ಸ್ಮರಣೆ ಸಂಗಾತಿ
“ಇರಬೇಕು ಇರುವಂತೆ ಎಂದ ಕವಿ”
ಎಚ್ಚೆಸ್ವಿ ಅವರಿಗೆ ನುಡಿನಮನ
ಸಂಕೇತ್ ಗುರುದತ್ತ


ಇರಬೇಕು ಇರುವಂತೆ ಎಂದ ಕವಿ
ಕೆಲವರು ಅತಿ ಜಾಣರಂತೆಯೂ, ಮಹಾ ಮೇಧಾವಿಗಳಂತೆಯೂ ಎಲ್ಲ ವಿಚಾರವು ತಮಗೇ ಗೊತ್ತಿದೆ ಎಂಬಂತೆಯೂ ಪೋಸ್ ಕೊಡ್ತಾರೆ. ಹಾಗೇ ತೋರಿಕೊಳ್ಳುತ್ತಾರೆ ಕೂಡ. ಇನ್ನು ಕೆಲರು ಎಷ್ಟೇ ಅರಿತವರಾಗಿದ್ದರೂ ತಮಗೇನೂ ಗೊತ್ತೇ ಇಲ್ಲ ಎಂಬಂತೆ ಇರ್ತಾರೆ. ಇಂತಹ ಎರಡನೆಯ ಗುಂಪಿಗೆ ಸರಿ ಹೊಂದುವ ವ್ಯಕ್ತಿ ಕನ್ನಡದ ಹಿರಿಯ ಸಾಹಿತಿ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಎಂದರೆ ತಪ್ಪಾಗಲಾರದು. ಕನ್ನಡದ ಅಗ್ರಮಾನ್ಯ ಸಾಹಿತಿಗಳ ಪಟ್ಟಿಯಲ್ಲಿ ಇರುವ ಇವರು ಬಹು ಸರಳರೂ, ಸದಾ ನಗುಮೊಗದಿ ಎಲ್ಲರೊಂದಿಗೆ ಬೆರೆಯುವವರೂ ಆಗಿದ್ದರು.
ಯಾವುದೇ ಹಮ್ಮುಬಿಮ್ಮಿಲ್ಲದೇ, ಯಾವುದೇ ಸೆಲೆಬ್ರೇಟಿಯ ಸೋಗು ಹಾಕದೇ ಬದುಕಿ ತೋರಿಸಿದವರು ನಮ್ಮ ಎಚ್ಚೆಸ್ವಿ ಅವರು. ಇವರು ಆಹ್ವಾನಿತ ಕಾರ್ಯಕ್ರಮಗಳಿಗಲ್ಲದೆಯೂ ಕನ್ನಡದ ಸಾಂಸ್ಕೃತಿಕ ಸಮಾರಂಭಗಳಿಗೆ ತಪ್ಪದೇ ಬಂದು ಸಾಮಾನ್ಯರಂತೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಂತಿಮ ಘಟ್ಟದವರೆಗೂ ಕೂತು ಆಲಿಸಿ, ಸಂಭ್ರಮಿಸಿ ಹಾರೈಸಿ ಹೋಗುವ ವಾಡಿಕೆಯನ್ನು ಎಚ್ಚೆಸ್ವಿ ರೂಢಿಸಿಕೊಂಡಿದ್ದರು. ಎಂದೂ ಯಾರೊಂದಿಗೂ ತಮ್ಮ ಜ್ಞಾನ ಭಂಡಾರವನ್ನು ಬೇಕಾಬಿಟ್ಟಿ ತೆರೆದಿಟ್ಟವರಲ್ಲ. ಅದೇ ಎಚ್ಚೆಸ್ವಿ ಅವರ ವಿಶೇಷ ಹಾಗೂ ಮೆಚ್ಚಲಾರ್ಹ ಗುಣ. ಅವರು ಧಾರಾವಾಹಿ, ಸಿನಿಮಾ, ನಾಟಕ ಹೀಗೆ ಎಲ್ಲಾ ಇತರೆ ಕ್ಷೇತ್ರಗಳಿಗೂ ಸಾಹಿತ್ಯ ಒದಗಿಸಿದ್ದಾರೆ.
