ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-29 ವೃತ್ತಿ ವೃತ್ತಾಂತವೃತ್ತಿ ಬದುಕಿನ ಹಿನ್ನೋಟನೋಟ ~ ೨೯ ಈ ಹಿಂದೆ ಮೈಸೂರಿನಿಂದ ವರ್ಗವಾಗಿ ಹೋಗಿದ್ದ ರೇಣುಕುಮಾರಿ ಹಾಗೂ ಪದ್ಮಿನಿ ಎನ್ನುವರು ಅಲ್ಲಿ ಒಬ್ಬರ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿ ಇದ್ದರು. ಅವರು ಮತ್ತೆ ವಾಪಸ್ ಮೈಸೂರಿಗೆ ವರ್ಗವಾಗಿದ್ದರಿಂದ ಅವರ ಜಾಗದಲ್ಲಿ ಆ ಹಾಸ್ಟೆಲಿಗೆ ನಾವು ಸೇರುವುದು ಎಂದು ಈಗಾಗಲೇ ನಾನು ಸುಲೋಚನ ನಿರ್ಧರಿಸಿದ್ದೆವು. ರವೀಶ್ ನನ್ನ ಜೊತೆ ಬರಲು ನಿರ್ಧರಿಸಿದ್ದರಿಂದ ಸುಲೋಚನ ಅವರ ಅಕ್ಕ ಬರುವುದು ಬೇಡ ಎಂದು ಹೇಳಿ ನಾವು ಡಿಸೆಂಬರ್ ೧ ೧೯೯೭ರ ಬೆಳಿಗ್ಗೆ 5:30 ಬಸ್ಸಿಗೆ ಸಕಲೇಶಪುರಕ್ಕೆ ಹೊರಟೆವು.ಮೊದಲು ರವೀಶ್ ಅವರ ಸಂಬಂಧಿ ಸತ್ಯ ಅವರ ಮನೆಗೆ ಹೋಗಿ ತಿಂಡಿ ತಿಂದು ನಂತರ ಆಫೀಸಿನ ಕಡೆ ಹೋದೆವು. ಮಾಮೂಲಿನಂತೆ ಡ್ಯೂಟಿ ರಿಪೋರ್ಟ್ ಹಾಗೂ ವರ್ಗಾವಣೆ ಅರ್ಜಿ ಎರಡನ್ನು ಸಲ್ಲಿಸಿಆಯಿತು. ಆದರೆ ಕನ್ಫರ್ಮೇಷನ್ ಆಗುವ ತನಕ ನಮ್ಮ ಅರ್ಜಿಗೆ ಮಾನ್ಯತೆ ಇರುವುದಿಲ್ಲ. ನಾನು ಈಗಾಗಲೇ ಹೊಸ ವ್ಯವಹಾರ ವಿಭಾಗದಲ್ಲಿ ವಿಭಾಗ ಕಚೇರಿಯಲ್ಲಿ ಇದ್ದುದರಿಂದ ನನಗೆ ಅದೇ ಡಿಪಾರ್ಟ್ಮೆಂಟ್ ಕೊಟ್ಟರು. ಸುಲೋಚನಾ ಅವರು ಪಾಲಿಸಿ ಸೇವಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ಅವರಿಗೆ ಗೊತ್ತಿದ್ದ ಅದೇ ಡಿಪಾರ್ಟ್ಮೆಂಟ್. ಮಧ್ಯಾಹ್ನ ರವೀಶ್ ಅವರು ವಾಪಸ್ ಹೋದರು. ಸಂಜೆ ಕಚೇರಿ ಮುಗಿದ ನಂತರ ರೇಣು ಅವರ ಜೊತೆಯಲ್ಲಿ ಹಾಸ್ಟೆಲ್ ಗೆ ಹೋದೆವು. ಈಗಾಗಲೇ ಅಲ್ಲಿ ಮತ್ತೊಬ್ಬರು ಉಪಾಧ್ಯಾಯಿನಿ ಶಿಲ್ಪ ಎನ್ನುವವರು ಇದ್ದರು. ಒಟ್ಟು ಮೂರು ಜನ ಒಂದು ಕೋಣೆಯಲ್ಲಿ ಇದ್ದುದ್ದು. ನಾವು ಹೊಸಬರು ಡ್ಯೂಟಿ ರಿಪೋರ್ಟ್ ಮಾಡಿಕೊಂಡ ನಂತರ ಮುಂದಿನ ವಾರ ಅವರು ಅಲ್ಲಿಂದ ರಿಲೀವ್ ಆಗಬೇಕಿದ್ದು ಹಾಗಾಗಿ ಆ ಒಂದು ವಾರ ಆ ಚಿಕ್ಕ ಕೋಣೆಯಲ್ಲಿ ನಾವು ಇರಲು ಸಾಧ್ಯವಿರಲಿಲ್ಲ. ಆ ಪ್ರಶ್ನೆ ನಮಗೆ ಎದುರಾಗಿಯೇ ಇರದುದ್ದರಿಂದ ಎಲ್ಲಿ ಇರುವುದು ಎನ್ನುವ ಪ್ರಶ್ನೆ ಉದ್ಭವವಾಯಿತು. ಸಂಬಂಧಿಗಳ ಮನೆ ಸಹ ಚಿಕ್ಕದಾಗಿದ್ದರಿಂದ ಅಲ್ಲಿ ಉಳಿಯುವುದು ಸಾಧ್ಯವಿರಲಿಲ್ಲ. ಕಡೆಗೆ ಊರಿಗೆ ವಾಪಸ್ ಆಗಿ ಮುಂದಿನ ವಾರ ಬರುವುದು ಎಂಬ ನಿರ್ಧಾರಕ್ಕೂ ಬಂದೆವು. ಸದ್ಯ ಅಲ್ಲಿಯೇ ಮೂರು ಜನ ಬೇರೆ ನಮ್ಮ ಕಚೇರಿಯ ಉದ್ಯೋಗಿಗಳು ಒಂದು ಮನೆ ಮಾಡಿಕೊಂಡು ಇದ್ದರು. ಇನ್ನುಳಿದ ಐದು ದಿನ ಇಲ್ಲಿಯೇ ಇರಿ ಎಂದು ಅವರು ಆಹ್ವಾನಿಸಿದ್ದರಿಂದ ರಜೆ ಹಾಕುವ ಯೋಚನೆ ಕೈ ಬಿಟ್ಟು ಅಲ್ಲಿಯೇ ಇರಬೇಕಾಯಿತು. ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ಇದ್ದ ಅವರ ಮನೆ ಅಲ್ಲೇ ಬಸ್ಟಾಂಡ್. ಎದುರಿಗೆ ಆಫೀಸ್. ಅಂತೂ ಅವರ ಜೊತೆ ಅವರಿಗೆ ತೊಂದರೆ ಕೊಟ್ಟುಕೊಂಡು 5 ದಿನ ಇದ್ದು ಹಾಸ್ಟೆಲ್ ಗೆ ಅಡ್ವಾನ್ಸ್ ಕೊಟ್ಟು ಜಾಗ ಖಚಿತಪಡಿಸಿಕೊಂಡಿದ್ದಾಯಿತು.ನನಗೆ ಹೊಸ ವ್ಯವಹಾರ ವಿಭಾಗದಲ್ಲಿ ಆಗ ಜವರಯ್ಯ ಮತ್ತು ಕುಮಾರ್ ಎಂಬುವವರು ಸಹಾಯಕರು. ಇಸ್ಮಾಯಿಲ್ ಎನ್ನುವರು ಅಲ್ಲಿನ ರೆಕಾರ್ಡ್ ಕ್ಲರ್ಕ್. ತುಂಬಾ ಹೊಂದಿಕೊಳ್ಳುವಂತಹ ವ್ಯಕ್ತಿತ್ವದವರು. ಅಲ್ಲಿ ಇದ್ದ ಚಂದ್ರು ಎನ್ನುವವರು ಕ್ಯಾಶಿಯರ್ ಆಗಿ ಹೋಗಿದ್ದರು ಸ್ವಲ್ಪ ಕೆಲಸ ಬಾಕಿ ಉಳಿದಿತ್ತು ಡಿಸೆಂಬರ್ ಅಂತ್ಯದ ವೇಳೆಗೆ ಶೆಡ್ಯೂಲ್ ಗಳನ್ನು ಸಲ್ಲಿಸಬೇಕಿತ್ತು ಅದರ ಕಡೆಯ ಕೆಲಸ ಏನು ಆಗಿರಲಿಲ್ಲ ಸ್ವಲ್ಪ ಹೆಚ್ಚಿನ ಶ್ರಮ ಹಾಕಬೇಕಿತ್ತು.ಐದು ವರೆಗೆ ಸರಿಯಾಗಿ ನಾವು ಹೊರಟರೆ ಅಲ್ಲಿ ಎಲ್ಲರಿಗೂ ಆಶ್ಚರ್ಯ. ಎಲ್ಲರೂ ಅಲ್ಲಿ ಆರು ವರೆ ಏಳು ಗಂಟೆಯ ತನಕ ಆಫೀಸಿನಲ್ಲಿಯೇ ಇರುತ್ತಿದ್ದವರು. ಕೆಲಸ ಬಾಕಿ ಉಳಿದಿದ್ದವರು ಕೆಲಸ ಮಾಡುತ್ತಿದ್ದರು. ಇಲ್ಲದಿದ್ದವರು ಕೇರಂ ಅಥವಾ ಟಿಟಿ ಆಡುತ್ತಾ ಕಾಲ ಕಳೆಯುತ್ತಿದ್ದರು. ಬಹಳಷ್ಟು ಜನ ಮನೆಗಳಿಂದ ದೂರ ಬಂದು ಇಲ್ಲಿ ರೂಮ್ ಮಾಡಿಕೊಂಡು ಇರುತ್ತಿದುದರಿಂದ ಇಲ್ಲಿ ಅದೇ ಸಂಸ್ಕೃತಿ ಬೆಳೆದು ಬಂದಿತ್ತು. ಆ ಒಂದು ವಾರ ನಾವು ಉಳಿದಿದ್ದ ನಮ್ಮ ಉದ್ಯೋಗಿಗಳು ಎಲ್ಲರೂ ಉಡುಪಿಯ ಕಡೆಯವರು. ಅವರಲ್ಲಿ ನೀರಜ ಎನ್ನುವವರಿಗೆ ಮದುವೆಯಾಗಿ ಒಂದು ಮಗುವಿತ್ತು. ಈ ಹಿಂದೆ ಪೋಸ್ಟಲ್ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದವರು ಅದನ್ನು ಬಿಟ್ಟು ಇಲ್ಲಿ ಸೇರಿದ್ದರು. ಮಂಗಳೂರಿಗೆ ವರ್ಗಾವಣೆ ಅರ್ಜಿ ಕೋರೊದ್ದರು. ಪ್ರತಿ ಶನಿವಾರ ಮಧ್ಯಾಹ್ನ ಅವರು ಮಂಗಳೂರಿಗೆ ಹೋಗಿ ಸೋಮವಾರ ಬೆಳಿಗ್ಗೆ ವಾಪಸ್ ಆಗುತ್ತಿದ್ದರು. ಇನ್ನೊಬ್ಬರು ಶುಭದಾ. ಅವರು ಅಷ್ಟೇ ಉಡುಪಿಯವರು. ಅವರ ತಂದೆ ಸಹ ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿದ್ದರು ಅವರಿಗೂ ಒಂದು ಪುಟ್ಟ ಮಗು ಇತ್ತು .ಮತ್ತು ಒಬ್ಬರು ಶ್ರೀಲತಾ ಆಗತಾನೇ ವಿವಾಹವಾಗಿ ವಿವಾಹದ ಆಧಾರದ ಮೇಲೆ ಮಂಗಳೂರಿಗೆ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದರು. ಈಗ ಅವರೊಂದಿಗೆ ನಾವು ಇಬ್ಬರು ಸೇರಿದ್ದೆವು ತುಂಬಾ ಒಳ್ಳೆಯವರು ಚೆನ್ನಾಗಿ ಹೊಂದಿಕೊಂಡು ಹೋಗುತ್ತಿದ್ದರು ನಮ್ಮ ಕಡೆಯ ಅಡುಗೆ ಇಷ್ಟವಾಗಿದ್ದರಿಂದ ಆ ಐದು ದಿನ ಅಡುಗೆಯ ಹೊಣೆ ನಾನೇ ಹೊತ್ತಿದ್ದೆ ಅಲ್ಲಿ ಎಷ್ಟು ಹೊಂದಾಣಿಕೆ ಇತ್ತೆಂದರೆ ಹಾಸ್ಟೆಲ್ ಬದಲು ಅಲ್ಲೇ ಮುಂದುವರೆಯಬಹುದಿತ್ತು ಆದರೆ ಐದು ಜನಕ್ಕೆ ಆ ಮನೆ ಸ್ವಲ್ಪ ಚಿಕ್ಕದಾಗುತ್ತಿತ್ತು ಹಾಗಾಗಿ ಆ ಯೋಜನೆ ಕೈ ಬಿಟ್ಟೆವು. ನಮ್ಮ ಜೊತೆಗೆ ಶಶಿಕಲಾ ಎನ್ನುವವರು ಹುಣಸೂರಿನಿಂದ ಇಲ್ಲಿಗೆ ಉನ್ನತ ದರ್ಜೆ ಸಹಾಯಕಿಯಾಗಿ ಬಂದಿದ್ದರು ಅವರಿಗೆ ಇಬ್ಬರು ಮಕ್ಕಳು, ಬೆಂಗಳೂರಿನಲ್ಲಿ ಅವರ ಪತಿ ಹಾಗೂ ತಾಯಿಯ ಮನೆ ಇತ್ತು ಪ್ರತಿವಾರ ಬೆಂಗಳೂರಿಗೆ ಹೋಗಲು ಕಷ್ಟ ಎಂದು ಎರಡು ವಾರಕ್ಕೊಮ್ಮೆ ಹೋಗುತ್ತಿದ್ದರು ಅವರು ಈ ಬೇರೆ ಇನ್ನೊಂದು ಹಾಸ್ಟೆಲ್ ಸೇರಿದ್ದರು ಆದರೆ ಅದು ನಾನ್-ವೆಜ್ ಸಹ ಇರುವುದರಿಂದ ನಾವು ಹೋಗಲು ಇಷ್ಟಪಡಲಿಲ್ಲ.