ಆಟವಾಡುತಿದ್ದರೆ, ಮನೆ ಪಾಠ ಮಾಡುತಿದ್ದರೆ, ಬರೆಯುತ್ತಿದ್ದರೆ  ಅವಳಿಗೆ ತೊಂದರೆಯಾಗಬಾರದೆಂದು ತಾವೇ ಉಣಿಸುತ್ತಾರೆ. ನಸುಕಿನಲ್ಲೇ ಎದ್ದು ಮಗಳಿಗಿಷ್ಟವಾದ ತಿಂಡಿ ತಿನಿಸುಗಳನ್ನು ಅಮ್ಮ ಮಾಡಿದರೆ , ಅಪ್ಪ ಬೇಗಬೇಗನೆ ತನ್ನೆಲ್ಲ ಕೆಲಸಗಳನ್ನು ಮುಗಿಸಿ ಶಾಲೆಗೆ ತಾನೇ ಹೋಗಿ ಬಿಟ್ಟುಬರುತ್ತಾನೆ. ಮಗಳಿಗಾಗಿ ತಮ್ಮೆಲ್ಲವನ್ನೂ    ವ್ಯಯಿಸುತ್ತಾರೆ. ಅವ್ಳು ಕೇಳಿದ್ದನ್ನೆಲ್ಲ ತಂದು  ಕೊಡುತ್ತಾರೆ , ಪ್ರೀತಿಯ ಸುರಿಮಳೆಗರೆಯುತ್ತಾರೆ. ನೋಡಲು ಎಷ್ಟು ಚೆಂದ. ಮಗಳು ಮದುವೆಗೆ ಬಂದಾಗ ವಿಜೃಂಭಣೆಯಿಂದ ಮದುವೆ ಮಾಡುತ್ತಾರೆ ಕರುಳಕುಡಿಯನ್ನು ಬೇರೆಯವರ ಮನೆಗೆ ಕಳಿಸುವಾಗ ಅವಳ ಅತ್ತೆ ಮಾವ ಗಂಡನನ್ನು ತನ್ನ ಕೂಸನ್ನು ಚೆನ್ನಾಗಿ ನೋಡಿಕೊಳ್ಳಿರೆಂದು ಬೇಡಿಕೊಳ್ಳುತ್ತಾರೆ , ಬಿಕ್ಕಿಬಿಕ್ಕಿ ಅಳುತ್ತಾರೆ. ಅಂದಿಗೆ ಆ ಮನೆಯ ಋಣ ಮುಗಿಯಿತೇ ಗೊತ್ತಿಲ್ಲ.     ಎಂದೋ ಒಮ್ಮೆ ತವರಿಗೆ ಬರುವ ಮಗಳು ಅತಿಥಿಯಾಗಿಬಿಟ್ಟಿರುತ್ತಾಳೆ. ಮೊದಲಿನಂತೆ ಸಲೀಸಾಗಿ ಏನೊಂದನ್ನೂ ಮಾಡಲು ಹಿಂಜರಿಯುತ್ತಾಳೆ, ಅದು ತಾ ಹುಟ್ಟಿ ಬೆಳೆದ ಮನೆ, ಅಪ್ಪಅಮ್ಮನ ಕೈ ತುತ್ತು ತಿಂದು ಬೆಳೆದ ಮನೆ ಎನ್ನುವುದನ್ನು  ಮೆಲುಕುಹಾಕಿಕೊಂಡು ಸಂಕಟಪಡುತ್ತಾಳೆ. ತನ್ನ ಗೆಳತಿಯರ ಮನೆಗೆ ಹೋದರೆ ಅಲ್ಲಿ ಅವರೂ ಇಲ್ಲ ಎಲ್ಲ ತಮ್ಮ ಗಂಡನ ಮನೆಯಲ್ಲಿದ್ದಾರೆ. ಎಲ್ಲಾ ಹೆಣ್ಣು ಮಕ್ಕಳದೂ ಹೀಗೆಯೇ ಮನಸ್ಥಿತಿಯೇ ಎಂದು ಕೊರಗುತ್ತಾಳೆ. ಅಪ್ಪಅಮ್ಮನ ಹೇಳಿಕೊಳ್ಳಲಾರದೆ ಮನಸ್ಸಿನಲ್ಲೇ ಕೊರಗುತ್ತಾಳೆ. ಅಮ್ಮ ಮಾತುಮಾತಿಗೂ ಅತ್ತಿಗೆಯ ಹೆಸರನ್ನೇ ಕರೆಯುತ್ತಾರೆ ,ಅಪ್ಪ ನಾನು ಬಂದ್ದಿದ್ದೇನೆಂದು ಮನೆಗೆ ಬೇಗನೆ ಬರುವುದು ಹೋಗಲಿ, ಬಂದವರೇ ತನ್ನ ಗೆಳೆಯರನ್ನು ನೋಡಲು ಹೋಗುತ್ತಾರೆ. ಅಣ್ಣನೂ  ಮೊದಲಿನಂತೆ ಚೇಷ್ಟೆಯ ಮಾತುಗಳಿಲ್ಲ ,ಕೆಣಕುವುದೂ ಇಲ್ಲ.ಅಮ್ಮನ ಬಳಿ ಏನಾದರು ಏಕಾಂತದಲ್ಲಿ ಹೇಳಿಕೊಳ್ಳಬೇಕೆಂದರೆ ಯಾವಾಗಲೂ ಅತ್ತಿಗೆಯೋ ಅಣ್ಣನೋ ಇರುತ್ತಾರೆ.  ಯಾಕೆ ಹೀಗಾಯಿತು, ತವರಿನ ಪ್ರೀತಿ ಕಡಿಮೆಯಾಯಿತೇ, ತನ್ನ ಮೇಲಿನ ಹೆತ್ತವರ ಜವಾಬ್ದಾರಿ ಮುಗಿಯಿತೇ? ಈಗ ಅಪ್ಪಅಮ್ಮನಿಗೆ ನಾನು ಮಗಳಲ್ಲವೇ ಏಕೆ ಹೀಗೆ? ತನ್ನಿಂದಾದ ತಪ್ಪೇನು, ಇದನ್ನು ಹೇಗೆ ಸರಿ ಮಾಡುವುದು, ತಾನೇನು ಮಾಡಿದರೆ ತನ್ನ ತವರು ಮೊದಲಿನಂತಾಗುತ್ತದೆ , ದೇವರೇ ಏನು ಮಾಡಲಿ. ಇನ್ನು ಅಲ್ಲಿರುವುದು ಬೇಡವೆನಿಸಿ ತನ್ನಿನಿಯನ ಆಸರೆ ಬಯಸಿ  ಹೊರಡುತ್ತಾಳೆ. ತನ್ನಿನಿಯನ ತೋಳ್ತೆಕ್ಕೆಯಲ್ಲೇ ಅಪ್ಪಅಮ್ಮನ,ಅಣ್ಣನ ಪ್ರೀತಿ,ವಾತ್ಸಲ್ಯವನ್ನೂ , ತನ್ನ ಸಖಿಯರ ಸಂಗವನ್ನೂ ಕಾಣುತ್ತಾಳೆ. ಜಗವನ್ನೇ ಮರೆಯುತ್ತಾಳೆ. ಅವನೇ ತನ್ನ ಜಗತ್ತು, ಅವನಿಲ್ಲದೆ ತಾನಿಲ್ಲ. ಅವನುಸಿರೇ ತನ್ನುಸಿರು ಎಂದುಕೊಳ್ಳುತ್ತಾಳೆ. ಆದರೆ ಆ ಒಂದು ಕರಾಳ  ದಿನ ವಿಧಿಯ ದೃಷ್ಟಿತಾಗಿ ,ಅವಳ ಉಸಿರೇ ಅವಳ ಜೊತೆಗಿಲ್ಲ , ಅವಳ ಜಗತ್ತೇ ಇಲ್ಲವಾದಾಗ ,,,,,,,,  ಎಲೆ, ಹಾರುವ ಹಕ್ಕಿಗಳೇ ನೀವು “ನನ್ನುಸಿರ”ನ್ನು ಕಂಡಿರಾ? ಎಲೆ ಸಂಪಿಗೆಮರವೇ, ಎಲೆ ಹೊಂಗೆ ಮರವೇ ನೀವು ಬೀಸುವ ತಂಗಾಳಿಯಲ್ಲಿ  ದೇವನ ಬಿಸಿಯುಸಿರಿನ ಅನುಭವವಾಯಿತೇ? ಎಲೈ ಭೂಮಿ ತಾಯಿಯೇ ನೀನೆ ಬ್ರಹ್ಮಾಂಡವೆನ್ನುತ್ತಾರೆ. ನಿನ್ನ  ಮಡಿಲಲ್ಲೇನಾದರೂ ಬಚ್ಚಿಟ್ಟುಕೊಂಡು ನನ್ನೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿರುವನೋ ಒಮ್ಮೆ ನೋಡುವಿಯ ತಾಯೆ? ತಾನಿಲ್ಲದ ಜಗತ್ತು ಅವಳಿಗೆ ದುಸ್ತರವೆಂದು ತಿಳಿದೂ ದೇವನೇಕೆ ನನ್ನ ಕಣ್ಣಿಗೆ ಕಾಣುತಿಲ್ಲ. ಅವಳೆಲ್ಲಿಗೆ ಹೋಗುವುದು,ಯಾರ ಬಳಿಗೆ ತನ್ನ  ನೋವನಿವೇದಿಸಿಕೊಳ್ಳುವುದು,,,,,?,,,,,? ನೀವೂ ಹೇಳಲಾರಿರೆ,,,,,,,,,?,,,,,     ಅವಳು ಯಾರ ಮಗಳು? ,,,,,,,,,,? “ಇಂದು ನಾನು ಒಂಟಿ ! ನೀನು ಅದ್ಹೇಗೆ ಬಿಟ್ಟು ಹೋದೆ ಎಂದಿಗೂ ಒಬ್ಬಳನ್ನು ಬಿಡಲಾರದ ನಿನಗೆ ಹೇಗೆ ಮನಸ್ಸು ಬಂತೋ ನಾ ಕಾಣೆ ,ನಾನೀಗ ಇನ್ನೊಬ್ಬರಿಗೆ ಭಾರವಾದೆ. ನಾನೊಂದು ಚೆಂಡಿನಂತಾದೆ. ನಾನು ನಿನ್ನದೇ ವಸ್ತುವೆಂದು ನನ್ನ ಪೋಷಕರು ನಿನ್ನ ಸುಪರ್ದಿಗೆ ವಹಿಸಿದ್ದರು. ನಿನಗೂ ನಾನು ಬೇಡವಾಗಿಬಿಟ್ಟೆ. ಈಗ ಚೆಂಡು ಯಾರ ಬಳಿ ಇದೆಯೋ ಗೊತ್ತಿಲ್ಲ. ನನಗೊಂದು ಸ್ಥಿರವಾದ ಜಾಗವಿಲ್ಲವೇ ದೇವರೇ? ಎಲ್ಲೆಲ್ಲಿಗೆ ಅಂತ ಓಡಾಡಬೇಕು ತಿಳಿಯುತ್ತಿಲ್ಲ ಈ ಯಕ್ಷ ಪ್ರಶ್ನೆಗೆ ಉತ್ತರವಿಲ್ಲವೇ? *************************

Read Post »

ಇತರೆ

ಕಾದಂಬರಿ ಕುರಿತು` ಬೆಟ್ಟದ ಜೀವ ಡಾ.ಶಿವರಾಮ ಕಾರಂತ ಶಾಂತಲಾ ಮಧು ನನ್ನ ನೆಚ್ಚಿನ “ಬೆಟ್ಟದ ಜೀವ”ಕಾದಂಬರಿಯ ಒಂದು ನೋಟ” “”ಬಾನಿನಲ್ಲಿ ಸೂರ‍್ಯನು ತುಸುವಾಗಿ ಮೇಲಕ್ಕೇರುತ್ತಾನೆ- ಎಂದಂತೆ ಒಮ್ಮೆಗೇ ಅವನ ರಶ್ಮಿಗಳು ಬೆಟ್ಟದ ತೆಂಕು ಮಗ್ಗುಲಿನ ಹಸುರನ್ನೆಲ್ಲ ಬೆಳಕಿಂದ ತೊಯ್ಯಿಸಿಬಿಟ್ಟವು! ಆ ಅಪೂರ್ವದ ನೋಟವು ಎಂದೂ ಮರೆಯುವಂಥದಲ್ಲ. ಆ ತನಕ- ಕಠಿಣವೂ ನಿರ‍್ದಾಕ್ಷಿಣ್ಯವೂ ಆಗಿ ನಿಂತ ಬೆಟ್ಟಕ್ಕೆ ಒಂದು ಬದಿಯಲ್ಲಿ ಮೃದುವಾದ ಹೃದಯವಿದ್ದಂತೆ ಕಂಡಿತು. ನೋಡುತ್ತಾ ನಿಂತಂತೆ, ಕೆಂಪಡರಿದ ಬಾನಿನ ಕಣ್ಣು ಕ್ರೂರವಾಗುತ್ತ ಬೆಂದ ಕಬ್ಬಿಣವನ್ನು ಕರಗಿಸಲು ಬಂದಂತೆ ಕಾಣಿಸಿತು. ಆ ಬಾನಿನ ಮುಂದೆ, ಬೆಟ್ಟವು ಗಂಡುಗಲಿಯಂತೆ ಈ ತನಕ ಕಂಡುದು, ನಮ್ರತೆಯ ಮುದ್ದೆಯಾದ ಹೆಣ್ಣಾಯಿತು. ಹಸುರು ಕವಚದ ಮೇಲೆ ನೀರ ಸೀರೆ ತೊಟ್ಟು ಬೇಟಕ್ಕೆ ನಿಂತ ಅಂಗನೆಯಾಯಿತು, ಆದರೆ ದಿಗಂಗನೆಯ ಧಿಮಾಕಿನ ಮುಂದೆ ಬೆಟ್ಟದಂಗನೆ, ಅತ್ತೆಯ ಮುಂದೆ ನಾಚಿಕೊಂಡು ನಿಂತ ಸೊಸೆಯಾದಳು. “ “ಹಿಂದಿನ ದಿನ ಅದೇ ಬೆಟ್ಟ ನನಗೆ ಮೊಸರು ಗದ್ದೆಯಲ್ಲಿ ನಿಂತ ನೀಲ ಕಡೆಗೋಲಿನಂತೆ ಕಾಣಿಸಿತ್ತು. ಇಂದು ಹಿಮದ ಮೊಸರಿರಲಿಲ್ಲ. ನನ್ನೆದುರಿನ ಬೆಟ್ಟ ತನ್ನ ದಿಟ್ಟತನದಿಂದ, ಔನ್ನತ್ಯದಿಂದ ನನ್ನಂಥ ಎಷ್ಟೆಲ್ಲಾ ವ್ಯಕ್ತಿಗಳ ಎದೆಯನ್ನು ಭೀತಿಗೊಳಿಸಿ ತಲ್ಲಣಿಸಿರಬೇಕೋ ತಿಳಿಯೆ.” ಪ್ರಸಿದ್ಧ ಕಾದಂಬರಿಕಾರರೆಂದೇ ಹೆಸರಾದ ಕೋಟ ಡಾ|| ಶಿವರಾಮ ಕಾರಂತರ (೧೯೦೨-೧೯೯೭) ‘ಬೆಟ್ಟದ ಜೀವ’ ಕಾದಂಬರಿಯ ಅವಿಸ್ಮರಣೀಯ ಸಾಲುಗಳು ಇವು. ಶಿವರಾಮಕಾರಂತರ ಬೆಟ್ಟದ ಜೀವ ಕಾದಂಬರಿಯಲ್ಲಿ ಬರುವ ಪ್ರಕೃತಿಯ ವರ್ಣನೆ ಬಣ್ಣಿಸಲಸದಳ, ಅದೆಷ್ಟು ಬಾರಿ ಓದಿದರೂ ಕಾದಂಬರಿಯ ಆ ಅಪೂರ್ವ ಚೆಲುವು ಚಿರನೂತನವೆ. ಬೆಟ್ಟದಲ್ಲಿ ಜೀವಿಸುತ್ತಿರುವ, ಜೀವಿಗಳ ಉಸಿರಿಗೆ ಉಸಿರಾದ ಪ್ರಕೃತಿಯನ್ನು ಭಾವನೆಗೆ ಭಾವಚಿತ್ರವಾಗಿಯೂ ಪ್ರತಿಬಿಂಬಿಸಿರುವುದು ನಮ್ಮ ಮಲೆನಾಡಿನ ಹೆಮ್ಮೆಯ ಕಾದಂಬರಿಕಾರರಾದ ಕಾರಂತರ ವಿಶೇಷ. ಇವರು ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರ ನಿರ್ದೇಶಕರು ಹಾಗೂ ಚಿಂತಕರು ಎಂದು ಹೆಸರಾಗಿದ್ದಾರೆ. ಸಾಹಿತ್ಯದ ಹಲವು ಪ್ರಕಾರದಲ್ಲಿ ಕೆಲಸ ಮಾಡಿದ ಇವರ, ವಿಜ್ಞಾನ ಸಾಹಿತ್ಯ ಮಕ್ಕಳ ಸಾಹಿತ್ಯಗಳು ವಿಶೇಷ ಮನ್ನಣೆ ಪಡೆದಿವೆ. ತಮ್ಮ ‘ಮೂಕಜ್ಜಿಯ ಕನಸುಗಳು’ ಕಾದಂಬರಿಗೆ ‘ಜ್ಞಾನಪೀಠ ಪ್ರಶಸ್ತಿ’ ಪಡೆದು ಕನ್ನಡ ಹಿರಿಮೆಯನ್ನು ಹೆಚ್ಚಿಸಿದ ಮಹನೀಯ ಈತ, ಇತಿಹಾಸಕಾರ ‘ರಾಮಚಂದ್ರ ಗುಹ’ ಅವರು ಕಾರಂತರನ್ನು ಸ್ವಾತಂತ್ರ್ಯೋತ್ತರ ಭಾರತದ ‘ರವೀಂದ್ರನಾಥ ಠಾಕೂರ್’ ಎಂದು ಕರೆದಿರುವುದರಲ್ಲಿ ಅತಿಶಯೋಕ್ತಿಯಿಲ್ಲ. ಅವರ ಎಲ್ಲಾ ಕೃತಿಯನ್ನು ಓದಿ ಆನಂದಿಸಿದ ನನಗೆ ‘ಮರಳಿ ಮಣ್ಣಿಗೆ’ ಮತ್ತು  ‘ಬೆಟ್ಟದ ಜೀವ’ ಹೆಚ್ಚು ಅಪ್ಯಾಯಮಾನವಾಯಿತು. ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾದ ಅವರ, ‘ಚೋಮನ ದುಡಿ’ ‘ಅಳಿದ ಮೇಲೆ’ ಬಹು ಚರ್ಚಿತ ಕಾದಂಬರಿಗಳು. ಮಲೆನಾಡಿನ ಅಂಗಳದಲ್ಲಿ ಬೆಳೆದ ನನಗೆ ಅವರ ಯಕ್ಷಗಾನ ಕುಣಿತ, ನೋಡುವ ಹಾಗೂ ಅವರ ಒಡನಾಟ, ಮಾತುಗಳನ್ನು ಕೇಳುವ ಅವಕಾಶ ದೊರೆಕಿದ್ದು ನನ್ನ ಪುಣ್ಯ ಎನ್ನಬೇಕು. ‘ಬೆಟ್ಟದ ಜೀವ’ ಕಾದಂಬರಿಯಲ್ಲಿ ಬರುವ ಪಾತ್ರಗಳ ಮಾತು, ನಡೆ-ನುಡಿಗಳು, ಕಥೆಯ ಹರಿವು ನನಗೆ ನನ್ನ ಅಕ್ಕಪಕ್ಕದ ಮನೆಯ ದಿನನಿತ್ಯ ಜೀವನದ ಚಿತ್ರಣ ಎನ್ನುವಂತೆ ಭಾಸವಾಗುತ್ತದೆ. ಓದುತ್ತ ಓದುತ್ತಾ. ನಾನೂ ಅದರಲ್ಲಿ     ಒಬ್ಬಳಾಗಿ ಬಿಡುತ್ತೇನೆ. ಬೆಟ್ಟದ ಜೀವ ಒಂದು ಸಣ್ಣ ಹವ್ಯಕ ಸಂಸಾರದ ಬಗ್ಗೆ ಡಾ! ಶಿವರಾಮ ಕಾರಂತರು ಬರೆದ ಅಪರೂಪದ ಕೃತಿ. ಈ ಕುಟುಂಬ ಒಂದು ಬೆಟ್ಟದ ಮೇಲೆ ವಾಸವಾಗಿರುತ್ತದೆ. ಪೂರ‍್ತಿ ಕಾದಂಬರಿ, ಈ ಕುಟುಂಬದ ಅತಿಥಿ ಸತ್ಕಾರ, ಅವರ ಕಷ್ಟಗಳು, ಜೀವನ ಕ್ರಮ, ಅವಿರತ ಶ್ರಮದ ಮೇಲೆ ಮೂಡಿಬಂದಿದೆ. ಸುಬ್ರಹ್ಮಣ್ಯದ ಕಾಡಿನಲ್ಲಿ ನಡೆಯುವಾಗ ದಾರಿತಪ್ಪಿ ಹೋದ ಲೇಖಕರು ಅದೇ ಕಾಡಿನ ಮೂಲೆಯಲ್ಲಿ ವಾಸವಿದ್ದ ಗೋಪಾಲಯ್ಯ ಹಾಗೂ ಶಂಕರಮ್ಮ ಎನ್ನುವ ಹವ್ಯಕ ದಂಪತಿಗಳ ಆದರ ಆತಿಥ್ಯಗಳಿಗೆ ಕಟ್ಟುಬಿದ್ದು, ನಾಲ್ಕುದಿನ ತಂಗಿ, ಅವರ ಮಾತುಗಳಿಂದ ಆ ಕುಟುಂಬದ ಕಥೆಯನ್ನು ತಿಳಿದುಕೊಳ್ಳುತ್ತಾರೆ. ಆ ಕುಟುಂಬದಲ್ಲಿ ಇರುವುದು ಇಬ್ಬರೇ. ಮಗ ಇಂಗ್ಲೀಷ್ ವಿದ್ಯಾಭ್ಯಾಸ ಮುಗಿಸಿ ಪೇಟೆಗೆ ಹೋಗಿ ಮರಳಿ ಎಂದೂ ಬಾರದೆ ಹೋಗುತ್ತಾನೆ. ಅವನ ದಾರಿಯನ್ನು ಕಾಣುವ ಈ ವೃದ್ಧ ದಂಪತಿಗಳ ಮುಗ್ಧತೆ ಹಾಗು ಶುದ್ಧ ಜೀವನ ಪ್ರಕೃತಿ ದತ್ತವಾಗಿ ಬಂದದನ್ನು ಎದುರಿಸುವ ದಿಟ್ಟತನ ಕಾದಂಬರಿಯಲ್ಲಿ  ಅತ್ಯಂತ ಸಹಜವಾಗಿ ಮೂಡಿಬಂದಿದೆ. ಎಲ್ಲಿಂದಲೋ ಬಂದ ಅಪರಿಚಿತ ವ್ಯಕ್ತಿಯನ್ನು ಆಧರಿಸಿ ಯಾವುದೇ ಅನುಮಾನಗಳಿಗೆಡೆಗೊಡದೆ ಗೋಪಾಲಯ್ಯ ದಂಪತಿಗಳು ತಮ್ಮ ಸಕಲ ಕಷ್ಟ ಕಾರ‍್ಪಣ್ಯಗಳನ್ನು, ಜೀವನದ ಸುಖದ ರಸಘಳಿಗೆಗಳನ್ನು ಲೇಖಕನ ಜೊತೆಗೆ ಹಂಚಿಕೊಳ್ಳುತ್ತಾರೆ. ವೃದ್ಧಾಪ್ಯದಲ್ಲಿ ಅವರನ್ನು ಅತಿಯಾಗಿ ಕಾಡುವ ಮಗನ ಅಗಲಿಕೆ, ಗೋಪಾಲಯ್ಯ – ದಂಪತಿಗಳ ಮಗನ ಅಗಲಿಕೆಯ ನೋವು ಇಡೀ ಕಾದಂಬರಿಯ ವಸ್ತು. ‘ಎಲ್ಲಾ ಇದ್ದೂ ಏನೂ ಇಲ್ಲ’ ವಿಧಿಯ ಈ ಆಟಕ್ಕೆ ಆತಂಕ, ದುಃಖ ಇದ್ದರೂ ಅದನ್ನು ಎದುರಿಸುವ ದಿಟ್ಟತನ, ‘ಪಾಲಿಗೆ ಬಂದದ್ದು ಪಂಚಾಮೃತ’ ಎಂದು ಸ್ವೀಕರಿಸುವ ಅವರ ಮನಸ್ಥಿತಿಯಲ್ಲಿ ಎದ್ದು ಕಾಣುತ್ತದೆ. “ನಿಜ, ನನಗೆ ಈ ನೆನಪು ಬಂತೆಂದರೆ – ಗಳಿಗೆಯಲ್ಲ, ದಿನವೇ ಕಣ್ಮರೆಯಾಗುತ್ತದೆ. ಗಂಡುಸಾದ ನನಗೇ ಹೀಗಾದ ಮೇಲೆ, ಅವಳ ಹೃದಯ ಏನಾಗಬೇಡ! ಆದರೆ ಫಲವೇನು? ಅವನು ತಿರುಗಿ ನಮ್ಮ ಮನೆಗೆ ಬಂದಾನು ಎಂದು ಅನಿಸುವುದಿಲ್ಲ”. “ಆದರೆ ದೇವರ ಇಚ್ಛೆಯೇ ಹಾಗಿದ್ದರೆ ಯಾರೇನು ಮಾಡಿಯಾರು?” ಅವರ ಈ ಮಾತುಗಳು ಅವರ ಪೂರ್ತಿ ಜೀವನದ ದರ್ಶನ ಮೂಡಿಸುತ್ತದೆ. ಇಳಿ ವಯಸ್ಸಿನಲ್ಲೂ ಬತ್ತದ ಜೀವನೋತ್ಸಾಹ, ಅತಿಥಿಯನ್ನು ಆದರಿಸುವ ಪರಿ, ಮಲೆನಾಡಿನ ಕೌಟುಂಬಿಕ ವ್ಯವಸ್ಥೆ, ಜನರಿಗೆ ಹಿಡಿದ ಇಂಗ್ಲಿಷ್ ವಿದ್ಯಾಭ್ಯಾಸದ ಹುಚ್ಚು, ಮಲೆನಾಡಿನ ಕೃಷಿವ್ಯವಸ್ಥೆ, ಬೇಟೆ ಪದ್ಧತಿ ಎಲ್ಲವೂ ಕಾದಂಬರಿಯಲ್ಲಿ ಅತೀ ಸುಂದರವಾಗಿ ಹಾಗು ಸಾದೃಶ್ಯವಾಗಿ ಚಿತ್ರಿತವಾಗಿದೆ. ಗೋಪಾಲಯ್ಯ, ಶಂಕರಮ್ಮ, ಶಿವರಾಮ, ದೇರಣ್ಣ, ಬಟ್ಯ, ಕಾಟು ಮೂಲೆ ನಾರಾಯಣ ಮೊದಲಾಗಿ ನಾಮಾಂಕಿತರಾದ ಕಾಡುವ ಪ್ರಾದೇಶಿಕ ವ್ಯಕ್ತಿ ಚಿತ್ರಗಳು; ಹುಲಿ ಬೇಟೆ, ಪಂಜ, ಗಿಡ್ಡಿನ ಕಾಫಿ, ಮಜ್ಜಿಗೆ ಹುಳಿ, ಎಣ್ಣೆ ಸ್ನಾನ, ಕುಮಾರಪರ‍್ವತವೇ ಮೊದಲಾದ ಬೆಟ್ಟಗಳ ದೃಶ್ಯ ಚಿತ್ತಾರ; ಆ ಬೆಟ್ಟಗಳಿಂದ ಹಳ್ಳಿಗಳ ಹೊಲಗದ್ದೆಗಳಿಗೆ ನುಗ್ಗುವ ಆನೆ, ಕಾಟಿ, ಕ್ರೂರ ಹುಲಿ, ಕಾಡುಹಂದಿಗಳ ದಾಂಧಲೆ; ಇವೇ ಮೊದಲಾಗಿ ಸುತ್ತಲಿನ ಹಳ್ಳಿಗಳಿಗೆ ಜೀವನಾಡಿಯಾಗಿರುವ ನದಿ ಕೆರೆಗಳ ಪರಿಚಯ; ಹಳೆಯ ಕಾಲದ ಕಾಡಿನ ಜೀವನವನ್ನು ಕಣ್ಣಮುಂದೆ ಬಿತ್ತರಿಸುತ್ತದೆ. ಕಾದಂಬರಿ ಓದುತ್ತಾ ಹೋದಂತೆ ಅದರಲ್ಲಿನ ಶಿವರಾಮನ ಪಾತ್ರದಾರಿಯೇ ನಾವಾಗುತ್ತೇವೆ. ಅದುವೇ ಈ ಕಾದಂಬರಿಯ ಶಕ್ತಿ. ಕಾರಂತರ ಯಾವುದೇ ಕಾದಂಬರಿಗಳಿರಲಿ ಅದರಲ್ಲಿ ಸರ‍್ವಕಾಲಕ್ಕೂ ಸಲ್ಲುವ ಕತೆಯ ಓಘಕ್ಕೆ ತಡೆ ಒಡ್ಡದೆ ಸಹಜವಾಗಿ ಹರಿದು ಬರುವ ನುಡಿ ಮುತ್ತುಗಳಿರುತ್ತವೆ. ಆಗಿನ ಸಮಾಜದ ಸ್ಥಿತ್ಯಂತರಗಳನ್ನು, ತವಕ-ತಲ್ಲಣಗಳನ್ನು, ನೈತಿಕ ಮೌಲ್ಯ, ಪ್ರಜ್ಞೆಗಳನ್ನು ಕಟ್ಟಿಕೊಡುವ ಸಾಲುಗಳಿರುತ್ತವೆ. ಬೆಟ್ಟದ ಜೀವವು ಇದಕ್ಕೆ ಹೊರತಲ್ಲ. ಕಾದಂಬರಿಯಲ್ಲಿ ಬರುವ ನನ್ನ ನೆಚ್ಚಿನ ಸಾಲುಗಳಿವು “ನಿಮ್ಮ ಊರಲ್ಲಿ ಹೆಣ ಸುಡುವುದಾದರೂ ಕಷ್ಟವೇ! ನಮ್ಮಲ್ಲಿ ಸಾಯುವುದಂತೂ ತೀರ ಸುಲಭ; ಹೆಣ ಸುಡುವುದು ಮತ್ತೂ ಸುಲಭ. ಇಲ್ಲಿ ಬದುಕುವುದೇ ಕಷ್ಟ ನೋಡಿ” “ಮನುಷ್ಯನಿಗೆ ತಾನು ಬದುಕಿದ ಮೇಲಲ್ಲವೇ ವೇದಾಂತದ ಪಾಠ, ಬದುಕುವುದಕ್ಕೇನೆ ಮೊದಲು ವೇದಾಂತವನ್ನು ಹೇಳಿ ಫಲವಿಲ್ಲ…” “ಯಾರು ಸಾವಿಗೆ ಅಂಜುವುದಿಲ್ಲವೋ ಅಂಥವರು ಬದುಕಿಗೆ ಹೆದರಬೇಕಿಲ್ಲ, ಅಂಥವನು ಬದುಕಬಲ್ಲ” ***************************** ಶಾಂತಲಾ ಮಧು