ಅಲ್ಲದೇ ಎಚ್ಚೆಸ್ವಿ ಅವರು ತಮ್ಮ ಕ್ಷೇತ್ರದ ವಿಸ್ತರಣೆ ಎಂಬಂತೆ ಸಿನಿಮಾ ನಿರ್ದೇಶನವನ್ನೂ ಮಾಡಿ ಸೈ ಎನಿಸಿಕೊಂಡರು.
ಕತೆ, ಚಿತ್ರಕತೆ ಹಾಗೂ ಸಾಹಿತ್ಯವನ್ನು ಬರೆದಿದ್ದಲ್ಲದ್ದೇ ಚಿತ್ರದ ನಿರ್ದೇಶನದ ಹೊಣೆ ಹೊತ್ತರು. ಅದನ್ನು ಯಾವುದೇ ನುರಿತ ನಿರ್ದೇಶಕರ ಕೆಲಸಕ್ಕೂ ಕಡಿಮೆ ಎನಿಸಿದಷ್ಟು ಚೆನ್ನಾಗಿ ನಿರ್ದೇಶಿಸಿದ ಚಿತ್ರ ‘ಹಸಿರು ರಿಬ್ಬನ್ ‘. ತಮ್ಮದೇ ಬಾಲ್ಯದ ಕತೆಯನ್ನು ಈ ಚಿತ್ರದ ಮೂಲಕ ವಿಭಿನ್ನವಾಗಿ ತಂದಿದ್ದರು. ಈ ಚಿತ್ರವು ಬಿಡುಗಡೆಯಾದ ಸಂದರ್ಭದಲ್ಲಿ ನಾನು ಕನ್ನಡ ಪ್ರಭದಲ್ಲಿದ್ದೆ. ಈ ಸಿನಿಮಾದ ವಿಮರ್ಶೆ ಬರೆಯಲು ಮ್ಯಾಗಜೀನ್ ಮುಖ್ಯಸ್ಥರಾಗಿದ್ದ ಜೋಗಿ ಅವರು ನನಗೆ ಅಸೈನ್ಮೆಂಟ್ ಹಾಕಿದರು. ಹಾಗಾಗಿ ನಾನು ಆ ಚಿತ್ರ ನೋಡಿ ವಿಮರ್ಶೆ ಬರೆದೆ. ಅದು ಕನ್ನಡಪ್ರಭ ದಲ್ಲಿ ಪ್ರಕಟವಾಯ್ತು ಕೂಡ. ಪ್ರಕಟವಾದ ದಿನ ಜೋಗಿ ಅವರು ನನ್ನೊಂದಿಗೆ ಮಾತಾಡ್ತಾ, ಸಂಕೇತ್, ಎಚ್ಚೆಸ್ವಿ ಅವರು ಸಿಕ್ಕಿದ್ರು, ಅವರು ಚಿತ್ರದ ವಿಮರ್ಶೆ ಓದಿದ್ರಂತೆ, ಯಾರು ಬರೆದಿದ್ರೂ ಅಂತಾನೂ ಕೇಳಿದ್ರೂ, ನಾನು ನಿಮ್ಮ ಹೆಸರು ಹೇಳ್ದೇ, ಅಲ್ಲದೇ ನಿಮ್ಮೊಂದಿಗೆ ಅವರು ಮಾತಾಡಬೇಕಂತೆ ನಿಮ್ಮ ಪೋನ್ ನಂಬರ್ ಕೇಳಿದ್ದಾರೆ ಎಂದ್ರು. ನನಗೆ ಭಯ ಶುರುವಾಯ್ತು. ದೊಡ್ಡವರ ಚಿತ್ರ, ವಿಮರ್ಶೆ ಅವರಿಗೆ ಇಷ್ಟವಾಯ್ತೋ ಇಲ್ವೋ, ಯಾಕೆ ನಂಬರ್ ಕೇಳಿದ್ದರೋ ಏನೋ ಎಂಬೆಲ್ಲಾ ಗೊಂದಲಕ್ಕೆ ಬಿದ್ದೆ. ಮತ್ತೆ ಜೋಗಿ ಅವರ ಮಾತಾಡಿ. ರೀ ಸಂಕೇತ್, ಅವರಿಗೆ ನಾನು ನಿಮ್ಮ ಫೋನ್ ನಂಬರ್ ಕೊಟ್ಟಿಲ್ಲ. ಅವರ ಫೋನ್ ನಂಬರನ್ನು ನಾನು ನಿಮಗೆ ಕೊಡ್ತೀನಿ ನೀವೇ ಫೋನ್ ಮಾಡಿ ಮಾತಾಡಿ ಎಂದ್ರು!
