ಕಾವ್ಯಯಾನ

ಮನದ ಹನಿಗಳು

ಅನಿತ ಕೃಷ್ಣಮೂರ್ತಿ

ಸಿದ್ದವಾದ ಸೆಳೆತದ ಹೊಸ್ತಿಲು

ಸದ್ದಿರದೆ ಸುಳಿದಾಡಿದೆ ಸ್ನೇಹ ಸೇತುವೆ

ಹತ್ತಲು

ಸಾಧಿಸಲು ಗುರಿ ಮುಂದಿನ ಹಾದಿ ನೂರಾರು

ಬಾಧಿಸಲು ಕಾಯಬಹುದು ಆಲೋಚನೆಯ

ಕರಾರು

ಮನಸಲಿ ಕತ್ತಲಿರುವಾಗ

ಕಣ್ಣಿನ ಹೊಳಪು ಬೆಳಕಾಗಿ

ಸುತ್ತಲಾಗಲಿಲ್ಲ

ನಾನೇಕೆ ಹುಡಕಲಿ ನಿನ್ನ ಅಲ್ಲಿ ಇಲ್ಲಿ

ಮಾಸದಂತೆ ಉಳಿದಿದೆ ನಿನ್ನದೇ ಚಿತ್ರ

ಮನದ ಭಿತ್ತಿಯಲಿ

ಹಟದ ಬೇಲಿಯನ್ನೇ

ಸುತ್ತಿಕೊಂಡಿದ್ದ ಮನಸು

ದಾಟಿ ಬಂದಿತ್ತು ಕಂಡು

ನಿನ್ನ ಮಂದಸ್ಮಿತದ ಸೊಗಸು

ಕಾದಿದೆ ತೆಪ್ಪವೊಂದು ಸೇರಿಸಲು

ದೂರ ತೀರವನು

ಕಾಡಿದೆ ನೆನಪೊಂದು ಹೊರಲಾರದೆ

ದೂರಿನ ಭಾರವನು

ನಾನೇಕೆ ಸ್ಪರ್ಧಿಸಲಿ ನಿನ್ನೊಂದಿಗೆ ಹೂವೇ

ನಮ್ಮಿಬ್ಬರ ಗುರಿ ಒಂದೇ… ಒಲವೇ…

ಅಲ್ಲವೆ!

ಬೊಗಸೆಯಲ್ಲಿ ಹಿಡಿದ ಪ್ರೀತಿಗೂ

ಕಣ್ಣ ರೆಪ್ಪೆಯಂತೆ ಕಾಪಾಡುವ ಮಮತೆಗೂ

ಪೈಪೋಟಿಯೇ?

 ಎಷ್ಟು ಮಾತನಾಡಿದೆನೋ ಹೊರಗೆ

ಅಷ್ಟು ಮುಚ್ಚಿಟ್ಟಿರುವೆನು ಮೌನದೊಳಗೆ

Leave a Reply

Back To Top