Read Post »

ಇತರೆ

ಕಾದಂಬರಿ ಕುರಿತು ಕರ್ವಾಲೊ ಪೂರ್ಣಚಂದ್ರ ತೇಜಸ್ವಿ ಚೈತ್ರಾ ಶಿವಯೋಗಿಮಠ “ಜೀವ ವಿಕಾಸಕ್ಕೆ ಎಲ್ಲಿದೆ ಕೊನೆ!” ಬರವಣಿಗೆ ಕೊಡುವ ಆನಂದಕ್ಕಿಂತ ಓದು ಕೊಡುವ ಸುಖವೇ ಆಪ್ಯಾಯಮಾನ. ಅಗಾಧವಾದ ಪ್ರಕಾರಗಳನ್ನು ಹೊಂದಿರುವಂತಹ ಸಾಹಿತ್ಯ, ಕನ್ನಡ ಸಾಹಿತ್ಯ. ಜನರಿಂದ ಹೆಚ್ಚು ಓದಲ್ಪಡುವ ಪ್ರಕಾರವೆಂದರೆ ಅದು ಕಾದಂಬರಿಗಳು. ಸಮಯ ಸವೆಸುವುದಕ್ಕೊ, ಜ್ಞಾನಾರ್ಜನೆಗೊ, ಮನೊರಂಜನೆಗೋ ಹೀಗೇ ವಿವಿಧ ಕಾರಣಕ್ಕಾಗಿ ಜನ ಕಾದಂಬರಿಗಳನ್ನು ಓದುತ್ತಾರೆ. ತೇಜಸ್ವಿಯವರ ಕಾದಂಬರಿಗಳ ವೈಶಿಷ್ಟ್ಯವೆಂದರೆ ಮನೋರಂಜನೆಯ ಜೊತೆಗೆ ವಿಜ್ಞಾನವನ್ನು, ಪ್ರಪಂಚ ಜ್ಞಾನವನ್ನು ವಿಫುಲವಾಗಿ ನೀಡುತ್ತವೆ. ತೇಜಸ್ವಿಯವರ ಕಾದಂಬರಿಗಳಲ್ಲಿ ಎಲ್ಲರೂ ಸಾಮಾನ್ಯವಾಗಿ ಮೊದಲು ಓದುವುದು ಅವರ ‘ಕರ್ವಾಲೊ’ ಕಾದಂಬರಿಯನ್ನೆ. ಧ್ಯಾನ, ತಪಸ್ಯೆಗಳಂತೆ ವಿಜ್ಞಾನವೂ ಆತ್ಮಸಾಕ್ಷಾತ್ಕಾರದ ದಾರಿ ಎಂದು ಪ್ರತಿಪಾದಿಸುವ ಕೃತಿ ಕರ್ವಾಲೊ. ಹೆಸರೇ ಸೂಚಿಸುವಂತೆ ಇದು ‘ಕರ್ವಾಲೊ’ ಎಂಬ ವಿಜ್ಞಾನಿ, ಅವನ ಅನ್ವೇಷಣೆಗಳು ಮತ್ತು ಇವೆಲ್ಲದರೊಟ್ಟಿಗೆ ತೇಜಸ್ವಿಯವರ ಅನುಭವಗಳ ಕುರಿತಾದ ಕೃತಿ. ಜೇನು ಸಾಕಾಣಿಕೆಯಿಂದ ಪ್ರಾರಂಭವಾಗುವ ಕಾದಂಬರಿ ಜೇನುಗಳ ಬಗ್ಗೆ,ಅವುಗಳ ಸಾಕಾಣಿಕೆಯ ಬಗೆಗೆ ಸಾಕಷ್ಟು ಬೆಳಕು ಚೆಲ್ಲುತ್ತದೆ. ಜೇನು ನೊಣಗಳು ಗೂಡನ್ನು ಕಟ್ಟಿ ಮಕರಂದ ಸಂಗ್ರಹಿಸೋಕೆ ಹೋದಾಗ ಗೂಡಿನ ಸ್ಥಳ ಪಲ್ಲಟ ಮಾಡಿದಾಗ ಅವಕೆ ಆಗುವ ಗೊಂದಲಗಳು, ನಾಗರಹಾವಿನಂತೆ ಬುಸುಗುಡುವ ಕರಿತುಡುವೆ ಜೇನುಗಳು ಹೀಗೇ ಹಲವಾರು ವಿಷಯಗಳನ್ನು ಬಹಳ ಸ್ವಾರಸ್ಯಕರವಾಗಿ ಹೆಣೆಯುತ್ತಾ ಹೋಗುತ್ತಾರೆ. ಕಾದಂಬರಿಯಲ್ಲಿ ಬರುವ ಪ್ಯಾರ, ಮಂದಣ, ಪ್ರಭಾಕರ, ಕರ್ವಾಲೋ, ಲೇಖಕರು ಹೀಗೇ ಎಲ್ಲಾ ಪಾತ್ರಗಳು. ಬಹಳಷ್ಟು ಆಪ್ತವೆನಿಸುತ್ತವೆ. ಕಿವಿ ಮತ್ತು ಪ್ಯಾರನ ಸನ್ನಿವೇಶಗಳು, ಮಂದಣನ ಮದುವೆಯ ಸನ್ನಿವೇಶಗಳು ಹಾಸ್ಯಭರಿತವಾಗಿದ್ದು ಓದುಗರಲ್ಲಿ ನಗೆ ಉಕ್ಕಿಸಿ ಹಗುರಾಗಿಸುತ್ತವೆ. ತನಗೇ ಅರಿವಿಲ್ಲದೆಯೇ ಮಂದಣ ಒಬ್ಬ ಒಳ್ಳೆಯ ಪರಿಸರ ವಿಜ್ಞಾನಿ ಎಂದು ಕರ್ವಾಲೋರವರು ಹೇಳಿದಾಗ ನಂಬದ ತೇಜಸ್ವಿಯವರು, ನಂತರ ಹಾಗೆ ಹೇಳುವ ಹಿಂದಿನ ಕಾರಣಗಳನ್ನು ತಿಳಿದು ನಂಬುತ್ತಾರೆ. ಹೀಗಿರುವಾಗ ಕಳ್ಳಭಟ್ಟಿಯ ವಿಚಾರದಲ್ಲಿ ಜೈಲಿಗೆ ಸೇರಿದ ಮಂದಣನನ್ನು ಬಿಡಿಸಲು ಪಡುವ ಪ್ರಯತ್ನಗಳು ಸ್ವಾರಸ್ಯಕರವಾಗಿದ್ದು ಜೊತೆಗೆ ಅಲ್ಲಲ್ಲಿ ಮಂದಣನ ನಡುವಳಿಕೆಗಳು ನಗು ತರಿಸುತ್ತವೆ. ಇಡೀ ಕಾದಂಬರಿಯ ಕೇಂದ್ರ ಬಿಂದು, ಮೂರರ ಮುಂದೆ ಏಳು ಸೊನ್ನೆ ಹಾಕಿದಾಗ ಎಷ್ಟು ವರ್ಷಗಳಾಗುತ್ತೊ ಅಷ್ಟು ವರುಷಗಳ ಹಿಂದೆ ಇದ್ದ ಹಾರುವ ಓತಿಯನ್ನ ಅನ್ವೇಷಣೆ ಮಾಡಲು ಕರ್ವಾಲೋರ ನೇತೃತ್ವದಲ್ಲಿ ಪ್ಯಾರ, ಮಂದಣ, ಪ್ರಭಾಕರ, ಕಿವಿ (ತೇಜಸ್ವಿಯವರ ಸಾಕು ನಾಯಿ) ಮತ್ತು ತೇಜಸ್ವಿಯವರು ಹೊರಡುವುದು. ಸುಮಾರು ೩೦ ಪುಟಗಳಷ್ಟು ಅನ್ವೇಷಣೆಯ ಕಥೆ ಬಹಳಷ್ಟು ರೋಚಕವಾಗಿದ್ದು ಕೊನೆಗೆ ಬೆಟ್ಟದ ತುದಿಯಲ್ಲಿ ಕೋಡುಗಲ್ಲ ಮೇಲಿಂದ ಹಾರಿ ಕೈತಪ್ಪಿಸಿಕೊಳ್ಳುವ ಹಾರುವ ಓತಿಯ ಇಡೀ ಕಥಾನಕ ಕಣ್ಣೆವೆಯಿಕ್ಕದೆ ಓದಿಸಿಕೊಳ್ಳುತ್ತದೆ. “ಜೀವ ವಿಕಾಸಕ್ಕೆ ಎಲ್ಲಿದೆ ಕೊನೆ!” ಎನ್ನುವ ಕರ್ವಾಲೊರ ನುಡಿಗಳೊಂದಿಗೆ ಕಾದಂಬರಿ ಮುಗಿಯುತ್ತದೆ. ಜೇನುನೊಣಗಳು, ಗ್ಲೋ ವರ್ಮ್, ಮಂಗಟೆ ಹಕ್ಕಿ, ಹಾರುವ ಓತಿ ಹೀಗೇ ಪರಿಸರದ ಬಗೆಗಿನ ಕೌತುಕಗಳೊಂದಿಗೆ, ಓದುಗನನ್ನು ಹಿಡಿದಿಡುವ ಕೌಶಲ್ಯ ಈ ಕಾದಂಬರಿಯ ವೈಶಿಷ್ಟ್ಯ ಮತ್ತು ಹಿರಿಮೆ. ಚಿದಂಬರ ರಹಸ್ಯ, ತಬರನ ಕಥೆ, ಸುಶ್ಮಿತಾ ಮತ್ತು ಹಕ್ಕಿ ಮರಿ, ಕುಬಿ ಮತ್ತು ಇಯಾಲ, ಮಿಲೇನಿಯಂ ಸಿರೀಸ್ (೧೬ ಪುಸ್ತಕಗಳು) ಹೀಗೆ ಇನ್ನೂ ಅನೇಕ ಅಮೂಲ್ಯ ಕೃತಿಗಳನ್ನು ನೀಡಿರುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರಿಗೆ ನಮನಗಳು ************************************ ಚೈತ್ರಾ ಶಿವಯೋಗಿಮಠ

Read Post »

