ವೈಚಾರಿಕ ಲೇಖನ
ಜಯಲಕ್ಷ್ಮಿ ಕೆ
ಬದಲಾಗುತ್ತಿರುವ ಆದ್ಯತೆಗಳು
ಬಡವಾಗುತ್ತಿರುವ ಮೌಲ್ಯಗಳು…

ಬದಲಾಗುತ್ತಿರುವ ಆದ್ಯತೆಗಳು
ಬಡವಾಗುತ್ತಿರುವ ಮೌಲ್ಯಗಳು...
ಸುರಕ್ಷಿತ ಬಾಲ್ಯ, ಸುಧಾರಿತ ಶಿಕ್ಷಣ ಪ್ರತಿಯೊಂದು ಮಗುವಿನ ಹಕ್ಕು. ಅಂತೆಯೇ ಮಕ್ಕಳ ಮೂಲಭೂತ ಬೇಡಿಕೆಗಳ ಪೂರೈಕೆ ಪೋಷಕರ ಕರ್ತವ್ಯ. ಇಲ್ಲಿ ಆದ್ಯತೆಗಳಿಗೆ ಅನುಗುಣವಾಗಿ ಮಕ್ಕಳ ಆಸೆ ಆಕಾಂಕ್ಷೆಗಳನ್ನು ಈಡೇರಿಸುವ ಜಾಣ್ಮೆ ಹೆತ್ತವರಿಗಿರಬೇಕು.’ಇಲ್ಲ ‘ ಎನ್ನದೆ, ಹಠಕ್ಕೆ ಬಿದ್ದ ಮಕ್ಕಳು ಕೇಳಿದ್ದೆಲ್ಲವನ್ನೂ ಕೊಡಿಸಿ ಅವರನ್ನು ಖುಷಿ ಪಡಿಸಲು ಹೋದರೆ ಹಣದ ಬೆಲೆಯರಿಯದೆ , ಹೆತ್ತವರ ದುಡಿಮೆಯ ಶ್ರಮವನ್ನೂ ಅರ್ಥೈಸಿಕೊಳ್ಳದೆ ಮಕ್ಕಳು ಬೆಳೆಯುವ ಸಾಧ್ಯತೆಗಳಿವೆ. ತಮ್ಮ ಆರ್ಥಿಕ ಅನುಕೂಲತೆಗಳಿಗೆ ಅನುಗುಣವಾಗಿ ತಂತಮ್ಮ ಸಂಸ್ಕೃತಿ -ಸಂಪ್ರದಾಯ, ನಂಬಿಕೆಗಳೇ ಮೊದಲಾದ ಚೌಕಟ್ಟಿನೊಳಗೆ ಮಕ್ಕಳನ್ನು ಬೆಳೆಸಲು ಹೆತ್ತವರು ಸರ್ವ ಸ್ವತಂತ್ರರು. ಅಂದ ಮೇಲೆ ಯಾರನ್ನೋ ಮೆಚ್ಚಿಸುವ ಸಲುವಾಗಿ ದುಬಾರಿ ಎನಿಸುವ ಶಿಕ್ಷಣ ಸಂಸ್ಥೆಗಳಲ್ಲಿಯೇ ತಮ್ಮ ಮಕ್ಕಳನ್ನು ಓದಿಸಬೇಕು, ಬ್ರಾಂಡೆಡ್ ಬಟ್ಟೆಗಳನ್ನೇ ತಮ್ಮ ಮಕ್ಕಳು ಧರಿಸಬೇಕು, ಅಗತ್ಯವಿರಲಿ, ಇಲ್ಲದಿರಲಿ,ದೊಡ್ಡ ಮೊತ್ತ ಪಾವತಿಸಿ ಎಲ್ಲ ವೃತ್ತಿ ಪರ ತರಬೇತಿಗಳಿಗೆ ಮಕ್ಕಳನ್ನು ಸೇರಿಸಬೇಕು ಎನ್ನುವ ಮನೋಭಾವ ಬೇಕಿಲ್ಲ. ಇದು