ಕಾವ್ಯಯಾನ

ಕವಿತೆ

ಮಿಲನ

ವೀಣಾ ರಮೇಶ್

ಮದುವನದ ಅಂಗಳದಲಿ
ಮಧುರ ಮೌನ ಹಾಸಿದೆ
ಮಧು ಮನಸುಗಳು ಬೆಸೆದಿರೆ,ಮಧು ಅರಸುವ ದುಂಬಿಗಳು
ಮಧುವಿಹಾರದ ಹಿಗ್ಗಿನಲಿ

ಹಸಿರ ಹಂದರದೊಳಗೆ
ಗಂಧರ್ವರೆ ಧರೆಗಿಳಿದಂತೆ
ಮುದ ನೀಡಿ ಮತ್ತೇರಿಸಿದ
ಆಲಾಪದ ದುಂಬಿಗಳು
ಮಧು ಹನಿಯೊಂದು
ಜಾರಿದೆ,ಕೆನ್ನೆ ಮಾತಾಡಿದೆ
ತುಸು ಬಣ್ಣದಲಿ,
ಅದರುತಿದೆ ಅಧರಗಳು

ಭಾವಗಳ ಅರಮನೆಯಲಿ
ಮಧುಮಂಚದ ಉಯ್ಯಾಲೆ
ಪ್ರೇಮರಾಗದಿ ತೂಗುತಿರೆ
ಸವಿಗನಸುಗಳು ಬಿಗಿದಪ್ಪಿ
ನನ್ನೊಡಲಲಿ ಕೂತಿರೇ

ಮಧುಚಂದಿರನು ಕರೆದಿರೆ
ಮೆಲ್ಲನೆ
ತನುಮನಗಳು ಹೆಣೆದಿದೆ
ಪ್ರೇಮದ ಚಿಲುಮೆ
ಅಧರ ಸುಖದೊಳಗಿನ
ಮದಿರೆ,ಯ ಬೆಚ್ಚನೆಯ
ಹಿತದೊಳಗೆ

ಮಧುಮಿಲನದ ಅರಸಿಗೆ
ಚೈತ್ರವಸಂತನ ಆಗಮನದ ಸಂತಸ
ಮತ್ತದೇ ಪ್ರತಿಪದೆಗೆ
ಸಂಭ್ರಮದ ಮಧುಮಾಸ

*********************

Leave a Reply

Back To Top