ಇತರೆ

ಕಾದಂಬರಿ ಕುರಿತು ಬಂಡಾಯ ವ್ಯಾಸರಾಯ ಬಲ್ಲಾಳ ಒಳ್ಳೆಯ ಓದುಗ ವಿಮರ್ಶಕನಾಗುತ್ತಾನೆ ನಿನ್ನೆ ಮೊನ್ನೆ  ಎಲ್ಲಿಯೋ ಓದಿದ ನೆನಪು. ಬಹುಶಹ ಗಂಗಾಧರ್ ಸರ್ ‘ನನ್ನ ಪುಟ’ದಲ್ಲಿ?  ನಾನೋ ವಿಮರ್ಶೆ ನನಗೆ ಒಗ್ಗಲ್ಲ ಎನ್ನುತ್ತಲೇ ಹಾಗೆ ಓದಿ ಹೀಗೆ ತಲೆ ಕೊಡವಿಕೊಳ್ಳುವ ಜಾತಿ. ಆದರೆ ಓದಿ ಬದಿಗಿಟ್ಟಮೇಲೂ ಬಿಡದಲೇ  ಬೆನ್ನಿಗೆ ಬಿದ್ದು ದನಿಯಾಗಿ ಕಾಡಿದ ಕ್ರತಿಗಳ ಕಾರಣದಿಂದಲೇ ಒಮ್ಮೊಮ್ಮೆ ನೋಡೋಣವೆಂತಲೇ ಕಚ್ಚಿ ಕೂತಿದ್ದಿದೆ. ಅಂಥ ಕ್ರತಿಗಳಲ್ಲೊಂದು ಇತ್ತೀಚೆಗೆ ಕೈಗೆ ಬಂದ ಪುಸ್ತಕ ಬಲ್ಲಾಳರ ‘ಬಂಡಾಯ’.  ತಮ್ಮ ಕೊನೆಯ ದಿನಗಳಲ್ಲಿ ಬೆಂಗಳೂರಿನಲ್ಲಿದ್ದು ೩೦೦೮ರಲ್ಲಿ ನಿಧನರಾದ  ಹಿರಿಯ ಸಾಹಿತಿ ವ್ಯಾಸರಾಯ ಬಲ್ಲಾಳರು ಕರ್ನಾಟಕದ ಇತ್ತೀಚಿನ ಓದುಗರಿಗೆ ಬರಹಗಾರರಿಗೆ ತೀರಾ ಪರಿಚಿತರೇನಲ್ಲ. ಕಾರಣ ತಮ್ಮ ಬದುಕಿನ ಅರ್ಧ ಶತಮಾನಗಳಷ್ಟು ಕಾಲವನ್ನು ಅವರು ವಾಣಿಜ್ಯ ನಗರ ಮುಂಬೈನಲ್ಲಿಯೇ ಕಳೆದವರು. ಕನ್ನಡದ ಪ್ರಗತಿಪರ ನವ್ಯಬಂಡಾಯ ಸಾಹಿತ್ಯಗಳ ಪ್ರಭಾವದ ಸುತ್ತಿಗೆ ಸಿಕ್ಕಿಕೊಂಡೇ ಬೆಳೆದ ಬಲ್ಲಾಳರನ್ನು ಕನ್ನಡದ ಕೆಲವೇ ವೈಚಾರಿಕಪರ ಕಾದಂಬರಿಕಾರರ  ಸಾಲಿನಲ್ಲಿ ಅವರನ್ನ ತಂದು ನಿಲ್ಲಿಸಿದ್ದು ಅವರ ಬಂಡಾಯ ಕಾದಂಬರಿ. ನಿತ್ಯ ಬದುಕಿನ ನಿರಂತರ ವ್ಯವಸ್ಥೆಯಾದ ಶ್ರಮಿಕ ವರ್ಗ ಹಾಗೂ ಸಾಮ್ರಾಜ್ಯಶಾಹಿಗಳ ನಡುವಿನ ಸಂಘರ್ಷ, ಇದರಿಂದಾಗಿಯೇ ಹುಟ್ಟಿಕೊಂಡ ಕಾರ್ಮಿಕ ಸಂಘಟನೆಗಳು, ಶ್ರಮಿಕರ ಹಕ್ಕುಗಳರಕ್ಷಣೆಗಾಗಿಯೇ ಹುಟ್ಟಿಕೊಂಡ ಟ್ರೇಡ್ ಯೂನಿಯನ್ಗಳು ನಿಜವಾದ ಉದ್ಧೇಶಗಳನ್ನು ಮರೆತು ತಮ್ಮಬಲ ಪ್ರತಿಷ್ಠೆಗಳನ್ನು ಹೆಚ್ಚಿಸಿಕೊಳ್ಳುವದಕ್ಕಾಗಿ ನಡೆಸುವ ತೆರೆಯ ಮರೆಯ ತಂತ್ರ ಕುತಂತ್ರಗಳು,  ಇಂತ ಸಂಘಟನೆಗಳನ್ನು ಹಿಡಿತದಲ್ಲಿಡಲು ಸಾಮ್ರಾಜ್ಯಶಾಹಿಗಳ ಕಸರತ್ತು , ಇಂತಹ ಧನದೊರೆಗಳನ್ನು ಕಾಯುವದೇ ತಮ್ಮ ಕರ್ತವ್ಯವೆಂದು ಸದಾ ಉಧ್ಯಮಿಗಳ ಪರವಾಗಿ ನಿಂತು ಅವರು ಕೊಡುವ ಜಿನ್ ವ್ವಿಸ್ಕಿಗಳ ಹೊಳೆಯಲ್ಲಿ ಹರಿದುಹೋಗುವ ಪೋಲೀಸ್ ಇಲಾಖೆ ಹಾಗೂ ರಾಜಕೀಯದ ಕರಾಳ ಮುಖಗಳನ್ನು ಬಯಲು ಮಾಡುತ್ತ ನಡೆದ ವಸ್ತುನಿಷ್ಠ ಕ್ರತಿ ಬಂಡಾಯ       ಮುಂಬೈ ಎಂದೊಡನೆ ಅಮಿತಾಬಚ್ಛನ್ ಖಾನ್ ಕುಮಾರ ಖನ್ನಾಗಳು, ಶಾಪಿಂಗ್ ಕಾಂಪ್ಲೆಕ್ಸಗಳು, ಲೋಕಲ್ ಟ್ರೇನುಗಳು, ಜುಹುಬೀಚ್, ಗಗನಚುಂಬಿ ಕಟ್ಟಗಳು, ನೆಲ ಕಾಣದಷ್ಟು ವಾಹನಗಳು, ಕಾಮಾಟಿಪುರದ ಕೆಂಪುದೀಪದ ಕೆಳಗಿನ ಬದುಕಿಗಾಗಿ ಮಾನವೀಯತೆ ಉಳಿದುಕೊಂಡ ಎದೆಯ ಸುಯ್ಯು ಎಂದಷ್ಟೇ ಹರವಿಕೊಳ್ಳುವ ನಮ್ಮ ತಲೆಯೊಳಗೆ ಮುಂಬೈ ಎಂದರೆ ಶ್ರಮಜೀವಿಗಳು, ಅವರ ಕಷ್ಟ ಕೋಟಲೆಗಳು, ಅವರ ನಿತ್ಯದ ಬದುಕುಗಳು, ಅವರು ದುಡಿವ ಯಂತ್ರಗಳೊಳಗೆ ಸಿಕ್ಕು ಕಳೆದು ಹೋಗುವ ಕೈಕಾಲುಗಳು, ಕಂಪನಿಯ ಲಾಕೌಟ್ ಗಳು, ಉರಿಯದೇ ತಣ್ಣಗೆ ಕೂರುವ ಶ್ರಮಿಕರ ಒಲೆಗಳು,  ಸೋರುವ ಸಿಂಬಳದ ಮಗು, ಗೂರಲು ಕೆಮ್ಮಿನ ಮುದುಕರು, ಸದ್ದಿಲ್ಲದೇ ಕೊಲೆಯಾಗಿ ಹೆಣವಾಗಿ ಮಲಗುವ ಕಾರ್ಮಿಕ ಮುಖಂಡರುಗಳು, ಇದೇ ಮುಂಬೈನ ನಿಜವಾದ ಮುಖ ಅನ್ನುವಷ್ಟರ ಮಟ್ಟಿಗೆ ನಮ್ಮನ್ನು ತನ್ನೊಳಗೆ ಸಿಕ್ಕಿಸಿಕೊಳ್ಳುತ್ತದೆ ಬಲ್ಲಾಳರ  ಬಂಡಾಯ. ಕೌಟುಂಬಿಕ ಕಾದಂಬರಿಯಲ್ಲದ ನಾಯಕ ಕಳನಾಯಕರ ನಡುವಿನ ಕದನವಾಗದ ಒಂದು ವ್ಯವಸ್ಥೆಯ ವಿರುದ್ಧದ ವಾಸ್ತವಿಕತೆಯ ಸುತ್ತ ಎಳೆಎಳೆಯಾಗಿಸುತ್ತ ಹರವಿಕೊಂಡ ಕಥಾವಸ್ತು. ತಾನೇ ಸ್ವತಹ ಮದ್ದಿನಂಗಡಿಯ ಕಾರ್ಮಿಕನಾಗಿ ಎಪ್ಪತ್ತು ರೂಪಾಯಿ ಸಂಬಳದಲ್ಲಿ ಎರಡೇ ಕೋಣೆಯ ವಾಸ ಬೆಳಗಿನ ಎಂಟರಿಂದ ರಾತ್ರಿಯ ಎಂಟರವರೆಗಿನ ಕತ್ತೆ  ದುಡಿತದಿಂದಲೇ ಮೇಲೇರಿಬಂದು ಹತ್ತಾರು ಇಂಡಸ್ಟ್ರಿಗಳಗೆ ಮಾಲಕರಾದ ನಾಗೇಶ ಶರ್ಮಾ ಅವರ ಮಗ ಸತೀಶ ಶರ್ಮಾ ತಮ್ಮಲ್ಲಿ ದುಡಿಯುವ ಕಾರ್ಮಿಕರನ್ನು ಹಿಡಿತದಲ್ಲಿಡಲು ಮಾಡುವ ಕಸರತ್ತುಗಳೆಲ್ಲ ಅವರನ್ನು ಕಳನಾಯಕರಲ್ಲದೆಯು ಕಳನಾಯಕರ ಸಾಲಿನಲ್ಲಿ ನಿಲ್ಲಿಸುತ್ತದೆ.        ಡ್ರಾಯಿಂಗ್ ರೂಮಿನ ಮೂಲೆಯಲ್ಲಿರುವ ಸ್ವಂತದ ಬಾರ್, ಒಂದು ಕಪ್ ಚಹಾ ಹೊತ್ತು ಓಡಾಡುತ್ತ ಬರುವ ರಥ, ಹಾಸಿದ ಕಾರ್ಪೆಟ್ಟುಗಳ ಮೇಲೆ ಸದ್ದೇ ಕೇಳಿಸದ ಹೆಜ್ಜೆ, ಕಿಟಕಿಯ ಬೆಳಕನ್ನು ನಿಯಂತ್ರಿಸುವ ಬ್ಲೈಂಡ್ಸ,  ಪ್ರತಿಷ್ಠಿತರ ಸೊತ್ತಾದ ನರಿಮನ್ ಪಾಯಿಂಟ್ , ಬದುಕಲೆಂದೇ ಧಾವಿಸಿ ಬಂದು ಕಾಲುದಾರಿಗಳಲ್ಲಿ ಹೂಡುವ ನೂರಾರು ಅಗ್ಗಿಷ್ಠಿಕೆಗಳು, ಬಡಕಲು ಕೈಗಳಲ್ಲಿ ಕಾಯಿಸುತ್ತಿದ್ದ ರೊಟ್ಟಿಗಳು, ಝೋಪಡಿಯಲ್ಲಿ ಸಾಗುವ ಬದುಕು, ಜೋಪಡಿ ಪಕ್ಕದ ಕಾಲುದಾರಿಯಲ್ಲೇ ಮಲ ಮೂತ್ರವಿಸರ್ಜನೆಗೆ ಕೂಡ್ರುವ ಹೊಟ್ಟೆಯುಬ್ಬರಿಸಿದ ಮಕ್ಕಳು, ಜೋಪಡಿಯಲ್ಲಿ ಚಿಂದಿಯುಟ್ಟು ಅರೆನಗ್ನಳಾಗಿ ಮಲಗಿದ ತಾಯಿಯ ಎದೆಯ ಮೇಲೆ ಮಲಗಿ ಮೊಲೆ ಚೀಪುವ ಮಗು, ಮಗುವಿನ ತಲೆಗೂದಲಮೇಲೆ ಓಡಾಡಿ ಹೇನು ಹುಡುಕುವ ತಾಯ ಕೈ –ಹೀಗೆ ಬೊಟ್ಟು ಮಾಡದೆಯೇ ವ್ಯವಸ್ಥೆಯ ತಾರತಮ್ಯದ ವೈಪರೀತ್ಯಗಳನ್ನು ಓದುಗನಿಗೆ ಮನದಟ್ಟುಮಾಡುವ ಪ್ರೌಢಿಮೆ ಬಲ್ಲಾಳರದು.        ಸ್ನಾನ ಕಾಣದ ಮೈ, ಸಾಬೂನು ಕಾಣದ ಶರ್ಟ, ಹಳೆಸೀರೆ ನಿತ್ಯದ ಬೆವರು ಎಲ್ಲ ಕ್ಯೂ ಹಿಡಿದು ನಿಲ್ಲುವದು ಬದುಕಿಗಾಗಿ ಎನ್ನುತ್ತಲೇ ಓದುಗನೆದೆಗೆ ಹತ್ತಿರವಾಗುವ ಹೆಣ್ಣು   ಯಾಮೀ, ಯಾಮಿನಿ . ಶಾಕುಂತಲ ಮೃಚ್ಛಕಟಿಕ ನಾಟಕಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದವಳನ್ನು ಅವಳು ಅಭಿನಯ ಸಾಮ್ರಾಜ್ಞಿಯೆಂದು ಹೊಗಳಿ ಮೆಚ್ಚಿ ಮದುವೆಯಾದ ಪತಿ.  ಪೋಲಿಯೋ ಪೀಡಿತನಾಗಿ  ಹಾಸಿಗೆಹಿಡಿದ ಮೇಲೆ ದಾಂಪತ್ಯದಾರಂಭದ ಕೆಲದಿನದ ನಗು ಮಾತು ಸುತ್ತಾಟ ಸಿನೇಮಾ ಎಲ್ಲವೂ ಸುಳ್ಳು ಪತಿಯ ಹಾಸಿಗೆಯ ಪಕ್ಕದ ಕ್ರಚ್ ಒಂದೇ ಸತ್ಯ ಅನ್ನಿಸಿತೊಡಗಿದಾಗ ಹೆಂಡ್ ಲೂಮ್ ಹೌಸ್ ನಲ್ಲಿ ಕೆಲಸಕ್ಕೆ ಸೇರಿದ ಹೆಣ್ಣು. ಭೋಸುಡಿ ಎಲ್ಲಿ ಹೋಗಿದ್ದೆ ಇಷ್ಟೊತ್ತು? ಯಾವ ಮಿಂಡನ ಜೊತೆಗೆ ಮಲಗಿದ್ದೆ ಮುಂಡೆ, ಹಲ್ಕಟ್ ರಂಡೆ, ಸೂಳೆಯೆಂದು ಅಪಾಂಗ ಅಸಹಾಯಕ ಪತಿಯಿಂದ ಅನ್ನಿಸಿಕೊಳ್ಳುತ್ತಲೇ  ಇಪ್ಪತ್ತೈದು ಪೈಸೆಯಗಲದ ಕುಂಕುಮ ಹಣೆಗಿಟ್ಟುಕೊಂಡು ನಗುನಗುತ್ತಲೇ ಪತಿಯ ಬೇಕು ಬೇಡಗಳನರಿತು ಪೂರೈಸುವ ಹೆಣ್ಣು ಅನಿರೀಕ್ಷಿತವಾಗಿಯೇ ಕಾರ್ಮಿಕ ಸಂಘಟನೆಯ ಸಂಪರ್ಕಕ್ಕೆ ಬರುತ್ತಾಳೆ.  ಲಾಲ್ ಬಾವುಟಾ ಜಿಂದಾಬಾದ್ ಎಂದಷ್ಡು ಸುಲಭವಲ್ಲ ಸಂಘರ್ಷದ ಹಾದಿ ಎನ್ನುವ ವಿಸ್ಮಯವನ್ನು ಒಳಗಿಟ್ಟುಕೊಂಡೆ ನಾಯಕ ರಾಜೀವನ ಸಾಂಗತ್ಯದಲ್ಲಿ  ಕೋಣ ತೀ ಬಾಯಿ? ರಾಜೀವಭಾಯಿ ಚಿ ಬಾಯಿ. ಕಸಲಿ ಬಾಯೀ? ಠೇವಲೇಲಿ (ಇಟ್ಟುಕೊಂಡವಳು)ಅನ್ನಿಸಿ ಕೊಳ್ಳುತ್ತಲೇ ಎಲ್ಲವನ್ನು ಕೊಡವಿಕೊಂಡು ಅವನ ವ್ಯಕ್ತಿತ್ವದ ಕರ್ತೃತ್ವ ಶಕ್ತಿ, ಪ್ರತಿಭೆ, ಸಾಂಘಿಕ ಸಮಾನತೆಯ ತಿಳುವಳಿಕೆ, ನಾಯಕತ್ವದ ಎಳೆಗಳನ್ನು ಒಂದೊಂದಾಗಿ ತನ್ನೊಳಗೆ ತುಂಬಿಕೊಂಡು ಮಜ್ದೂರ್ ಯೂನಿಯನ್ ನ ಪ್ರತಿಯೊಂದು ಸೂಕ್ಷ್ಮ ಕೊಂಡಿಗಳನ್ನು ಅರಿತು ಅದನ್ನು ಸಮರ್ಥವಾಗಿ ಮುನ್ನಡೆಸುವ ಮಟ್ಟಿಗೆ ಬೆಳೆದು ನಿಂತ ಸಾಮಾನ್ಯ ಹೆಣ್ಣು ಯಾಮಿನಿ ಮಹಿಳಾ ಸಾಬಲ್ಯಕ್ಕೆ ಸಾಕ್ಷಿಯಾಗಿ ನಿಲ್ಲುತ್ತಾಳೆ. ಕಟ್ಟುವ ಕೆಲಸ ಮಾಡುವವರು ಬುಲ್ಡೋಜರ್ ಕಡೆ ನೋಡುವದಿಲ್ಲ ಎನ್ನುತ್ತಲೇ ಕಾರ್ಯ ಕಾರಣಗಳ ಒಳ ಹೊರಗಿನ ಸೂಕ್ಷ್ಮಗಳನ್ನರಿತು ಪೂರ್ತಿಯಾಗಿ ತನ್ನನ್ನು ಅದರಲ್ಲಿ ತೊಡಗಿಸಿಕೊಂಡು ಅವಳು ಕಟ್ಟಿದ್ದು ವ್ಯವಸ್ಥಿತ ವ್ಯವಸ್ಥೆಗಳನ್ನೇ ಕೆಡಹುವ ವ್ಯವಸ್ಥೆ.        ನಾಯಕ ರಾಜೀವನದು ಇಬ್ಬಗೆಯ ವಿಚಾರಗಳನ್ನು ಹೊಂದಿದ ದ್ವಂದ್ವ ವ್ಯಕ್ತಿತ್ವ. ವ್ಯವಸ್ಥೆಯ ವಿರುದ್ಧ ಸಿಡಿದು ನಿಂತು ತಮ್ಮ ಹಕ್ಕಿಗಾಗಿ ಹೋರಾಡದವರನ್ನೆಲ್ಲ ಬಾಂಬು ಹಾಕಿ ಕೊಲ್ಲಬೇಕು, ಬೆಂಕಿ ಹಾಕಬೇಕು, ಜೋಪಡಿಗಳಮೇಲೆ ಬುಲ್ಡೋಜರ್ ಹಾಯಿಸಿ ನೆಲಸಮ ಮಾಡಬೇಕೆಂದುಕೊಳ್ಳುತ್ತ ವ್ಯವಸ್ಥೆಯ ತಾರತಮ್ಯಕ್ಕೆ ಆಕ್ರೋಶದ ಬೆಂಕಿಯನ್ನ ಎದೆಯಲ್ಲಿಟ್ಟುಕೊಂಡು, ನಿತ್ಯ ಒಳಗೊಳಗೇ ಸುಡುತ್ತ, ಉಳ್ಳವರಿಂದ ಕಸಿದುಕೊಳ್ಳುವ ತಾಕತ್ತಿನವರನ್ನು ಕಂಡು ವಿಚಿತ್ರ ಸುಖವನ್ನ ಅನುಭವಿಸುತ್ತ ತಾರತಮ್ಯದ ವ್ಯವಸ್ಥೆಯನ್ನು ಒಪ್ಪಿಕೊಂಡವರನ್ನು ದ್ವೇಷಿಸುತ್ತ, ಬಲಕರಗಿ ಸೋಲುವವರನ್ನು ಕಂಡು ಹೇಸುತ್ತಲೇ ಅವರಿಗಾಗಿ ಮಿಡಿವ ವಿಚಿತ್ರ ವ್ಯಕ್ತತ್ವದ ರಾಜೀವ. ಪೂರ್ವಾಶ್ರಮದ ಯೋಚನೆಗಳನ್ನ  ಅಂಕೆಯಲ್ಲಿ ಬಿಗಿದಿಟ್ಟುಕೊಂಡು ಕಳೆದ ಹತ್ತು ವರ್ಷಗಳಿಂದ ಕಾರ್ಮಿಕ ಸಂಘಟನೆಯ ಆಧಾರವಾಗಿ ಯಾವುದೇ ಸ್ವಾರ್ಥವಿಲ್ಲದೇ  ನಿರಂತರ ದುಡಿಯುವವನು. ಹತ್ತುವರ್ಷಗಳಿಂದ ಎಂಟು ಲಕ್ಷ ಕಾರ್ಮಿಕರಿಗೆ ನಾಯಕನಾಗಿ ಆಮಚಿ ರಾಜೀವ್ ಭಾಯಿ, ರಾಜೋಬಾ, ಅಣ್ಣಾಸಾಹೇಬ್, ಸಾಥಿ ರಾಜೀವ್ ಎನ್ನಿಸಿಕೊಂಡ ರಾಜೀವ ಕೈಯ್ಯಿಟ್ಟಲೆಲ್ಲೂ ಅಪಜಯ ಕಂಡರಿಯದ  ಧೀರ. ತನಗಾಗಿ ಏನನ್ನೂ ಬಯಸದೇ ಲೋಕಲ್ ಟ್ರೇನ್ ಗಳಲ್ಲಿ ಪ್ರಯಾಣಿಸುತ್ತ ,ಕಾರ್ಮಿಕ ಬಸ್ತಿಯ ಬಳಸು ದಾರಿಗಳಲ್ಲಿ ಕಾಲ್ನಡಿಗೆಯಲ್ಲೇ  ಸಂಚರಿಸುತ್ತ, ಮೈಲುಗಟ್ಟಲೆ ನಡೆದು ಬೋಯಿವಾಡಾದ ರಂಗೇರಿಚಾಳ್ನ ಒಂದೇ ಕೋಣೆಯ ಮನೆ ಸೇರುವದ ಪ್ರೀತಿಸುವ ರಾಜೀವ  ಓದುಗನೆದೆಗೆ ತೀರ ಹತ್ತಿರ ಬರುವ ವ್ಯಕ್ತಿತ್ವ. ನಕ್ಸಲ್ ಆಗಿದ್ದು ಬೋರಿವಂಕದಲ್ಲಿ ಪೋಲೀಸರೊಂದಿಗಿನ ಚಕಮಕಿಯಲ್ಲಿ ಗುಂಡು ತಗಲಿ ಸತ್ತನೆಂದು ದಾಖಲಾದ ರಾಜಶೇಖರ ಸೋಮಯಾಜಲು ವಿಕಾರವಾಗಿದ್ದ ಮುಖಕ್ಕೆ ಪ್ಲಾಷ್ಟಿಕ್ ಸರ್ಜರಿ ಮಾಡಿಸಿಕೊಂಡು ರಾಜೀವನೆಂಬ ಹೊಸ ಹೆಸರಿನೊಂದಿಗೆ ತನ್ನ ಪೂರ್ವಾಶ್ರಮಕ್ಕೆ ವಿಮುಖನಾಗಿ ಮುಂಬೈಗೆ ಬಂದು  ಅಸಾದ್ಯವಾದದನ್ನು ಸಾಧಿಸಿದ್ದ. ಕಾರ್ಮಿಕರ ಸಾವಿಗೆ ಹಣ ಹೆಂಡ ಹಾದರವೇ ಕಾರಣವೆಂಬುದು ಸುಳ್ಳಾಗಿ, ಟ್ರೇಡ್ ಯೂನಿಯನ್ ಲೀಡರುಗಳು ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವದಕ್ಕಾಗಿ ಯಾರಿಗಾಗಿ ಸಂಘಟನೆಯೋ ಅವರನ್ನೇ ಕೊಲ್ಲಸುವ ಮಟ್ಟಕ್ಕೆ ಬೆಳೆದು ನಿಂತಿದ್ದನ್ನ ಕಂಡು,  ಶ್ರೀಕಾಕುಲಂ ವಾರಂಗಲ್  ಖಮ್ಮಾಮ್ ಗಳ ಚಟುವಟಿಕೆಗಳಿಗೆ ಹೇಸಿ ಅಲ್ಲಿ ಮನುಷ್ಯರಾಗಿ ಬದುಕುವದನ್ನು ಕಲಿಯಲು ಯಾರಿಗೂ ಸಾಧ್ಯವಾಗಿಲ್ಲ ಎಂದುಕೊಂಡು, ದಾರಿ ಬದಲಿಸಿ ಇಲ್ಲಿ ಬಂದವ ತಾನು ಕಟ್ಟಿದ ಸಂಘಟನೆಯ ಸರ್ವ ಜವಾಬ್ದಾರಿಗಳನ್ನು ಯಾಮಿನಿಗೆ ಒಪ್ಪಿಸಿ  ಶಕ್ತಿ ಪ್ರವಹಿಸುವದೇ ಬಂದೂಕಿನ ನಳಿಕೆಯ ಮೂಲಕ ಎನ್ನುತ್ತ ಮುಂಬೈಗೆ ಬೆನ್ನುಮಾಡಿ ಕಪ್ಪು ಕತ್ತಲೆಯಲ್ಲಿ ಕರಗಿ ಮತ್ತಲ್ಲಿಗೇ ಮುಖ ಮಾಡಿದನೆಂಬುದಕ್ಕೆ  ಸತೀಶ್ ಶರ್ಮಾನ ಕಲ್ಯಾಣಿ ಕೆಮಿಕಲ್ಸ ಗೆ ಹೊತ್ತಿಕೊಂಡ ಬೆಂಕಿ  ಪುಷ್ಟಿಯನ್ನು ನೀಡುತ್ತದೆ. ಓದುಗನೆದೆಯಲ್ಲಿ ರಾಜೀವ್ ಭಾಯಿ ದುರಂತ ನಾಯಕನಾಗಿ ನಿಂತು ಹೋಗುತ್ತಾನೆ.  ಎಲ್ಲ ವ್ಯವಸ್ಥೆಯಲ್ಲೂ ಹಿಂಸೆಯ ಬೀಜ ಅಡಗಿದೆ  ಎನ್ನುವದು ಓದುಗನ ಮೈಮುಳ್ಳಾಗಿಸುವ ಸತ್ಯ.      ಕಾದಂಬರಿಯಲ್ಲಿ ಅಂಕದಂಗಳಕ್ಕೆ ಬರದೇ ನೇಪಥ್ಯದಾಚೆಯೇ ನಿಂತು ನಿಜವಾದ ಖಳನಾಗಿ   ಓದುಗರ ಕೆಂಗಣ್ಣಿಗೆ ಸಿಕ್ಕುವದು ತನ್ನ ಸ್ವಾರ್ಥಕ್ಕೆ ಕಾರ್ಮಿಕರಲ್ಲಿ ಭಯವನ್ನು ಹುಟ್ಟಿಸುವದಕ್ಕಾಗಿ ಕಾರ್ಮಿಕರನ್ನೇ ಕೊಲ್ಲುವ ಕುಟಿಲ ಕ್ರೂರ ಬಾಪು ದೇಶಪಾಂಡೆಯೆಂಬ ಯೂನಿಯನ್ ಲೀಡರ್. ಮುಷ್ಕರ ದಂಗೆ ಕೆಂಪು  ಕೊಲೆ ರಕ್ತವೆಂದು ಎದೆ ಬಿಗಿವಾಗೆಲ್ಲ ಹಿತವಾದ ತಂಗಾಳಿಯಾಗಿ ಸುಳಿಯುವ ವ್ಯಕ್ತಿತ್ವ ಅಪಾಂಗ ಕಲ್ಯಾಣದ ಮಕ್ಕಳನ್ನೂ ನಿಜವಾಗಿ ಪ್ರೀತಿಸುವ ಸತೀಶ ಶರ್ಮಾನ ಹೆಂಡತಿ ಲಕ್ಷ್ಮಿಯದು.  ನಯನಾ, ಗೋದುಮಾಂಶಿ, ಪಾಂಡು ಸುತಾರ್, ಮಾನೆ ರಘು ಪಾಟಣ್ಕರ್ ಹೀಗೆ ಬಂದು ಹಾಗೆ ಹೋಗುವ ಪಾತ್ರಗಳಾದರೂ ಬಹುಕಾಲ ನೆನಪಲ್ಲಿ ನಿಲ್ಲುವ ಮುಖಗಳು. ಕನ್ನಡದ ನಡುವೆ ಕಂಪಾಗಿ ಕುಸುರಿಗೊಂಡ (ಆಣಿ, ಆಮ್ಚೇ,ತಸ್ಸ ಕಾಯ್,ಫುಡೆ ಕಾಯ್, ಬೆವಡಾ, ಮಲಾ,ಆಲಾ ) ಮರಾಠಿ ಕಮ್ಮಗನಿಸುತ್ತದೆ. ಕಾದಂಬರಿಯಲ್ಲಿ ಮತ್ತೆ ಮತ್ತೆ ಕಣ್ಣೆದುರು ಬರುವ ಹಾರ್ನಿಮನ್ ವೃತ್ತ ಬಾಂದ್ರಾ ಗಿರಗಾಂ ಭೋಯಿವಾಡಾ ಚರ್ಚಗೇಟ್ ಥಾಣೆ ಬೇಲಾಪುರ ಪನ್ವೇಲ್ ಪೋಕ್ರಾನ್ ವಾಡಿಬಂದರ್ ಕಾಳಾಚೌಕಿ ಭಿವಾಂಡಿವಾಲಾಚಾಳ್ ಕಾರ್ಮೈಕಲ್ ದಹಾನುಕರ್ ರಂಗೇರಿಚಾಳ್ ನಾವು ಕಂಡರಿಯದ ಮುಂಬೈನ  ಅದೆಷೋಸ್ಥಳ ಹಾಗೂ ರಸ್ತೆಗಳು ನಮ್ಮ ಆಜುಬಾಜು ಬಂದು ಕೂತಂತೆ ಹತ್ತರವಾಗುತ್ತವೆ.    ಕೇಂದ್ರ ಸಾಹಿತ್ಯ ಅಕೆಡಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ,ಹಾಗೂ ಮಹಾರಾಷ್ಟ್ರ ಸರ್ಕಾರದಿಂದ ಪ್ರಶಸ್ತಿ ಪುರಸ್ಕಾರಗಳನ್ಬು ಪಡೆದ ಕೃತಿ, ವಾಸ್ತವಿಕ  ನೆಲೆಯಲ್ಲಿ ಮುಂಬೈನ ಕಾರ್ಮಿಕ ಸಮಸ್ಯೆಯ ರೌದ್ರ ಮುಖಗಳನ್ನು ಸಮರ್ಥವಾಗಿ ತೆರೆದಿಟ್ಟು, ತನಗೆ ಆಸರೆಯಾದ ಮುಂಬೈನ ನೀರು ಗಾಳಿ ಮಣ್ಣಿಗೆ ಋಣ ಸಂದಾಯದ ಸಾರ್ಥಕ ಹೆಜ್ಜೆ ‘ಬಂಡಾಯ’. ಹಾಗೆಯೇ ಕನ್ನಡ ಸಾಹಿತ್ಯ ಭಂಡಾರಕ್ಕೊಂದು ಶ್ರೇಷ್ಠ ಕೊಡುಗೆಯಾಗಿದೆ. ******************************** ಪ್ರೇಮಾ ಟಿ.ಎಂ.ಆರ್