ಮಕ್ಕಳ ಮನಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲುದು. ಪೋಷಕರ ದುಡಿತ ಎಷ್ಟೇ ತ್ರಾಸದಾಯಕವಾದದ್ದಿರಲಿ, ಹಣ ಸುಲಭವಾಗಿ ಸಿಗುವಂಥದ್ದು ಎಂದೇ ಕೆಲವು ಮಕ್ಕಳು ಭಾವಿಸುತ್ತಾರೆ. ಅದಕ್ಕೇ ಅವರು ಶಿಕ್ಷಣ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟವನ್ನು ತಲುಪುವುದಿಲ್ಲ, ಹೆತ್ತವರ ಗೋಳಾಟ ಅಂಥ ಮಕ್ಕಳಿಗೆ ಅರ್ಥವಾಗುವುದೂ ಇಲ್ಲ. ಮೌಲ್ಯಗಳಿಲ್ಲದೆ ಬೆಳೆಯುತ್ತಾ ಸಾಗುವ ಇವರು ಸಮಾಜದ ಆಸ್ತಿಯಾಗುವುದು ಹಾಗಿರಲಿ, ಮನೆಗೇ ಆಧಾರಸ್ತಂಬವಾಗುವುದಿಲ್ಲ. ಅದಕ್ಕೇ ಹೇಳುವುದು ಆದ್ಯತೆ ನೋಡಿ ಮಕ್ಕಳ ಆಸೆಗಳನ್ನು ಪೂರೈಸುವ ಕಲೆಗಾರಿಕೆ ಹೆತ್ತವರಿಗೆ ಇರಬೇಕು ಎಂದು. ಹಾಗೆಂದು ಮೂಲಭೂತ ಅವಶ್ಯಕತೆಗಳನ್ನು ಪೂರೈಸುವಲ್ಲಿ ಹಿಂದೆ ಸರಿದರೆ, ಮಕ್ಕಳು ಮುಜುಗರಕ್ಕೆ ಒಳಗಾಗುವ ಸಂದರ್ಭ ಎದುರಾದೀತು.

ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪೋಷಕರನ್ನು ಕರೆದು ಕಲಿಕಾ ಪ್ರಗತಿ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಒಬ್ಬರು ತಾಯಿ ನೊಂದು ಹೇಳುತ್ತಾರೆ, ” ಅವನಿಗೆ ಯಾವುದರಲ್ಲಿಯೂ ನಾವು ಕೊರತೆ ಮಾಡಿಲ್ಲ, ಅವನು ಕೇಳಿದ್ದನ್ನೆಲ್ಲ ತೆಗೆದು ಕೊಟ್ಟಿದ್ದೇವೆ. ಮೊನ್ನೆ ತಾನೇ ಹೊಸ ಐ ಫೋನ್ ಕೂಡಾ ಕೊಡಿಸಿದೆವು. ಆದರೆ ಜಸ್ಟ್ ಪಾಸ್ ಮಾರ್ಕ್ಸ್ ಕೂಡಾ ತೆಗೆಯೋದಿಲ್ಲ ” ಅಂತ. ಆದರೆ ಅವರ ಮಗ ಪೂರೈಸಿಕೊಂಡ ಯಾವುದೇ ಬೇಡಿಕೆಗಳು ಕಲಿಕಾ ಆದ್ಯತೆಗಳಾಗಿರಲೇ ಇಲ್ಲ ಎನ್ನುವುದು ಆ ಹೆತ್ತಮ್ಮನಿಗೆ ಅರಿಯದೇ ಹೋದದ್ದು ವಿಪರ್ಯಾಸ! ಕೆಲವರು ಶಾಲಾ ಕಾಲೇಜಿನ ಶುಲ್ಕವನ್ನು ಪಾವತಿಸಲು ವಿಳಂಬ ಮಾಡುತ್ತಾರೆ. ಆದರೆ ಚೀಲ, ಕೊಡೆ, ಸಮವಸ್ತ್ರ, ಶೂ, ವಾಚ್,ಮೊಬೈಲ್, ಇತ್ತೀಚೆಗೆ ವಾಹನ ಕೂಡಾ.ಇವೆಲ್ಲವನ್ನೂ ಅಗತ್ಯ ಇರಲಿ, ಇಲ್ಲದಿರಲಿ, ಹೊಸದೇ ಕೊಡಿಸುತ್ತಾರೆ. ಮಕ್ಕಳು ನಾಲ್ಕು ಹೆಜ್ಜೆ ಕೂಡಾ ನಡೆಯಬಾರದು ಎಂದು ಕಾಳಜಿ ವಹಿಸಿ ವಾಹನಗಳಲ್ಲೇ ಶಾಲೆಗೆ ಕಳುಹಿಸುತ್ತಾರೆ. ಪೋಷಕರ ಕಷ್ಟ -ನಷ್ಟಗಳು ಏನೇ ಇದ್ದರೂ ಮಕ್ಕಳ ಅರಿವಿಗೆ ಬರದಂತೆ ತಮ್ಮೊಳಗೇ ನುಂಗಿಕೊಂಡು ಮಕ್ಕಳನ್ನು ಸುಖವಾಗಿ ಬೆಳೆಸುತ್ತಾರೆ. ಕಷ್ಟ, ನೋವು, ನಿರಾಸೆ, ದುಃಖ ದುಮ್ಮಾನಗಳ ಬಗ್ಗೆ ಸಾಮಾನ್ಯ ಜ್ಞಾನ ಕೂಡಾ ಇಲ್ಲದ ಮಕ್ಕಳು ಬದುಕುವ ಕಲೆಗಾರಿಕೆಯಿಂದಲೇ ವಂಚಿತರಾಗುತ್ತಿದ್ದಾರೆ ಎನ್ನುವ ವಾಸ್ತವ ಅಂಶ ಹಿರಿಯರಾದ ನಮ್ಮ ಗಮನಕ್ಕೆ ಬರುವುದು ಅವರು ತೀರಾ ಸಣ್ಣ ಸಮಸ್ಯೆಯನ್ನೂ ಎದುರಿಸಲಾರದೆ ಬದುಕಿಗೇ ಪೂರ್ಣ ವಿರಾಮ ಹಾಕುವ ನಿರ್ಧಾರಕ್ಕೆ ಬಂದಾಗ!
ಸಂತೋಷಕರವಾದ ಮನಸ್ಸು, ಆರೋಗ್ಯಕರವಾದ ದೇಹ ಇವೆರಡಕ್ಕೆ ಅಡ್ಡಿ ಆಗದ ರೀತಿಯಲ್ಲಿ ಮಕ್ಕಳ ಬೇಡಿಕೆಗಳನ್ನು ಪೂರೈಸುವುದು ಪೋಷಕರ ಪಾಲಿಗೆ ಇಂದು ದೊಡ್ಡ ಸವಾಲೇ ಸರಿ.
