“ಸೈಕಲ್‌ ಡೇ”    ನೆಪದಲ್ಲೊಂದು ನೆನಪಿನಸವಾರಿ ಬೆಳಕು-ಪ್ರಿಯ

ಅದು 1994-95 ನೇ ಇಸವಿ ನಾನಾಗ ನಾಲ್ಕನೇ ತರಗತಿ ಪಾಸಾಗಿ 5 ನೇ ತರಗತಿಗೆ ಪಕ್ಕದೂರು ದೇವಿಗೆರೆ ಶಾಲೆಗೆ ಸೇರಿದ್ದೆ. ಹೊಸ ಶಾಲೆ ಹೊಸ ಊರು, ಖಾಕಿ ಚಡ್ಡಿ,ಬಿಳಿ ಶರ್ಟ್ ಹಾಕ್ಕೊಂಡ್ ಹೋಗೋ ಖುಷಿಯೊಳಗಡೆ ನಮ್ಮೂರಿನಿಂದ ದೇವಿಗೆರೆ ದೇವಿಗೆರೆಯಿಂದ ನಮ್ಮೂರಿನ 2+2 ಕಿ.ಮೀ. ದಿನ ಅದೇಗೆ ಸಾಗ್ತಾ ಇತ್ತೋ ಅನ್ನೋದೇ ತಿಳಿದಿರೋಷ್ಟು ಖುಷಿಯಿಂದ ಓಡಾಡ್ತಾ ಇದ್ದ ಕಾಲವದು.