Read Post »

ಇತರೆ

ಕಾದಂಬರಿ ಕುರಿತು ಮಲೆಗಳಲ್ಲಿ ಮದುಮಗಳು ಕುವೆಂಪು ಶತಮಾನದ ಶ್ರೇಷ್ಠ ಸಾಹಿತಿ ಎಂದು ಕುವೆಂಪು ಅವರನ್ನು ಕರೆದರೂ ಯಾಕೋ ಅವರ  ಬಗ್ಗೆ ತೀರ ಕಡಿಮೆಯಾಯ್ತು ಅನ್ನಿಸುತ್ತದೆ . ಯಾಕಂದ್ರೆ ಅವರ ಮಹದ್ ಬೃಹತ್ ಗ್ರಂಥ “ಮಲೆಗಳಲ್ಲಿ ಮದುಮಗಳು” ಇಂದು ನನ್ನ ಕೈಯಲ್ಲಿದ್ದು ತನ್ನನ್ನು ತಾನೇ ಓದಿಸಿಕೊಳ್ಳುತ್ತಿದೆ. ಹೆಸರಾಂತ ಸಾಹಿತಿ ದೇವನೂರು ಮಹಾದೇವ ಅವರ ಎದೆಯಾಳದ ಪ್ರಶ್ನೆಯೊಂದನ್ನು ಇಲ್ಲಿ ಇಡುವ ಮನಸ್ಸಾಗುತ್ತದೆ “ಕನ್ನಡದಲ್ಲಿ ಅತ್ಯುತ್ತಮ ಎನ್ನಿಸಿಕೊಂಡ ನಾಲ್ಕಾರು ಕೃತಿಗಳನ್ನು ತಕ್ಕಡಿಯ ಒಂದು ತಟ್ಟೆಯಲ್ಲಿಟ್ಟು ಕುವೆಂಪುರವರ  ಮದುಮಗಳನ್ನು ಇನ್ನೊಂದರಲ್ಲಿಟ್ಟರೆ ಗುಣದಲ್ಲೂ ಗಾತ್ರದಲ್ಲೂ ಮಲೆಗಳಲ್ಲಿ ಮದುಮಗಳು ಹೆಚ್ಚು  ತೂಗುತ್ತದೆ, ಈ ತಕ್ಕಡಿಗೆ ಏನಾಗಿದೆ? ಎಂದು ವಿದ್ಯಾರ್ಥಿಯಾಗಿದ್ದಾಗ ಕೇಳುತ್ತಿದ್ದೆ . ಈಗಲೂ ನೀವು ನನ್ನ ಪ್ರಬುದ್ಧ ಅಂದುಕೊಳ್ಳುವದಾದರೆ ತಕ್ಕಡಿಗೆ ಏನಾಗಿದೆ ? ಎಂದು ಅದೇ ಪ್ರಶ್ನೆ ಕೇಳುತ್ತೇನೆ.” ಎನ್ನುತ್ತಾರೆ ಹೆಸರಾಂತ ಮಾನವೀಯ ಸಾಹಿತಿ ದೇವನೂರು ಮಹಾದೇವ.  ಬಹುಷಃ ಮಲೆಗಳಲ್ಲಿ  ಮದುಮಗಳು ಓದಿದ ಎಲ್ಲರ ಎದೆಯಲ್ಲಿ ಎದ್ದುನಿಲ್ಲುವ ಪ್ರಶ್ನೆ ಇದು. ಬರೀ ಕಾದಂಬರಿಯಲ್ಲ ಇದು  ಮಲೆನಾಡಿನ ಸಮಸ್ತವನ್ನೂ ಒಳಗೊಂಡ ಮಲೆನಾಡ  ಜೀವಕೋಶ ಅಂದುಕೊಂಡರೆ ಒಳಿತು. ಮಲೆನಾಡ ಕಾನು ಕಾಡು ಬೆಟ್ಟ ಬಯಲು ಮಳೆ ನೀರು ನದಿ ಬದುಕು ಬವಣೆ ಏನುಂಟು ಏನಿಲ್ಲ ಇದರಲ್ಲಿ?. ಕಾಲೇಜು ದಿನಗಳಲ್ಲಿ  ಲೈಬ್ರರಿಯಿಂದ ತಂದು ಅಲ್ಲಲ್ಲಿ ಗಿಬರಾಡಿ ಕುಡಿಮೀಸೆ ಕೆದರಿದ ಕ್ರಾಪು ಗುಳಿಗೆನ್ನೆ ನವಿರು ಸೀರೆಗಾಗಿ ಹುಡುಕಾಡಿ  ಮದುಮಗಳಲ್ಲಿ ಅದೇನೂ ಕಣ್ಣಿಗೆ ಬೀಳದೇ ಅವಳ ಭಾರಕ್ಕೆ ಭಯಪಡುತ್ತಲೇ ಒಂದಷ್ಟು ಪುಟ ಮಗುಚಿ ಮರಳಿಸಿ ಬಂದಾದಮೇಲೆಯೂ ಪುರುಸೊತ್ತಾಗಿ ಒಮ್ಮೆ ಓದಬೇಕೆಂಬ ಕನಸಿದ್ದದ್ದಂತೂ ಸುಳ್ಳಲ್ಲ. ದಶಕಗಳು ಕಳೆದ ಮೇಲೆ ಕಾಲ ಕೂಡಿಬಂದು ಈಗಷ್ಟೇ ಓದಿಮುಗಿಸಿದಮೇಲೆ ಇಷ್ಟುದಿನ ಬರಿದೆ ಬರಿದೇ ಹೋಯ್ತು ಹೊತ್ತು ಅನ್ನಿಸ್ತಾ ಇದೆ.     ನನ್ನೊಳಗೆ ಇಷ್ಟೊಂದು ಒಳಸಂಚಲನೆಯನ್ನು ಹುಟ್ಟುಹಾಕಿದ ಕೃತಿ ಬೇರೊಂದಿಲ್ಲ ಅಂದುಕೊಂಡಿದ್ದೇನೆ. ನಾನೂ ಒಬ್ಬಳು ಹಸಿಬಿಸಿ ಬರಹಗಾರ್ತಿ     ಎಂಬ ಒಣ ಹಮ್ಮಿನ ನೆತ್ತಿಕುಟ್ಟಿ ಪುಡಿಮಾಡಿ ಬರೆದದ್ದೆಲ್ಲ ಬಾಲಿಷ ಅನ್ನಿಸತೊಡಗಿದೆ ಅನ್ನೋಕೆ ಯಾವ ಸಂಕೋಚವೂ ಕಾಡುತ್ತಿಲ್ಲ. ಕೃತಿಯನ್ನ ಅತ್ಯಂತ ಪ್ರೀತಿಯ ತಿನಿಸನ್ನು ಬೇಗ ಮುಗಿದುಹೋಗುವ ಭಯದಲ್ಲಿ ಇಷ್ಟಿಷ್ಟೇ ತಿಂದು ಉಳಿಸಿಕೊಂಡಂತೆ ತಿಂಗಳು ಕಾಲ ನಿಧಾನವಾಗಿ ಕೂತು ಬಾಲಕಿಯಾಗಿ ಓದುವ ಸುಖ ವರ್ಣನೆಗೆ ನಿಲುಕದ್ದು.        ಕುವೆಂಪುರವರ ಮಾತುಗಳಲ್ಲಿ ಹೇಳುವದಾದರೆ “ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ ಯಾವುದೂ ಯಕ್ಕಶ್ಚಿತವಲ್ಲ.” ಇಲ್ಲಿ ಗುತ್ತಿಯ ವ್ಯಕ್ತಿಚಿತ್ರಣದಷ್ಟೇ ಶೃದ್ಧೆಯಿಂದ ಅವನ ನಾಯಿ ಹುಲಿಯನನ್ನು ಕುರಿತು ಬರೆದಿದ್ದಾರೆ. ಹುಲಿಕಲ್ಲ್ ನೆತ್ತಿಯನ್ನು, ಮಲೆನಾಡಿನ ಮಳೆಗಾಲದ ರೌದ್ರ ರಮಣೀಯತೆಯನ್ನು ಕಡೆದಿಟ್ಟ ತನ್ಮಯತೆಯಲ್ಲೇ ಕಾಡಿನ ಇಂಬಳವನ್ನು ಸುಬ್ಬಣ್ಣ ಹೆಗ್ಗಡೆಯ ಹಂದಿದೊಡ್ಡಿಯನ್ನು ಕುರಿತೂ ಬರೆಯುತ್ತಾರೆ ಕುವೆಂಪು. ಚಿನ್ನಮ್ಮ ಮುಕುಂದಯ್ಯರ ನಡುವಿನ ಪ್ರೇಮದ ಸಂದರ್ಭದಲ್ಲಿ ಅವರ ಲೇಖನಿ ಬಾಗಿನಿಂತಂತೆ ಐತ-ಪೀಂಚಲು ಗುತ್ತಿ- ತಿಮ್ಮಿಯರ ಪ್ರೇಮಪ್ರಣಯಕ್ಕೂ ಅವರದು ಪ್ರೀತಿಯ ಪೂಜೆಯೇ…ಒಮ್ಮೆ  ಓದಿ ಮುಗಿಸಿದಮೇಲೆ ಕೃತಿಯ ಕುರಿತಾಗಿ ಓದುಗರೆದೆಗೆ ದಕ್ಕಿದ ಹೊಳಹುಗಳನ್ನೊಮ್ಮೆ ತಿಳಿಯಲು ಪುಟ ತಿರುವಿಬಂದೆ. ಅವುಗಳನ್ನು ವಿಮರ್ಶೆಗಳೆನ್ನದೇ ಹೊಳಹುಗಳು ಎಂಬುದಕ್ಕೆ ಕಾರಣ ಮಲೆಗಳಲ್ಲಿ ಮದುಮಗಳು ವಿಮರ್ಶೆಗೆ ನಿಲುಕದಷ್ಟು ಎತ್ತರಕ್ಕೆ ಮೀರಿಬೆಳೆದ ಕೃತಿ. ಈ ಕೃತಿ ಕನ್ನಡವಲ್ಲದೇ ವಿಶ್ವದ ಬೇರಾವುದೇ ಭಾಷೆಯಲ್ಲಿದ್ದಿದ್ದರೆ ನೋಬಲ್ ಪಾರಿತೋಷಕವನ್ನು ತನ್ನ ಮುಡಿಗೇರಿಸಿಕೊಳ್ಳುತ್ತಿತ್ತು ಎಂಬ ಮಾತಂತೂ ಸರ್ವಕಾಲಿಕ ಸತ್ಯವಾದರೂ ಕನ್ನಡದ ಈ ಶ್ರೇಷ್ಠ ಕೃತಿಗೆ ಪಾರಿತೋಷಕಗಳ ಹಂಗಿಲ್ಲ. ಕನ್ನಡಕ್ಕೆ ಈ ಕೃತಿಯೇ ಒಂದು ಸರ್ವಶ್ರೇಷ್ಠ ಪಾರಿತೋಷಕ. ಇಂಗ್ಲೀಷ್ ನಲ್ಲಿ ಬರೆಯುವಷ್ಟು ಭಾಷಾ ಪಾಂಡಿತ್ಯವಿದ್ದರೂ ಕೂಡ ಕನ್ನಡವನ್ನು ತಲೆಮೇಲಿಟ್ಟುಕೊಂಡು ಮೆರೆಸಿದ ರಸ ಋಷಿಗೆ ನಾಡಿಗರು ಸದಾ ಋಣಿಯಾಗಿರಲೇಬೇಕು. ಕೃತಿ ತನ್ನ ಕೇಂದ್ರವನ್ನು ಬಿಟ್ಟು ದೂರ ಸರಿದಿದ್ದನ್ನು ಉಲ್ಲೇಖಿಸಿದವರಿದ್ದಾರೆ. ಕುವೆಂಪು ಬರೀ ಕೇಂದ್ರದ ಸುತ್ತಲೇ ಸುತ್ತಿ ಕೃತಿಯನ್ನು ಸೀಮಿತಗೊಳಿಸದೇ’  ಅದು ಬರೀ ಕಾದಂಬರಿಯಾಗಿಯೇ ಉಳಿದು ಹೊಗುವದನ್ನು ತಪ್ಪಿಸಿ ಸರ್ವಕಾಲಕ್ಕೂ ಸಲ್ಲುವಂತಹ ಒಂದು ಅನನ್ಯ ಕೊಡುಗೆಯನ್ನ ಕನ್ನಡ ಸಾರಸ್ವತ ಲೋಕಕ್ಕೆ ನೀಡಿ ಕನ್ನಡದ ಓದುಗರಮೇಲೆ ಋಣಭಾರ ಹೊರಿಸಿದ್ದಾರೆ. ಶೋಷಿತ ವರ್ಗ ಗಳ ಪರವಾಗಿ ಕೃತಿಕಾರ ನಿಂತಿದ್ದಾರೆ ಎಂಬ ಹೇಳಿಕೆಗಳನ್ನು ಒಪ್ಪಿಕೊಳ್ಳುವಂತಿಲ್ಲ. ಇದ್ದುದ ಇದ್ದಂತೆ ಕಂಡುದ ಕಂಡಂತೆ ಕೃತಿಯೇ ಕೃತಿಕಾರನ ಕೈಹಿಡಿದು ನಡೆಸಿದಂತೆ ಬರೆಯಬೇಕಾದ ಅಗತ್ಯಗಳನ್ನೆಲ್ಲ ಬರೆದಿದ್ದಾರೆ. ಮೇಲ್ವರ್ಗಗಳ ಕಪಿಮುಷ್ಠಿಗೆ ಸಿಕ್ಕು ತಳವರ್ಗಗಳು ನರಳುವ ಕಾಲಘಟ್ಟದಲ್ಲಿ ಸತ್ಯಕ್ಕೆ ಚ್ಯುತಿಯಾಗದಂತ ಕೃತಿಯ ನಡಿಗೆ ಬೊಟ್ಟಿಡಲಾಗದಷ್ಟು ಸಹಜ.  ಪ್ರಕೃತಿ ಪ್ರಣಯ ವಿರಹ ಮಿಲನ     ಅದಾವುದೇ ಇರಲಿ ವರ್ಣನೆಯಲ್ಲಂತೂ ಕುವೆಂಪು ಅವರದ್ದು ಬೇರಾರಿಗೂ ನಿಲುಕದ ತಪಸ್ಸಿದ್ಧಿ. ” ಅರಣ್ಯಾಚ್ಛಾದಿತವಾಗಿ ಮೇಘಚುಂಬಿಗಳಾಗಿ ನಿಂತಿರುವ ಗಿರಿಶಿಖರ ಶ್ರೇಣಿಗಳ ಮಲೆನಾಡಿನಲ್ಲಿ ಎಲ್ಲಿಯೋ ಕೆಳಗೆ ಒಂದು ಕಣಿವೆ     ಮರಗಳ ನಡುವೆ ಹುದುಗಿರುವ ಮನೆಗಳಲ್ಲಿ ಹುಟ್ಟಿ ಕಣ್ಣುಬಿಡುವ ಮಕ್ಕಳ ಪಾಲಿಗೆ  ಆಕಾಶ ಕೂಡ ಕಾಡಿನಷ್ಟು ವಿಸ್ತಾರಭೂಮವಾಗಿ ಕಾಣಿಸುವುದಿಲ್ಲ. ಆಕಾಶಕ್ಕಿಂತಲೂ ಕಾಡೇ ಸರ್ವವ್ಯಾಪಿಯಾಗಿ ತನ್ನ ಅಧಿಕಾರವನ್ನು ಸ್ಥಾಪಿಸಿ ಭೂಮಂಡಲವನ್ನೆಲ್ಲ ವಶಪಡಿಸಿಕೊಂಡಂತಿರುತ್ತದೆ. ಪ್ರಥ್ವಿಯನ್ನೆಲ್ಲ ಹಬ್ಬಿ ತಬ್ಬಿ ಆಳುವ ಕಾಡಿನ ದುರ್ದಮ್ಯ ವಿಸ್ತೀರ್ಣದಲ್ಲಿ ಎಲ್ಲಿಯೋ ಒಂದಿನಿತಿನಿತೇ ಅಂಗೈಯಗಲದ ಪ್ರದೇಶವನ್ನು  ಮನುಷ್ಯ ಗೆದ್ದುಕೊಂಡು ತನ್ನ ಗದ್ದೆ ತೋಟ ಮನೆಗಳನ್ನು ರಚಿಸಿಕೊಂಡಿದ್ದಾನೆ , ಅಷ್ಟೆ . ” ಕುವೆಂಪು ನುಡಿಯಲ್ಲಿ ಕಾಡಿನ ಹಿರಿಮೆ.    ” ಇಷ್ಟಪ್ರಿಯ ಕಂಠ ಧ್ವನಿ ಕಿವಿಗೆ ಬಿದ್ದೊಡನೆ ಚಿನ್ನಮ್ಮನ ಚೇತನಗರಿ ಹಗುರವಾಗಿ ಹೆದೆ ತುಂಡಾದ ಬಿಲ್ಲಿನ ಸೆಟೆತವೆಲ್ಲ ತೊಲಗಿ ಆದರ ದಂಡವು ನೆಟ್ಟಗಾಗಿ ವಿರಾಮ ಭಂಗಿಯಲ್ಲಿ ಮಲಗುವಂತೆ ಒಂದೆರಡು ನಿಮಿಷಗಳಲ್ಲಿಯೇ ಆನಂದ ಮೂರ್ಛೆಯೋ ಎಂಬಂತಹ ಗಾಢ ನಿದ್ದೆಗೆ ಮುಳುಗಿ ಬಿಟ್ಟಳು . ನರಕ ನಾಕಗಳಿಗೆ ಅದೆಷ್ಟು ಅಲ್ಪಾಂತರವೋ ವಿರಹ ಮಿಲನ ನಾಟಕದಲ್ಲಿ.”   ಕಾವೇರಿ ಇಸ್ಕೂಲು ಬಾವಿಗೆ ಹಾರಿಕೊಂಡು ಸತ್ತಮೇಲೆ ಕುವೆಂಪು ಬರೆದ “ತನ್ನ ಮೈಯನು ಕೆಡಿಸಿದ್ದ ಕಡುಪಾಪಿಗಳಲ್ಲಿ  ಚೀಂಕ್ರನೂ ಸೇರಿದ್ದನೆಂಬುದು ಕಾವೇರಿಗೆ ಗೊತ್ತಾಗದಿದ್ದುದು ಒಂದು ಭಗವತ್ ಕೃಪೆಯೇ ಆಗಿತ್ತು. ಅದೇನಾದರೂ ಗೊತ್ತಾಗಿದ್ದರೆ ಭಗವಂತನೇ ಸತ್ತುಹೋಗುತ್ತಿದ್ದನು! ಆತ್ಮಹತ್ಯೆಗೂ ಪ್ರಯೋಜನ ವಿರುತ್ತಿರಲಿಲ್ಲ. ಸಕಲ ಮೌಲ್ಯ ವಿನಾಶವಾದ ಮೇಲೆ  ಸತ್ತಾದರೂ ಸೇರಿಕೊಳ್ಳಲು ಯಾವ ಪುರುಷಾರ್ಥರೂಪದ ಯಾವ ದೇವರು ತಾನೇ ಇರುತ್ತಿತ್ತು ? ”  ಇಂತಹ ಅದೆಷ್ಟೋ ಸಾಲುಗಳು ಮತ್ತೆಮತ್ತೆ ಮೆಲಕಿಗೆ ಸಿಕ್ಕು  ಎದೆಯಲ್ಲಿ ಮಿಸುಗುತ್ತಲೇ ಇರುತ್ತವೆ.       ತುಂಗಾ ನದಿಯ ನೆರೆಯ ರಭಸಕ್ಕೆ ಗುತ್ತಿಯ ನಾಯಿ ಹುಲಿಯ ಕೊಚ್ಚಿಹೋದದ್ದು ಕಾಲಲ್ಲಿ ಮುಳ್ಳುಮುರಿದಂತ ನೋವು. ತಮ್ಮಲ್ಲಿ ಜೀತಮಾಡುವ ಕುಟುಂಬಗಳ ಗಂಡು ಹೆಣ್ಣುಗಳ ಮದುವೆಕೂಡ ತಮ್ಮ ಮೀಸೆಗಳಡಿಯಲ್ಲೇ ತಮ್ಮಿಷ್ಟದಂತೆ ನಡೆಯಬೇಕೆಂಬ ಜಮೀನ್ದಾರ ರೊತ್ತಿಗೆಯ ಮೀರಿ ತಾನು ಮೆಚ್ಚಿಕೊಂಡ ಗುತ್ತಿಯೊಂದಿಗೆ ಓಡಿಹೋಗಿ ಕಡುಬವಣೆಯುಂಡರೂ ಬಿಡದೇ ಅವನನ್ನೇ ನೆಚ್ಚಿ ನಂಬಿ ಜೊತೆಯಾದ ಹೊಲೆಯರ ತಿಮ್ಮಿ , ಪ್ರೀತಿಗಾಗಿ ತಾನು ಅತಿಯಾಗಿ ಪ್ರೀತಿಸುವ ಅದಕ್ಕಿಂತ ಹೆಚ್ಚು ಭಯಪಡುವ ಅಪ್ಪನಿಗೂ ಬೆನ್ನಾಗಿ ಸ್ವಂತ  ಮದುವೆ ಚಪ್ಪರದಿಂದ ತಪ್ಪಿಸಿಕೊಂಡು ಕಾಡುಮೇಡಲೆದು ತನ್ನಪ್ರಿಯ ಮುಕುಂದಯ್ಯನ ಸೇರಿಕೊಂಡ ಚಿನ್ನಮ್ಮ ಈ ಎರಡೂ ಹೆಣ್ಣುಗಳು  ಒಲ್ಲದ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತು ಗೆದ್ದು ನಿಲ್ಲುವ ಕಥಾನಾಯಕಿಯರು. ಪೀಂಚಲು ಐತರ ನಡುವಿನ ದಾಂಪತ್ಯವಂತೂ ಪ್ರೀತಿ ಪ್ರಣಯವನ್ನೂ ಮೀರಿನಿಂತ ಅದರಾಚೆಯ ಮಾತಿಗೆ ನಿಲುಕದ ವಿಹಂಗಮ ಪ್ರೇಮ. ಇನ್ನು ನಾಗಕ್ಕನೆಂಬ ನಿಯತ್ತಿನ ಹೆಣ್ಣು ಪತಿಯ ಮರಣದ ನಂತರ ಪುರುಷ ಸಾಂಗತ್ಯವನ್ನು ಹೀಂಕರಿಸಿ ದೂರನಿಂತವಳು. ಉಳ್ಳವರ ಮನೆಯ ಗಂಡಿಗೆ ವಿಧವೆ ಸೊಸೆಯನ್ನು ಕೂಡಿಕೆ ಮಾಡಿ ತನ್ನ ಸ್ವಾರ್ಥ ಸಾಧಿಸಿಕೊಳ್ಳುವ ಅತ್ತೆಯ ನೀಚ ಯೋಚನೆಗೆ ಸೆಡ್ಡು ಹೊಡೆದು ನಿಂತ ಹೆಣ್ಣು ತನ್ನಂತಹದ್ದೇ ಒಂದು ಪುಟ್ಟ ಹೆಣ್ಣುಜೀವಕ್ಕಾಗಿ ತನ್ನೊಳಗೇ ತಾನಿಟ್ಟುಕೊಂಡ ಕಟ್ಟಳೆಮೀರಿ ವೆಂಕಪ್ಪನಾಯಕನ ಒಪ್ಪಿಕೊಂಡಿದ್ದು ಹೆಣ್ತನದ ಪಾರಮ್ಯದ ಹೃದಯವೈಶಾಲ್ಯ.      ಗೊಬ್ಬೆ ಸೆರಗು ಹೊನ್ನಳ್ಳಿ ಹೊಡೆತ  ಕಪ್ಪೆಗೋಲು ಕುಳವಾಡಿ ಚಿಟ್ಟಳಿಲು ಒಡೆಯರ ದಿಬ್ಬ ದೈಯ್ಯದ ಹರಕೆ ಕಿವಿಚಟ್ಟೆ ಹಂದಿಹಸಗೆ ಉಮ್ಮಿಡಬ್ಬಿ  ಹರ್ಮಗಾಲ ಬೀಸಿಕಲ್ಲು ಮದೋಳಿಗ ಇಂತಹ ಅಸಂಖ್ಯ  ದೇಸಿಶಬ್ದಗಳ ಸಾಂಗತ್ಯದಲ್ಲಿ ಹೂವಳ್ಳಿ ಕೋಣೂರು ಸಿಂಬಾವಿ ಕಲ್ಲೂರು ಬೆಟ್ಟಳ್ಳಿ ಕಾಗಿನಳ್ಳಿ ಲಕ್ಕುಂದ ಮೇಗರವಳ್ಳಿಗಳ ಸುತ್ತಸುತ್ತಿ ,ಹೆಗ್ಗಡೆಗಳ ಗೌಡರ ಹೊಲೆಯರ ಹಸಲರ ಹಳೆಪೈಕದವರ ಕಿಲಿಸ್ತಾನರ ಕೇರಿಗಳನ್ನೆಲ್ಲ ಹೊಕ್ಕು ಮಂಜಮ್ಮ ಜಟ್ಟಮ್ಮ ದೇವಮ್ಮ ಚಿನ್ನಮ್ಮ ಮಂಜಮ್ಮ ಅಂತಕ್ಕ ಕಾವೇರಿ ಅಕ್ಕಣಿ ಪೀಂಚಲು ನಾಗತ್ತೆ ನಾಗಕ್ಕ ಪೀಂಚಲು ತಿಮ್ಮಿ ಪುಟ್ಟಿ  ದೇಯಿ ಹಿಂಡು ಹಿಂಡು ಹೆಣ್ಣುಗಳೊಟ್ಟಿಗೆ ನಿತ್ಯ ತಿಂಗಳುಗಟ್ಟಲೆ ಒಡನಾಡಿ ಕೊನೆಪುಟವ ಮೊಗಚುತ್ತಿದ್ದಂತೆ ಅಚಾನಕ್ ಒಂಟಿಯಾಗಿ ದೂರಕ್ಕೆ ಸಿಡಿದುಬಿದ್ದ ತಳಮಳ ಎದೆಗೆ. ಅಂತಕ್ಕನ ಮಗಳು ಕಾವೇರಿ  ದಟ್ಟಿರುಳಿನಲ್ಲೂ ಚೀಂಜ್ರ ಶೇರೇಗಾರನ ಕ್ರೌರ್ಯಜ್ಕೊಳಗಾಗಿ ಸತ್ತ ದೇಯಿ ಕನಸಿಗೆ ನುಗ್ಗಿ ನಿದ್ದೆಗೆಡಿದುತ್ತಿದ್ದಾರೆ……ಒಟ್ಟಿನಲ್ಲಿ ಮಲೆಗಳಲ್ಲಿ ಮದುಮಗಳು ಎದುರಿಗೆ ಇದ್ದರೆ ನಾವು ನಾವಾಗಿರದೇ ಅದರದೇ ಒಂದು ಭಾಗವಾಗಿ ಪಾತ್ರವಾಗಿ ಕಥೆಯ ತುಂಬಾ ಕೃತಿಯ ತುಂಬಾ ಖುದ್ದು ಓಡಾಡಿ ಬಂದ ಧನ್ಯತೆ. ಸರ್ವಶ್ರೇಷ್ಠ ಗಾಯಕರ ಕಂಠದಲ್ಲೊಮ್ಮೆ ಕೆ ಎಸ್ ನರಸಿಂಹ ಸ್ವಾಮಿಯವರ “ದೀಪವು ನಿನ್ನದೆ ಗಾಳಿಯು ನಿನ್ನದೇ ಆರದಿರಲಿ ಬೆಳಕು ಕೇಳುವಾಗಿನ ನಮ್ಮ ನಾವು ಮರೆತು ಹಾಡಿನಲ್ಲಿ ಒಂದಾಗುವ ಭಾವವೇ ಮಲೆಗಳಲ್ಲಿ ಮದುಮಗಳೆದುರು ಕೂತರೆ… ಅಂದುಕೊಂಡರೆ ಅತಿಶಯೋಕ್ತಿಯಲ್ಲ. ಒಮ್ಮೆ ಮುಗಿಸಿದಮೇಲೆ ಮತ್ತೆ ಕೈಬಿಡಲಾಗದೇ ಮರುಓದಿಗೆ ಪುಟ ಮಗುಚುತ್ತಿದ್ದೇನೆ. ಮಲೆಗಳಲ್ಲಿ ಮದುಮಗಳ ಎದುರಿಗೆ ಕೂತು ಪುಟ ಮಗುಚುವದೇ ಒಂದರ್ಥದಲ್ಲಿ ಜನ್ಮಸಾರ್ಥಕ್ಯ. ***************************** ಪ್ರೇಮಾ ಟಿ.ಎಂ.ಆರ್.