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವೆಚ್ಚ ಮಾಡಬೇಕಾದದ್ದು ಉಚಿತವೇ… ಆದರೆ ಯಾವುದಕ್ಕೆ ಆದ್ಯತೆ ಕೊಡಬೇಕು…??? ಕಷ್ಟಗಳನ್ನು ಸಹನೆಯಿಂದ ಎದುರಿಸುವ ಕಲೆಗಾರಿಕೆಯನ್ನು ಕಲಿಸುವ ಮತ್ತು ಕಠಿಣ ಪರಿಸ್ಥಿತಿಯಲ್ಲಿ ಕಂಗೆಡದೆ ಬದುಕುವ ಎದೆಗಾರಿಕೆಯನ್ನು ಬೆಳೆಸುವ ಶಿಕ್ಷಣಕ್ಕೆ. ಮಕ್ಕಳು ಯಾವುದಕ್ಕೂ ಇತರರ ಎದುರು ಕೈ ಚಾಚಬಾರದು ಎನ್ನುವ ನಮ್ಮ ಆಶಯ ಸಹಜವಾದದ್ದೇ.. ಆದರೆ ಓದುವ ಕಾಲದಲ್ಲಿ ಏನೇನು ಕೊಡಿಸಬೇಕು? ಯಾವುದು ಅವಶ್ಯಕ.. ಯಾವುದು ಅನವಶ್ಯಕ ಇವುಗಳ ಸ್ಪಷ್ಟ ನಿಲುವು ಹಿರಿಯರಾದ ನಮಗಿರಬೇಕು. ಮಕ್ಕಳ ಕಲಿಕೆಯ ಸಮಯದಲ್ಲಿ ಅವರಿಗೆ ಏನೆಲ್ಲಾಅನುಕೂಲಗಳನ್ನು ಮಾಡಿಕೊಡಬಹುದು ಎಂದು ಯೋಚಿಸುವ ಜೊತೆ ಜೊತೆಗೆ ಓದುವ ಸಮಯದಲ್ಲಿ ಅವರು ಎಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತಿದ್ದಾರೆ ಎನ್ನುವುದರ ಬಗ್ಗೆ ಒಂದು ಕಣ್ಣಿಡಬೇಕಾದದ್ದು ತೀರಾ ಅವಶ್ಯವಾದದ್ದು. ಆಹಾರ, ವಸತಿ, ರಕ್ಷಣೆ,ಬಟ್ಟೆ, ಆರೋಗ್ಯಕರ ವಾತಾವರಣ, ಇವೆಲ್ಲವನ್ನು ಪೂರೈಸುವಾಗ ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕಾದ ಅನಿವಾರ್ಯತೆಯ ಬಗ್ಗೆ ಮಕ್ಕಳಿಗೆ ಕಲಿಸಿದಾಗ ನಿರಾಸೆ ಎನ್ನುವುದು ಕೂಡಾ ಬದುಕಿನ ಒಂದು ಅಂಗವೇ ಎನ್ನುವ ಮಾನಸಿಕ ಧೃಡತೆ ಮಕ್ಕಳಲ್ಲಿ ಬೆಳೆಯಲಾರಂಭಿಸುತ್ತದೆ. ನಾವೆಲ್ಲ ಸಣ್ಣವರಿದ್ದಾಗ ಮನೆಯಲ್ಲಿ ದೊಡ್ಡಮಕ್ಕಳ ಹಳೆಯ ಬಟ್ಟೆಗಳು ಸಣ್ಣ ಮಕ್ಕಳ ಪಾಲಿಗೆ ಜರತಾರಿ ಉಡುಗೆಗಳೇ ಆಗಿರುತ್ತಿದ್ದವು. ಅಣ್ಣನ ಹಳೇ ಚೀಲ, ಅಪ್ಪ ಕಡ್ಡಿ ರಿಪೇರಿ ಮಾಡಿ ಇಟ್ಟ ಕೊಡೆ, ಹಳೇ ನೋಟ್ಸ್ ಗಳಲ್ಲಿ ಉಳಿದಿದ್ದ ಹಾಳೆಗಳನ್ನು