ಮೊದಲು ನಮ್ಮ ಶಾಖೆ ಬಸ್ ನಿಲ್ದಾಣದ ಎದುರಿನ ರಸ್ತೆ ಮಸೀದಿಯ ಎದುರು ಇತ್ತು ಆದರೆ ಜನವರಿ ತಿಂಗಳಿನಲ್ಲಿ ಬಸ್ ನಿಲ್ದಾಣದ ಎದುರು ಮುಖ್ಯರಸ್ತೆಯ ಒಂದು ಹೊಸ ಕಾಂಪ್ಲೆಕ್ಸ್ ನ ೧ ಹಾಗೂ ೨ ನೆಯ ಮಹಡಿಗೆ ಸ್ಥಳಾಂತರ ಗೊಳ್ಳಲಿತ್ತು. ಆ ನಿಟ್ಟಿನಲ್ಲಿ ಪ್ಯಾಕಿಂಗ್ ಮತ್ತು ಸಾಗಣೆ ಕೆಲಸಗಳ ಹೊರೆಯೂ ಇತ್ತು.ಈ ಹಿಂದೆ ಹೊಸದಾಗಿ ಕೆಲಸಕ್ಕೆ ಸೇರುವಾಗ ನಮ್ಮ ಜೊತೆಯ ಬ್ಯಾಚ್ನಲ್ಲಿ ಇದ್ದ ಮುಕುಂದನ್ ಅವರೂ ಸಹ ಉನ್ನತ ದರ್ಜೆ ಸಹಾಯಕರಾಗಿ ಈ ಶಾಖೆಯಲ್ಲೇ ಇದ್ದರು. ವಿಕ್ರಯ ವಿಭಾಗದಲ್ಲಿ ಅವರಿದ್ದುದು. ಅವರ ಪತ್ನಿ ಅಲ್ಲಿನ ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದುದರಿಂದ ಅವರು ಇಲ್ಲಿಗೆ ವರ್ಗಾವಣೆ ತೆಗೆದುಕೊಂಡಿದ್ದರು. ನಮ್ಮ ಹೊಸ ವ್ಯವಹಾರ ವಿಭಾಗಕ್ಕೆ ಸಹಾಯಕ ಆಡಳಿತ ಅಧಿಕಾರಿಯಾಗಿ ಇದ್ದವರು ಮಂಜುನಾಥ್ ಎಂಬವರು ಅವರ ಪತ್ನಿ ನವರತ್ನಮ್ಮ ಅವರು ಸಹ ನಮ್ಮ ನಿಗಮದ ಉದ್ಯೋಗಿ ಅದೇ ಶಾಖೆಯಲ್ಲಿ ಇದ್ದರು. ಇತ್ತೀಚಿಗೆ ಸರ್ವಿಸ್ ನಲ್ಲಿ ಇದ್ದಾಗಲೇ ನವರತ್ನ ಅವರು ನಿಧನ ಹೊಂದಿದ್ದರು. ತುಂಬಾ ಒಳ್ಳೆಯವರು. ಸ್ನೇಹಜೀವಿ ಕೂಡ. ಮೊದಲ ವಾರ ಶನಿವಾರ ಮುಗಿದ ನಂತರವೇ ನಾನು ಸುಲೋಚನಾ ಮೈಸೂರಿಗೆ ವಾಪಸ್ ಆದೆವು. ಆನಂತರ ಒಂದೆರಡು ಮೂರು ದಿನ ರಜಾ ಹಾಕಿ ಮತ್ತೆ ಬರುವುದು ಎಂದು ನಿರ್ಧರಿಸಿದ್ದರಿಂದ ಗುರುವಾರದ ದಿನ ಸಕಲೇಶಪುರಕ್ಕೆ ಹೋಗಿ ಸಂಜೆ ಹಾಸ್ಟೆಲ್ ಗೆ ಹೋದೆವು. ಸಕಲೇಶಪುರದ ಚಂಪಕ ನಗರದಲ್ಲಿ ರೋಟರಿ ಎಕ್ಸ್ಟೆಂಶನ್ ಎಂದು ಅದನ್ನು ಕರೆಯುತ್ತಿದ್ದರು. ಮೊದಲ ದಿನ ಮಾತನಾಡಲು ಹೋದಾಗಲೇ ತಲಾ 600 ಅಡ್ವಾನ್ಸ್ ತೆಗೆದುಕೊಂಡಿದ್ದರು. ಚಿಕ್ಕ ರೂಂ ಒಂದು ಡಬಲ್ ಕಾಟ್ ಹಾಕಿದರೆ ಬೆಳಗ್ಗೆ ಸ್ವಲ್ಪ ಜಾಗ ಉಳಿದಿರುತ್ತಿತ್ತು ಅಷ್ಟೇ, ಮೂರು ಜನ ಆದುದರಿಂದ ಹಾಸಿಗೆಯನ್ನು ಸಹ ನಾವೇ ತೆಗೆದುಕೊಳ್ಳಬೇಕು ಎಂದು ಹೇಳಿದರು. ಇಬ್ಬರು ಮಂಚದ ಮೇಲೆ ಒಬ್ಬರು ನೆಲದ ಮೇಲೆ. ಏಕೋ ವಾತಾವರಣವೇ ಸರಿ ಹೋಗಲಿಲ್ಲ .ಇನ್ನು ಊಟ ತಿಂಡಿ ಆ ದೇವರಿಗೆ ಪ್ರೀತಿ .ಎಲ್ಲಾ ಮಾಡಿ ಡೈನಿಂಗ್ ಟೇಬಲ್ ಮೇಲೆ ಇಟ್ಟುಬಿಡುತ್ತಿದ್ದರು. ನಾವು ತಿನ್ನಲು ಹೋಗುವ ವೇಳೆಗೆ ಆರಿ ಅಕ್ಷತೆ ಆಗಿರುತ್ತಿತ್ತು. ಲೆಕ್ಕಾಚಾರವಾಗಿ ಅಷ್ಟೇ ಇಡುತ್ತಿದ್ದರು ನಮಗೇನು ಆ ರುಚಿ ಗೆ ಹೆಚ್ಚು ಬೇಕಾಗುತ್ತಲೂ ಇರಲಿಲ್ಲ. ಆದರೆ ಒಂದು ತರಹ ಇರಸುಮುರಸು ಮೊದಲ ದಿನದಿಂದಲೇ. ನಾಲ್ಕೈದು ದಿನ ಕಳೆದ ನಂತರ ನಮಗೆ ಇಲ್ಲಿ ಸರಿ ಬರುವುದಿಲ್ಲ ಬೇರೆ ಮನೆ ಮಾಡಿಕೊಳ್ಳುವ ಎಂದು ನಿರ್ಧರಿಸಿದೆವು. ಆಫೀಸಿನಲ್ಲಿ ಎಲ್ಲರಿಗೂ ಮನೆ ನೋಡಲು ಹೇಳಿದೆವು. ಸಂಜೆ ಆಯಿತೆಂದರೆ ಯಾರಾದರೂ ಮನೆ ಖಾಲಿ ಇದೆ ಎಂದು ಹೇಳಿದ ಕಡೆ ಹೋಗುವುದು. ಮನೆ ನೋಡುವುದು .ಆದರೆ ಯಾಕೋ ಯಾವುದೂ ಸರಿ ಹೋಗುತ್ತಿರಲಿಲ್ಲ. ಸರಿ ಹೋದ ಮನೆಗೆ ಸಿಕ್ಕಾಪಟ್ಟೆ ಬಾಡಿಗೆ. ಸಕಲೇಶಪುರ ಬೆಂಗಳೂರಿಗಿಂತಲೂ ದುಬಾರಿ ಎಂದು ನಮಗೆ ಅರಿವಾಗಿದ್ದು ಆಗಲೇ. ಹೋಗಲಿ ಎಂದರೆ ಯಾವುದು ಸರಿ ಹೋಗುತ್ತಲೂ ಇರಲಿಲ್ಲ .ಮೈಸೂರಿನಿಂದಲೇ ಒಂದಷ್ಟು ಪುಡಿಗಳು ಚಟ್ನಿಪುಡಿ ಮೆಂತ್ಯದ ಹಿಟ್ಟು ಅನ್ನದ ಪುಡಿ ತುಪ್ಪ ಮತ್ತು ಉಪ್ಪಿನಕಾಯಿ ತೊಕ್ಕುಗಳನ್ನು ತೆಗೆದುಕೊಂಡು ಹೋಗಿದ್ದರಿಂದ ಹೇಗೋ ಅದನ್ನೇ ಬಳಸಿಕೊಂಡು ಊಟ ಮಾಡುತಿದ್ದೆವು. ಬೆಳಿಗ್ಗೆ ಕಾಫಿಗೆ ಹೋದಾಗ ಎದುರುಗಿನ ಹೋಟೆಲ್ನಲ್ಲಿ ಅಲ್ಲಿನ ಸ್ಪೆಷಾಲಿಟಿ ಕಡುಬು ಮತ್ತು ಅಕ್ಕಿ ರೊಟ್ಟಿ ಒಂದರಲ್ಲಿ ಅರ್ಧ ಮಾಡಿ ತ ತಿನ್ನುತ್ತಿದ್ದುದು. ಸಂಜೆ ಕಚೇರಿ ಮುಗಿದ ನಂತರ ಮನೆ ಹುಡುಕಲು ಯಾರಾದರೂ ಮನೆಗೆ ಹೋದಾಗ ಅಲ್ಲಿ ಕಾಫಿ ಇನ್ನೇನಾದರೂ ಆತಿಥ್ಯ ಆಗುತ್ತಿತ್ತು. ಇಲ್ಲದಿದ್ದರೆ ಸಂಜೆಯ ವೇಳೆಯೂ ಅಲ್ಲಿ ಹೋಗಿ ತಿಂಡಿ ತಿಂದು ಮನೆಗೆ ಹೋಗುತ್ತಿದ್ದುದು.. ಹೋದ ತಕ್ಷಣ ಒಂದರ್ಧ ಲೋಟ ಕಾಫಿ ಕೊಡುತ್ತಿದ್ದರು ಅಷ್ಟೇ. ರಾತ್ರಿಯ ಊಟವೂ ಅಷ್ಟೇ ಬೆಳಗ್ಗೆ ಉಳಿದದ್ದನ್ನು ಹಾಕುತ್ತಿದ್ದು ಎಷ್ಟು ಬಾರಿ ಹೇಳಿದರು ಒಂದು ದಿನವೂ ಬಿಸಿ ಊಟ ತಿಂಡಿ ಹಾಕಲಿಲ್ಲ .ಆ ಡಿಸೆಂಬರ್ ಚಳಿಗೆ ಆ ಊರಿನ ವಾತಾವರಣಕ್ಕೆ ಆರಿದ್ದು ತಿನ್ನುವುದು ತುಂಬಾ ಹಿಂಸೆ ಎನಿಸುತ್ತಿತ್ತು. ಯಾವಾಗ ನಾವು ನಮಗೆ ಬೇರೆ ಮನೆ ಮಾಡುತ್ತೇವಪ್ಪಾ ಅಂತ ಅನ್ನಿಸತೊಡಗಿತ್ತು. ಯಾವುದೇ ಹಾಸ್ಟೆಲ್ ನಲ್ಲಿದ್ದು ಅಭ್ಯಾಸ ಇಲ್ಲದ ನಮಗೆ ಹೊರಗಿನ ಊಟದ ಕಷ್ಟ ಏನೆಂದು ಆಗ ಅರ್ಥವಾಯಿತು. ಅಲ್ಲದೆ ಹೆಚ್ಚು ಕಡಿಮೆ ಮೂರು ಕಿಲೋಮೀಟರ್ ದೂರ ಇತ್ತು ಅದು ನಮ್ಮ ಕಚೇರಿಯಿಂದ. ಹೋಗಿ ಬರುವುದು ಸಹ ಕಷ್ಟವೇ. ಸದ್ಯ ಆಗ ಡಿಸೆಂಬರ್ ನಲ್ಲಿ ಮಳೆ ಇಲ್ಲದಿದ್ದರಿಂದ ಹೇಗೋ ನಡೆಯಿತು ಹಾಗಾಗಿ ಕಚೇರಿಗೆ ಹತ್ತಿರದ ಸ್ಥಳಗಳಲ್ಲಿ ನಾವು ಮನೆ ಹುಡುಕುತ್ತಿದ್ದು. ಕೆಲವು ದೂರದ ಪ್ರದೇಶ ಏರಿಯಾದಲ್ಲಿ ಮನೆ ಸಿಕ್ಕುತ್ತಿದ್ದರು ನಮ್ಮ ಬಳಿ ವಾಹನ ಇಲ್ಲದ್ದರಿಂದ ಅಲ್ಲಿನ ಮಳೆ ಸಮಯದಲ್ಲಿ ಓಡಾಡಲು ಕಷ್ಟ ಎಂದು ಎಲ್ಲರೂ ಹೇಳಿದ್ದರಿಂದ ದೂರದ ಏರಿಯಾಗಳಿಗೆ ಹೋಗಲು ಮನಸ್ಸು ಮಾಡಲಿಲ್ಲ.ಕಡೆಗೆ ಕಚೇರಿಯಿಂದ ಒಂದೇ ಕಿಲೋಮೀಟರ್ ದೂರ ಇದ್ದ ಕುಶಾಲನಗರ ಎಕ್ಸ್ಟೆಂಶನ್ ಎಂಬಲ್ಲಿ ಮಹಡಿಯ ಮೇಲೆ ಒಂದು ಮನೆ ಖಾಲಿ ಇದೆ ಎಂದು ತಿಳಿಯಿತು ರಾಜಮ್ಮ ಎನ್ನುವವರು ಅಲ್ಲಿನ ರಾಜಕೀಯ ಪುಡಾರಿ ಅವರದೇ ಮನೆ. ಕೆಳಗಡೆ ಅವರದೊಂದು ದೊಡ್ಡ ಮನೆ. ಪಕ್ಕದಲ್ಲಿ ಸ್ವಲ್ಪ ಜಾಗ ಅವರ ಮನೆಗೆ ಸೇರಿದಂತೆಯೇ ಮಹಡಿಯ ಮೇಲೆ ಎರಡು ಮನೆಗಳು ಅಲ್ಲಿ ಕೆಳಗಡೆ ಅಟಾಚ್ಡ್ ಬಾತ್ರೂಮ್ ಇರುವಂತಹ ಎರಡು ಕೊಠಡಿಗಳು. ಅಂತಹ ಒಂದು ಕೊಠಡಿಯಲ್ಲಿ ನಮ್ಮದೇ ಆಫೀಸಿನ ಹೊಸ ರೆಕ್ರೂಟ್ಮೆಂಟ್ ಆದ ಆನಂದ್ ಮತ್ತು ಮೋಹನ್ ಎನ್ನುವವರು ಇದ್ದುದರಿಂದ ಅವರ ಮೇಲಿನ ಮನೆ ಖಾಲಿಯಾಗುತ್ತದೆ ಎಂದು ತಿಳಿಸಿದರು. ಹಾಗಾಗಿ ಅಲ್ಲಿ ನೋಡಲು ಹೋದೆವು. ಅವರ ಮನೆಯಲ್ಲಿ ಟೀ ಚೌಚೌ ಆತಿಥ್ಯ ಸ್ವೀಕರಿಸಿ ಮನೆ ನೋಡಲು ಹೋದೆವು. ಒಂದು ರೂಮಿನ ಮನೆ. ಮನೆ ಏನೋ ಚೆನ್ನಾಗಿತ್ತು ಆದರೆ ಅಲ್ಲಿ ಯಾರು
ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-28 ಪದೋನ್ನತಿ ವೃತ್ತಿ ವೃತ್ತಾಂತವೃತ್ತಿ ಬದುಕಿನ ಹಿನ್ನೋಟನೋಟ ~ ೨೮ ೧೯೯೭…….. ಮಕ್ಕಳಾಗಲು ಎಷ್ಟೇ ಚಿಕಿತ್ಸೆ ತೆಗೆದುಕೊಂಡರೂ ಫಲಕಾರಿಯಾಗದೆ ಏಕೋ ತುಂಬಾ ಬೇಸರ. ಹಾರ್ಮೋನ್ ಚಿಕಿತ್ಸೆಯ ಪರಿಣಾಮ ತೂಕದಲ್ಲಿ ಹೆಚ್ಚಳ. ಒಂದು ತರಹ ಖಿನ್ನತೆಗೆ ಒಳಗಾಗುತ್ತಿದ್ದೆ. ವಿಭಾಗೀಯ ಕಛೇರಿಯಲ್ಲಿ ಡಿಪಾರ್ಟ್ಮೆಂಟ್ ಬದಲಾವಣೆಗೆ ಅವಕಾಶವಿರಲಿಲ್ಲ ಆಗ. ಇತ್ತೀಚೆಗೆ ೧೫ ವರ್ಷಗಳಿಂದ ಶಾಖೆಗಳಲ್ಲಿರುವಂತೆ ೩ ವರ್ಷಕ್ಕೊಮ್ಮೆ ಬದಲಾವಣೆ ಇದೆ. ಈಗ ನನ್ನೊಂದಿಗೆ ಸಹಾಯಕರಾಗಿ ರಾಮಚಂದ್ರ ಮತ್ತು ಉನ್ನತದರ್ಜೆ ಸಹಾಯಕರಾಗಿ ಮುರಳಿ ಇದ್ದರು. ಸಹಾಯಕ ವಿಭಾಗಾಧಿಕಾರಿಯಾಗಿ ಶ್ರೀಮತಿ ಪ್ರಮದಾ ಪ್ರಕಾಶ್ ಅವರು ಬೆಂಗಳೂರಿನಿಂದ ಬಂದಿದ್ದರು. ಇದೇ ಮೊದಲು ನಾನು ಮಹಿಳಾ ಅಧಿಕಾರಿಯೊಂದಿಗೆ ಕೆಲಸ ಮಾಡಿದ್ದು. ಸುವರ್ಣ ಅವರಂತೂ ಇದ್ದರು. ತುಂಬಾ ಸೌಹಾರ್ದಕರ ವಾತಾವರಣವಿತ್ತು. ಆ ಸಮಯದಲ್ಲೇ ನನ್ನ ತಂಗಿ ವೈಶಾಲಿಯ ವಿವಾಹವೂ ಜರುಗಿದ್ದು. ಪ್ರಮದಾ ಮೇಡಂ ಅವರು ತುಂಬಾ ತಿಳಿ ಹೇಳಿ ಉನ್ನತ ದರ್ಜೆ ಸಹಾಯಕಿಯಾಗಿ ಬಡ್ತಿ ತೆಗೆದುಕೊಳ್ಳಲು ಪ್ರೇರೇಪಿಸಿದರು. ಸ್ಥಳ ಬದಲಾವಣೆ ಆದರೆ ಚಿಕಿತ್ಸೆಗು ಒಳ್ಳೆಯದು ಎಂದು ಅವರು ಹೇಳಿದ ಮಾತು ನನ್ನಲ್ಲೂ ಒಂದು ಹೊಸ ಆಸೆ ಮೂಡಿಸಿತು. ಹಾಗಾಗಿ ಆ ವರ್ಷ ಉನ್ನತ ದರ್ಜೆ ಸಹಾಯಕರ ಬಡ್ತಿಗಾಗಿ ಕರೆ ಕೊಟ್ಟಾಗ ನಾನು ಸಹ ಅರ್ಜಿ ಕೊಟ್ಟೆ. ನಮ್ಮ ತಂದೆ ಅಂತೂ ಉದ್ಯೋಗದಲ್ಲಿ ಮುಂದೆ ಬರಲಿ ಎಂದು ತುಂಬಾನೇ ಇಷ್ಟಪಡುತ್ತಿದ್ದರು ಹಾಗಾಗಿಯೇ ನನ್ನ ತಂಗಿ ಸಹ ಸಹಾಯಕ ಅಧಿಕಾರಿಯಾಗಿ ಹೋಗಿದ್ದು. ನನಗೂ ಅವರು ಬಡ್ತಿ ತೆಗೆದುಕೊಳ್ಳಲು ಹೇಳಿ ಅದನ್ನು ರವೀಶ್ ಅವರು ಅನುಮೋದಿಸಿದಾಗ ಆಯಿತು ಎಂದುಕೊಂಡಿದ್ದೆ. ಸಾಮಾನ್ಯ ಎಲ್ಲರಿಗೂ ದಿನ ಓಡಾಡುವ ಸ್ಥಳಕ್ಕೆ ಪೋಸ್ಟಿಂಗ್ ಆಗುತ್ತಿತ್ತು . ಒಂದು ಅಥವಾ ಎರಡು ವರ್ಷ ಹೀಗೆ ಓಡಾಡಿದ ನಂತರ ಮೈಸೂರಿಗೆ ವಾಪಸ್ ಬರಬಹುದಿತ್ತು. ಆದರೂ ಕೆಲವು ಗೆಳತಿಯರು ಆರಾಮವಾಗಿ ಮೈಸೂರಿನಲ್ಲಿ ಇರುವುದನ್ನು ಬಿಟ್ಟು ಓಡಾಡುವ ತೊಂದರೆ ತೆಗೆದುಕೊಳ್ಳುವುದು ಏಕೆ ಎಂದು ಸಹ ಕೇಳಿದ್ದರು. ಆದರೂ ಬದಲಾವಣೆಗೆ ಏನೋ ಒಂದು ರೀತಿಯ ತುಡಿತ ಏಕತಾನತೆಯಿಂದ ದೂರ ಹೋಗುವ ಆಸೆ ನನ್ನನ್ನು ಪದೋನ್ನತಿಗೆ ಪ್ರಯತ್ನಿಸುವ ಹಾಗೆ ಮಾಡಿತು. ಇದಕ್ಕೂ ಒಂದು ಪ್ರವೇಶ ಪರೀಕ್ಷೆ ಇರುತ್ತದೆ. ಆದರೆ ಅಸೋಸಿಯೇಟ್ ಪರೀಕ್ಷೆ ಪಾಸಾದವರಿಗೆ ಪ್ರವೇಶ ಪರೀಕ್ಷೆಯಿಂದ ರಿಯಾಯಿತಿ. ಆ ವೇಳೆಗೆ ನನ್ನದು ಅಸೋಸಿಯೇಟ್ ಆಗಿದ್ದರಿಂದ ನಾನು ನೇರ ಸಂದರ್ಶನಕ್ಕೆ ಅರ್ಹಳಾಗಿದ್ದೆ. ಎಂದಿನಂತೆ ಆ ಸಂದರ್ಶನಕ್ಕೆ ನಮ್ಮ ಹೊಸ ವ್ಯವಹಾರ ವಿಭಾಗದಿಂದ ಕೇಳಬಹುದಾದ ಸಂಭವನೀಯ ಪ್ರಶ್ನೆಗಳ ಪಟ್ಟಿ ನಾನೇ ತಯಾರು ಮಾಡಿ ಕೊಟ್ಟಿದ್ದೆ. ಆ ಬಾರಿ ಸಂದರ್ಶನ ಸಮಿತಿಯಲ್ಲಿ ನಮ್ಮ ಹೊಸ ವ್ಯವಹಾರ ವಿಭಾಗದ ಆಡಳಿತ ಅಧಿಕಾರಿಯಾಗಿದ್ದ ಶ್ರೀ ಟಿ ಎಂ ಪರಶಿವಮೂರ್ತಿ ಅವರು ಹಾಗೂ ಪಕ್ಕದಲ್ಲಿ ಇದ್ದ ಯೋಜನಾ ವಿಭಾಗದ ಸಹಾಯಕ ವಿಭಾಗ ಅಧಿಕಾರಿಯಾದ ಶ್ರೀ ಅಶ್ವತ್ಥ ನಾರಾಯಣಾಚಾರ್ ಅವರು ಇದ್ದರು. ನಂಜನಗೂಡಿನಲ್ಲಿ ನಾನು ಕಾರ್ಯನಿರ್ವಹಿಸುತ್ತಿರುವಾಗ ಅಶ್ವತ್ಥನಾರಾಯಣಾಚಾರ್ ಅವರೇ ನಮ್ಮ ಶಾಖಾಧಿಕಾರಿ ಆಗಿದ್ದರು . ಆ ಸಮಿತಿಯ ಅಧ್ಯಕ್ಷರಾಗಿ ಗೃಹ ಸಾಲ ವಿಭಾಗದ ಶ್ರೀ ನಾಗರಾಜ್ ಅವರು ನಿಯುಕ್ತರಾಗಿದ್ದರು. ವಿಭಾಗಿಯ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಒಂದು ಅನುಕೂಲವೆಂದರೆ ಸಂದರ್ಶನ ಸಮಿತಿಯ ಎಲ್ಲರೂ ನಮಗೆ ತಿಳಿದವರಾಗಿ ಜೊತೆಯಲ್ಲಿ ಕೆಲಸ ಮಾಡಿದವರಾಗಿದ್ದರಿಂದ ಸಂದರ್ಶನ ಎಂದರೆ ಒಂದು ವಿಶೇಷ ಭಯ ಇರುವುದಿಲ್ಲ. ಸಂದರ್ಶನದ ಸ್ವಲ್ಪ ದಿನ ಮುಂಚೆ ಒಂದು ಹೊಸ ಚೂಡಿದಾರ್ ಕೊಂಡಿದ್ದೆ .ಅದನ್ನೇ ಸಂದರ್ಶನಕ್ಕೆ ಹಾಕಿಕೊಂಡು ಹೋಗುವುದು ಎಂದು ನಿರ್ಧರಿಸಿದೆ. ನನಗೆ ಇಷ್ಟವಾದ ಬೂದಿ ಬಣ್ಣದ ಡ್ರೆಸ್ ಅದು. ಸಂದರ್ಶನದ ಕೊಠಡಿ ಒಳಗೆ ಪ್ರವೇಶಿಸಿ ಅವರುಗಳಿಗೆ ವಂದಿಸಿ ಕುರ್ಚಿಯಲ್ಲಿ ಕುಳಿತಿದ್ದಾಯಿತು. ಪರಶಿವಮೂರ್ತಿಯವರು ನಗುನಗುತ್ತಲೆ ಏನ್ರೀ ಕೇಳೋದು ನಿಮ್ಮನ್ನ ನೀವೇ ತಯಾರು ಮಾಡಿ ಕೊಟ್ಟಿರುವುದು ಈ ಪಟ್ಟಿ ಎಂದರು. ನಂತರ ನಮ್ಮ ಹೊಸ ವ್ಯವಹಾರ ವಿಭಾಗದಲ್ಲಿ ಅವರು ಹೊಸಬರಾಗಿದ್ದಾಗ ಅವರಿಗೆ ಅಲ್ಲಿನ ಕೆಲಸ ನಾನೇ ಹೇಳಿಕೊಟ್ಟಿದ್ದು. ಹಾಗಾಗಿ ಏನು ಕೇಳಲಿ ಎಂದು ತಮಾಷೆ ಮಾಡಿದ್ದರು. ಅಶ್ವಥನಾರಾಯಣಚಾರ್ ಅವರು ಸಹ ಒಂದೆರಡು ಔಪಚಾರಿಕ ಪ್ರಶ್ನೆಗಳನ್ನು ಕೇಳಿದರು ಅಷ್ಟೇ. ನಾಗರಾಜ ಅವರು ಪಾಲಿಸಿ ಸರ್ವಿಸ್ ಗೆ ಸಂಬಂಧಿಸಿದಂತೆ ಒಂದೆರಡು ಪ್ರಶ್ನೆಗಳನ್ನು ಕೇಳಿದರು. ನನಗೆ ನೆನಪಿರುವುದು ಕಚೇರಿಯಲ್ಲೇ ಪಾಲಿಸಿ ಬಾಂಡ್ ಕಳೆದು ಹೋದಾಗ ಅದರ ತಯಾರಿಕೆಗಾಗಿ ಪಾಲಿಸಿದಾರರಿಂದ ವಸೂಲು ಮಾಡಬೇಕಾದ ಹಣ ಎಷ್ಟು ಎಂದು. ಕಚೇರಿಯಲ್ಲಿ ನಾವೇ ಪಾಲಿಸಿ ಕಳೆದು ಹಾಕಿದಾಗ ನಮ್ಮ ಖರ್ಚಿನಲ್ಲೇ ನಕಲು ಪ್ರತಿಯನ್ನು ತಯಾರು ಮಾಡಬೇಕು ಅದಕ್ಕಾಗಿ ಒಂದು ಆಫೀಸ್ ನೋಟ್ ತಯಾರು ಮಾಡಬೇಕು. ಪಾಲಿಸಿದಾರರಿಂದ ಯಾವ ಹಣವನ್ನು ಪಡೆಯುವಂತಿಲ್ಲ ಎಂದು ಹೇಳಿದ್ದಕ್ಕೆ ಅವರು ತಲೆಯಾಡಿಸಿದರು ಅಷ್ಟೇ. 