ಮತ್ತೆ ಆತಂಕ ಏನು ಮಾತಾಡೋದು ಎಂದು. ಜೋಗಿ ಸಾರ್ ಫೋನ್ ನಂಬರ್ ಕೊಟ್ರು. ಹಾಗೂ ಹೀಗೂ ಧೈರ್ಯ ಮಾಡಿ ಎಚ್ಚೆಸ್ವಿ ಅವರಿಗೆ ಫೋನ್ ಮಾಡೇ ಬಿಟ್ಟೆ.
ನಾನು ಈ ಕಡೆಯಿಂದ ಅವರಿಗೆ ನಮಸ್ಕಾರ ಹೇಳುವ ಮೊದಲೇ ಆ ಕಡೆಯಿಂದ ಅವರೇ ನಮಸ್ಕಾರ ಯಾರು ಹೇಳಿ ಅಂದ್ರು. ಅಪರಿಚಿತರ ಫೋನಿಂದ ಕರೆ ಬಂದಿದ್ದರೂ ಸೌಜನ್ಯದಿಂದ ನಮಸ್ಕರಿಸಿ ಮಾತಾಡಿದ್ದರು. ಅಲ್ಲದೇ ನನ್ನ ಪರಿಚಯವಾದ ನಂತರ ನನ್ನ ಮೊದಲ ಚಿತ್ರದ ಬಗ್ಗೆ ನೀವು ಬರೆದ ವಿಮರ್ಶೆ ಚೆನ್ನಾಗಿದೆ. ಸಣ್ಣ ಸಣ್ಣ ಸಂಗತಿಗಳನ್ನೂ ಕೂಲಂಕಷವಾಗಿ ಗಮನಿಸಿ ಬರೆದದ್ದು ಖುಷಿ ಆಯ್ತು. ನಾನು ಈ ಚಿತ್ರದ ಮೂಲಕ ಹೇಳಬೇಕಾದದ್ದು ನಿಮಗೆ ತಲುಪಿದೆ ಎಂದು ಖುಷಿ ಆಯ್ತು. ಎಂದೆಲ್ಲ ಹೇಳಿದ್ದು ನನಗೆ ಸಿಕ್ಕ ದೊಡ್ಡ ಪ್ರಶಸ್ತಿಯಾಗಿತ್ತು. ಅಷ್ಟಕ್ಕೇ ನಿಲ್ಲಿಸದೇ ಅವರೆಂದರು ‘ಪತ್ರಿಕೆಯಲ್ಲಿ ವಿಮರ್ಶೆಗೆ ಇಂತಿಷ್ಟು ಎಂಬ ಜಾಗ ಮೀಸಲು ಇರುತ್ತೆ ಹಾಗಾಗಿ ಅಲ್ಲಿ ಬರೆಯಲು ಅಗದ ನಾನು ತಿದ್ದಿಕೊಳ್ಳಬಹುದಾದ ಯಾವುದಾದ್ರೂ ವಿಚಾರಗಳಿದ್ದರೆ ನನಗೇ ಹೇಳಿ ಅದನ್ನು ಮುಙದೆ ಸರಿಪಡಿಸಿಕೊಳ್ಳಲು ಪ್ರಯತ್ನಿಸುವೆ’ ಎಂದರು. ಇಷ್ಟು ದೊಡ್ಡ ವ್ಯಕ್ತಿ ಯಾವುದೇ ‘ಅಹಂ’ ಇಲ್ಲದೇ ಸಾಮಾನ್ಯರಂತೆ ಮಾತಾಡಿದ್ದು ಅವರ ದೊಡ್ಡತನಕ್ಕೆ ಹಿಡಿದ ಕನ್ನಡಿ ಎನಿಸಿತು.