ಹೊಲಿದು ಮಾಡಿದ ಪುಸ್ತಕ, ಇವನ್ನೆಲ್ಲ ಬಳಸುವಾಗ ನಮಗೆ ಏನೂ ಅನಿಸುತ್ತಿರಲಿಲ್ಲ, ಅಥವಾ ಹಾಗನಿಸುವ ಹಾಗೆ ನಮ್ಮನ್ನು ಬೆಳೆಸಿರಲಿಲ್ಲ. ಇಂದಿನ ಮಕ್ಕಳು ಅದೃಷ್ಟವಂತರು! ಜೂನ್ ಶುರುವಾಗಿ ಹೊಸ ಶೈಕ್ಷಣಿಕ ವರ್ಷಕ್ಕೆ ಎಲ್ಲವೂ ಹೊಸತು.. ಹೊಸತು. ಹೊಸ ವಸ್ತುಗಳ ಜೊತೆಗೆ ಹೊಸ ಕಳೆಯೊಂದಿಗೆ ಶಾಲೆಗೆ ಹೆಜ್ಜೆ ಹಾಕುವ ಗತ್ತೇ ನೋಡಲು ಗಮ್ಮತ್ತು!ಈಗ ಮಕ್ಕಳ ಹುಟ್ಟುಹಬ್ಬಕ್ಕೆ ಮಾಡುವ ಖರ್ಚು, ಒಂದು ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ವ್ಯಯಿಸುವ ಹಣ ಇವೆಲ್ಲ ಎಷ್ಟು ಎನ್ನುವುದನ್ನು ನಾವೆಲ್ಲಾ ಒಮ್ಮೆ ಯೋಚಿಸಿದರೆ ಸಾಕು, ಇಂದಿನ ಮಕ್ಕಳು ದುಂದುವೆಚ್ಚದ ದಾರಿ ತುಳಿಯಲು ಕಾರಣಕರ್ತರು ಯಾರು ಎನ್ನುವುದು ಸ್ಪಷ್ಟವಾಗುತ್ತದೆ. ಆಡಂಭರದ ವಸ್ತುಗಳನ್ನು ಹೊಂದಿಸಿಕೊಳ್ಳುವುದಕ್ಕಿಂತಲೂ ಸದಾಚಾರಗಳನ್ನು ರೂಢಿಸಿಕೊಳ್ಳುವ ಸಂಸ್ಕಾರದಲ್ಲಿ ಕಲಿಕೆಯ ಸಾರವಿದೆ ಎನ್ನುವ ಅರಿವನ್ನು ನಾವು ಹಿರಿಯರು ಮಕ್ಕಳಲ್ಲಿ ಮೂಡಿಸಬೇಕಿದೆ. ಆತ್ಮಗೌರವ, ಶುಚಿತ್ವ, ವಿಧೇಯತೆ, ಸಮಯ ಪ್ರಜ್ಞೆ, ಸಹಕಾರ ಗುಣ ಇತ್ಯಾದಿಗಳನ್ನು ಬೆಳೆಸಿಕೊಳ್ಳದೆ ಹೊಸ ವಸ್ತುಗಳನ್ನು ಹೊತ್ತು ಸಾಗುವುದರಲ್ಲೇನಿದೆ ಹೊಸತನ!

ಕಾಲ ಬದಲಾದಂತೆ ನಮ್ಮ ಆದ್ಯತೆಗಳು ಬದಲಾಗಬೇಕಾದದ್ದು ಅನಿವಾರ್ಯ. ಆದರೂ ಮಕ್ಕಳ ಭವಿಷ್ಯ ಉಜ್ವಲವಾಗಬೇಕು ಎನ್ನುವ ಧಾವಂತದಲ್ಲಿ ಬೌತಿಕ ವಸ್ತುಗಳನ್ನು ಕೊಡಿಸುವುದಷ್ಟೇ ನಮ್ಮ ಆಧ್ಯತೆ ಆಗದಿರಲಿ.ಸಂಸ್ಕಾರ ನಿರ್ಮಾಣ ಮತ್ತು ಮೌಲ್ಯಗಳ ಸಂವರ್ಧನೆಗಳಿಂದ ಮಕ್ಕಳು ವಂಚಿತರಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿರಲಿ.
ಜಯಲಕ್ಷ್ಮಿ ಕೆ

Nice