Read Post »

ಇತರೆ

ಕಾದಂಬರಿ ಕುರಿತು ಮರಳಿಮಣ್ಣಿಗೆ ಡಾ.ಶಿವರಾಮ ಕಾರಂತ ಸುಮಾವೀಣಾ ಮರಳಿಮಣ್ಣಿಗೆ’ಯ ರಾಮನನ್ನು ನೆನಪಿಸಿದ ಕೊರೊನಾ ಕಾಲಾಳುಗಳು   ‘ಮರಳಿ ಊರಿಗೆ”, “ಮರಳಿ ಗೂಡಿಗೆ’, ‘ಮರಳಿ ಮನೆಗೆ’, ‘ಮರಳಿ ನಾಡಿಗೆ’ ಇವೆ ಪದಗಳು ಕೊರೊನಾ ಎಮರ್ಜನ್ಸಿಯಾದಾಗಿನಿಂದ ಕೇಳುತ್ತಿರುವ ಪದಗಳು.ಆದರೆ ಇವುಗಳ ಕಲ್ಪನೆ, ಯೋಚನೆ ನಮ್ಮ ‘ಕಡಲ ತಡಿಯ ಭಾರ್ಗವ’ನಿಗೆ ಅಂದೇ ಹೊಳೆದಿತ್ತು  ಹಾಗಾಗಿ ಕನ್ನಡದ ಶ್ರೇಷ್ಠ ಕಾದಂಬರಿಗಳಲ್ಲಿ ಒಂದಾದ ‘ಮರಳಿ ಮಣ್ಣಿಗೆ’ ಕಾದಂಬರಿಯನ್ನು ನಮ್ಮ  ಕೈಗಿತ್ತಿದ್ದಾರೆ. ಹ್ಯಾಟ್ಸ ಆಫ್ ಟು ಕಾರಂತಜ್ಜ  ಎನ್ನಬೇಕು. ‘ಮರಳಿ ಮಣ್ಣಿಗೆ’ ಕಾದಂಬರಿಯಲ್ಲಿ ರಾಮ, ಐತಾಳರು, ಲಚ್ಚ ಹಾಗು ರಾಮ ಎಂಬ ಮೂರು ತಲೆಮಾರುಗಳು ಬರುತ್ತವೆ.  ಮೊದಲನೆ ತಲೆಮಾರಿನಲ್ಲಿ   ರಾಮ ಐತಾಳರು ಮಾಡುವ ವೈದಿಕ ವೃತ್ತಿ ಹಾಗು ಪುರುಷಪ್ರಧಾನ ವ್ಯವಸ್ಥೆಯ ಧೋರಣೆಗಳು ಕಂಡು ಬರುತ್ತವೆ.  ನಂತರದ ತಲೆಮಾರಿನ ಲಚ್ಚನಲ್ಲಿ    ಆಧುನಿಕ ವಿದ್ಯಾಭ್ಯಾಸ ಅವನ ಬದುಕಿನ ನೆಲೆಯನ್ನು ಮರೆಯಿಸಿ   ಲೋಭಿ ಬದುಕಿನ ಬಿರುಗಾಳಿಯನ್ನು ಬೀಸಿಸುತ್ತದೆ. ಸುಳ್ಳು, ದುಂದು ವೆಚ್ಚ ಇತ್ಯಾದಿಗಳನ್ನು ಮಾಡುತ್ತಾನೆ.  ಈತನ ಹೆಂಡತಿ ನಾಗವೇಣಿ.  ಆಸೆ ಕಂಗಳಿಂದ ಮದುವೆಯಾಗಿ ಬಂದು ನಲುಗುತ್ತಾಳೆ.  ಗಂಡನಿಂದ ನೋವುಂಡ ನಾಗವೇಣಿ ಮಗನಿಂದ ಸಮಾಧಾನವನ್ನು ಪಡೆಯುತ್ತಾಳೆ. ಅಂತಹ ಮಗನೇ   ಮೂರನೆ ತಲೆಮಾರಿನ ರಾಮು.  ತಾಯಿಯ ಶ್ರಮವನ್ನು ಅರಿತ  ಈತ ಅತ್ಮಾಭಿಮಾನವುಳ್ಳವನಾಗಿ   ಮೆರೆಯುತ್ತಾನೆ. ರಾಮನು ಮರಳಿ ಮಣ್ಣಿಗೆ ಬಂದ  ನಂತರ ಶಾಲಾ ಮಾಸ್ತರಿಕೆ ಮತ್ತು ಕೃಷಿ ಎರಡನ್ನೂ ಆಪ್ತವಾಗಿ ದುಡಿಸಿಕೊಳ್ಳುತ್ತಾನೆ.ಹೋಟೇಲ್ ಉದ್ಯಮದಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೇಲಾದ ಪ್ರಭಾವ  ಮತ್ತು ಪ್ರಾದೇಶಿಕತೆಯ ಸೊಗಡು  ಶಿವರಾಮ ಕಾರಂತರ ಮರಳಿ ಮಣ್ಣಿಗೆ ಕಾದಂಬರಿಯ ವೈಶಿಷ್ಟ್ಯ. 1850ರಿಂದ1940 ನಡುವಿನ ಸುಮಾರು ನೂರು ವರ್ಷಗಳ ಅವಧಿಯಲ್ಲಿ ಕರಾವಳಿ ಕರ್ನಾಟಕದ ಹಳ್ಳಿಯೊಂದರಲ್ಲಿ  ತಲೆಮಾರುಗಳ ನಡುವೆ ನಡೆದ  ಸಾಮಾಜಿಕ ಪ್ರಕ್ರಿಯೆಯನ್ನು ಕಾದಂಬರಿ ತೆರೆದಿಡುತ್ತದೆ. 1942ರಲ್ಲಿ  ಪ್ರಕಟವಾದ ಈ ಕಾದಂಬರಿ ಇವತ್ತಿಗೂ ಅಕ್ಷರಷಃ ಅನ್ವಯಿಸುತ್ತದೆ.   ‘ಮರಳಿ ಮಣ್ಣಿಗೆ’ ಕಾದಂಬರಿಯಲ್ಲಿ ಬರುವ ಮುಖ್ಯ ಪಾತ್ರ ರಾಮ  ಮುಂಬೈ ಬದುಕಿಗೆ ವಿದಾಯ ಹೇಳಿ ರೈಲು ನಿಲ್ದಾಣಕ್ಕೆ ಬಂದಾಗ ಅವನ ಫ್ರೆಂಡ್ಸ್ರೂಮಿನವರ ಜೊತೆಗೆ ಅವನ  ವಿದೇಶಿ ಚಿತ್ರ ಕಲಾ ಶಿಕ್ಷಕಿ ನೋವಾ ಕೂಢ ಬಂದು ಒಂದು ಪುಟ್ಟ ಚಿತ್ರಪಟವನ್ನು ಸುರುಳಿ  ಮಾಡಿ “ಇದು ನನ್ನ ಮನೆಯ ಹಿಂದಿನ ಗುಡ್ಡ” ಎಂದು ಹೇಳಿ ನಕ್ಕಿರುತ್ತಾಳೆ ಆಗ ರಾಮುವಿಗೆ  ನೋವಾ ತನ್ನ ನಾಡಿಂದ ಓಡಿಬಂದುದರಿಂದ ಆ ನಾಡಿಗಾಗಿ ಅವಳ ಜೀವ ಹಂಬಲಿಸುತ್ತಿದೆಯೇನೋ ಎಂದೆನಿಸಿ ಕಣ್ಣೀರು ಬರುತ್ತದೆ. ಇದೆ ನಾಡಿನ ಹಂಬಲ ತವರ ಹಂಬಲ  ಅಂದರೆ, ಅದಕ್ಕೇ ನಮ್ಮ ಜಾನಪದ ಹೆಣ್ಣುಮಕ್ಕಳು “ಕಾಸಿಗೆ ಹೋಗಲಿಕೆ ಏಸೊಂದು ದಿನ ಬೇಕ ತಾಸ್ಹೊತ್ತಿನ ಹಾದಿ ತವರೂರು” ಎಂದು  ತಾವು ಹುಟ್ಟಿದ ನೆಲವನ್ನು ಕಾಶಿಗೆ  ಹೋಲಿಸಿರುವುದು.      ಕಾದಂಬರಿಯಲ್ಲಿ ಅನ್ಯ ಮನಸ್ಥಿತಿಯ  ಒಂದೇ ಕುಟುಂಬದ ಮೂರು ಜನರನ್ನು ನೋಡಬಹುದು ಆದರೆ ಈಗ ಇಂಥ ಸಾವಿರ ಲಕ್ಷ  ಲಕ್ಷ ಮನಸ್ಸುಗಳು   ನಮ್ಮ ನಡುವಿವೆ. ಅನ್ಯ ದೇಶಗಳು “ಅನ್ಯದೇಶಿ” ಎನಿಸಿಕೊಂಡವರನ್ನು ಒಮ್ಮೆಗೇ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುವದಿಲ್ಲ ಅಲ್ಲೂ ಜನಾಂಗೀಯ ಭೇದ, ಹಿಂಸೆ, ತಾರತಮ್ಯ ಗಳು ಇರಬಹುದು, ಹೊಂದಾಣಿಕೆಯ ಸಮಸ್ಯೆ ಇರಬಹುದು ಭಾಷೆಯ ಸಮಸ್ಯೆ ಇರಬಹುದು.  ಇದರ ನಡುವೆ ಅತ್ಯಂತ ಚೆನ್ನಾಗಿರುವ ಕುಟುಂಬಗಳು ಇವೆ ಅದರ ಬಗ್ಗೆ ತಕರಾರಿಲ್ಲ.    ‘ಮೆರೆಯುತ್ತಿದ್ದ ಭಾಗ್ಯವೆಲ್ಲ ಹರಿದು ಹೋಯಿತೆನುವ ತಿರುಕ ಮರಳಿ ನಾಚಿ ಮರಳುತ್ತಿದ್ದ ಮರುಳನಂತೆಯೇ’ ಎಂಬಂತೆ ಸೋ ಕಾಲ್ಡ್ ಹೈಪ್ರೊಫೈಲ್ ಇರುವವರಿಂದ  ಮೊದಲುಗೊಂಡು ಕಡುಬಡವರವರೆಗೂ  ಎಲ್ಲಾ ಸ್ಥರದ ಉದ್ಯೋಗಕ್ಕಾಗಿ, ಅಧ್ಯಯನಕ್ಕಾಗಿ,  ದಿನಗೂಲಿಗಾಗಿ ಊರು ಬಿಟ್ಟವರು ಮರಳಿ ತಮ್ಮ ಮನೆಯನ್ನು ತಮ್ಮ ತಮ್ಮ ಹಳ್ಳಿಗಳನ್ನು ಸೇರಬಯಸುತ್ತಿದ್ದಾರೆ.  ಹಳ್ಳಿಗಳಿಂದ  ನಗರಕ್ಕೆ ವಲಸೆ  ಬರುವ ಕಾಲ ಬದಲಾಗಿ ನಗರಗಳಿಂದಲೇ ಹಳ್ಳಿಗಳಿಗೆ  ವಲಸೆ  ಹೋಗುವ ಕಾಲ ಬಂದಿದೆ. ಲಾಕ್ ಡೌನ್ ಆಗಿದೆ ಇದ್ದಲ್ಲೆ ಇರಿ ಎಂದರೆ  ಕೇಳಲಿಲ್ಲ. ಅದರಲ್ಲೂ  ರಾಯಚೂರಿನ ಹೆಣ್ಣಮಗಳು  ತನ್ನೂರಿನವರೆಗೂ  ಕಡೆಗೂ ತನ್ನ ಮನೆಯನ್ನು  ಕಡೆಗೂ ಸೇರಲೇ ಇಲ್ಲವಲ್ಲ ಹಸಿವಿನಿಂದ ಹಾಗೆ ಪ್ರಾಣ ಬಿಟ್ಟಳಲ್ಲ. ಹಾಗೆ ದೂರದ ಕಣ್ಣೂರಿನಿಂದ ಮಂಗಳೂರಿಗೆ ಕಾಲ್ನಡಿಗೆಯಲ್ಲೇ ಬಂದ ಗರ್ಭಿಣಿ ಹೆಣ್ಣು ಮಗಳು ನಡೆದೇ ಬಂದಿದ್ದಾರಲ್ಲ ಏನು ಹೇಳ ಬೇಕು ಇದಕ್ಕೆ.  ಸರಕಾರ ಇಷ್ಟು  ಉಳಿದುಕೊಳ್ಳಲು ತಾತ್ಕಾಲಿಕ ವ್ಯವಸ್ಥೆ , ಊಟದ ವ್ಯವಸ್ಥೆ ಮಾಡಿದ್ದಾರೆ ಇಷ್ಟು ಆದ ಮೇಲೂ  ಏಕೆ ಈ ಹಂಬಲ ಎಂಬ ಪ್ರಶ್ನೆ ಸಹಜವಾಗಿ ಮೂಡುವಂಥದ್ದೆ. ಇನ್ನು ವಿದೇಶಗಳಲ್ಲಿ ಇರುವವರೂ ಕೂಡ ನಮ್ಮನ್ನು “ದೇಶಕ್ಕೇ ಕರೆಸಿಕೊಳ್ಳಿ…” ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ. ಕಾರಣ ಇಷ್ಟೆ ತವರಿನ ಸೆಳೆತ.  ಆ ಸೆಳೆತವೇ  ಆಪ್ಯಾಯಮಾನ. ನಮ್ಮ ನಾಡಿನ ಸೌಗಂಧ ನಮಗೇ ಗೊತ್ತು. ಉಪ್ಪರಿಗೆಯ ಮೇಲಿನ ಮೆಟೀರಿಯಲ್ಸ್ಟಿಕ್  ಜೀವನ ನಿಜವಾದ ಅನುಭೂತಿಯನ್ನು ಕೊಡಲಾರದು.  ‘ಸಿರಿಗರವನ್ನು ಹೊಡೆದವರ ನುಡಿಸಲು ಬಾರದು’ ಎಂಬಂತೆ ಹಣದ ನಶೆಯೇರಿಸಿಕೊಂಡವರು,  ನಾವೇ ಎಲ್ಲಾ ಎಂಬ ಹುಂಬತನಕ್ಕೆ , ವ್ಯಾಮೋಹಗಳಿಗೆ ಒಳಗಾಗಿ ಪ್ರತಿಭಾಪಲಾಯನಗೈದವರು, ನಾವು ಭಾರತೀಯ ಸಂಜಾತರು ಎಂದು ಹೇಳಿ ಕೊಳ್ಳಲು ಹಿಂಜರಿಯುತ್ತಿದ್ದವರೆಲ್ಲಾ ಭಾರತಕ್ಕೆ ಮರಳಿ ಹೋಂ ಕ್ವಾರಂಟೈನ್ಗಳಾಗಿದ್ದರು. ಇನ್ನು ಕೆಲವರು  ಕ್ವಾರಂಟೈನ್  ಅವಧಿ ಮುಗಿದರೂ ಆಚೆ ಬಾರದೆ ಕಿಟಕಿಯ ಪರದೆ ಸರಿಸಿ ಹೊರಗೆ ಏನಾಗುತ್ತಿದೆ ಎಂದು ಮೆಲ್ಲಗೆ  ನೋಡುತ್ತಿದ್ದರು. ಇನ್ನು ನಗರ ಪ್ರದೇಶಗಳಿಂದ ಹಿಂದಿರುಗಿದವರು ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದು “ಮರಳಿ ಮಣ್ಣಿಗೆ” ಪದಕ್ಕೆ ಘನತೆ ತಂದುಕೊಟ್ಟಿದೆ.  ‘ಮರಳಿ ಮಣ್ಣಿಗೆ’ ಕಾದಂಬರಿಯ ರಾಮನೂ ಮಾಡಿದ್ದೂ  ಕೃಷಿಯನ್ನೇ.  ಎಷ್ಟು ಸಾಂದರ್ಭಿಕವಾಗಿದೆಯಲ್ಲವೇ? ಹೌದು! ನಮಗೆ ಅನ್ಯ ದೇಶ ಅನ್ನ ಕೊಡಬಹುದು ಹಣ ಕೊಡಬಹುದು, ಸ್ಥಾನಮಾನ ಕೊಡಬಹುದು,  ಜೀವನ ಕೊಡಬಹುದು ಆದರೆ ನೆಮ್ಮದಿಯನ್ನು ಎಂದಿಗೂ ಕೊಡಲಾರದು ಎಂದೇ ನನ್ನ ಅನಿಸಿಕೆ. ವಲಸಿಗ ಹಕ್ಕಿಗಳು ತಮ್ಮ ವಿಹಾರವನ್ನು ಮುಗಿಸಿ ಸ್ವಸ್ಥಾನಕ್ಕೆ ಮರಳುವಂತೆ ತಮ್ಮ ಮೂಲ ನೆಲೆಗೆ ಮರಳಲೇಬೇಕು.    ಅದೇನೆ ಕೊಡುಗೆ ಕೊಡುವುದಿದ್ರೂ ನಮ್ಮ ದೇಶಕ್ಕೆ ಕೊಡಬಹುದಲ್ಲವೇ? ವಿಶ್ವದ ಯಾವ ಬಲಿಷ್ಠ ರಾಷ್ಟ್ರಕ್ಕೂ ಆರ್ಥಿಕ ಸಂಪತ್ತನಲ್ಲಿ, ಭೌದ್ಧಿಕ ಸಂಪತ್ತಿನಲ್ಲಿ ಭಾರತ ಕಡಿಮೆಯೇನಿಲ್ಲ . ಕೊರೊನಾ ಎಮರ್ಜನ್ಸಿ ಬಂದ ನಂತರ ಸಾಮಾಜಿಕ ಆಧ್ಯಯನ ಕಾರರು ಮೊದಲಿನಂತಹ ದಿನಗಳು ಇನ್ನು ಇರಲಾರವು ಎಂದಿದ್ದಾರೆ. ಇನ್ನು  ಎಂಥಹ ದಿನಗಳು ಬಂದರು ಅದಕ್ಕೆ ನಾವು ಸರ್ವ ಸನ್ನಧ್ಧರಾಗಿರಬೇಕು. ಲಾಕ್ ಡೌನ್ ಕಾಲ  “ಮರಳಿ ಮಣ್ಣಿಗೆ”  ಅಲ್ಲ “ಮರಳಿ ನಮ್ಮ ಸಂಸ್ಸ್ಕೃತಿ”ಗೆ ಎಂಬಂತಾಗಿದೆ. ಕೈ ಜೋಡಿಸಿ ನಮಸ್ಕರಿಸುತ್ತಿದ್ದೇವೆ . ಮನೆಯ ಅಡುಗೆ ರುಚಿಸುತ್ತಿದೆ. ಎಲ್ಲರೂ ಒಟ್ಟಾಗಿ ಕ್ವಾಲಿಟಿ ಟೈಮ್ ಕಳೆಯುತ್ತಿದ್ದೇವೆ. ನಮ್ಮ ಅಡುಗೆಮನೆಯನ್ನು ವಿದೇಶಿ ಅಡುಗೆ ಸಾಮಾಗ್ರಿಗಳು ಆಕ್ರಮಿಸಿಕೊಂಡಿದ್ದನ್ನು ತಡೆದು  “ ಹಿತ್ತಲ ಗಿಡ ಮದ್ದಲ್ಲ “ಎಂಬಂತೆ ನೇಪಥ್ಯಕ್ಕೆ  ಸರಿದಿದ್ದ ನಮ್ಮ ಅಡುಗೆಯಲ್ಲಿ ಹಿಂದಿನಿಂದಲೂ  ಬಳಸುತ್ತಿದ್ದ ಅರಿಸಿನ ಕಾಳುಮೆಣಸು, ಬೆಳ್ಳುಳ್ಳಿ ಶುಂಠಿಗಳು ಅಡುಗೆ ಮನೆಯ ಪರಿಮಳವನ್ನು  ಹೆಚ್ಚಿಸಿವೆ. “ ಕೆಟ್ಟು ಪಟ್ಟಣ ಸೇರು” ಎಂಬ ಗಾದೆ “ಕೆಟ್ಟು ಹಳ್ಳಿ ಸೇರು” ಎಂದು ಬದಲಾಗಿದೆ.  ಕೊರೊನಾ  ವೈರಸ್ ಬಂದಿದೆ ಸರಿ! ನಮ್ಮ ದೇಶದ  ಅರ್ಥ ವ್ಯವಸ್ಥೆಯ ಮೇಲೆ ಬಲವಾದ ಪೆಟ್ಟನ್ನೂ ನೀಡಿದೆ. ಆದರೆ ಜಾಗತಿಕ ಮಟ್ಟದಲ್ಲಿ ಭಾರತದ ಅಂತಃಶಕ್ತಿ ಏನು ಎಂಬುದನ್ನು ವೃದ್ಧಿಸಿಕೊಂಡಿದೆ. ವಿಶ್ವಸಂಸ್ಥೆಯಿಂದ ಮೊದಲುಗೊಂಡು  ಅಮೇರಿಕಾ  ಬ್ರೆಜಿಲ್  ರಾಷ್ಟ್ರಗಳು ನಮ್ಮನ್ನು ಕೊಂಡಾಡುತ್ತಿವೆ. ಮನಿ ಪವರ್ಗಿಂತ  ಈಗ ನಮ್ಮ   ಭಾರತ ಮಣ್ಣಿನ ಪವರ್ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ.  ನಮ್ಮ ದೇಶ, ನಾಡು  ಏನೂ ಅಲ್ಲ  ಎಂದ ರೋಗಗ್ರಸ್ಥ ಮನಸ್ಸುಗಳು ಕೊರೊನಾ ಬಂದಾಗಿನಿಂದ ಮರಳಿ ಮಣ್ಣಿಗೆ  ಬಂದಿವೆ ಬರುತ್ತಿವೆ. ******************************* ಸುಮಾವೀಣಾ