               ಇಂತಿಪ್ಪ ಕಾಲದೊಳಗೆ ಇಂದಿರಾ ಟೀಚರಿನ ಪಾಠವನ್ನ ಹೊರತುಪಡಿಸಿ ನನ್ನನ್ನು ಬಹುವಾಗಿ ಸೆಳೆಯುತ್ತಿದ್ದ ಜಾಗ/ವಿಷಯ ಏನಪ್ಪ ಅಂದ್ರೆ ಅದು ಸೈಕಲ್ ಶಾಪ್ ಲೋಕಣ್ಣನ ಶೆಡ್ಡು. ಬಹುತೇಕ ಶಾಲೆಯ ಮಧ್ಯಾಹ್ನದ ವಿರಾಮದ ಸಮಯವನ್ನ ಅಲ್ಲೇ ಆಯಪ್ಪನ ಅಂಗಡಿ ಪಕ್ಕದಲ್ಲೇ ನಿಂತು ಕಾಲ ಕಳೆಯುವ ಅಭ್ಯಾಸ ಬೆಳೆದುಬಿಟ್ಟಿತ್ತು.  ಅಷ್ಟಕ್ಕೂ ಈ ಅಭ್ಯಾಸ ಬೆಳೆಯೊಕು ಒಂದು ಕಾರಣ ಇದೆ.. ಅದು ಏನಪ್ಪ ಅಂದ್ರೆ ಆ ಸೈಕಲ್ ಶಾಪ್ನಲ್ಲಿ ಬಾಡಿಗೆಗೆ ಅಂತ ಇಟ್ಟಿದ್ದ  *ಗಿಡ್ಡ ಸೈಕಲ್* ಅನ್ನೋದು ನಂಗಷ್ಟೇ ಗೊತ್ತಿತ್ತು.
      ಅಂದಂಗೆ ಅದುವರೆಗೂ ಸೈಕಲ್ ಕಂಡೆ ಇಲ್ವೇ ನೋಡೇ ಇಲ್ವಾ ಅನ್ನೋ ಅನುಮಾನ ನಿಮಗೂ ಬಂದಿರ್ಬೇಕಲ್ವಾ.. ನಿಜಾ ಅವತ್ತಿನ ಕಾಲಕ್ಕೆ ನಮ್ಮೂರಲ್ಲಿ ಒಂದೋ ಎರಡೋ ಸೈಕಲ್ ಇದ್ದವಾದರು ಮಕ್ಳಿಗೆ ಅಂತ ಸಣ್ಣ ಸೈಕಲ್ ಇರ್ತಾವೆ, ಇದ್ವು ಅನ್ನೋದು ಗೊತ್ತಾಗಿದ್ದೆ ಈ *ಗಿಡ್ಡ ಸೈಕಲ್* ನೋಡಿದ್ಮೇಲೆನೆ. ಬರ್ತಾ ಬರ್ತಾ ಶಾಲೆಯ ಪಾಠಗಳ ಜೊತೆ ಜೊತೆಗೆ ಈ ಗಿಡ್ಡ ಸೈಕಲ್ ಮೇಲಿನ ಆಸೆಯೂ ದಿನದಿನಕ್ಕೂ ಜಾಸ್ತಿ ಬೆಳೀತಾ ಹೋಯ್ತು.. ಅಂದಂಗೆ ಅವ್ರು ಆ ಸೈಕಲ್ ಇಟ್ಟಿದ್ದೆ ಬಾಡಿಗೆಗೆ. ಆದ್ರೆ ಇಲ್ಲಿ ಸಮಸ್ಯೆ ಎನ್ ಗೊತ್ತಾ ನಾನಿನ್ನು ಆ ಊರಿಗೆ ಹೊಸಬ,ಪರಿಚಯ ಇಲ್ಲ, ಅವ್ರು ಪರಿಚಯ ಇಲ್ಲ ಅಂದ್ರೆ ಕೊಡೋಲ್ಲ ಅನ್ನೋದು ಗೊತ್ತಿತ್ತು ಹಂಗಾಗಿ ಈ ಕನಸಿನ ಅಂಬಾರಿ ಗಿಡ್ಡ ಸೈಕಲನ್ನ ದಿನ ಮಧ್ಯಾಹ್ನ ಹತ್ತಿರದಿಂದ ನೋಡಿಯೋ,ಇಲ್ಲ ಅದೇ ಊರಿನ ಯಾರಾದ್ರೂ ಹುಡುಗ್ರು ತುಳಿಯೋದನ್ನ ನೋಡಿಯೋ ಮನಸೋಳಗೆ ಖುಷಿ ಪಡೋದು ಈ ಕೆಲಸ ನಿತ್ಯ ನಿರಂತರ ಸರಿ ಸುಮಾರು 2 ಎರಡೂವರೆ ತಿಂಗಳು ನಡದೆ ಇತ್ತು. ಪ್ರತೀ ಕಾಯುವಿಕೆಗೂ ಒಂದು ಅಂತ್ಯ ಇರುತ್ತೆ ಅಲ್ವೇ…ಹಾಗೆಯೇ ನನ್ನ ಕಾಯ್ವುವಿಕೆಗೂ ಒಂದು ಅಂತ್ಯದ ದಿನ ಬಂದೇ ಬಿಡ್ತು ನೋಡಿ.
ಅಜ್ಜಿಗೆ ಬಂದಿದ್ದ ವೃಧ್ಯಾಪ ಸಂಬಳದಲ್ಲಿ ಏನಾದ್ರು ತಿನ್ನು ಅಂತ ಕೊಟ್ಟಿದ್ದ 2 ರೂಪಾಯಿನ ತುಂಬಾ ಜೋಪಾನವಾಗಿ  ಎತ್ತಿಟ್ಟುಕೊಂಡು  ಮಧ್ಯಾಹ್ನ ಊಟಕ್ಕೆ ಬಿಡ್ಲಿ ಅಂತಾನೆ ಕಾಯ್ತಾ ಇದ್ದೆ… ಊಟದ ವಿರಾಮ ಬಿಟ್ಟಿದ್ದೆ ತಡ ಒಂದು ನಿಮಿಷದೊಳಗೆ ಸೈಕಲ್ ಶಾಪಿನ ಮುಂದೆ ನಿಂತು,ತುಂಬಾ ದೈರ್ಯದಿಂದ ಅಣ್ಣ ಗಿಡ್ ಸೈಕಲ್ ಬಾಡಿಗೆ ಕೊಡ್ತೀರ ಅಂದಿದ್ದೆ. ನನ್ನ ಧ್ವನಿ ಆಯಪ್ಪನಿಗೆ ಕೇಳಿಸ್ತೋ ಇಲ್ವೋ ನಂಗೆ ಅನುಮಾನ, ಯಾಕಂದ್ರ ಆಯಪ್ಪ ಒಂದ್ ನೆವಕ್ಕಾದ್ರು ನನ್ ಕಡೆ ತಿರುಗಿ ನೋಡ್ಲಿಲ್ಲ.. ಹೋ ಮುಗಿತು ನನ್ ಆಸೆಗೆ ತಣ್ಣೀರ್ ಬಿತ್ತು ಅಂದ್ಕೊಂಡೆ ಕಂಬಕ್ಕೆ ಒರಗಿ ನಿಂತಿದ್ದೆ. ಒಂದೈದತ್ತು ನಿಮಿಷ ಆಗಿರ್ಬೇಕು, “ಹೊಯ್ ತಮ್ಮಾ… ಯಾವೂರು… ಹೌದ. ಯಾರ್ ಮಗ…. ಹೋ ಹೋ ಹೌದ ಗೊತ್ತು ಗೊತ್ತು ತಗೊಂಡ್ ಹೋಗು ಆದ್ರೆ ಹುಷಾರು ನೋಡಪ್ಪ, ಟೈಮ್ ನೋಡು 1 ರೂಪಾಯಿ ಅರ್ಧಗಂಟೆ ಮತ್ತೇ ನಿಮ್ಮೂರಿನ ಕಡೆ ಹೊಗಂಗಿಲ್ಲ, ಇಲ್ಲೇ ತುಳಿಬೇಕು, ಲೇಟ್ ಆದ್ರೆ ಒಂದ್ ರೂಪಾಯಿ ಹೆಚ್ಚಿಗೆ ಕೊಡ್ಬೇಕು……”  ಇನ್ನೂ ಏನೇನೋ ನಿಯಮಗಳನ್ನೆಲ್ಲಾ ಹೇಳ್ತಾ ಹೇಳ್ತಾ ಗಡಿಯಾರದ ಕಡೆಗೆ ನೋಡ್ತಾ ಅಲ್ಲಿಟ್ಟಿದ್ದ ನೋಟ್ ಬುಕ್ನಲ್ಲಿ ಬರ್ಕೊಂಡ್ ತಗೊ ಅಲ್ಲಿದೆ ನೋಡು ಅಂತ ಗಿಡ್ ಸೈಕಲ್ ಕಡೆ ಕೈ ತೋರಿಸಿದ್ದರು.