ಈ ಘಟನೆಯು ನನ್ನ ಮನದಲ್ಲಿ ಮನೆ ಮಾಡಿದೆ. ದೊಡ್ಡವರೆಂದು ಕರೆಸಿಕೊಳ್ಳುವುದು ಇಂತಹ ಗುಣ ಲಕ್ಷಣಗಳಿಂದಲೇ ಎಂದು ಆಗ ಎಚ್ಚೆಸ್ವಿ ಮನನ ಮಾಡಿಸಿದರು.
ಅಲ್ಲದೇ ಇದಾದ ಕೆಲವು ವರ್ಷಗಳ ನಂತರ, ಕೋವಿಡ್ ಸಮಯದಲ್ಲಿ ಬಂದಿದ್ದ ಉಗಾದಿಯ ದಿನ ನನ್ನ ಗೆಳೆಯ ಚಂದ್ರಶೇಖರ್ ಕುಲಗಾಣ ಅವರು ಆನ್ಲೈನ್ ನಲ್ಲಿ ‘ಸಾಹಿತ್ಯ ಮೈತ್ರಿ’ ಎಂಬ ಪತ್ರಿಕೆಯನ್ನು ಎಚ್ಚೆಸ್ವಿ ಅವರಿಂದ ಲೋಕಾರ್ಪಣೆ ಮಾಡಿಸೋಣ ಎಂದ್ರೂ. ಆಗತ್ತೋ ಇಲ್ವೋ ಅದೂ ಕೋವಿಡ್ ಸಮಯ, ಉಗಾದಿಯ ಹಬ್ಬ ಒಪ್ತಾರೋ ಇಲ್ಲವೋ ಎಂಬ ಅನುಮಾನದಿಂದಲ್ಲೇ ಸರಿ ಒಮ್ಮೆ ಕೇಳೋಣ ಎಂದು ಫೋನ್ ಮಾಡಿದೆ. ಮಗನ ಮನೆಯಲ್ಲಿ ಇದ್ದೀನಿ. ಅಲ್ಲಿಗೇ ಬನ್ನಿ ಒಳ್ಳೆಯ ಕಾರ್ಯಕ್ಕೆ ಕೈ ಹಾಕಿದ್ದೀರಾ ಬನ್ನಿ ಪರವಾಗಿಲ್ಲ. ಎಂದರು. ಇಂತಹ ಸಜ್ಜನ ಕನ್ನಡದ ಕಾರ್ಯಕ್ಕೆ ಎಂತಹ ಸಮಯದಲ್ಲೂ ಟೊಂಕ ಕಟ್ಟಿ ನಿಲ್ಲುತ್ತಿದ್ದ ಎಚ್ಚೆಸ್ವಿ ಇನ್ನಿಲ್ಲ. ಕನ್ನಡ ಇಂತಹ ವ್ಯಕ್ತಿಯನ್ನು ಕಳೆದುಕೊಂಡು ಬಡವಾಗಿದೆ!
ಸಂಕೇತ್ ಗುರುದತ್ತ