Read Post »

ಇತರೆ

ನಮ್ಮೂರ ಕೆರೆಯ ವೃತ್ತಾಂತ

ಪದ್ಯ/ಗದ್ಯ ನಮ್ಮೂರ ಕೆರೆಯ ವೃತ್ತಾಂತ ಡಾ. ಅರಕಲಗೂಡು ನೀಲಕಂಠ ಮೂರ್ತಿ ನಮ್ಮೂರ ವಿಶಾಲ ತಬ್ಬಿಅಲೆಯಲೆಯಾಗಿ ಹಬ್ಬಿಹರಿದಿದ್ದ ಸಾಗರದಂಥ ಕೆರೆಈಗ ಬಸ್ ನಿಲ್ದಾಣ! ಹೇಮಾವತಿಯ ಚಿತ್ತಹರಿಯುವ ಮುನ್ನನಮ್ಮೂರಿನತ್ತಆ ‘ದೊಡ್ಡ ಕೆರೆ’ಯೇಕೋಟೆ ಪೇಟೆಯಬಂಗಾರ ಜೀವಜಲ!ಅದೀಗ ನಮ್ಮೂರ ‘ಹೆಮ್ಮ’ಯಬಸ್ ಸ್ಟ್ಯಾಂಡ್! ಒಂದೊಮ್ಮೆ ಮೊಗೆಮೊಗೆದಷ್ಟೂಉಗ್ಗಿದ್ದ ನೀರು…ಎಂದೆಂದೂ ಬತ್ತಿ ಬರಡಾಗದೆನಿತ್ಯ ಹರಿದಿದ್ದ ತೇರು!ಶತಮಾನಗಳ ತಲೆಮಾರುಗಳಮೈ-ಮನ ತೊಳೆದಿದ್ದನೀರಡಿಕೆ ನಿರಂತರ ನೀಗಿದ್ದವರುಷ ವರುಷ ಗಜಗಾತ್ರಗಣೇಶ ಮೂರ್ತಿಗಳನೆಆಪೋಶಿಸಿದ್ದಆ ನೀರ ಮಹಾರಾಶಿಈಗಸೆಲೆಯೂ ಇಲ್ಲದ ಅಪರಂಜಿ –ಬರಡು!ಯಾರ ಚಿಂತನೆಯಅದೆಂಥ ಬೆರಗು!ಆ ನೀರ ಜೊತೆಜೊತೆಗೆಪ್ರತಿಫಲಿಸಿದ್ದಇನ್ನುಳಿದ ಕೆರೆಗಳೂ ಕೂಡಈಗ ನೆಲಸಮ…ಬರೀ ನೆನಪು! ಅಂದಿನ ಆ ನೀರ ಅನಂತತೆಇಂದು ನಿಶಾರಾತ್ರಿಗಳಲಿಕೇಕೆ ಹಾಕಿ ಊಳಿಡುವಹೊಚ್ಚ ಹೊಸ ಬಸ್ ಸ್ಟ್ಯಾಂಡ್..! ನೀರು…ನೀರು…ನೀರು! ನೀರಿನಬಗ್ಗೆ  ಎಚ್ಚರಿಕೆಯ ಘಂಟೆ ಮೊಳಗುತ್ತಿದೆ ಜಗತ್ತಿನಾದ್ಯಂತ. ಜೊತೆಗೆ ಹಿಮಗೆಡ್ಡೆಗಳು ಕರಗುತ್ತಿರುವಂಥ, ಮತ್ತದರಿಂದ ಏರುಗತಿಯಲ್ಲಿರುವ ಸಮುದ್ರಮಟ್ಟ. ದಿಗ್ಭ್ರಮೆಗೊಳಿಸುವ  ಚಂಡಮಾರುತಗಳು ಮತ್ತು ನಗರಗಳಲ್ಲೂ ಈಜು ಹೊಡೆಸುತ್ತಿರುವ ರಾಕ್ಷಸೀ ಮಳೆ! ಇಂಥ ಆಘಾತದ ವೈಜ್ಞಾನಿಕ ವರ್ತಮಾನಗಳು. ಕಾರಣವೂ ವಿಜ್ಞಾನದಲ್ಲಿ ಇಲ್ಲದಿಲ್ಲ. ಈ ವಿಷಯ ಒತ್ತಟ್ಟಿಗಿರಲಿ. ಈ ಲೇಖನಕ್ಕೂ  ಮೇಲಿನ ವಿಷಯಕ್ಕೂ ಸದ್ಯದಲ್ಲಿ  ಸಂಬಂಧವಿಲ್ಲ. ನೀರು ಮತ್ತು ನೀರನ್ನು ಹೊತ್ತು ತುಂಬಿತುಳುಕುವ ಕೆರೆಗಳ ಬಗ್ಗೆ…(ನಮ್ಮೂರ “ವಾಟರ್ ಬಾಡೀಸ್ ಬಗ್ಗೆ)… ನಮ್ಮೂರು ನಿಮಗೆಲ್ಲ ಈಗಾಗಲೇ  ತಿಳಿದಿರುವಹಾಗೆ ಅರಕಲಗೂಡು. ಅ.ನ.ಕೃ.ಕುಟುಂಬದ ಮೂಲವಾದ ಊರು. ನಮ್ಮೂರು ಎರಡು ಭಾಗವಾಗಿದೆ  — ಪೇಟೆ ಹಾಗೂ ಕೋಟೆ ಎಂದು. ಮಧ್ಯದಲ್ಲಿ ಪೇಟೆ ಯಿಂದ ಕೋಟೆಯಕಡೆ ಹೋಗುವಾಗ ಎಡಭಾಗದಲ್ಲಿ ಒಂದು ದೊಡ್ಡ ಕೆರೆ. ಪಕ್ಕದಲ್ಲೇ ಪೇಟೆ-ಕೋಟೆಯ ನಡುವೆ ಡಾಂಬರು ರಸ್ತೆ. ಇನ್ನೊಂದು ಪಕ್ಕ ಹಳ್ಳದ ತೋಟ. ಇದಲ್ಲದೆ ಪೇಟೆಯ ಸುತ್ತಮುತ್ತ ಇನ್ನೊಂದು ಮೂರು ಸಣ್ಣ ಕೆರೆಗಳಿದ್ದವು. ಇದಿಷ್ಟು ನಾವು ಚಿಕ್ಕಂದಿನಿಂದ ನೋಡುತ್ತಾ ಬೆಳೆದ ಚಿತ್ರಣ… ಆದರೀಗ ಅದು ಹಾಗಿಲ್ಲ! ಅದಕ್ಕೆ ಮೊದಲು, ಆ ಕೆರೆಯ ಬಗ್ಗೆ ಒಂದೆರಡು ಮಾತು… ನನ್ನ ಕಣ್ಣಲ್ಲಿ ಈಗಲೂ ಅದು ಹಾಗೇ ಅಂದಿನ ಹಾಗೆಯೇ ಸಾಗರ! ಬಹಳವೇ ವಿಶಾಲವಾಗಿತ್ತು. ಅದರ ನಿಜ ವಿಸ್ತೀರ್ಣ ನನಗೆ ಅರಿವಿಲ್ಲದಿದ್ದರೂ, (ಅದು ಇಲ್ಲಿ ಅಪ್ರಸ್ತುತ ಕೂಡ), ವಿಶಾಲವಾಗಿದ್ದುದು ನಿಜ. ಸುಮಾರು ಜಮಾನುಗಳಿಗೆ ಜೀವಜಲದಂತೆ ಉಣಬಡಿಸಿತ್ತು. ಕೋಟೆ ಪೇಟೆ ಎರಡೂ ಸೇರಿದಂತೆ ಅನೇಕಾನೇಕ ತುಂಬು ಮನೆಗಳ ಮೈಮನದ ಕೊಳೆ ಅಳಿಸಿ, ಶುಭ್ರ ಬಟ್ಟೆಗಳಿಗೆ ಕಾರಣವಾಗಿದ್ದ ಕೆರೆ. ಮತ್ತು ಹೇಮಾವತಿ (ಗೊರೂರಿನಿಂದ – ಸುಮಾರು ಐದು ಕಿಲೋಮೀಟರಿನಷ್ಟು ದೂರ -ನಮ್ಮೂರ ವರೆಗೆ) ನದಿಯ ನೀರು ನಮ್ಮ ತೃಷೆಯನ್ನು ನೀಗಿಸಲು ಹರಿದುಬರುವ ತನಕ, ಆ ದೊಡ್ಡ ಕೆರೆ ಯೇ  ನಮ್ಮ ಬಾಯಾರಿಕೆಯನ್ನು ನಿರಂತರ ತಣಿಸಿದ್ದಲ್ಲದೆ, ನಮ್ಮೆಲ್ಲ ಕುಟುಂಬಗಳ ಅಡುಗೆ ಮನೆಯ ಒಲೆಗಳ ಮೇಲೆ ತದೇಕ ಕುದಿಯುತ್ತಿದ್ದ ಎಲ್ಲ ಥರದ ದ್ರವಾಹಾರದ ಮೂಲವೂ ಆಗಿದ್ದು,  ಶೇಖರಣೆಗೆ ಕೊಳದಪ್ಪಲೆಗಳಲ್ಲಿ ತುಳುಕಿದ್ದಲ್ಲದೆ, ದೇವರ ವಿಗ್ರಹಗಳ ಶುಭ್ರತೆಗೂ, ತೀರ್ಥಕ್ಕೂ ಗಂಗಾಮಾತೆಯಾಗಿದ್ದ ಮೂಲಾಧಾರ! ಪ್ರತಿ ವರ್ಷ ನಮ್ಮೂರಲ್ಲಿ ಗಣೇಶನ ಹಬ್ಬಕ್ಕೆ ತುಂಬ ದೊಡ್ಡ ವಿಗ್ರಹವನ್ನು ಪ್ರತಿಸ್ಠಾಪಿಸುತ್ತಿದ್ದರು. ಆ ಅಷ್ಟು ದೊಡ್ಡ ಗಣಪತಿ ಮೂರ್ತಿಯನ್ನು ಕೂಡ ಇದೇ ನಮ್ಮ ಹೆಮ್ಮೆಯ ಕೆರೆಯಲ್ಲಿಯೇ ವಿಸರ್ಜನೆ ಮಾಡುತ್ತಿದ್ದುದು. ನಾನು ಸುಮಾರು ವರ್ಷ ಆಫ್ರಿಕ ಖಂಡದಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದೆ — ನನ್ನ ಮೈಸೂರಿನ ಕ್ಲಿನಿಕ್ ಆರಂಭಿಸುವ ಮುನ್ನ. ವರ್ಷಕ್ಕೊಮ್ಮೆ ರಜೆಗೆ ಕುಟುಂಬದ ಒಡನೆ ಭಾರತಕ್ಕೆ ಬಂದು ಹೋಗುತ್ತಿದ್ದೆ. ಆಗೆಲ್ಲ, ಹೇಗಾದರೂ ಬಿಡುವು ಮಾಡಿಕೊಂಡು ಊರಿಗೆ ಹೋಗುವುದು, ಆ ಕೆರೆಯನ್ನು ಹತ್ತಿರದಿಂದ ಕಣ್ತುಂಬಿಸಿಕೊಂಡು ಬರುವುದು ಅಭ್ಯಾಸವಾಗಿತ್ತು. ಇಂಥ ಕೆರೆ ಈಗಿಲ್ಲ! ಅನೇಕಾನೇಕ ಊರುಗಳ ದುರಂತ ಗಳ ಹಾಗೆ, ಅದು ಈಗಿಲ್ಲ…ಹಾಗಿದ್ದರೆ ಅದು ಈಗೆಲ್ಲಿ? ಹೌದು, ಈಗೆಲ್ಲಿ. ನಮ್ಮೂರಲ್ಲಿ ನಾನು ಚಿಕ್ಕವನಿದ್ದಾಗಿಂದ ಕಂಡಹಾಗೆ ಕೋಟೆ ಪೇಟೆಯ ನಡುವೆ ನಮ್ಮ ಬಸ್ ನಿಲ್ದಾಣವಿತ್ತು – ಚಿಕ್ಕದಾದರೂ ನಮ್ಮೂರಿಗೆ ಸಾಕಾಗಿತ್ತು. ಇತ್ತೀಚಿನವರೆಗೂ ಅದೇ ಇತ್ತು. ಯಾವ ತಲೆಯ ಅದೆಂಥ ಕೋಡೋ ಏನೋ ಎದ್ದಂತೆ, ಈಗಿರುವ ನಿಲ್ದಾಣದ ಅನತಿ ದೂರದಲ್ಲೇ ಇನ್ನೊಂದು, ಕಾಂಪೌಂಡ್ ಸಹಿತ, ನಿಲ್ದಾಣ ನಿರ್ಮಿಸಲಾಯಿತು. ನಿರ್ಮಿಸಿದ್ದಷ್ಟೇ ಲೆಕ್ಕ, ನಂತರ ಪಾಳು  – ಎಲ್ಲ ಥರದ  ಚಟುವಟಿಕೆಗಳ ತವರಾಯಿತು! ಇದಿಷ್ಟು ನಾನು ಕಣ್ಣಾರೆ ಕಂಡದ್ದು. ನಾನು ಆಫ್ರಿಕಾದಿಂದ ಭಾರತಕ್ಕೆ ಮರಳಿ, ನನ್ನ ಕ್ಲಿನಿಕ್ ಆರಂಭಿಸಿ, ನಮ್ಮ ಬದುಕಿನ ಚಟುವಟಿಕೆಯತ್ತ ತೊಡಗಿಸಿಕೊಳ್ಳುತ್ತಿದ್ದ ಹಾಗೇ, ಊರಿಗೆ ಮೊದಲ ರೀತಿ ಹೋಗಿಬರಲು ಕೂಡ ದುಸ್ತರವಾಗುತ್ತಿತ್ತು. ಹಬ್ಬ, ಹುಣ್ಣಿಮೆ,  ಹಿರಿಯರ ತಿಥಿ ಮುಂತಾಗಿ ಹೋದಾಗ ಕೂಡ ಕೆರೆಯತ್ತ ತಿರುಗಲೂ ಆಗದಷ್ಟು ಧಾವಂತ! ಬೆಳಿಗ್ಗೆ ಹೋದರೆ, ಮಧ್ಯಾಹ್ನದ ಊಟದ ತಕ್ಷಣ  ವಾಪಸ್ಸಾಗುವುದನ್ನೇ ನೋಡುವಷ್ಟು! ಹೀಗಾಗಿ  ಕೆರೆಯ ಕಡೆ ಗಮನವೇ ಇರದಷ್ಟು ಅಥವಾ ಅಷ್ಟು ವ್ಯವಧಾನವಿರಲಿಲ್ಲ ಎನಿಸುವಷ್ಟು! ಆ ಒಂದು ದಿನ, ನನ್ನ ಕ್ಲಿನಿಕ್ಕಿಗೆ ನಮ್ಮೂರವರು ಒಬ್ಬರು ಬಂದರು. ಅವರಿಂದ ತಿಳಿಯಿತು  – ಅತೀ ದುಃಖದ ಸಮಾಚಾರ… ನಮ್ಮೂರ ಕೆರೆ ಇನ್ನಿಲ್ಲ! ಹೌದು, ಕೆರೆ ಇಲ್ಲ. ಹಾಗಾದರೆ ಏನಾಯಿತು ಅಥವಾ ಎಲ್ಲಿಗೆ ಸಾಗಿಸಲಾಯಿತು–ಹೊಸದೇನಾದರೂ ತಾಂತ್ರಿಕತೆಯಿಂದ ಬೇರೆಡೆಗೇನಾದರೂ…?! ಉಹುಂ…ಇಲ್ಲ! ಮುಚ್ಚಲಾಗಿದೆ. ಮುಚ್ಚಿ ಮತ್ತೊಂದು, ಮೂರನೆಯ, ಬಸ್ ನಿಲ್ದಾಣ ನಿರ್ಮಿಸಲಾಗಿದೆ! ಆಹಾ…ಅದ್ಭುತ! ಎಂಥ  ತಲೆ ಇರಬಹುದು, ಎಂಥ ಸಾಧನೆ! ಒಮ್ಮೆ ಊರಿನತ್ತ ಹೋದೆ…ವಿಶಾಲ ಕೆರೆಯಲೀಗ ಆ ವೈಶಾಲ್ಯವೇ ಇಲ್ಲ! ಕೆರೆಯ ಬದಲು  ಅಲ್ಲಿ ಬಸ್ ಸ್ಟ್ಯಾಂಡ್!  ಮತ್ತು ಅದರ ಅತ್ತಿತ್ತ  ಮಕ್ಕಳ ಆಟಕ್ಕಾಗಿ ಒಂದು ಉದ್ಯಾನವನದ ರೀತಿ! ಅಷ್ಟೇ ಅಲ್ಲ. ಪೇಟೆಯ ಸುತ್ತ ಇದ್ದ ಯಾವ ಕೆರೆಯೂ ಈಗಿಲ್ಲ. ಎಲ್ಲ ಬರಡು. ಭಣ ಭಣ! ಯಾರು ಕಾರಣರೋ, ಅಥವಾ ಅದೆಂಥ ಕಾರಣವೋ (ಯಾರ ಪಾಪವೋ) ನಾನರಿಯೆ…ಆದರೆ ನನಗನಿಸಿದ್ದು…ಊರೂರಲ್ಲೂ ಇಂಥ ಒಬ್ಬೊಬ್ಬ ಪ್ರಭೃತಿಯಿದ್ದರೆ, ಜಗತ್ತು ಉದ್ಧಾರ! ಕಾವೇರಿ  ಗಂಗೆಯರನ್ನು ಭೂಮಿಗಿಳಿಸಿದ ಅಗಸ್ತ್ಯ ಭಗೀರಥರೀಗ ಈ ಇಂಥವರಿಂದ ಧನ್ಯ…! ***********************************