  ಅಬ್ಬಾ.. ಅನಂದಕ್ಕೆ,ಖುಷಿಗೆ ಕೊನೆಯೆ ಇಲ್ಲದ ಅನುಭವ ಸೈಕಲ್ ಸ್ವಂತದ್ದೇ ಎನ್ನುವ ಮಟ್ಟಿಗೆ ಸೀಟು, ಹ್ಯಾಂಡಲ್,ಎಲ್ಲ ಮುಟ್ಟಿ ಮುಟ್ಟಿ ನೋಡಿ ಮುಂದಕ್ಕೆ ತಳ್ಳಿಕೊಂಡ್ ಹೋಗಿ ಖುಷಿಯೋ… ಖುಷಿಯೋ ಖುಷಿ.. ತುಂಬಾ ದಿನಗಳಿಂದ ಆಸೆಪಟ್ಟಿದ್ದ ಗಿಡ್ ಸೈಕಲ್ ಪಡೆದೆ ಅನ್ನೋ ತೃಪ್ತಿ… ಇಲ್ಲಿ ಇನ್ನೂ ಒಂದು ಮಜಾ ಏನು ಗೊತ್ತಾ… ನಾ ಸೈಕಲ್ ಪೆಡಲ್ ಮೇಲೆ ಕಾಲಿಡ್ತಿರೋದೆ ಇವತ್ತೇ ಫಸ್ಟ್… ಆದ್ರೂ ಧೈರ್ಯದಿಂದ ತುಳಿಯೋ ಸಾಹಸಕ್ಕೆ ಅಣಿಯಾಗಿದ್ದೇ ಅನ್ನೋದಕ್ಕಿಂತ ಅದು ಗಿಡ್ಡ ಸೈಕಲ್ … ಕಾಲಿಟ್ರೆ ನೆಲ ಸಿಗ್ತಿತ್ತು.ಎಂತದ್ದೇ ಪರಿಸ್ಥಿತಿ ಬಂದ್ರು ಬೀಳೋಲ್ಲ,ಆರಾಮ್ ನಿಲ್ಲಿಸಿ ನಿಂತ್ಕೋಬಹುದು ಅನ್ನೋ ದೈರ್ಯ. ಮತ್ತೇ ಎಂತದೆ ದುರ್ಗಮ ಪರಿಸ್ಥಿತಿಯಲ್ಲೂ  5 ನೇ ಕ್ಲಾಸಿನ ನನಗೆ ಒಂದ್ ಎರಡು ಎರಡುವರೆ ಅಡಿ ಎತ್ತರದ ಸೈಕಲನ್ನ ತಡೆದು ನಿಲ್ಲಿಸುವುದು ಮಹಾನ್ ಕೆಲ್ಸ ಅನ್ನೋ ದೈರ್ಯ.