10 ನಿಮಿಷಗಳಲ್ಲಿ ನನ್ನ ಸಂದರ್ಶನ ಮುಗಿದು ಹೋಗಿತ್ತು ನಮ್ಮ ವಿಭಾಗದ ಎದುರುಗಡೆಯ ಕೊಠಡಿಯಲ್ಲಿ ಸಂದರ್ಶನ ನಡೆದದ್ದು ಹಾಗಾಗಿ ಬಂದವರು ಎಲ್ಲ ನನ್ನ ಸೀಟಿನ ಬಳಿ ಕುಳಿತಿರುತ್ತಿದ್ದರು. ಕೆಲವರನ್ನಂತೂ ಬಹಳ ಪ್ರಶ್ನೆ ಕೇಳಿದ್ದರು ಎಂದು ತಿಳಿಯಿತು. ಹೀಗೆ ಪದೋನ್ನತಿಗೆ ಆಯ್ಕೆ ಮಾಡುವಾಗ ನಾವು ಮಾಡಿದ ಸೇವಾ ಅವಧಿ ಹಾಗೂ ನಮಗೆ ಪ್ರತಿ ವರ್ಷ ಕೊಡುವ ನಮ್ಮ ಸಿ ಅರ್ ಅಂದರೆ ನಮ್ಮ ಕೆಲಸದ ಬಗೆಗಿನ ವಾರ್ಷಿಕ ವರದಿ ಮತ್ತು ಸಂದರ್ಶನದಲ್ಲಿ ನಾವು ಕಳಿಸಿದ ಅಂಕ ಇವೆಲ್ಲವುಗಳನ್ನು ಆಧರಿಸಿ ಅಂಕೆಗಳನ್ನು ಕೊಡುತ್ತಾರೆ. ನಮ್ಮ ಜೀವ ವಿಮಾ ನಿಗಮದ ಒಂದು ಅಲಿಖಿತ ನಿಯಮದಂತೆ ಅಂದು ಶನಿವಾರ ಮಧ್ಯಾಹ್ನ ಫಲಿತಾಂಶ ಹೊರಬಿದ್ದಿತ್ತು. ಅರ್ಹತೆವಾರು ಪಟ್ಟಿಯಲ್ಲಿ ನನ್ನದು ಮೊದಲ ಹೆಸರು. ಇಷ್ಟೆಲ್ಲಾ ಆದರೂ ಒಂದು ರೀತಿಯ ಸಂಧಿಗ್ಧ. ಹೋಗುವುದು ಬೇಡವೋ ಎಂದು. ನೋಡೋಣ ಎಲ್ಲಿಗೆ ಪೋಸ್ಟಿಂಗ್ ಸಿಕ್ಕತ್ತೆ ಅದರ ಮೇಲೆ ನಿರ್ಧರಿಸೋಣ ಎಂದುಕೊಂಡಿದ್ದು. ನಾನು ಆಯ್ಕೆ ಮಾಡಿ ಕೊಟ್ಟಿದ್ದ ಸ್ಥಳಗಳು ಕೆ ಆರ್ ನಗರ ಹುಣಸೂರು ಮತ್ತು ಚಾಮರಾಜನಗರ ಆದರೆ ನನ್ನ ಜೊತೆ ಆಯ್ಕೆಯಾದವರು ನನಗಿಂತ ವಯಸ್ಸಿನಲ್ಲಿ ಸೀನಿಯರ್ ಆಗಿದ್ದರಿಂದ ದಿನವು ಓಡಾಡಬಹುದಾದ ಈ ಸ್ಥಳಗಳು ಸಹ ನನಗೆ ಸಿಗುವ ಸಾಧ್ಯತೆ ಇರಲಿಲ್ಲ. ಆ ಪಟ್ಟಿ ಬಿಟ್ಟರೆ ಮುಂದೆ ಒಂದು ಕಂಟಿನ್ಜೆನ್ಸಿ ಪಟ್ಟಿಯಲ್ಲಿ ಕೆ ಆರ್ ಪೇಟೆ ಸಿಗುವ ಸಾಧ್ಯತೆ ಇತ್ತು. ದಿನವೂ ಓಡಾಡಬಹುದಾದರು ಹೆಚ್ಚು ಬಸ್ಸುಗಳು ಇರಲಿಲ್ಲ ಮತ್ತು ರಸ್ತೆ ಸಹ ತುಂಬಾ ಕೆಟ್ಟದಾಗಿ ಇತ್ತು . ನಂಜನಗೂಡಿನಲ್ಲಿ ನನ್ನೊಂದಿಗೆ ಕೆಲಸ ಮಾಡುತ್ತಿದ್ದ ಸುಲೋಚನಾ ಅವರಿಗೂ ಪದೋನ್ನತಿ ಸಿಕ್ಕಿದ್ದು ಅವರು ಸಹ ಪೋಸ್ಟಿಂಗ್ ವಿಷಯದಲ್ಲಿ ಸಂದಿಗ್ಧದಲ್ಲಿ ಇದ್ದರು ನಮ್ಮ ಆಡಳಿತ ಅಧಿಕಾರಿಯಾಗಿದ್ದ ಟಿ ಎಂ ಪರಶಿವಮೂರ್ತಿ ಅವರು ಸುಲೋಚನಾ ಅವರಿಗೆ ಬಹಳ ಆಪ್ತರು ಅವರು ನಮ್ಮಿಬ್ಬರ ಜೊತೆ ಮಾತನಾಡಿ ನಿಮ್ಮಿಬ್ಬರ ಸ್ವಭಾವ ತುಂಬಾ ಚೆನ್ನಾಗಿ ಹೊಂದುತ್ತದೆ ಇಬ್ಬರು ಮಾತನಾಡಿಕೊಂಡು ಒಂದೇ ಕಡೆಗೆ ಪೋಸ್ಟಿಂಗ್ ತೆಗೆದುಕೊಳ್ಳಿ ಒಂದು ವರ್ಷ ಒಟ್ಟಿಗೆ ಇದ್ದು ನಂತರ ವಾಪಸ್ ಬರಬಹುದು ಎಂದರು. ರವೀಶ್ ಮತ್ತು ನನ್ನ ತಂದೆ ಸಹ ದಿನ ಓಡಾಡಿ ಕಷ್ಟಪಡುವುದರ ಬದಲು ಇದು ಒಳ್ಳೆಯ ಸಲಹೆ ಎಂದಾಗ ಸಂಬಂಧ ಪಟ್ಟವರೊಡನೆ ಮಾತನಾಡಿದಾಗ ಇಬ್ಬರನ್ನು ಒಟ್ಟಿಗೆ ಸಕಲೇಶಪುರಕ್ಕೆ ಪೋಸ್ಟಿಂಗ್ ಮಾಡಿದರು. ಈಗಾಗಲೇ ಮೊದಲ ವರ್ಷಗಳಲ್ಲಿ ಹೋದವರು ಅಲ್ಲಿ ಒಂದು ಪ್ಲೇಯಿಂಗ್ ಗೆಸ್ಟ್ ಮನೆಯಲ್ಲಿ ಇದ್ದರು ಎಂಬ ವಿಷಯ ತಿಳಿದು ಹೋಗೋಣ ಎಂದು ನಾನು ಸುಲೋಚನಾ ನಿರ್ಧರಿಸಿದೆವು.ರವೀಶ್ ಅವರ ಊರಿನ ಕೆಲವರು ಆಗ ಸಕಲೇಶಪುರದಲ್ಲೇ ಇದ್ದುದರಿಂದ ಅವರ ಸಹಾಯ ಪಡೆಯಬಹುದು ಎಂಬ ಒಂದು ನಂಬಿಕೆಯು ಇತ್ತು.ಸರಿ ಹೋಗುವುದು ನಿರ್ಧಾರವಾಗಿ ವಿಭಾಗಿಯ ಕಚೇರಿಯ ಎಲ್ಲರಿಗೂ ಸಿಹಿ ಹಂಚಿದ್ದು ಆಯಿತು ನಮ್ಮ ವಿಭಾಗದವರು ಮತ್ತು ನನಗೆ ಆಪ್ತರಾಗಿದ್ದ ಸರಸ್ವತಿ ಕಮಲ ಮತ್ತು ಸುಮಾ ಇವರುಗಳನ್ನು ಕರೆದುಕೊಂಡು ಹೋಗಿ ಫಾರಸ್ ಹೋಟೆಲಿನಲ್ಲಿ ಪಾರ್ಟಿ ಕೊಡಿಸಿದ್ದು ಆಯಿತು. ಸುಮಾ ಮತ್ತು ಕಮಲ ಒಂದು ಚೆಂದದ ವ್ಯಾನಿಟಿ ಬ್ಯಾಗ್ ಅನ್ನು ನಮಗೆ ಗಿಫ್ಟ್ ಆಗಿ ನೀಡಿದರು. ನಮ್ಮ ಹೊಸ ವ್ಯವಹಾರ ವಿಭಾಗದವರು ಸೇರಿಕೊಂಡು ಒಂದು ಸೂಟ್ಕೇಸ್ ಉಡುಗೊರೆ ನೀಡಿದರು. ನಾನು ತುಂಬಾ ಅಮೃತಾಂಜನ್ ಅಥವಾ ಜಂಡು ಬಾಮನ್ನು ಹಣೆಗೆ ಹಚ್ಚಿಕೊಳ್ಳುತ್ತಲೇ ಇರುತ್ತಿದ್ದೆ .ಅದಕ್ಕೆ ಮುರಳಿಯವರು ರೇಗಿಸಿ ಇಲ್ಲಿಯೇ ಇಷ್ಟೊಂದು ಬಳಸುತ್ತೀರಿ . ಇನ್ನು ಆ ಥಂಡಿ ಪ್ರದೇಶದಲ್ಲಿ ಎಷ್ಟೊಂದು ಬೇಕಾಗುತ್ತದೆ. ಒಂದು ಡಝನ್ ಗಿಫ್ಟ್ ಕೊಡೋಣವಾ ಅಂತ ರೇಗಿಸಿದ್ದರು. ಅಂತೂ ಏಳು ವರ್ಷಗಳಿಂದ ಇದ್ದ ವಿಭಾಗೀಯ ಕಚೇರಿಯನ್ನು ಬಿಡಲು ತುಂಬಾನೇ ಬೇಸರ ಅನಿಸಿತು. ಆದರೂ ಹೊಸ ಜಾಗ ಹೊಸ ಸವಾಲುಗಳು ಒಂದು ರೀತಿಯ ಥ್ರಿಲ್ ಎಂದು ಕೂಡ ಎದುರು ನೋಡುತ್ತಿದ್ದೆ. ಸುಜಾತಾ ರವೀಶ್
ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-23 ಗಲಭೆಗಳು ಬಂದ್ಗಳು ಇತ್ಯಾದಿ ವೃತ್ತಿ ವೃತ್ತಾಂತವೃತ್ತಿ ಬದುಕಿನ ಹಿನ್ನೋಟನೋಟ ~ ೨೩ ನಾವು ವಿಭಾಗಿಯ ಕಚೇರಿಗೆ ವರ್ಗವಾಗಿ ಬಂದ ಸಮಯವೇ ಸರಿ ಇರಲಿಲ್ಲವೋ ಏನೋ ಡಿಸೆಂಬರ್ ೧೯೯೧ಲ್ ರಲ್ಲಿ ಕಾವೇರಿ ವಿವಾದ ಆರಂಭವಾಯಿತು. ಇಡೀ ತಿಂಗಳು ಗಲಭೆ . ಕನ್ನಡ ಚಳುವಳಿಯ ಜನಗಳು ಆಫೀಸಿಗೆ ನುಗ್ಗಿ ಕಚೇರಿಯನ್ನು ಬಂದ್ ಮಾಡಿಸುತ್ತಿದ್ದರು. ಸರಿ ನಂತರ ಅಲ್ಲಿಂದ ಮತ್ತೆ ಮನೆಯ ಕಡೆ ಪಯಣ. ಅಷ್ಟು ಹೊತ್ತಿಗೆ ಬಸ್ ಗಳ ಓಡಾಟ ನಿಂತು ಹೋಗಿರುತ್ತಿತ್ತು .ಆಟೋಗಳು ವಿಪರೀತ ದುಡ್ಡು ಕೇಳುತ್ತಿದ್ದರು. ಆದರೂ ಹೆಚ್ಚು ಜನರನ್ನು ಕೂಡಿಸಿಕೊಂಡು ಹೋಗುತ್ತಿದ್ದುದರಿಂದ ಎಲ್ಲರೂ ಸೇರುವ ಒಂದು ಕಾಮನ್ ಪ್ಲೇಸ್ ತನಕ ಆಟೋದಲ್ಲಿ ಬಂದು ಅಲ್ಲಿಂದ ಮುಂದೆ ನಟರಾಜ ಸರ್ವಿಸ್. ಒಂದು ರೀತಿಯ ಶಿಕ್ಷೆಯೇ ಸರಿ. ಆದರೆ ಆಫೀಸಿಗೆ ಬಂದು ಹಾಜರಾತಿಗೆ ಸಹಿ ಹಾಕದಿದ್ದಲ್ಲಿ ಅಂದು ಬಂದ್ ಇದ್ದರೂ ಸಹ ರಜೆ ಕೊಡಬೇಕಿತ್ತು . ಹೆಚ್ಚು ರಜೆಗಳು ಇರುತ್ತಿರಲ್ಲವಾದ್ದರಿಂದ ಕಷ್ಟಪಟ್ಟು ಹೇಗಾದರೂ ಬಂದು ಆಫೀಸ್ ಬಂದ್ ಆದ ನಂತರ ವಾಪಸ್ ಹೋಗುತ್ತಿದ್ದೆವು. ನಮ್ಮ ವಿಭಾಗೀಯ ಕಚೇರಿ ಹಾಗೂ ಶಾಖೆ ಎರಡು ಎರಡೂ ನಗರದ ಹೃದಯ ಭಾಗದಲ್ಲಿ ಇದ್ದುದರಿಂದ ಯಾವುದೇ ಒಂದು ಗಲಭೆ ಆದರೂ ಶಾಖೆಗಳು ಮುಚ್ಚುತ್ತಿದ್ದುದು ಗ್ಯಾರಂಟಿ. ಮುಖ್ಯವಾಗಿ ಡಿಸೆಂಬರ್ 1991ರಲ್ಲಿ ಮೈಸೂರು ಸೇರಿದಂತೆ ದಕ್ಷಿಣ ಕರ್ನಾಟಕದಾದ್ಯಂತ ತೀವ್ರವಾಗಿ ಭುಗಿಲೆದ್ದವು, ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಆದೇಶಗಳ ವಿರುದ್ಧ ನಡೆದ ಪ್ರತಿಭಟನೆಗಳಿಂದ ಪ್ರಾರಂಭವಾಗಿ, ತಮಿಳರ ಮೇಲೆ ಹಿಂಸಾಚಾರ, ಆಸ್ತಿಪಾಸ್ತಿ ಹಾನಿ ಮತ್ತು ತಮಿಳರು ರಾಜ್ಯ ತೊರೆಯುವ ಪರಿಸ್ಥಿತಿಗೆ ಕಾರಣವಾಯಿತು, ಇದು ರಾಜ್ಯದ ಇತಿಹಾಸದ worst riots ಎಂದು ಕರೆಯಲ್ಪಟ್ಟಿತು. ಗಲಾಟೆಗಳಿಗೆ ಕಾರಣ ಕಾವೇರಿ ನ್ಯಾಯಮಂಡಳಿ ಆದೇಶ. ಭಾರತ ಸರ್ಕಾರ ನೇಮಿಸಿದ ಕಾವೇರಿ ಜಲ ವಿವಾದ ನ್ಯಾಯಮಂಡಳಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಆದೇಶಿಸಿತ್ತು, ಇದನ್ನು ವಿರೋಧಿಸಿ ಕರ್ನಾಟಕದಲ್ಲಿ ಪ್ರತಿಭಟನೆಗಳು ತೀವ್ರಗೊಂಡವು.