ನಮ್ಮೂರ ಕೆರೆಯ ವೃತ್ತಾಂತ Read Post »

ಇತರೆ

ಮಹಾತ್ಮಾ ಗಾಂಧೀಜಿಯವರ ಅಸಹಕಾರ ಚಳುವಳಿ ಉತ್ತರ ಕರ್ನಾಟಕ ಭೇಟಿಗೆ ಶತಮಾನ

ಲೇಖನ ಮಹಾತ್ಮಾ ಗಾಂಧೀಜಿಯವರ ಅಸಹಕಾರ ಚಳುವಳಿ ಉತ್ತರ ಕರ್ನಾಟಕ ಭೇಟಿಗೆ ಶತಮಾನ ಡಾ. ಎಸ್.ಬಿ. ಬಸೆಟ್ಟಿ ಒಂದು ಶತಮಾನದ ಹಿಂದಿನ ಕಾಲ ಬ್ರಿಟಿಷ್ ಆಳ್ವಿಕೆಯ ಅತಿರೇಕಗಳಿಂದ ಇಡೀ ಭಾರತವೇ ರೋಸಿಹೋಗಿತ್ತು. ಕಳೆದ ಶತಮಾನದ ಪೂರ್ವಾರ್ಧದಲ್ಲಿ ಪ್ಲೇಗ್, ಕಾಲರಾ, ಸಿಡುಬು, ಸ್ಪಾನಿಶ್ ಪ್ಲೂ ಇತ್ಯಾದಿ ಸಾಂಕ್ರಾಮಿಕ ಸೋಂಕುಗಳು ಜಗತ್ತನ್ನು ಕಂಗೆಡಿಸಿದ್ದವು. ಪ್ಲೇಗ್, ಕಾಲರಾ, ಸಿಡುಬು ಆಗಾಗ ಬರುತ್ತಲೇ ಇದ್ದರೂ ಸ್ಪಾನಿಶ್ ಪ್ಲೂ ಮಾತ್ರ ೧೯೧೮-೧೯ ರ ವೇಳೆ ಒಮ್ಮೆಲೆ ವ್ಯಾಪಕವಾಗಿ ಹರಡಿತು. ಇದು ಹರಡಿದ್ದು ಒಂದನೇ ಮಹಾಯುದ್ಧದಲ್ಲಿ ಪಾಲ್ಗೊಂಡ ಸೈನಿಕರು ಮುಂಬಯಿ ಮೂಲಕ ಹಡಗಿನಲ್ಲಿ ೨೯ನೇ ಮೇ ೧೯೧೮ ರಂದು ಬಂದಾಗ. ಆಗ ಪೋಲಿಸರು, ಮಿಲ್‌ಗಳಲ್ಲಿ ಕೆಲಸ ಮಾಡುವವರು ಸರಕಾರಿ ನೌಕರರು ತೀವ್ರ ಅಸ್ವಸ್ಥರಾದರು. ಎಲ್ಲರೂ ಒಂದೇ ದಿನ ಚಳಿ,ಜ್ವರ, ಮೈಕೈನೋವು ಇತ್ಯಾದಿಗಳಿಂದ ರಜೆ ಹಾಕಬೇಕಾಗಿ ಬಂತು. ಆಗ ರೈಲು ಮಾರ್ಗದಲ್ಲಿ ಸಂಚರಿಸುವವರ ಮೂಲಕ ವೈರಸ್ ಮದ್ರಾಸ್ ಪ್ರಾಂತ್ಯ, ಮುಂಬಯಿ (ಈಗಿನ ಉತ್ತರ ಕರ್ನಾಟಕ), ಹೈದರಾಬಾದ್ ಪ್ರಾಂತ್ಯಗಳಿಗೆ (ಹೈದರಾಬಾದ್ ಕರ್ನಾಟಕ) ಹಬ್ಬಿತು. ರೈಲು ಮೂಲಕ ಕರಾವಳಿಗೂ ತಲುಪಿತು. ಇನ್ನೊಂದೆಡೆ ಧಾರವಾಡ ಕಡೆಯಿಂದಲೂ ಬಂತು. ಕರಾವಳಿ ಕರ್ನಾಟಕದಲ್ಲಿ ಹೊಳೆ ದಾಟಿ ಹೋಗಬೇಕಾಗಿದ್ದು ನೇರ ರಸ್ತೆ ಮಾರ್ಗಗಳಿಲ್ಲದ ಕಾರಣ ವೈರಸ್ ಬೇರೆ ಕಡೆಯಷ್ಟು ತೀವ್ರವಾಗಿ ಬಾಧಿಸಲಿಲ್ಲ. ಆದರೂ ಜನಸಂಖ್ಯೆಯ ಶೇ. ೨% ರಷ್ಟು ಮಂದಿ ಸಾವಿಗೀಡಾಗಿದ್ದರೆಂದು ಅಂದಾಜಿಸಲಾಗಿದೆ. ದೇಶದಲ್ಲಿ ೧ ಕೋಟಿಗೂ, ಜಗತ್ತಿನಲ್ಲಿ ೫ ಕೋಟಿಗೂ ಅಧಿಕ ಜನರು ಸಾವಿಗೀಡಾಗಿದ್ದರು.             ಪ್ರಥಮ ವಿಶ್ವ ಯುದ್ಧದ ತರುವಾಯ ಭಾರತದ ಜನತೆ ೧೯೧೮-೧೯ರ ಸ್ಪ್ತಾನಿಶ್ ಪ್ಲೂ ಎಂಬ ವಿಶ್ವವ್ಯಾಪಿ ಮಹಾಮಾರಿಯಿಂದ ತತ್ತರಿಸಿ ಹೇಗೋ ಚೇತರಿಕೊಳ್ಳುತ್ತಿರುವಂತೆಯೇ ೧೯೧೯ ರ ಕರಾಳವಾದ ರೌಲೆಟ್ ಕಾಯ್ದೆಯು ಜನತೆಯ ಸ್ವಾತಂತ್ರ್ಯ ವನ್ನು ಮತ್ತಷ್ಟು ಮೊಟಕುಗೊಳಿಸಿತ್ತು. ಆ ವೇಳೆಗೆ ಗಾಂಧೀಜಿ ರೌಲೆಟ್ ಕಾಯ್ದೆಯ ವಿರುದ್ಧವಾಗಿ ೬ನೇ ಎಪ್ರಿಲ್ ೧೯೧೯ ರಂದು ದೇಶವ್ಯಾಪಿ ಸತ್ಯಾಗ್ರಹವನ್ನು ನಡೆಸಿದರು. ಬ್ರಿಟಿಷ್ ಸರಕಾರದ ಆಳ್ವಿಕೆಯಲ್ಲಿನ ದಬ್ಬಾಳಿಕೆಯ ಪರಮಾವಧಿ ಎಂಬಂತೆ ೧೩ನೇ ಎಪ್ರಿಲ್ ೧೯೧೯ ರಂದು ಜನರಲ್ ಡೈಯರನು ಎಸಗಿದ ಜಲಿಯನ್ ವಾಲಾಬಾಗ್ ಹತ್ಯಾಕಾಂಡವು ಮಾನವತೆಯ ಸಾಕ್ಷೀಪ್ರಜ್ಞೆಯನ್ನೇ ಅಲುಗಾಡಿಸಿ ಹಾಕಿತ್ತು. ಈ ಘಟನೆಯಿಂದ ಭಾರತದ ಮೂಲೆ ಮೂಲೆಗಳಲ್ಲಿ ಜನರು ಶೋಕ ತಪ್ತರಾದರು. ಹಾಗೂ ಬ್ರಿಟಿಷ್ ಆಳ್ವಿಕೆಯನ್ನು ಕೊನೆಗಾಣಿಸಲು ಹೊಸದಾಗಿ ಚಳುವಳಿಯನ್ನು ನಡೆಸಲು ದೃಢವಾದ ಸಂಕಲ್ಪವನ್ನು ಮಾಡಿದರು. ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಬ್ರಿಟೀಷ್ ಸರಕಾರ ಯಾವ ಮಟ್ಟಕ್ಕೂ ಇಳಿದು ಪಾಶವೀಕೃತ್ಯಗಳನ್ನು ಹಾಗೂ ಅನಾಚರಗಳನ್ನೂ ಮಾಡಬಲ್ಲದು ಎಂದು ಗಾಂಧೀಜಿಯ ಮನಸ್ಸಿನಲ್ಲಿ ಅಹಿಂಸಾತ್ಮಕವಾದ ಅಸಹಕಾರ ಚಳುವಳಿಯ ಯೋಜನೆಯು ಮೂಡಿತು. ಅವರು ಅದನ್ನು ಅವರ ಸತ್ಯಾಗ್ರಹದ ಪಥದಲ್ಲಿ ಹಂತಹಂತವಾಗಿ ರೂಪಿಸಿದರು.             ಈ ಚಳುವಳಿಯು ೧ನೇ ಅಗಸ್ಟ್ ೧೯೨೦ ರಂದು ಆರಂಭವಾಗುವ ಹೊತ್ತಿನಲ್ಲಿ ಲೋಕಮಾನ್ಯ ತಿಲಕರು ಕಾಲವಾದರು. ದೇಶವು ಶೋಕದಲ್ಲಿ ಮುಳುಗಿದ್ದರೂ, ಲೋಕಮಾನ್ಯರ ಸ್ಮರಣೆಯೊಂದಿಗೆ ಗಾಂಧೀಜಿಯ ನಾಯಕತ್ವದಿಂದ ಜನತೆಯಲ್ಲಿ ಮಹಾಜಾಗೃತಿಯು ಉಂಟಾಯಿತು. ಹಿಂದೂಗಳು ಹಾಗೂ ಮುಸಲ್ಮಾನರು ಅಲ್ಲದೇ ಎಲ್ಲಾ ಮತಧರ್ಮದವರೂ ಒಂದಾಗಿ ಅಸಹಕಾರ ಚಳುವಳಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದರು. ಅಸಹಕಾರದ ಮೊದಲ ಹೆಜ್ಜೆಯಾಗಿ ಗಾಂಧೀಜಿ ತಮಗೆ ಸರಕಾರ ಕೊಟ್ಟಿದ್ದ ಕೈಸರ್-ಎ-ಹಿಂದ್ ಮತ್ತಿತರ ಪದಕಗಳನ್ನು ಹಿಂತಿರುಗಿಸಿದರು. ಅಖಿಲ ಭಾರತ ಮಟ್ಟದಲ್ಲಿ ಯಾವುದೇ ಭೇದ ಬಂಧವಿಲ್ಲದೇ ಮಹಿಳೆಯರು ಮಕ್ಕಳೂ ಸೇರಿದಂತೆ ಎಲ್ಲಾ ವರ್ಗಗಳ ಜನರು ಈ ಚಳುವಳಿಯಲ್ಲಿ ಸಹಜವಾಗಿ ಭಾಗವಹಿಸಲು ಅವಕಾಶ ಇದ್ದಿತು. ದೇಶ ಕಟ್ಟುವ ಕೆಲಸಕ್ಕಾಗಿ ಧನ – ಜನ ಸಂಗ್ರಹಿಸಲು ಮತ್ತು ನಿದ್ರಿಸುತ್ತಿದ್ದ ಭಾರತವನ್ನು ಎಚ್ಚರಿಸಲು ಗಾಂಧೀಜಿ ದೇಶದ ಉದ್ದಗಲಕ್ಕೂ ಉತ್ಸಾಹದ ಚಿಲುಮೆಯಂತೆ ಓಡಾಡುತ್ತಿದ್ದರು. ವಿಮಾನಯಾನ ಹೊರತುಪಡಿಸಿ ಉಳಿದೆಲ್ಲ ಸಂಪರ್ಕ ಸಾಧನಗಳಾದ ಕಾಲ್ನಡಿಗೆ, ಎತ್ತಿನಬಂಡಿ, ಕುದುರೆಗಾಡಿ, ರೈಲು, ದೋಣಿ ಹಾಗೂ ಹಡಗುಗಳಲ್ಲಿ ಸಂಚರಿಸಿದರು. ಹಾಗೆಯೇ ಕರ್ನಾಟಕಕ್ಕೂ ಗಾಂಧೀಜಿ ಹಲವು ಸಲ ಬಂದರು. ಕರ್ನಾಟಕದ ಉದ್ದಗಲಕ್ಕೂ ಅವರ ಅಭಿಮಾನಿಗಳು, ಆತ್ಮೀಯ ಸ್ನೇಹಿತರು ಹಾಗೂ ಕಾರ್ಯಕರ್ತರು ಹರಡಿದ್ದರು. ಉತ್ತರ ಕರ್ನಾಟಕ ಜನರು ಭಾರತದ ಸ್ವಾತಂತ್ರ್ಯ  ಚಳುವಳಿಯಲ್ಲಿ ಗಾಂಧೀಜಿಯವರಿಗೆ ಹೆಗಲಿಗೆ ಹೆಗಲು ಕೊಟ್ಟವರು. ಸ್ವಾತಂತ್ರ್ಯ  ಆಂದೋಲನ ಸಂಪೂರ್ಣ ಜಯದಲ್ಲಿ ಉತ್ತರ ಕರ್ನಾಟಕ ಜನರು ಪಾಲು ಇದೆ. ಅಂತೆಯೇ ಗಾಂಧೀಜಿ ಯುಗದ ಪ್ರಥಮ ಮಹಾ ಆಂದೋಲನವಾದ ಅಸಹಕಾರ ಚಳುವಳಿಯ ಉತ್ತರ ಕರ್ನಾಟಕದಲ್ಲಿ ಶತಮಾನದ ನೆನಪನ್ನು ಕೂಡಾ ಈ ವರ್ಷ (೨೦೨೦) ಮಾಡಿಕೊಳ್ಳುತ್ತಿದ್ದೇವೆ. ಆ ನೆನಪಿನಲ್ಲಿ ಗಾಂಧೀ ಹೆಜ್ಜೆಯನ್ನು, ಚಿಂತನೆಯನ್ನೂ ಸ್ಮರಿಸೋಣ.  ಗಾಂಧೀಜಿ  ಕರ್ನಾಟಕಕ್ಕೆ ಐದನೇ ಭೇಟಿ (೮, ೯, ೧೦, ೧೧ನೇ ನವ್ಹಂಬರ್ ೧೯೨೦ರಲ್ಲಿ) :             ಕರ್ನಾಟಕದ ಮೊದಲನೆ ಮುಕ್ಕಾಂ ನಿಪ್ಪಾಣಿ ಎಂದು ಗೊತ್ತಾಗಿತ್ತು. ನಿಪ್ಪಾಣಿ ಅಲ್ಲಿಂದ ಚಿಕ್ಕೋಡಿ, ಹುಕ್ಕೇರಿ, ಸಂಕೇಶ್ವರಗಳ ಪ್ರವಾಸ ಮುಗಿಸಿಕೊಂಡು ಬೆಳಗಾವಿಗೆ ಬಂದರು. ಈ ಬೆಳಗಾವಿ ಭೇಟಿ ಮುಂದಿನ ೧೯೨೪ ಅಧಿವೇಶಕ್ಕೆ ಪೀಠಿಕೆಯಾಯಿತು.  ನಿಪ್ಪಾಣಿ ಭೇಟಿ(೮ನೇ ನವೆಂಬರ್ ೧೯೨೦ರಲ್ಲಿ) :             ಬೆಂಗಳೂರು ಪ್ರವಾಸದ ಎರಡೂವರೆ ತಿಂಗಳ ನಂತರ ಅಂದರೆ ೮ನೇ ನವೆಂಬರ್ ೧೯೨೦ ರಂದು ನಿಪ್ಪಾಣಿಗೆ ಬಂದ ಗಾಂಧೀಜಿ ಚಿಕ್ಕೋಡಿ, ಹುಕ್ಕೇರಿ ಹಾಗೂ ಸಂಕೇಶ್ವರದ ಮೂಲಕ ಬೆಳಗಾವಿ ತಲುಪಿದರು.  ಆಗ್ಗೆ ಬ್ರಾಹ್ಮಣ-ಬ್ರಾಹ್ಮಣೇತರ ಎಂಬ ಭಾವನೆ ಬೆಳೆದು ಅಲ್ಲಲ್ಲಿ ವಾತಾವರಣ ಕದಡಿತ್ತು. ನಿಪ್ಪಾಣಿಯ ಸಾರ್ವಜನಿಕ ಸಭೆಯಲ್ಲಿ ಮಾರುತಿರಾಯ ಎಂಬುವರು ಈ ವಿಷಯವನ್ನು ಎತ್ತಿದರು. ಗಾಂಧೀಜಿ ಈ ಬಗ್ಗೆ ಮಾತನಾಡುತ್ತಾ ಹೇಳಿದ ಅರ್ಥ ಹೀಗಿದೆ: ಇಡೀ ಬ್ರಾಹ್ಮಣ ಸಮಾಜವನ್ನು ದ್ವೇಷಿಸಿ ಅವರಿಂದ ದೂರ ಇರುವುದು ಆತ್ಮಘಾತಕತನ. ನಮ್ಮಲ್ಲಿರುವ ಯಜ್ಞ, ತ್ಯಾಗ, ತಪಸ್ಸು ಮುಂತಾದ ಅಭಿಪ್ರಾಯಗಳೆಲ್ಲ ನಮಗೆ ಬಂದ್ದು ಬ್ರಾಹ್ಮಣರಿಂದಲೇ. ಪ್ರಪಂಚದಲ್ಲಿ ಬ್ರಾಹ್ಮಣರಷ್ಟು ತ್ಯಾಗ ಮಾಡಿದರು ಬೇರೆ ಯಾರೂ ಇಲ್ಲ.  ಈ ಮಾತು ಈ ಕಲಿಯುಗದಲ್ಲಿಯೂ ಅನ್ವಯಿಸುವಂತಿದೆ. ಕುಡಿಯುವ ಹಾಲಿನಲ್ಲಿ ಏನಾದರೂ ಕೊಳೆ ಇದ್ದರೆ ಕೂಡಲೇ ಕಾಣುತ್ತದೆ. ಅದೇ ಕೊಳಕು ಪದಾರ್ಥದಲ್ಲಿ ಎಷ್ಟಿದ್ದರೂ ತಿಳಿಯುವುದಿಲ್ಲ. ಆದ್ದರಿಂದ ಅವರಲ್ಲಿ ಏನೇ ಲೋಪದೋಷ ಇದ್ದರೂ ಕೂಡಲೇ ನಮ್ಮ ಗಮನವನ್ನು ಸೆಳೆಯುತ್ತದೆ. ಬ್ರಾಹ್ಮಣರ ಅಲ್ಪ ದೋಷಗಳನ್ನು ದೊಡ್ಡದು ಮಾಡಿ ಹೇಳುವುದೇ ಅವರ ಯೋಗ್ಯತೆಗೆ ಸಾಕ್ಷಿ ಎಂದು ನನ್ನ ಭಾವನೆ. ಬ್ರಾಹ್ಮಣರಷ್ಟು ತಪಸ್ಸು ಮಾಡಿದವರು ಯಾವ ದೇಶದಲ್ಲಿಯೂ ಇಲ್ಲ. ಆದ್ದರಿಂದ ಬ್ರಾಹ್ಮಣರ ತಪ್ಪು ಎಣಿಸುವಾಗ ವಿವೇಕ ಇರಬೇಕು. ಅವರೊಂದಿಗೆ ಅಸಹಕಾರ ಎಂದರೆ ಆತ್ಮನಾಶವೇ. ಜಗತ್ತಿಗೆ ಅವರು ಮಾಡಿದ ಸೇವೆಯನ್ನು ಒಪ್ಪಿಕೊಂಡು ಅವರೊಡನೆ ಸಹಕರಿಸುವುದೇ ಸರಿಯಾದ ದಾರಿ ಇತ್ಯಾದಿಯಾಗಿ ಹೇಳಿದರು ಎಂದು  ಶ್ರೀ ಮಹಾದೇವ ದೇಸಾಯಿ ವರದಿ ಮಾಡಿದ್ದಾರೆ. ಬೆಳಗಾವಿ ಭೇಟಿ(೯ನೇ ನವೆಂಬರ್ ೧೯೨೦ರಲ್ಲಿ) : ಗಾಂಧೀಜಿ ನಿಪ್ಪಾಣಿಯಿಂದ ಬೆಳಗಾವಿಗೆ ಬಂದರು. ಮರುದಿವಸ (೦೯-೧೧-೧೯೨೦) ಅಂದಿನ ಸಭೆಯ ವ್ಯವಸ್ಥೆ ವಹಿಸಿಕೊಂಡಿದ್ದವರು ಮಳಗಿ ಗೋವಿಂದರಾಯರು. ೧೫ ಸಾವಿರಕ್ಕೂ ಮೇಲ್ಪಟ್ಟು ಜನ ಆ ಸಭೆಗೆ ಆಗಮಿಸಿದ್ದರು. ಅಷ್ಟು ದೊಡ್ಡ ಸಭೆ ಆವರೆಗೆ ಅಲ್ಲಿ ನಡೆದಿರಲಿಲ್ಲ. ಮೌಲಾನ ಶೌಕತ್ ಅಲಿಯವರಿಗೂ ಮತ್ತು ಗಾಂಧೀಯವರಿಗೂ ಬೆಳ್ಳಿಯ ಕರಂಡಕದಲ್ಲಿ ಮಾನ ಪತ್ರ ಅರ್ಪಿಸಲಾಯಿತು.  ಸಭೆಯಲ್ಲಿ ಒಂದು ಸಾವಿರ ರೂಪಾಯಿ ನಿಧಿ ಕೂಡಿತು. ನಂತರ ಅಲ್ಲಿನ ಮಾರುತಿ ಗುಡಿಯಲ್ಲಿ ಮಹಿಳೆಯರ ಸಭೆ ನಡೆಯಿತು. ಬೆಳಗಾವಿಯಲ್ಲಿ  ಮಹಿಳೆಯರ ಸಭೆ (೯ನೇ ನವ್ಹಂಬರ್ ೧೯೨೦)  :             ಮಹಿಳೆಯರ ಸಭೆ ಮಾರುತಿ ಗುಡಿಯಲ್ಲಿ ನಡೆಯಿತು. ಸಭೆಯಲ್ಲಿ ಗಾಂಧೀಜಿ ಹೀಗೆ ಹೇಳಿದರು : ಈ ಗುಡಿಯಲ್ಲಿ ನಿಮ್ಮೆಲ್ಲರ ದರ್ಶನದಿಂದ ನಾನು ಪುನೀತನಾದೆ. ಎಲ್ಲಕ್ಕಿಂತ ನನಗೆ ಹೆಚ್ಚು ಸಂತೋಷ ನನ್ನ ಗೆಳೆಯ ಶೌಕತ್ ಅಲಿಯನ್ನು ನೀವು ನೋಡಬಯಸಿದ್ದು. ಅವರು ದಣಿದು ಸ್ವಲ್ಪ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ನೀವು ನೋಡಬಯಸಿದ ಕಾರಣ ಆತನಿಗೆ ಹೇಳಿಕಳುಹಿಸಿ ಕರೆದುಕೊಂಡು ಬಂದೆ. ಈ  ನಿಮ್ಮ ಸದ್ಭಾವನೆಯಲ್ಲಿ ಭಾರತದ ಗೆಲುವು ಅಡಗಿದೆ. ನಮ್ಮ ಹಿಂದೂ ಹೆಂಗಸರೂ ಮುಸ್ಲಿಂರನ್ನು ಅಣ್ಣ-ತಮ್ಮಂದಿರೆಂದು ಎಲ್ಲಿಯವರೆಗೆ ತಿಳಿಯುವುದಿಲ್ಲವೋ ಅಲ್ಲಿಯವರೆಗೆ ನಮ್ಮ ದುರದೃಷ್ಟ  ನೀಗದು. ಈ ದೇವಸ್ಥಾನದಲ್ಲಿ ಕುಳಿತು ನಿಮ್ಮ ಮನಸ್ಸನ್ನೂ ನೋಯಿಸಲು ನನಗೆ ಇಷ್ಟವಿಲ್ಲ. ನಾನು ಒಬ್ಬ ಸನಾತನಿ ಹಿಂದೂ. ಬೇರೆ ಯಾವ ಧರ್ಮವನ್ನೂ ತಿರಸ್ಕರಿಸಬಾರದೆಂದು ಅಗೌರವದಿಂದ ಕಾಣಬಾರದೆಂದು ನನ್ನ ಹಿಂದೂಧರ್ಮ ನನಗೆ ಹೇಳಿಕೊಟ್ಟಿದೆ. ಎಲ್ಲಿಯವರೆಗೆ ನಾವು ಇತರ ಮತದವರನ್ನು ಪ್ರೀತಿಸುವುದಿಲ್ಲವೋ ನಮ್ಮ ನೆರೆಹೊರೆಯವರನ್ನೂ ಪ್ರೀತಿಸುವುದಿಲ್ಲವೋ ಅಲ್ಲಿಯವರೆಗೆ ನಮ್ಮ ದೇಶ ಕ್ಷೇಮ ಸಾಧ್ಯವಾಗದು ಎಂದು ನನಗೆ ಗೊತ್ತಾಗಿದೆ. ನಮ್ಮ ರೂಢಿಗಳನ್ನು ಬದಲಾಯಿಸಿ, ಮುಸಲ್ಕಾನರ ಜೊತೆಗೆಯಲ್ಲಿ ಊಟಮಾಡಿ ಅವರನ್ನು ಮದುವೆ ಮಾಡಿಕೊಳ್ಳಿ ಎಂದು ಹೇಳಲು ನಾನು ಇಲ್ಲಿಗೆ ಬಂದಿಲ್ಲ. ಆದರೆ ಪ್ರತಿಯೊಬ್ಬ ಮನುಷ್ಯನನ್ನೂ ಪ್ರೀತಿಸಬೇಕು ಎಂದು ಹೇಳಲು ಬಂದಿದ್ದೇನೆ. ಇತರ ಮತಗಳ ಜನರನ್ನು ಪ್ರೀತಿಸಬೇಕೆಂದು ನಿಮ್ಮ ಮಕ್ಕಳಿಗೆ ಹೇಳಿಕೊಡಲು ಬೇಡುತ್ತೇವೆ.             ದೇಶಧ ಆಗುಹೋಗುಗಳನ್ನು ರಾಷ್ಟ್ರೀಯ ವಿದ್ಯಮಾನಗಳನ್ನು ಅರಿತುಕೊಳ್ಳಬೇಕೆಂದು ನಿಮ್ಮನ್ನು ಪ್ರಾರ್ಥಿಸುತ್ತೇನೆ. ಇದಕ್ಕಾಗಿ ನೀವು ಉನ್ನತ ವಿದ್ಯಾ ವ್ಯಾಸಂಗ ಮಾಡಬೇಕಾದ್ದಿಲ್ಲ. ದೊಡ್ಡ ಗ್ರಂಥಗಳನ್ನು ಓದಬೇಕಾಗಿದ್ದಿಲ್ಲ. ನಮ್ಮ ಸರಕಾರ ರಾಕ್ಷಸಿ ಸರಕಾರ ಎಂದು ಹೇಳುತ್ತೇನೆ. ಸರಕಾರ ನಮ್ಮ ಮುಸ್ಲಿಂ ಸೋದರರ ಭಾವನೆಯನ್ನು ತುಂಬಾ ಗಾಸಿಗೊಳಿಸಿದೆ.             ಪಂಜಾಬಿನಲ್ಲಿ ಸ್ತ್ರೀ-ಪುರುಷರ ಮೇಲೆ, ಮಕ್ಕಳ ಮೇಲೆ ಮಾಡಿದ ಭಯಂಕರ ಅತ್ಯಾಚಾರಗಳನ್ನು ಹೇಳಲು ಸಾಧ್ಯ ಇಲ್ಲ. ಈ ಸರಕಾರ ತನ್ನ ತಪ್ಪನ್ನು ಒಪ್ಪಿಕೊಳ್ಳದು. ಪರಿತಾಪ ಪಡೆದು ನಮ್ಮನ್ನೇ ತಿರುಗಿ ಕೇಳುತ್ತದೆ. ಈ ಕ್ರೌರ್ಯವನ್ನೆಲ್ಲ ಮರೆತು ಬಿಡಿ ಎಂದು ಆದ್ದರಿಂದಲೇ ಇದನ್ನು ರಾಕ್ಷಸಿ ಸರಕಾರ ಎನ್ನುತ್ತೇನೆ. ಈಗ ನಮ್ಮ ಜನರು ಎಲ್ಲರೂ ಅಸಹಕಾರ ಮಾಡಬೇಕು. ರಾವಣನೊಂದಿಗೆ ಸೀತೆ ಅಸಹಕರಿಸಲಿಲ್ಲವೇ ? ರಾಮಚಂದ್ರ ಅಸಹಕರಿಸಲಿಲ್ಲವೇ ? ರಾವಣ ಎಷ್ಟು ಪ್ರಲೋಭನಗೊಳಿಸಿದ ಸೀತೆಯನ್ನು ಮತ್ತು ರತ್ನಗಳನ್ನು ಕಳಿಸಿದ ಸೀತೆ ಅದು ಯಾವುದನ್ನೂ ಕಣ್ಣೆತ್ತಿ ಕೂಡ ನೋಡದೆ, ರಾವಣನ ಹಿಡಿತದಿಂದ ತಪಿಸಿಕೊಳ್ಳಲು ಕಟ್ಟು ನಿಟ್ಟಾದ ತಪಶ್ಚರ್ಯೆ ಮಾಡಿದಳು. ಮುಕ್ತಳಾಗುವವರೆಗೆ ಒಳ್ಳೆಯ ಬಟ್ಟೆ ಉಡಲಿಲ್ಲ. ಒಡವೆ ತೊಡಲಿಲ್ಲ. ರಾಮ-ಲಕ್ಷ್ಮಣರಿಬ್ಬರೂ ಎಷ್ಟು ತಪಸ್ಸು ಮಾಡಿದರು. ಅವರ ಇಂದ್ರಿಯ ಸಂಯಮ ಎಷ್ಟು ? ಬರೀ ಹಣ್ಣು ಹಂಪಲು ತಿನ್ನುವ ಬ್ರಹ್ಮಚರ್ಯ ವ್ರತನಿಷ್ಠರಾಗಿ ಕಾಲ ಕಳೆದರಲ್ಲ. ಈ ದಬ್ಬಾಳಿಕೆಯ ಸರಕಾರ ನಮ್ಮ ಬೆನ್ನಿನಮೇಲೆ ಸವಾರಿ ಮಾಡುತ್ತಿರುವವರೆಗೆ ಗಂಡಸಿಗಾಗಲಿ, ಹೆಂಗಸಿಗಾಗಲಿ ಒಳ್ಳೆಯ ಬಟ್ಟೆ ಬರೆ ಉಡಲು ಒಳ್ಳೆಯ ಒಡವೆ  ತೊಡಲು ಅಧಿಕಾರವೇ ಇಲ್ಲ. ಭಾರತ ಸ್ವಾತಂತ್ರ್ಯ  ಆಗುವವರೆಗೆ, ಮುಸಲ್ಮಾನರ ಗಾಯಗಳು ಮಾಯುವವರೆಗೆ ನಾವೆಲ್ಲರೂ ಫಕೀರರ ಹಾಗೆ ಇರಬೇಕು. ಕಷ್ಟ-ಸಹನೆಯ  ಬೇಗೆಯಲ್ಲಿ ನಮ್ಮ ಶ್ರೀಮಂತಿಕೆ ನಮ್ಮ ವಿಲಾಸ ಭೋಗಗಳನ್ನು ಸುಡಬೇಕು. ನಿಮ್ಮ ಸುಖಭೋಗಗಳನ್ನು ಬಿಟ್ಟು ಕಠಿಣ ತಪಶ್ಚರ್ಯೆಯನ್ನು ಅವಲಂಬಿಸಿ ನಿಮ್ಮ ಚಿತ್ತವನ್ನು ಶುದ್ಧವಾಗಿಟ್ಟುಕೊಳ್ಳಬೇಕೆಂದು ವಿನಯದಿಂದ ಪ್ರಾರ್ಥಿಸುತ್ತೇನೆ.             ೫೦ ವರ್ಷಗಳ ಹಿಂದೆ ನಮ್ಮ ಎಲ್ಲರೂ ರಾಟಿ ತಿರುಗಿಸುತ್ತಿದ್ದರು. ಕೈನೂಲಿನ ಬಟ್ಟೆ ಉಡುತ್ತಿದ್ದರು. ಹೆಂಗಸರಿಗೆ ನಿಮಗೆ ಹೇಳುತ್ತೇನೆ ಎಂದು ನಾವು ಸ್ವದೇಶಿ ಧರ್ಮವನ್ನು ಕೈಬಿಟ್ಟೆವೋ ಅಂದೇ ನಮ್ಮ ಪತನ ಪ್ರಾರಂಭವಾಯಿತು. ನಾವು ಗುಲಾಮರಾದೆವು. ದೇಶದಲ್ಲಿ ಎಲ್ಲ ಕಡೆಯಲ್ಲಿಯೂ ಜನರು ಹಸಿವಿನಿಂದ ಸಾಯುತ್ತಿದ್ದಾರೆ. ಉಡಲು ಬಟ್ಟೆ ಇಲ್ಲದೆ ಬೆತ್ತಲೆ ಹೋಗುತ್ತಿದ್ದಾರೆ. ಪರಿಸ್ಥಿತಿ ಹೀಗಿದೆ. ನೀವು ಪ್ರತಿಯೊಬ್ಬರೂ ದಿನವೂ ಒಂದು ಗಂಟೆ ಹೊತ್ತು ನೂತು ಆ ನೂಲನ್ನು ದೇಶಕ್ಕೆ ದಾನ ಕೊಡಬೇಕು ಎಂದು ಬೇಡುತೇನೆ. ಕೆಲವು ಕಾಲ ನಿಮಗೆ ಸೊಗಸಾದ ಬಟ್ಟೆ ಸಿಗಲಿಕ್ಕಿಲ್ಲ. ಆದರೆ ಸೊಗಸಾದ ನೂಲನ್ನು ನೂಲಲು ಕಲಿತರೆ ಆಗ ಅದು ಸಿಕ್ಕೇ ಸಿಗುತ್ತದೆ. ಆದರೆ ದೇಶ ಗುಲಾಮಗಿರಿಯಲ್ಲಿರುವ ತನಕ ಒಳ್ಳೆ ಬಟ್ಟೆಯನ್ನು ಉಡುವ ಯೋಚನೆಯನ್ನೇ ಮಾಡಬಾರದು. ಒಳ್ಳೆಯ ನೂಲನ್ನು ನೂಲಲು ಸಮಯ