ಸೈಕಲ್ ಶಾಪ್ ಲೋಕಣ್ಣನ ಶೆಡ್ಡಿನಿಂದ ಆರಂಭವಾದ ನನ್ನ ಸವಾರಿ… ಅರಳಿಮರ, ತೇರಿನ ಮನೆ… ಮುಖ್ಯರಸ್ತೆ…. ನಾರಿನ ಮಿಲ್… ಶಾಲೆ ಹಿಂಭಾಗ… ಶ್ರೀಶೈಲಪ್ಪರ ಮನೆ ಬೀದಿ ಅಂಗಡಿ ಮೂರ್ತಣ್ಣನ ಮನೆ ಮುಂದಿನಿಂದ ಸಾಗಿ ಮತ್ತೇ ಅರಳಿಮರ… ಹೀಗೆ ಒಂದ್ ಸರ್ಕಲ್ ಮಾಡ್ಕೊಂಡ್ ಸುಮ್ನೆ ಓಡ್ತಾನೆ ಇತ್ತು. ಆಸೆಪಟ್ಟು ಸಿಕ್ಕಿರೊ ಸೈಕಲ್, ನಾ ಸೈಕಲ್ ಹೊಡೀತಿದಿನಿ ಅನ್ನೋ ಖುಷಿ, ನಾ ಸೈಕಲ್ ತುಳಿಯೋದನ್ನ ಯಾರಾದ್ರೂ ನೋಡ್ಲಿ ಅನ್ನೋ ಕುತೂಹಲ, ಕೊಟ್ಟಿರೋ ದುಡ್ಡಿಗೆ ಒಂದ್ ಸೆಕೆಂಡ್ ಕೂಡ ವ್ಯರ್ಥ ಮಾಡಬಾರ್ದು ಅನ್ನೋ ಎಲ್ಲವೂ ತಲೆಯೊಳಗೆ ಬರ್ತಾ ಇದ್ರೆ.. ಗಿಡ್ ಸೈಕಲ್ನ ವೇಗಕ್ಕೆ ಮತ್ತಷ್ಟೂ ವೇಗ ಕೊಟ್ಟು ಓಡಿಸ್ತಾ… ಇದ್ದೆ…ನೋಡಿ.
           ಇಂತಿಪ್ಪಾ… ಟೈಮದಾಗ ಶಾಲೆ ಬೆಲ್ ಹೊಡೆದಿದ್ದೆ ಗೊತ್ತಾಗ್ಲಿಲ್ಲ… ಅದು ನನ್ ಕಿವಿಗೆ ಬೀಳೋಕೆ ಮುಂಚೆ ಬೇರೆಲ್ಲರ ಕಿವಿಗೆ ಬಿದ್ದು, ಎಲ್ಲೆಲ್ಲೋ ಇದ್ದೋರೆಲ್ಲ ಶಾಲೆ ಕಡೆ ಓಡಾಕ್ ಹಚ್ಚಿದ್ರು… ಹುಡುಗ್ರು ಅನ್ನೋರು ಸಂದಿಗೊಂದಿಯೊಳಗಿಂದೆಲ್ಲ ಒಳ್ಳೆ ಇರುವೆಗೋಳ್ ಬಂದಂಗ್ ಬರೋಕಚ್ಚಿದ್ರು… ಇವ್ರ್ ಅವಸ್ರ ಎಲ್ಲ ನೋಡಿ ಅರಳಿಮರದ ಹತ್ರ ಇದ್ದ ನನ್ ಸವಾರಿ ಲೋಕಣ್ಣನ ಅಂಗ್ಡಿಕಡೆ ಮುಖಮಾಡಿ ಹೊಂಟಿತ್ತು..  ಈ ಷಡಕಣ್ಣರ ಮನೆ ಸಂದಿಯಿಂದ ಅದೆಲ್ಲಿದ್ರೋ ಮೂರು ಜನ ಹುಡ್ಗಿರ್ ದಿಢೀರ್ ಅಡ್ಡ ಓಡಿ ಬಂದ್ಬಿಟ್ವು….
ಅಯ್ಯೋ…ಹೊಯ್..ಹೊಯ್… ಅಮ್ಮಿ..ಅಮ್ಮಿ… ದೂರ ಹೋಗ್… ದೂರ ಹೋಗ್ ಹು….ಹು…ಹ್ಮ್.. ಯಾವ್ದು…ಯಾರ್ ಕಿವಿಗೂ ಹೋಗ್ಲಿಲ್ಲ  ಅವ್ರು ಎಡವಟ್ಟು ಮಾಡಿದ್ರೋ… ಇಲ್ಲ ನಾ ಎಡವಟ್ಟು ಮಾಡಿದ್ನೋ.. ಗೊತ್ತಾಗೋ ಅಷ್ಟೊತ್ತಿಗೆ ನನ್ ಗಿಡ್ ಸೈಕಲ್ ಈ ಕಡೆ ಲಾಸ್ಟ್ ಹುಡುಗಿಗೆ ಮುತ್ತಿಟ್ಟು ನೆಲಕ್ಕುರಿಳಿಸಿತ್ತು…ನಾನು ಅಷ್ಟು ದೂರದಾಗ್ ಬಿದ್ದಿದ್ದೆ.. ಏನತು ಏನಾತು ಅನ್ನೋ ಗಾಬ್ರಿಯೊಳಗೆ ಎದ್ ನಿಂತ್ರ… 3 ಜನ ಹುಡುಗಿರ್ ನೂರ್ ಮಾತಾಡ್ತಾನೆ ಇದ್ರು… ಅವರ ಮಾತಿಗೆ ಮೊಣಕಾಲಿನ ಗಾಯ ಕೂಡ ನೆನಪಿರ್ಲಿಲ್ಲ… ಇಷ್ಟೊತ್ತಿನ ಖುಷಿ ಎಲ್ಲ ನಡುಕದೊಳಗೆ ಕಳೆದೆ ಹೋಗ್ಬಿಟ್ಟಿತ್ತು… “ತಡಿಯಪ್ಪ… ಬಾ.. ಕ್ಲಾಸ್ ಗೆ ಇಂದಿರಾ ಟೀಚರ್ ಗೆ ಹೇಳ್ತೀನಿ ಬಾ, ನಮ್ ಅಪ್ಪನ್ ಕರ್ಕೊಂಡ್ ಬರ್ತಿನಿ ಬಾ”
ಆ ಹುಡ್ಗಿ ಹೇಳಿದ್  ಮಾತ್ ಕೇಳಿ ಕೈ ಕಾಲು ಬೆವರಕತ್ತಿದ್ವು.. ಖುಷಿ ಅನ್ನೋದು ಯಾವೂರು ಗೇಟ್ ದಾಟಿ ಮುಂದೆ ಹೊಯ್ತೋ… ಗೊತ್ತೇ ಆಗ್ಲಿಲ್ಲ…
ಸೀದಾ ಸೈಕಲ್ ಲೋಕಣ್ಣಗೆ ಕೊಟ್ಟಿದ್ದೆ ತಡ… ಗೋವಿಂದ ಸಂಜೆ ಬರುವಾಗ ನನ್ ಬ್ಯಾಗ್ ತಗೊಂಡ್ ಬಾರ್ಲೆ ಅಂತ ಹೇಳಿದ್ದೆ ಶಿವ… ನಾಕ್ ದಿನ ಶಾಲೆ ಯಾವಕಡೆ ಐತೆ ಅಂತನೂ ತಿರುಗಿನೂ ನೋಡ್ಲಿಲ್ಲ…

  ಆ ಹುಡ್ಗಿ… ಆ ಜಾಗ, ಸೈಕಲ್… ನೆನಪಾದಾಗೆಲ್ಲ ನಗು ಬರುತ್ತೆ… ಅವತ್ತು ಭಯ ಇತ್ತು….

 ಪ್ರೀತಿಯಿಂದ

————————-


                                               

Leave a Reply

Back To Top