ನ್ಯಾಯಮಂಡಳಿಯ ಆದೇಶದಂತೆ ನೀರು ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರ ನಿರಾಕರಿಸಿದಾಗ ಪ್ರತಿಭಟನೆಗಳು ಹಿಂಸೆಗೆ ತಿರುಗಿದವು.ಮೈಸೂರು, ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ನಗರಗಳಲ್ಲಿ ತಮಿಳರ ಮೇಲೆ ಗುಂಪುಗಳ ದಾಳಿಗಳು ನಡೆದವು. ತಮಿಳು ಪತ್ರಿಕೆಗಳ ಕಚೇರಿಗಳಿಗೆ ಬೆಂಕಿ ಹಚ್ಚುವುದು ಸೇರಿದಂತೆ ದೊಡ್ಡ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಯಿತು.ಸಾವಿರಾರು ತಮಿಳು ಕುಟುಂಬಗಳು ಭಯದಿಂದ ಕರ್ನಾಟಕವನ್ನು ತೊರೆದರು.ಕನ್ನಡಪರ ಸಂಘಟನೆಗಳು ಕರೆ ನೀಡಿದ ಬಂದ್ ಪ್ರತಿಭಟನೆಗಳು ಹಿಂಸಾಚಾರಕ್ಕೆ ಕಾರಣವಾದವು. ಪೊಲೀಸರ ಗುಂಡೇಟು ಸೇರಿದಂತೆ ಹಲವು ಸಾವುಗಳು ಸಂಭವಿಸಿದವು (ಅಂದಾಜು 28 ಜನರು ಮೈಸೂರಿನಲ್ಲಿ).ರಾಜ್ಯಾದ್ಯಂತ ಶಿಕ್ಷಣ ಸಂಸ್ಥೆಗಳನ್ನು ಸುಮಾರು ಒಂದು ತಿಂಗಳ ಕಾಲ ಮುಚ್ಚಬೇಕಾಯಿತು.ಆರ್ಥಿಕ ನಷ್ಟ: ಆಸ್ತಿಪಾಸ್ತಿ ನಷ್ಟ ಅಂದಾಜು 19 ಕೋಟಿ ರೂ. ಇತ್ತು.ಈ ಗಲಾಟೆಗಳು ಕಾವೇರಿ ವಿವಾದದ ಉದ್ವಿಗ್ನತೆಯನ್ನು ಮತ್ತು ಕನ್ನಡಿಗರು ಹಾಗೂ ತಮಿಳರ ನಡುವಿನ ಸಂಬಂಧದಲ್ಲಿ ಉಂಟಾಗಿದ್ದ ಉದ್ವಿಗ್ನತೆಯನ್ನು ತೋರಿಸಿಕೊಟ್ಟವು. ನಮಗೂ ಆ ಡಿಸೆಂಬರ್ ತಿಂಗಳಲ್ಲೇ 6 _ 7 ದಿನ ಕಚೇರಿಗಳನ್ನು ಮುಚ್ಚಿಸಿದ್ದರು. ನಂತರದ 1993 ಡಿಸೆಂಬರ್ ನಲ್ಲಿ ಬಾಬರಿ ಮಸೀದಿ ಪ್ರಕರಣ ಸಂಬಂಧ ಮೈಸೂರಿನಲ್ಲಿ ಕೋಮು ಗಲಭೆಗಳು ಆರಂಭವಾದವು ನಮ್ಮ ಕಚೇರಿಗಳಿದ್ದ ನಜರ್ಬಾದ್ ಏರಿಯಾ ಸೂಕ್ಷ್ಮ ಪ್ರದೇಶ ಎಂಬ ಹೆಸರು ಪಡೆದಿತ್ತು. ಅಲ್ಲಿ ಮುಸ್ಲಿಂ ಸಮುದಾಯವು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿತ್ತು ಹೆಚ್ಚು ಕಡಿಮೆ 27 ದಿನ ಕರ್ಫ್ಯೂ ಜಾರಿಯಲ್ಲಿತ್ತು. ಕರ್ಫ್ಯೂ ಹಾಕಿದ ವಿಷಯ ಮೊದಲೇ ಗೊತ್ತಿದ್ದ ಸಮಯದಲ್ಲಿ ಶಾಖೆಗೆ ಹೋಗುತ್ತಲೇ ಇರಲಿಲ್ಲ. ಕೆಲವೊಮ್ಮೆ ಕರ್ಫ್ಯೂ ಮುಂದುವರಿಸಿದ ವಿಷಯ ತಿಳಿಯದೆ ನಮ್ಮ ಏರಿಯಾಗಳ ಕಡೆ ಕರ್ಫ್ಯೂ ಜಾರಿಯಲ್ಲಿ ಇಲ್ಲದೆ ಇದ್ದಾಗ ಬಸ್ ಗಳು ಸಹ ಓಡಾಡುತ್ತಿದ್ದುದರಿಂದ ಶಾಖೆಗೆ ಹೋಗುತ್ತಿದ್ದೆವು. ದಾರಿಯಲ್ಲೇ ಪೊಲೀಸರು ತಡೆದು ಬೈದು ವಾಪಸ್ಸು ಕಳಿಸುತ್ತಿದ್ದರು ಅಲ್ಲದೆ ಒಂದು ರೀತಿಯ ಭಯ ಮಿಶ್ರಿತ ವಾತಾವರಣ. ಕೋಮುಗಲಭೆ ಅಂದರೆ ಹಾಗೆಯೇ. ಆಗ ಇಡೀ ಮೈಸೂರು ಪ್ರಕ್ಷುಬ್ಧ. ಹೊರಗೆ ಓಡಾಡಲು ಭಯ ಉಂಟಾಗುವ ಪರಿಸ್ಥಿತಿ. ಆ ಬಾರಿ ಎಂದು ಅರೆ ಮಿಲಿಟರಿ ಹಾಗೂ ಮಿಲಿಟರಿ ಪಡೆಗಳನ್ನು ಸಹ ಕರೆಸಿಬಿಟ್ಟಿದ್ದರಿಂದ ಓಡಾಡುವ ದಾರಿಯಲ್ಲಿ ಸೈನಿಕರನ್ನು ಕಾಣುವಂತೆ ಆಗಿತ್ತು .ಇದು ಅಪರೂಪದ ಸಂಗತಿ ಆದ್ದರಿಂದ ಅವರ ಕಡೆ ಭಯದಿಂದಲೇ ನೋಡಿಕೊಂಡು ಹೋಗಬೇಕಾಗಿತ್ತು. ನನಗೆ ಇನ್ನೂ ಚೆನ್ನಾಗಿ ನೆನಪಿದೆ ಡಿಸೆಂಬರ್ 6 ನಮ್ಮ ತಾಯಿಯ ಹುಟ್ಟುಹಬ್ಬ .ಅಂದು ಸಂಜೆ ಅದಕ್ಕಾಗಿಯೇ ಜಾಮೂನ್ ಮತ್ತು ಸಿಹಿ ಅಡಿಗೆ ಮಾಡಿದ್ದರು ಟಿವಿ ನೋಡುತ್ತಾ ಊಟ ಮಾಡುವಾಗ ಬಾಬರಿ ಮಸೀದಿ ಧ್ವಂಸದ ದೃಶ್ಯಗಳನ್ನು ನೋಡುತ್ತಾ ಊಟ ಮಾಡಿದೆವು .ಆದರೆ ಮಾರನೆಯ ದಿನದಿಂದ ಮೈಸೂರಿನಲ್ಲಿ ನಡೆದ ಆ ಹಿಂಸಾಚಾರ ಮತ್ತು ಭಯದ ವಾತಾವರಣ ನೆನೆಸಿಕೊಂಡಾಗ ಈಗಲೂ ಮನಸ್ಸಿಗೆ ಒಂದು ರೀತಿಯ ಕಸಿವಿಸಿ ಉಂಟಾಗುತ್ತದೆ. ಆಗ ನಮ್ಮ ಬಳಿ ದ್ವಿಚಕ್ರ ವಾಹನಗಳು ಇಲ್ಲದಿದ್ದರಿಂದ ಬಸ್ ನಲ್ಲಿಯೇ ಓಡಾಟ ಹೋಗುತ್ತಾ ಬಸ್ ಸಿಕ್ಕಿದರು ಬರುವ ವೇಳೆಗೆ ಬಸ್ ಓಡಾಟ ನಿಂತು ಹೋಗಿರುತ್ತಿತ್ತು ಹಾಗಾಗಿ ಹೆಚ್ಚಿನ ಅಂಶ ನಡೆದೆ ಮನೆ ಸೇರುತ್ತಿದ್ದೆವು. ಆ ದಿಕ್ಕಿನಲ್ಲಿ ಹೋಗುವ ಎಲ್ಲರೂ ಒಟ್ಟಾಗಿ ನಡೆಯುವುದು ಅಂದಿನ ದಿನಗಳ ಸಾಮಾನ್ಯ ಪದ್ಧತಿಯಾಗಿ ಹೋಗಿತ್ತು. ಈ ನಡೆಯುವ ಕಷ್ಟಕ್ಕಾಗಿಯೇ ಬಂದಾದರೂ ಕಚೇರಿ ಬಂದ್ ಆಗುವುದು ಬೇಡಪ್ಪ ಎನ್ನಿಸಿ ಬಿಡುತ್ತಿತ್ತು ಮುಂದೆ ನಮ್ಮದೇ ದ್ವಿಚಕ್ರವಾಹನಗಳಲ್ಲಿ ಹೋಗುವಾಗ ರಜೆ ಸಿಕ್ಕಿದ ಖುಷಿ ಇರುತ್ತಿತ್ತು. ಇನ್ನು ಕಚೇರಿಯ ಕೆಲಸದ ವಿಷಯಕ್ಕೆ ಬಂದರೆ ನನ್ನ ಜೊತೆ ಸಹಾಯಕರಾಗಿದ್ದ ರಾಮನ್ ಅವರು ಉನ್ನತ ದರ್ಜೆ ಸಹಾಯಕರಾಗಿ ಪದೋನ್ನತಿ ಹೊಂದಿ ವರ್ಗವಾಗಿ ಹೋದರು ಈ ಹಿಂದೆ ಹೇಳಿದಂತೆ ವಿದ್ಯಾರಣ್ಯ ಅವರು ಹೋದಾಗಿನಿಂದ ನಮ್ಮ ವಿಭಾಗದಲ್ಲಿ ಉನ್ನತ ಶ್ರೇಣಿ ಸಹಾಯಕರು ಇರಲಿಲ್ಲ ಈಗ ಸತ್ಯನಾರಾಯಣ ಎನ್ನುವವರು ಸೋಮವಾರಪೇಟೆಯಿಂದ ವರ್ಗವಾಗಿ ಬಂದರು ಅಲ್ಲದೆ ರಾಮನ್ ಅವರ ಜಾಗಕ್ಕೆ ಸುಧಾ ಎನ್ನುವವರು ಸಿಎ ಬ್ರಾಂಚ್ ನಿಂದ ವರ್ಗವಾಗಿ ಬಂದರು. ಈ ವೇಳೆಗಾಗಲೇ ಎಸ್ಎಂಎಸ್ ಗೋಪಾಲನ್ ಅವರು ನನಗೆ ಒಳ್ಳೆಯ ಮಾರ್ಗದರ್ಶನ ನೀಡಿ ಚೆನ್ನಾಗಿ ತರಬೇತಿ ಕೊಟ್ಟುಬಿಟ್ಟಿದ್ದರು. ಒಳ್ಳೆ ಶಾಲೆಯ ಪರೀಕ್ಷೆಗೆ ಓದುವಂತೆ ಇಲಾಖೆಯ ಸುತ್ತೋಲೆಗಳನ್ನು ಚೆನ್ನಾಗಿ ಮನನ ಮಾಡಿಕೊಂಡಿರುತ್ತಿದ್ದೆ. ಹಾಗೆಲ್ಲ ಹೊಸ ಹೊಸ ಪ್ಲಾನ್ ಗಳು ಬಂದಾಗ ವಲಯ ಕಛೇರಿಯಿಂದ ಸುತ್ತೋಲೆಗಳು ಬರುತ್ತಿದ್ದವು ಹಾಗೆ ವಿಭಾಗಕ್ಕೆ ಸಂಬಂಧಿಸಿದ ಏನಾದರೂ ತಿದ್ದುಪಡಿಗಳು ಬದಲಾವಣೆಗಳು ಸಹ ಸುತ್ತೋಲೆಗಳ ಮೂಲಕವೇ ಬರುತ್ತಿತ್ತು ಇಲ್ಲಿ ಅವುಗಳನ್ನು ನಾವು ಮತ್ತೆ ಟೈಪ್ ಮಾಡಿಸಿ ಸೈಕ್ಲೋ ಸ್ಟೈಲ್ ಮಾಡಿ ಪ್ರತಿಗಳನ್ನು ಮಾಡಿ ಶಾಖಾ ಕಚೇರಿಗಳಿಗೆ ಕಳಿಸಿಕೊಡುತ್ತಿದ್ದೆವು. ವಿಭಾಗಿಯ ಕಚೇರಿಯ ಕ್ರಮ ಸಂಖ್ಯೆಗಳು ಸಹ ಸುತ್ತೋಲೆಗಳಲ್ಲಿ ಇರುತ್ತಿದ್ದವು. ಇವೆಲ್ಲ ಸಂಖ್ಯೆಗಳನ್ನು ನನ್ನ ನೆನಪಿನಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದೆ. ಯಾರಾದರೂ ಫೋನ್ ಮಾಡಿ ಕೇಳಿದಾಗ ಅಲ್ಲಲ್ಲೇ ಮಾರ್ಗದರ್ಶನ ನೀಡುವಷ್ಟು ಹೊಸ ವ್ಯವಹಾರ ವಿಭಾಗದಲ್ಲಿ ಪಳಗಿ ಬಿಟ್ಟಿದ್ದೆ .ಇದಕ್ಕೆಲ್ಲ ನಮ್ಮ ಆಡಳಿತಾಧಿಕಾರಿಗಳವರೇ ಕಾರಣ. ತಮಗೆ ತಿಳಿದ ಎಲ್ಲಾ ವಿಷಯಗಳು ನಮಗೆ ತಿಳಿಸಿಕೊಟ್ಟು ಸಹಾಯ ಮಾಡುತ್ತಿದ್ದರು. ಸಹಾಯಕ ವಿಭಾಗಾಧಿಕಾರಿಗಳಾಗಿದ್ದ ಆಚಾರ್ಯ ಅವರು ಸಹ ನಿವೃತ್ತಿ ಹೊಂದಿ ವಿ ನರಸಿಂಹನ್ ಎನ್ನುವ ಅಧಿಕಾರಿಗಳು ಆ ಜಾಗಕ್ಕೆ ಬಂದಿದ್ದರು. ಅವರು ಸಹ ಆಗ ಫೆಲೋ ಶಿಪ್ ಮಾಡಿದ ಕೆಲವೇ ಜನಗಳಲ್ಲಿ ಒಬ್ಬರು. ತುಂಬಾ ವಿಷಯ ತಿಳಿದುಕೊಂಡಿದ್ದರು. ಆದರೆ ಮಾತೃ ಭಾಷೆ ತಮಿಳು ಆದ್ದರಿಂದ ಕನ್ನಡದಲ್ಲಿ ವ್ಯವಹರಿಸಲು ಸ್ವಲ್ಪ ತೊಡಕು ಇತ್ತು .ಹಾಗಾಗಿ ಯಾರದೇ ಫೋನ್ಗಳು ಬಂದರೆ ನನ್ನನ್ನು ಅಥವಾ ಆಡಳಿತ ಅಧಿಕಾರಿಗಳನ್ನು ಕರೆಯುತ್ತಾ ಇದ್ದರು. ನಾನು ವಿಭಾಗೀಯ ಕಚೇರಿಗೆ ಬಂದ 3-4 ತಿಂಗಳಲ್ಲಿ ಅಲ್ಲಿನ ಶೀಘ್ರ ಲಿಪಿಕಾರ್ತಿ ಸುವರ್ಣ ಅವರು ಹೆರಿಗೆ ರಜೆಗೆ ಹೋಗಿದ್ದರು ಅಲ್ಪಕಾಲದ ರಜೆ ಆದ್ದರಿಂದ ಅವರ ಜಾಗಕ್ಕೆ ಬೇರೆಯವರನ್ನು ಕೊಟ್ಟಿರಲಿಲ್ಲ ನನಗೆ ಬೆರಳಚ್ಚು ಬರುತ್ತಿದ್ದುದರಿಂದ ನಾನೇ ಆ ಜಾಗದ ಕೆಲಸವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದೆ. ಉಕ್ತಲೇಖನ ಕೊಡುವ ಪ್ರಮೇಯಗಳು ಅಷ್ಟೇನೂ ಬರುತ್ತಿರಲಿಲ್ಲ. ವಿಷಯ ಹೇಳಿದರೆ ಸಾಕು ನಾನೇ ಪತ್ರಗಳನ್ನು ಡ್ರಾಫ್ಟ್ ಮಾಡಿ ಟೈಪ್ ಮಾಡಿ ಕೊಟ್ಟು ಬಿಡುತ್ತಿದ್ದೆ. ಆಗ ಸೈಕ್ಲೊ ಸ್ಟೈಲ್ ಅಂದರೆ ಕಲ್ಲಚ್ಚು ಪ್ರತಿಗಳ ಕಾಲ ಈಗಿನ ಹಾಗೆ ಜೆರಾಕ್ಸ್ ಹೆಚ್ಚು ಉಪಯೋಗದಲ್ಲಿ ಇರಲಿಲ್ಲ ಕಾರ್ಬನ್ ಶೀಟ್ ಇರುವ ಸೈಕ್ಲೋ ಸ್ಟೈಲ್ ಶೀಟ್ ಗಳಲ್ಲಿ ಟೈಪ್ ಮಾಡಿ ಕೊಟ್ಟರೆ ಅದನ್ನು ಸಹಿ ಮಾಡಿ ಕೊಟ್ಟ ನಂತರ ಹೆಚ್ಚಿನ ಪ್ರತಿಗಳನ್ನು ಕಲ್ಲಚ್ಚು ಯಂತ್ರದಲ್ಲಿ ತೆಗೆದು ಕೊಡುತ್ತಿದ್ದರು. ಈಗ ಪ್ರತಿಯೊಂದಕ್ಕೂ ಜೆರಾಕ್ಸ್ ಬಂದಿದೆ ಕಾಗದದ ಪ್ರತಿಗಳ ಬಳಕೆಯೂ ಕಡಿಮೆಯಾಗಿದೆ ಎಲ್ಲವೂ ಕಂಪ್ಯೂಟರ್ಗಳಲ್ಲಿಯೇ. ನಾವು ನೋಡ ನೋಡುತ್ತಿದ್ದಂತೆಯೇ ಎಷ್ಟೆಲ್ಲಾ ಬದಲಾವಣೆಗಳಿಗೆ ಸಾಕ್ಷಿಯಾದೆವಲ್ಲ ಎನಿಸುತ್ತದೆ. ವಿಭಾಗಿಯ ಕಚೇರಿಗಳಿಂದ ಶಾಖಾ ಕಚೇರಿಗೆ ಪರಿಶೀಲನೆಗೆಂದು ಹೋಗುವುದು ಒಂದು ಕ್ರಮ .ಆಗ ಅದಕ್ಕೆ ಕ್ವಾಲಿಟಿ ಕಂಟ್ರೋಲ್ ಎಂಬ ಪಾರಭಾಷಿಕ ಪದ ಇತ್ತು. ಈಗ ಅದನ್ನು ಕ್ವಾಲಿಟಿ ಮ್ಯಾನೇಜ್ಮೆಂಟ್ ಅನಾಲಿಸಿಸ್ ಎಂಬ ಹೆಸರಿನಿಂದ ಕರೆಯುತ್ತಾರೆ. ಒಬ್ಬರು ಅಧಿಕಾರಿ ಹಾಗೂ ಮತ್ತೊಬ್ಬರು ಉನ್ನತ ದರ್ಜೆ ಸಹಾಯಕರು ಅಥವಾ ಸಹಾಯಕರು ಅವರೊಂದಿಗೆ ಹೋಗುವುದು ವಾಡಿಕೆ. ಈವರೆಗೆ ರಾಮನ್ ಅವರು ಇದುದರಿಂದ ಅವರೇ ಎಲ್ಲಾ ಕಡೆಗೂ ಹೋಗುತ್ತಿದ್ದರು ನನಗೂ ವಿಭಾಗದ ಎಲ್ಲಾ ವಿಷಯಗಳು ಅಷ್ಟು ಚೆನ್ನಾಗಿ ತಿಳಿದಿರಲಿಲ್ಲ ಹಾಗಾಗಿ ನಾನು ಹೋಗಲು ಆಗಿರಲಿಲ್ಲಈಗ ರಾಮನ್ ಅವರು ಹೋದ ಮೇಲೆ ನಾನೇ ಸೀನಿಯರ್ ಆದ್ದರಿಂದ ಅಲ್ಲದೆ ಗೋಪಾಲನ್ ಸರ್ ಅವರಿಗೆ ನನ್ನ ಮೇಲೆ ತುಂಬಾ ನಂಬಿಕೆ ಇರುವುದರಿಂದ ನನ್ನನ್ನು ಅವರೊಂದಿಗೆ ಈ ರೀತಿಯ ಕ್ವಾಲಿಟಿ ಕಂಟ್ರೋಲ್ ಟೂರ್ ಗಳಿಗೆ ಬರಲು ಹೇಳುತ್ತಿದ್ದರು ಆದರೆ ತುಂಬಾ ದೂರದ ಕಡೆಗಳಿಗೆ ನನಗೆ ಹೋಗಲು ಆಗುತ್ತಿರಲಿಲ್ಲ ಹಾಗಾಗಿ ಶ್ರೀರಂಗಪಟ್ಟಣ ನಂಜನಗೂಡು, ಮೈಸೂರಿನ ವಿವಿಧ ಶಾಖೆಗಳು ಕೆ ಆರ್ ನಗರ ಹುಣಸೂರು ಹಾಗೂ ಕೊಳ್ಳೇಗಾಲ ಒಂದು ಬಾರಿ ಚಾಮರಾಜನಗರಕ್ಕೂ ಸಹ ಹೋಗಿದ್ದ ನೆನಪು ಈ ರೀತಿ ಅವರೊಂದಿಗೆ ಹೋಗುತ್ತಿದ್ದೆ. ಅಲ್ಲಿ ಆಯಾಯಾ ಅವಧಿಯಲ್ಲಿ ವಿತರಿಸಿದ ಪಾಲಿಸಿಗಳ ಕಡತಗಳನ್ನು ತರಿಸಿ ಸರಿಯಾದ ರೀತಿಯಲ್ಲಿ ಮಾಡಿದ್ದಾರೆಯೇ ಎಂಬುದನ್ನು ಪರೀಕ್ಷಿಸಬೇಕು. ಏನಾದರೂ ತಪ್ಪುಗಳು ಇದ್ದಲ್ಲಿ ಅವುಗಳನ್ನು ಬರೆದುಕೊಂಡು ಹೋಗುವುದು ಮತ್ತು ಅಲ್ಲಿಯೇ ನಡೆಯುತ್ತಿದ್ದ ಚರ್ಚೆಗಳಲ್ಲಿ ಅವುಗಳನ್ನು ಹೇಳಿ ತಿದ್ದಿಕೊಳ್ಳಲು ಹೇಳುತ್ತಿದ್ದೆವು. ವಾಪಸ್ಸು ಬಂದ ನಂತರ ಅದರ ಬಗ್ಗೆ ಒಂದು ವರದಿಯನ್ನು ತಯಾರಿಸಿ ವಿಭಾಗಿಯ ಅಧಿಕಾರಿಗಳ ಗಮನಕ್ಕೆ ತಂದು ಶಾಖೆಗೆ ಕಳುಹಿಸಿ ಕೊಡುತ್ತಿದ್ದೆವು.ಈ ರೀತಿ ತಿಂಗಳಲ್ಲಿ ನಾಲ್ಕು ಅಥವಾ ಐದು ದಿನಗಳು ಈ ರೀತಿಯ ಕ್ವಾಲಿಟಿ ಕಂಟ್ರೋಲ್ ಟೂರ್ ಗಳಿಗೆ ಹೋಗುತ್ತಿದ್ದು ಮಾಮೂಲಿ ಗಿಂತ ಸ್ವಲ್ಪ ಬೇಗನೆ ಹೊರಡಬೇಕಿತ್ತು ಹಾಗೂ ಬರುವುದು ಸಹ ತಡವಾಗುತ್ತಿತ್ತು ಆದರೆ ಈ ರೀತಿಯ ಟೂರ್ಗಳಿಗೆ ಪ್ರವಾಸ ಭತ್ಯೆ ಕೊಡುತ್ತಿದ್ದರಿಂದ ಅದು ಒಂದು ರೀತಿಯ ಆಕರ್ಷಣೆ .ಬಸ್ ಚಾರ್ಜ್ ಮಾತ್ರ ಖರ್ಚು ಮಾಡಿದರೆ ಬಸ್ ಚಾರ್ಜ್ ನೊಂದಿಗೆ ಒಂದು ದಿನದ ಪ್ರಯಾಣ ಭತ್ಯೆ ಸಿಗುತ್ತಿತ್ತು. ಆಗ ಒಂದು ದಿನಕ್ಕೆ ನೂರು ರೂಪಾಯಿಗಳ ವರೆಗೂ ಪ್ರವಾಸ ಭತ್ಯೆ ಸಿಗುತ್ತಿತ್ತು. ಈ ರೀತಿ ಮನಸ್ಸಿಗೆ ಒಂದು ರೀತಿ ಖುಷಿ ಕೊಡುವ ಕೆಲಸ. ದಿನಗಳು ಉರುಳುತ್ತಿದ್ದದು ಗೊತ್ತಾಗುತ್ತಲೇ ಇರಲಿಲ್ಲ. ಮುಂದಿನ ವಾರ,ಇಲಾಖಾ ಪರೀಕ್ಷೆಗಳು ಸುಜಾತಾ ರವೀಶ್
ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟನೋಟ ~ ೨೦ ಮೊಗೆದಷ್ಟೂ ನೆನಪುಗಳು. ಹೀಗೆ ಸ್ನೇಹಿತರೊಂದಿಗೆ ಜಾಲಿಯಾಗಿ ಪ್ರಯಾಣ ಮಾಡುತ್ತಾ ಆಫೀಸಿನಲ್ಲಿ ಹೊಸ ವ್ಯವಹಾರ ವಿಭಾಗದಲ್ಲಿ ಕೆಲಸ ಕಲಿಯುತ್ತಾ ದಿನಗಳು ಬಹಳ ಬೇಗನೆ ಓಡಿ ಹೋದ ಹಾಗೆ ಅನಿಸುತ್ತಿತ್ತು. ಆಗ ಬಹಳ ಜನ ಅವಿವಾಹಿತ ಸಹೋದ್ಯೋಗಿಗಳು ಇದ್ದುದರಿಂದ ಅವರ ಮದುವೆ ಸಮಾರಂಭಗಳು ಆಗಾಗ ಆಗುತ್ತಿದ್ದವು. ಅಲ್ಲದೆ ಅವರ ಸೋದರ ಸೋದರಿಯರ ಮದುವೆಗಳು ನಡೆಯುತ್ತಿದ್ದವು .