ಮಹಾತ್ಮಾ ಗಾಂಧೀಜಿಯವರ ಅಸಹಕಾರ ಚಳುವಳಿ ಉತ್ತರ ಕರ್ನಾಟಕ ಭೇಟಿಗೆ ಶತಮಾನ Read Post »

ಇತರೆ

ಕಾದಂಬರಿ ಕುರಿತು ಚೋಮನದುಡಿ. ಡಾ.ಶಿವರಾಮ ಕಾರಂತ ಭಾರತೀಯ ಸಾರಸ್ವತ ಲೋಕದಲ್ಲಿ ದಲಿತರು , ಅದರಲ್ಲಿಯೂ ಅಸ್ಪೃಶ್ಯರು ಎದುರಿಸುತಿದ್ದ ಸಾಮಾಜಿಕ ಅನ್ಯಾಯಗಳ ವಿರುದ್ಧ ಶಾಂತವಾಗಿಯೇ ಪ್ರಥಮ ಬಾರಿಗೆ ದನಿಯೆತ್ತಿದ ಸಾಮಾಜಿಕ ಕಾದಂಬರಿ ಹಾಗೂ ಮೊದಲ ದಲಿತ ಕಾದಂಬರಿ ಎಂದು ಗುರುತಿಸಲ್ಪಡುವ ಶಿವರಾಮ ಕಾರಂತರ “ಚೋಮನ ದುಡಿ” ನನ್ನ ನೆಚ್ಚಿನ ಕಾದಂಬರಿ. ಸ್ವಾತಂತ್ರ್ಯದ ತರುವಾಯ ಪ್ರಜಾಪ್ರಭುತ್ತದ ಕೋಟೆಯಲ್ಲಿ ಹಲವಾರು ಸಂವೇದನಶೀಲ ಬರಹಗಾರರು ದಲಿತ ಲೋಕದ ಒಳಹರಿವು ಕುರಿತು ಅನನ್ಯವು, ಅನುಪಮವೂ ಆದ ಕೃತಿಗಳು ಬಂದಿವೆ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ, ಆಂಗ್ಲರ ದಬ್ಬಾಳಿಕೆಯ ನಡುವೆ ಹಾಗೂ ಜಿಡ್ಡುಗಟ್ಟಿದ ಶ್ರೇಣಿಕೃತ ಜಾತಿ ವ್ಯವಸ್ಥೆಯಲ್ಲಿ 1933 ರಲ್ಲಿ ಪ್ರಕಟವಾದ ಈ ಕಾದಂಬರಿ ತುಂಬಾ ವಿಶೇಷ ಹಾಗೂ ಅಪ್ತವೆನಿಸುತ್ತದೆ.       ಚೋಮನ ಪಾತ್ರದ ಮುಖಾಂತರ ಇಡೀ ದಲಿತ ಸಂವೇದನೆಯನ್ನು ಕಾರಂತರು ಕಟ್ಟಿ ಕೊಡುವ ಕ್ರಮ ಸಹೃದಯರನ್ನು ಆಕರ್ಷಿಸುತ್ತದೆ. ಕೆಳವರ್ಗ ಹಾಗೂ ಮೇಲ್ವರ್ಗಗಳ ನಡುವಿನ ಸಾಮಾಜಿಕ ಕಂದಕವನ್ನು ಈ ಕಾದಂಬರಿಯು ಅನಾವರಣಗೊಳಿಸುವ ರೀತಿ ಅಪ್ಯಾಯಮಾನವಾಗಿದೆ. ಚೋಮನಲ್ಲಿ ಮೊಳಕೆಯೊಡೆದ ತಾನು ಬೇಸಾಯಗಾರ ಆಗಬೇಕು ಎಂಬ ಉತ್ಕಟ ಸಂಘರ್ಷದ ಸುತ್ತ ಕಾದಂಬರಿಯ ವಸ್ತು ಚಲಿಸುತ್ತಿರುತ್ತದೆ.      ಇನ್ನೂ, ಒಬ್ಬ ಓದುಗನಾಗಿ ನನಗೆ ಕಾಡಿದ ; ಕಾಡುತ್ತಿರುವ ಈ ಕಾದಂಬರಿಯ ದೃಶ್ಯವೆಂದರೆ ಅದು ಚೋಮನ ಮಗನ ನೀಲನ ಸಾವು.. ಅಲ್ಲಲ್ಲ..ಕೊಲೆ !! ನೀಲ ನೀರಿನಲ್ಲಿ  ಈಜಾಡುತಿದ್ದಾಗ ಕೈ ಸೋತು ಮುಳುಗುತಿರುತ್ತಾನೆ. ಆ ಸಮಯದಲ್ಲಿ ಹಳ್ಳದ ಮೇಲಣ ದಂಡೆಯ ಮೇಲೆ ಎಷ್ಟೋ ಜನ ಮೇಲು ಜಾತಿಯವರು ಬಟ್ಟೆ ಒಗೆಯುತಿದ್ದರು, ಕೆಲವು ಹುಡುಗರು ಅದೇ ನೀರಿನಲ್ಲಿ ಆಡುತಿದ್ದರು. ಆದರೆ ಮುಳುಗುತಿದ್ದವನ ಉಸಿರು ಹೊಲೆಯನಾಗಿದ್ದರಿಂದ ಅವನ ಕೂಗು, ಆಕ್ರಂದನ ಅಲ್ಲಿರುವ ಜಾಣ ಕಿವುಡರಿಗೆ ಕೇಳಿಸದೆ ಹೋಗುತ್ತದೆ. ನಡು ಹಗಲಿನಲ್ಲಿಯೇ ನಮ್ಮ ಸಾಮಾಜಿಕ ಜಾತಿ ವ್ಯವಸ್ಥೆಯು ನೀಲನ ಉಸಿರನ್ನು ನಂದಿಸಿ ಬಿಡುತ್ತದೆ.       ಕಾದಂಬರಿಯ ಮತ್ತೊಂದು ಪ್ರಮುಖ ಪಾತ್ರ ಬೆಳ್ಳಿ. ಚೋಮನ ಮಗಳಾದ ಬೆಳ್ಳಿ ಚೋಮನಿಗೆ ತಾಯಿಯಾಗಿ, ತನ್ನ ಸಹೋದರಿಗೆ ಅಮ್ಮನಾಗಿ ಅಕ್ಕರೆಯಿಂದ ಆರೈಕೆ ಮಾಡುವ ಪರಿ ಸ್ತ್ರೀ ಸಂಕುಲದ ಅನನ್ಯತೆಯನ್ನು ಸಾರುತ್ತದೆ. ತನ್ನ ಕುಟುಂಬಕ್ಕಾಗಿ ತೋಟದ ಎಸ್ಟೇಟ್ ಗೆ ಹೋಗುವ,  ವಯೋ ಸಹಜವಾದ ಕಾಮಕ್ಕೆ ಬಲಿಯಾಗವುದು ಇವೆಲ್ಲವು ಸಹೃದಯ ಓದುಗರಲ್ಲಿ ಅವಳ ಬಗೆಗೆ ಅನುಕಂಪವನ್ನು ಮೂಡಿಸುತ್ತವೆ.       ಕಾದಂಬರಿಯ ಮತ್ತೊಂದು ಮಗ್ಗುಲು ಚೋಮನ ಹೆಂಡ ಮತ್ತು ದುಡಿ. ಅವುಗಳೇ ಅವನ ನಿಜವಾದ ಜೀವನ ಸಂಗಾತಿಗಳು. ಅವನ ಸಂತೋಷವನ್ನು, ಅವನ ದುಃಖವನ್ನೂ ಸಶಕ್ತವಾಗಿ ಪ್ರತಿಬಿಂಬಿಸುವಂತವುಗಳೆಂದರೆ ಅವು ಹೆಂಡ ಮತ್ತು ದುಡಿ. ಕಾದಂಬರಿಯ ಆರಂಭದಲ್ಲಿಯ ‘ದುಡಿ’ ಯ ಸದ್ದು ಚೋಮನ ಸಂತೋಷವನ್ನು ಪ್ರತಿನಿಧಿಸಿದರೆ, ಕೊನೆಯಲ್ಲಿ ಅಪ್ಪಳಿಸುವ ನಿನಾದ ಚೋಮನ ನೋವು, ಹತಾಶೆ, ಅವಮಾನ, ಒಂಟಿತನ ಎಲ್ಲವನ್ನೂ ಮೌನವಾಗಿ ಸಾರುತ್ತ ಅವನನ್ನೇ ಬೀಳ್ಕೊಡುತ್ತವೆ..!!      ಈ ಎಲ್ಲ ಕಾರಣಗಳಿಂದಾಗಿಯೇ ಈ ಕಾದಂಬರಿ ಪ್ರಕಟವಾಗಿ ಒಂಬತ್ತು ದಶಕಗಳು ಆಗುತ್ತ ಬಂದರೂ ಇಂದಿಗೂ ಸಂವೇದನಶೀಲ ಸಹೃದಯ ಓದುಗರನ್ನು ಜಿಜ್ಞಾಸೆಗೆ ಹಚ್ಚುತ್ತಿದೆ. ರತ್ನರಾಯ ಮಲ್ಲ

Read Post »

You cannot copy content of this page

Scroll to Top