ಹಾಗೆ ನಂಜನಗೂಡಿನಲ್ಲಿ ಇದ್ದಾಗ ಹೋದ ಮದುವೆ ಸಮಾರಂಭಗಳಲ್ಲಿ ಮೊದಲನೆಯದು ಗಾಯತ್ರಿ ದೇವಿ ಅವರ ಅಕ್ಕನ ಮದುವೆ. ಅಂದು ಭಾನುವಾರವಾಗಿದ್ದರಿಂದ ಎಲ್ಲರೂ ಮಾತನಾಡಿಕೊಂಡು ಕೇಂದ್ರ ಬಸ್ ನಿಲ್ದಾಣದಲ್ಲಿ ಸೇರಿ ಅಲ್ಲಿಂದ ಮತ್ತೊಂದು ಬಸ್ನಲ್ಲಿ ಹೋಗಿ ಮದುವೆ ಸಮಾರಂಭ ಮುಗಿಸಿ ಬಂದಿದ್ದೆವು. ಈ ಮೊದಲೇ ಹೇಳಿದ ಹಾಗೆ ಮಂಡ್ಯದಲ್ಲಿ ಸಹೋದ್ಯೋಗಿಯಾಗಿದ್ದು ಈಗ ನಂಜನಗೂಡಿಗೆ ಬಂದಿದ್ದ ಮಂಜುಳಾ ಅವರ ಮದುವೆ ನಮ್ಮದೇ ಶಾಖೆಯ ರೇವಣ್ಣ ಅವರೊಂದಿಗೆ ನಿಶ್ಚಯವಾಗಿದ್ದು ಮೈಸೂರಿನಲ್ಲಿ ಮದುವೆ ಇತ್ತು. ಅದು ಜುಲೈ ಒಂದರಂದು. ನಮಗೆ ಆಗ ಸಾಂದರ್ಭಿಕ ರಜೆ, ಜುಲೈನಿಂದ ಆರಂಭವಾಗಿ ಜೂನ್ ಗೆ ಕೊನೆಗೊಳ್ಳುತ್ತಿತ್ತು ಹಾಗಾಗಿ ಆ ರಜೆ ವರ್ಷದ ಮೊದಲ ದಿನವೇ ರಜೆ ಹಾಕಲು ಯಾರಿಗೂ ಇಷ್ಟ ಇರಲಿಲ್ಲ. ಬೆಳಿಗ್ಗೆ ಬೇಗ ಹೋಗಿ ಮದುವೆ ಮಂಟಪಕ್ಕೆ ಹಾಜರಾತಿ ಹಾಕಿ 11:30ಗೆ ಶಾಖೆಗೆ ವಾಪಸ್ ಆಗಿದ್ದೆವು. ಹಾಗೆಯೇ ಗೆಳತಿ ಸರಸ್ವತಿಯ ಮದುವೆಯು ಒಂದು ವಾರ ಬಿಟ್ಟು ಜುಲೈ 8ಕ್ಕೆ ಇದುದರಿಂದ ಅವಳ ಮದುವೆಗೆ ಸಹ ಹಾಗೆಯೇ ಬೆಳಿಗ್ಗೆಯೇ ಹೋಗಿ ಆಫೀಸಿಗೆ ಬಂದಿದ್ದೆವು. 11:30ಗೆ ಬಂದೆವು ಎಂದು ಹೇಳಿದೆನಲ್ಲ ಅದರ ವಿವರ ಹೇಳುತ್ತೇನೆ ಕೇಳಿ. ನಮ್ಮ ಉದ್ಯೋಗಿಗಳ ನಿಯಮಾವಳಿ Staff Regulation ಅನುಸಾರ ತಿಂಗಳಿನಲ್ಲಿ ಎರಡು ಬಾರಿ ಬೆಳಗ್ಗಿನ ಹೊತ್ತು ಒಂದು ಗಂಟೆ ಕಾಲ ಪರ್ಮಿಷನ್ ಹಾಗೂ ಸಂಜೆಯ ಹೊತ್ತು ಒಂದು ಗಂಟೆಕಾಲ ಪರ್ಮಿಷನ್ ತೆಗೆದುಕೊಳ್ಳಲು ಅವಕಾಶವಿದೆ .ಅಂದರೆ ತಿಂಗಳಲ್ಲಿ ಎರಡು ಬಾರಿ ಬೆಳಿಗ್ಗೆ 11:30ಗೆ ಬರಬಹುದು ಹಾಗೂ ಎರಡು ಬಾರಿ ನಾಲ್ಕು ವರೆಗೆ ಹೋಗಬಹುದು ಹಾಗೆ ಹೋಗಿದ್ದನ್ನು ಹಾಜರಾತಿ ಪುಸ್ತಕದಲ್ಲಿ ಬರೆಯುತ್ತಾರೆ ಏನಾದರೂ ಅನಿವಾರ್ಯ ತುರ್ತಿನ ಪರಿಸ್ಥಿತಿ ಇದ್ದಲ್ಲಿ ಆ ರೀತಿಯ ಅವಕಾಶವನ್ನು ಬಳಸಿಕೊಳ್ಳಬಹುದು. ಚಿಕ್ಕಬಳ್ಳಾಪುರದಲ್ಲಿ ಇದ್ದಾಗ ಮೈಸೂರಿಗೆ ಬರುವ ಮತ್ತು ವಾಪಸು ಹೋಗುವ ಸಂದರ್ಭದಲ್ಲಿ ಈ ಸೌಲಭ್ಯವನ್ನು ಬಳಸಿಕೊಳ್ಳುತಿದ್ದೆ. ನಂಜನಗೂಡಿಗೆ ರೈಲಿನಲ್ಲಿ ಹೋಗಿ ಬರುತ್ತಿದ್ದುದರಿಂದ ಆ ಸಮಯ ಈ ರೀತಿಯ ಅರ್ಲಿ ಪರ್ಮಿಷನ್ ಮತ್ತು ಲೇಟ್ ಪರ್ಮಿಷನ್ ಗಳಿಗೆ ಹೊಂದದೆ ಇದ್ದದರಿಂದ ಅಲ್ಲಿ ಹೆಚ್ಚು ಈ ಸೌಲಭ್ಯವನ್ನು ಬಳಸಿಕೊಳ್ಳುತ್ತಿರಲಿಲ್ಲ ಒಮ್ಮೊಮ್ಮೆ ದೇವಸ್ಥಾನಕ್ಕೆ ಹೋಗುವಾಗ ಬಳಕೆಯಾಗುತ್ತಿತ್ತು ಅಷ್ಟೇ. ಮತ್ತೊಂದು ಸಮಾರಂಭದ ನೆನಪು ಎಂದರೆ ಸಹೋದ್ಯೋಗಿ ಪ್ರಕಾಶ್ ಅವರ ಮನೆಯ ಗೃಹಪ್ರವೇಶದ ಸಂದರ್ಭ ಅವರ ಮನೆ ಶ್ರೀ ರಾಮಪುರದ ಮಧುವನ ಲೇಔಟ್ ನಲ್ಲಿ ಕಟ್ಟಿದ್ದರು. ಅರ್ಧ ದಿನ ರಜೆ ಹಾಕಿ ನಾವು ಎಂಟು ಹತ್ತು ಜನದ ಗುಂಪು ಆ ಸಮಾರಂಭಕ್ಕೆ ಬಂದಿದ್ದೆವು. ವಾಪಸ್ ಹೋಗುವಾಗ ಅಲ್ಲಿಂದ ವಿವೇಕಾನಂದ ನಗರಕ್ಕೆ ಬಂದು ಅಲ್ಲಿಂದ ಬಸ್ ಹಿಡಿದು ಹೋಗಿದ್ದು. ಬರೀ ಬಯಲೇ ಕಾಣುತ್ತಿದ್ದ ಆ ಜಾಗ ಈಗ ಅದೆಷ್ಟು ಬ್ಯುಸಿ ಆಗಿದೆ ಎಂದರೆ ನಂಬಲು ಅಸಾಧ್ಯ. ಈ ಮಧ್ಯೆ ಗೆಳತಿ ಕೃಪಾಳ ಮದುವೆ ನಿಶ್ಚಯವಾಗಿ ನಿಶ್ಚಿತಾರ್ಥವು ಸಹ ನಡೆಯಿತು. ಅವರ ಮನೆಯಲ್ಲೇ ನಡೆದ ನಿಶ್ಚಿತಾರ್ಥಕ್ಕೆ ನಾನು ಮತ್ತು ಶೈಲಾ ಹೋಗಿದ್ದೆವು. ನಗದು ಗುಮಾಸ್ತೆಯಾಗಿ ಕೆಲಸ ಮಾಡಿದ್ದು ಸಹ ನಂಜನಗೂಡು ಶಾಖೆಯಲ್ಲಿ ಪ್ರಪ್ರಥಮ ಬಾರಿಗೆ. ಸಾಮಾನ್ಯವಾಗಿ ನಿಗಮದ ಎಲ್ಲಾ ಶಾಖೆಗಳಲ್ಲೂ ಕಾಯಂ ಆದ ಕ್ಯಾಶಿಯರ್ ನಗದು ಗುಮಾಸ್ತೆ ಇರುತ್ತಾರೆ. ಅವರು ರಜೆ ಹೋದಾಗ ಮಿಕ್ಕ ಸಹಾಯಕ ಹುದ್ದೆಯಲ್ಲಿರುವ ಉದ್ಯೋಗಿಗಳನ್ನು ಅವರ ಸೀನಿಯಾರಿಟಿ ಪ್ರಕಾರ ಪಟ್ಟಿ ಮಾಡಿ ಒಬ್ಬರಾದ ನಂತರ ಒಬ್ಬರ ಪಾಳಿ ಬರುವಂತೆ ಮಾಡಿರುತ್ತಾರೆ. ಚಿಕ್ಕಬಳ್ಳಾಪುರದಲ್ಲಿ ಇದ್ದಾಗ ಖಾಯಂ ಕ್ಯಾಶಿಯರ್ ಹೆಚ್ಚು ರಜೆ ಹೋಗುತ್ತಿರಲಿಲ್ಲ. ಅಲ್ಲದೆ ಮೊದಲ ಆರು ತಿಂಗಳು ನಮ್ಮನ್ನು ಕ್ಯಾಶಿಯರ್ ಹುದ್ದೆಯಲ್ಲಿ ಕೂಡಿಸುತ್ತಿರಲಿಲ್ಲ. ಹಾಗಾಗಿ ನನಗೆ ಒಂದು ದಿನವೂ ನಗದುಗುಮಾಸ್ತೆಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿರಲಿಲ್ಲ. ನಂಜನಗೂಡಿನಲ್ಲಿ ಆಗ ವೇಣುಗೋಪಾಲ್ ಎನ್ನುವವರು ಕ್ಯಾಶಿಯರ್ ಆಗಿದ್ದರು. ಅವರ ವೈಯುಕ್ತಿಕ ಕಾರಣಗಳಿಂದಾಗಿ ಅವರು ದೀರ್ಘ ರಜೆ ಹೋಗಿದ್ದರಿಂದ ನಮ್ಮೆಲ್ಲರಿಗೂ ನಗದು ಗುಮಾಸ್ತೆಯ ಸರದಿ ಬಂದಿತ್ತು. ನನಗೋ ನೋಟುಗಳನ್ನು ಕೈಯಲ್ಲಿ ಸರಿಯಾಗಿ ಹಿಡಿಯಲು ಸಹ ಬರುತ್ತಿರಲಿಲ್ಲ. ಅಲ್ಲದೆ ಒಂದು ರೀತಿಯ ಅಂಜಿಕೆ ಬೇರೆ ಆದರೆ ನನ್ನ ಸಹೋದ್ಯೋಗಿಗಳು ತುಂಬಾ ಸಹಕಾರ ನೀಡಿ ನನಗೆ ರಶೀದಿ ಬರೆಯುವ ಕೆಲಸ ಮಾತ್ರ ಬಿಟ್ಟು ರೂಢಿಯಾಗುವವರೆಗೆ ಬೇರೆಯವರೇ ಒಬ್ಬರಾದ ನಂತರ ಒಬ್ಬರು ಬಂದು ಹಣ ಎಣಿಸಿಕೊಳ್ಳುತ್ತಿದ್ದರು. ಇಲ್ಲಿನ ಅನುಭವದ ಮೇಲೆ ಇತ್ತೀಚೆಗೆ ಸಾಹಿತ್ಯ ರಂಗಕ್ಕೆ ಬಂದ ನಂತರ ಒಂದು ಕಥೆ ಬರೆದಿದ್ದೆ. ಕ್ಯಾಶ್ ಕೌಂಟರ್ ಎಂದಾಗ ಮತ್ತೊಂದು ಘಟನೆ ನೆನಪಿಗೆ ಬರುತ್ತದೆ. ಆಗ ಕ್ಯಾಶ್ ಕೌಂಟರ್ ಗಳಲ್ಲಿ ನಗದು ಗುಮಾಸ್ತೆಯ ಜೊತೆಗೆ ಒಬ್ಬರು ಉನ್ನತ ಶ್ರೇಣಿ ಸಹಾಯಕರು ಸಹ ಇರುತ್ತಿದ್ದರು. ರಶೀದಿಗಳಿಗೆ ಸಹಿ ಹಾಕುತ್ತಿದ್ದು ಅವರೇ. ನಾವು ನಂಜನಗೂಡಿನಲ್ಲಿ ಇದ್ದಾಗ ಮಲಿಕ್ ಅನ್ನುವವರು ಕ್ಯಾಷ್ ಕೌಂಟರಿನ ಉನ್ನತ ಶ್ರೇಣಿ ಸಹಾಯಕರು. ಬೆಂಗಳೂರಿನವರನ್ನು ನಂಜನಗೂಡಿಗೆ ಪೋಸ್ಟ್ ಮಾಡಿದ್ದರು. ಅದು ಮೈಸೂರು ಬೆಂಗಳೂರು ವಿಭಾಗಗಳು ಪ್ರತ್ಯೇಕವಾಗುವ ಮೊದಲು. ಈಗ ಅವರು ಬೆಂಗಳೂರಿಗೆ ವರ್ಗಾವಣೆ ಕೇಳಿದ್ದರು. ಆದರೆ ವಿಭಾಗಗಳು ಬದಲಾಗಿದ್ದರಿಂದ ಸ್ವಲ್ಪ ತಡವಾಗಿತ್ತು. ಅವರು ಪ್ರತಿ ಶನಿವಾರ ಮಧ್ಯಾಹ್ನ ಬೆಂಗಳೂರಿಗೆ ತೆರಳಿ ಸೋಮವಾರ ಬೆಳಿಗ್ಗೆ ಬೆಂಗಳೂರಿನಿಂದ ನಂಜನಗೂಡಿಗೆ ಬರುತ್ತಿದ್ದರು. ಹೀಗೆ ಒಮ್ಮೆ ಬರುವಾಗ ಅವರ ಬಳಿ ಇದ್ದ ಕ್ಯಾಶ್ ಬಾಕ್ಸ್ ನ ಕೀ ಕಳೆದುಕೊಂಡು ಬಿಟ್ಟಿದ್ದರು. ಅದಕ್ಕೆ ತಗಲುವ ವೆಚ್ಚ ಅವರಿಂದ ವಸೂಲು ಮಾಡಿದ್ದು ಅಲ್ಲದೆ ಶಿಸ್ತಿನ ಕ್ರಮ ತೆಗೆದುಕೊಂಡು ಆಗ ಅವರಿಗೆ ಎರಡು ಇಂಕ್ರಿಮೆಂಟ್ ಗಳನ್ನು ಕಡಿತ ಮಾಡಲಾಗಿತ್ತು. ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎನ್ನುವ ಎಚ್ಚರಿಕೆಯನ್ನು ನಾವು ಕಲಿತದ್ದೇ ಆಗ. ಈಗಲೂ ಕ್ಯಾಶ್ ಕೀ ನನ್ನ ಬಳಿ ಇರುವಾಗ ತುಂಬಾನೇ ಜಾಗ್ರತೆ ವಹಿಸುತ್ತೇನೆ. ಆ ಘಟನೆ ಮನಸ್ಸಿನಿಂದ ಮಾಸಿಯೇ ಇಲ್ಲ. ಹಾಗೆ ಹೀಗೆ ನೋಡನೋಡುತ್ತಲೇ ನಂಜನಗೂಡಿಗೆ ಬಂದು ಒಂದು ವರ್ಷ ಕಳೆದೇ ಬಿಟ್ಟಿತು.1991 ಅಕ್ಟೋಬರ್ ಒಂದು ವರ್ಗಾವಣೆ ಪಟ್ಟಿ ಬಿಡುಗಡೆಯಾಗಿ ಕೆಲವು ಜನರಿಗೆ ಮೈಸೂರು ನಗರದ ಶಾಖೆಗಳಿಗೆ ವರ್ಗಾವಣೆ ಸಿಕ್ಕಿತು. ಮಧ್ಯೆ ಮಂಡ್ಯಗೆ ಹೋಗಿ ಬಂದಿದ್ದರಿಂದ ನಾನು ಒಂದು ತಿಂಗಳು ತಡವಾಗಿ ನಂಜನಗೂಡಿಗೆ ಬಂದಿದ್ದೆ. ಹಾಗಾಗಿ ನನಗೆ ಆ ಪಟ್ಟಿಯಲ್ಲಿ ಮೈಸೂರಿಗೆ ವರ್ಗಾವಣೆ ಸಿಕ್ಕಿರಲಿಲ್ಲ. ಮತ್ತೊಂದು ವರ್ಷ ಕಾಯಬೇಕಾಗಿತ್ತು. ಆದರೆ ನಂಜನಗೂಡು ಓಡಾಟ ಹೋಗಿದ್ದರಿಂದ ಅಷ್ಟೇನೂ ಬೇಸರ ಆಗಲಿಲ್ಲ. ಈ ಮಧ್ಯೆ ಗೆಳತಿ ಶೈಲಾಳಿಗೆ ವಿವಾಹವಾಗಿ ಮೈಸೂರಿಗೆ ವರ್ಗಾವಣೆ ಸಿಕ್ಕಿತು. ನಿಗಮದ ನೀತಿಯ ಪ್ರಕಾರ ಕೆಲಸ ಸಿಕ್ಕ ನಂತರ ಮದುವೆಯಾದರೆ ಪತಿ ಇರುವ ಜಾಗಕ್ಕೆ ಆದಷ್ಟು ಬೇಗ ವರ್ಗಾವಣೆ ಸಿಗುತ್ತದೆ. ಹಾಗಾಗಿ ಅವಳ ಪತಿ ಮೈಸೂರಿನಲ್ಲಿ ಇದ್ದಿದ್ದರಿಂದ ತಕ್ಷಣವೇ ಅವಳಿಗೆ ವರ್ಗಾವಣೆ ಸಿಕ್ಕಿತ್ತು. ಹಾಗೆಯೇ ಗೆಳತಿ ಸರಸ್ವತಿಯೂ ಸಹ ವಿವಾಹವಾದ ಒಂದೆರಡು ತಿಂಗಳಲ್ಲಿಯೇ ಮೈಸೂರಿಗೆ ವರ್ಗಾವಣೆ ಹೊಂದಿ ಹೋಗಿದ್ದಳು. ವಿಭಾಗಿಯ ಕಚೇರಿಗಳಿಂದ ಶಾಖಾ ಕಚೇರಿಗಳಿಗೆ ವರಿಷ್ಠರು ಬಂದು ಇಲ್ಲಿನ ಕೆಲಸ ಕಾರ್ಯಗಳು ಹೇಗೆ ನಡೆಯುತ್ತಿದೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಏನಾದರೂ ಮಾರ್ಗದರ್ಶನ ಬೇಕಾದರೆ ಕೊಡುತ್ತಾರೆ. ಹಾಗೆ ನಾನು ಹೊಸ ವ್ಯವಹಾರ ವಿಭಾಗದಲ್ಲಿ ಇದ್ದಾಗ ಆಗ ಅಲ್ಲಿನ ಮ್ಯಾನೇಜರ್ ಆಗಿದ್ದ ಆಚಾರ್ಯ ಎನ್ನುವವರು ಮತ್ತು ಆಡಳಿತ ಅಧಿಕಾರಿ ಆಗಿದ್ದ ಎಸ್ಎಂಎಸ್ ಗೋಪಾಲನ್ ಅವರು ಕಚೇರಿಗೆ ಬಂದಿದ್ದರು. ಕೆಲವೊಂದು ಕೆಲಸಗಳು ಮಾಡದೆ ಪೆಂಡಿಂಗ್ ಉಳಿದಿದ್ದನ್ನು ನನಗೆ ಹೇಗೆ ಮಾಡಬೇಕೆಂದು ಹೇಳಿಕೊಟ್ಟು ಮುಗಿಸಲು ಹೇಳಿದ್ದರು. ಹಾಗೆಯೇ ನಾನು ಮಾಡಿ ಮುಗಿಸಿದ್ದೆ ಮತ್ತೆ ಅದಕ್ಕಾಗಿ ಶಾಖಾಧಿಕಾರಿಗಳ ಕೋಣೆಗೆ ಫೋನ್ ಮಾಡಿ ಕರೆಸಿ, ಒಳ್ಳೆಯ ಪ್ರೋತ್ಸಾಹದ ನುಡಿಗಳನ್ನು ಆಡಿದ್ದರು ನಮ್ಮ ನಿಗಮದಲ್ಲಿ ಯಾವುದೇ ವರ್ಗದಲ್ಲೂ ಬೇರೆ ಹೊಸಬರು ವರ್ಗಾವಣೆಯಾಗಿ ಬಂದಾಗ ಮೊದಲಿನಿಂದ ಶಾಖೆಯಲ್ಲೇ ಇರುವವರಿಗೆ ವಿಭಾಗಗಳಲ್ಲಿ ಬದಲಾವಣೆ ಬೇಕಾಗಿದ್ದರೆ ಮೊದಲ ಆದ್ಯತೆ ಕೊಡುತ್ತಾರೆ. ಹಾಗಾಗಿ ನಾನು ಹೊಸ ವ್ಯವಹಾರ ವಿಭಾಗವನ್ನು ಬಿಟ್ಟು ಪಾಲಿಸಿ ಸೇವೆ ವಿಭಾಗಕ್ಕೆ ಬದಲಾವಣೆ ಕೋರಿಕೊಂಡೆ. ಪಾಲಿಸಿಗಳ ಪುನರುಜ್ಜೀವನ revival ಮಾಡುವ ವಿಭಾಗಕ್ಕೆ ನನಗೆ ಬದಲಾವಣೆ ಸಿಕ್ಕಿತು. ಮೊದಲಿನಿಂದ ನನಗೆ ಪಾಲಿಸಿ ಸೇವಾ ವಿಭಾಗ ಎಂದರೆ ಒಂದು ರೀತಿಯ ಆಕರ್ಷಣೆ ಆದರೆ ಮಂಡ್ಯದಲ್ಲಿ ಅವಕಾಶ ಸಿಕ್ಕಿದ್ದರೂ ಹೆಚ್ಚು ದಿನ ಆ ವಿಭಾಗದಲ್ಲಿ ಕೆಲಸ ಮಾಡಲು ಆಗಿರಲಿಲ್ಲ ಈಗ ನನ್ನಿಷ್ಟದ ವಿಭಾಗ ಸಿಕ್ಕಿತು ಎಂಬ ಖುಷಿಯಿಂದ ಹೊಸ ಕೆಲಸ ಕಲಿಯಲು ಆರಂಭಿಸಿದೆ. ಪಾಲಿಸಿಗಳ ಪ್ರೀಮಿಯಂ ಕಟ್ಟದೆ 6 ತಿಂಗಳುಗಳ ಕಾಲ ಆಗಿ ಹೋದರೆ ಪಾಲಿಸಿಗಳು ಲ್ಯಾಬ್ಸ್ ಆಗುತ್ತದೆ ಹಾಗೆ ಲ್ಯಾಪ್ಸ್ ಆದ ಪಾಲಿಸಿಗಳನ್ನು ಗೊಳಿಸಲು ಅವರ ಆರೋಗ್ಯದ ಬಗ್ಗೆ ಒಂದು ಡಿಕ್ಲರೇಷನ್ ಅದರಲ್ಲಿ ಏನಾದರೂ ಋಣಾತ್ಮಕ ಸಂಗತಿಗಳು ಇದ್ದರೆ ಅದಕ್ಕೆ ಸಂಬಂಧಿಸಿದ ಮೆಡಿಕಲ್ ರಿಪೋರ್ಟ್ ಇವೆಲ್ಲವನ್ನು ತೆಗೆದುಕೊಂಡು ಮತ್ತೆ ಪ್ರೀಮಿಯಂ ಪಡೆದುಕೊಳ್ಳಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ ನಂತರ ಪ್ರೀಮಿಯಂ ಕಟ್ಟಿ ಅದನ್ನು ಚಾಲ್ತಿಗೆ ತರಬೇಕು. ಹಾಗೆ ಪರಿಶೀಲಿಸುವ ಕೆಲಸ ನನ್ನದು. ಮತ್ತೆ ಕೆಲವೊಮ್ಮೆ ಚೆಕ್ ಮುಖಾಂತರ ಅಥವಾ ಪೋಸ್ಟ್ ನಲ್ಲಿ ಕಳಿಸಿದ ಚೆಕ್ಗಳ ಮೊತ್ತಗಳು ತಾಳೆ ಯಾಗದೆ ಅವುಗಳನ್ನು ಪ್ರೀಮಿಯಂಗೆ ಸರಿದೂಗಿಸಲು ಆಗುವುದಿಲ್ಲ ಕೆಲವೊಮ್ಮೆ ಹಣ ಹೆಚ್ಚಾಗಿ ಅದನ್ನು ಡಿಪಾಸಿಟ್ ಎಂದು ಪರಿಗಣಿಸಿ ಇಡಲಾಗುತ್ತದೆ ಆ ತರಹದ ಕೇಸುಗಳನ್ನು ಪರಿಶೀಲಿಸಿ ಮುಂದಿನ ಪ್ರೀಮಿಯಂ ಗಳಿಗೆ ಅಡ್ಜಸ್ಟ್ ಮಾಡುವುದು ಅಥವಾ ಪಾಲಿಸಿದಾರರಿಗೆ ಹಣ ಹಿಂತಿರುಗಿಸುವುದು ಎಂಬುದನ್ನು ನಿರ್ಧರಿಸಿ ಹಾಗೆ ಮಾಡಬೇಕಿತ್ತು ಹಾಗೆಲ್ಲ ಮೊತ್ತಗಳು ಬಹಳ ಕಡಿಮೆ ಇದ್ದುದರಿಂದ ಮನಿ ಆರ್ಡರ್ ಮೂಲಕವೇ ಪಾಲಿಸಿದಾರರಿಗೆ ಹೆಚ್ಚಿನ ಹಣ ಇದ್ದಲ್ಲಿ ಹಿಂದಿರುಗಿಸಲಾಗುತ್ತಿತ್ತು. 8/10 ರೂಪಾಯಿಗಳನ್ನು ಸಹ ಆಗ ಮನಿ ಆರ್ಡರ್ ಮಾಡುತ್ತಿದ್ದೆವು. 40 ಗಳಿಗಿಂತ ಹೆಚ್ಚಾಗಿ ಇದ್ದರೆ ಚೆಕ್ ಮೂಲಕ ವಾಪಸ್ ಮಾಡಲಾಗುತ್ತಿತ್ತು. ಹೊಸ ವಿಭಾಗಕ್ಕೆ ಬಂದು 15 ದಿನ ಆಗಿತ್ತು ಅಷ್ಟೇ ಒಂದು ದಿನ ಪ್ರಸಾದ್ ಅವರು ಶಾಖೆಗೆ ಬಂದು ಮತ್ತೊಂದು ಪಟ್ಟಿ ಸಹಾಯಕರ ವರ್ಗಾವಣೆಗೆ ಸಿದ್ಧವಾಗುತ್ತಿದೆ ಆ ಪಟ್ಟಿಯಲ್ಲಿ ನನಗೂ ಮೈಸೂರಿಗೆ ವರ್ಗಾವಣೆ ಸಿಕ್ಕಬಹುದು ಎಂಬ ವಿಷಯ ತಿಳಿಸಿದರು ಇದು ತುಂಬಾ ಅನಿರೀಕ್ಷಿತವೇ ಆಗಿತ್ತು ಆದರೆ ಹೆಚ್ಚಿನ ಖುಷಿ ಸಹ ತಂದಿತ್ತು. ಅಂತೆಯೇ ಪಟ್ಟಿ ಬಿಡುಗಡೆಯಾಗಿತ್ತು. ನನಗೆ ಮೈಸೂರಿನ ವಿಭಾಗ ಕಚೇರಿಯ ಹೊಸ ವ್ಯವಹಾರ ವಿಭಾಗದ ಸಹಾಯಕಳಾಗಿ ವರ್ಗಾವಣೆ ಸಿಕ್ಕಿತು .ನಂತರ ತಿಳಿದ ವಿಷಯ ನನ್ನ ಕಾರ್ಯ ವೈಖರಿ ನೋಡಿದ ಮ್ಯಾನೇಜರ್ ಹಾಗೂ ಆಡಳಿತ ಅಧಿಕಾರಿ ಅವರು ನನ್ನ ಹೆಸರನ್ನು ಅವರ ವಿಭಾಗಕ್ಕೆ ಸೂಚಿಸಿದ್ದರು ಎಂದು. ಕೃಪಾಳಿಗೆ ಮೈಸೂರು ಶಾಖೆ 4 ಸಿಕ್ಕಿತ್ತು ನನ್ನ ತಂಗಿ ಛಾಯಾಳಿಗೆ ಮೈಸೂರು ಶಾಖೆ ಎರಡಕ್ಕೆ ವರ್ಗಾವಣೆ ಸಿಕ್ಕಿತು. ಒಂದು ರೀತಿಯ ನೆಮ್ಮದಿಯ ಭಾವ. ಒಟ್ಟು ನಾವು ಎಂಟು ಜನ ನಂಜನಗೂಡಿನಿಂದ ವರ್ಗಾವಣೆಯಾಗಿ ಮೈಸೂರಿಗೆ ಬಂದದ್ದು. ನಮ್ಮದೇ ಬ್ಯಾಚ್ನ ಪ್ರಕಾಶ್ ಶ್ರೀಹರಿ ಸುಬ್ರಮಣ್ಯ ನಾನು ಎಲ್ಲಾ ಮೈಸೂರಿಗೆ ವರ್ಗಾವಣೆ ಕೋರಿದ್ದರೂ ಪ್ರಸಾದ್ ಒಬ್ಬರು ಮಾತ್ರ ವರ್ಗಾವಣೆ ಬಯಸದೆ ನಂಜನಗೂಡಿನಲ್ಲಿಯೇ ಉಳಿದುಕೊಂಡಿದ್ದರು. ಮೊದಲಿನಿಂದ ಬಂದ ಅಭ್ಯಾಸದಂತೆ
