ಮುಂಬಯಿ ಮಹಾನಗರ ಭಾರತದ ಅತ್ಯಂತ ಗತಿಯುತ ನಗರಗಳಲ್ಲಿ ಒಂದು. ದೊಡ್ಡ ದೊಡ್ಡ ಗಗನಚುಂಬಿ ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ಸಂಕೀರ್ಣಗಳು, ಮಾಲ್ ಗಳು, ಫ್ಲೈಓವರ್ ಗಳು, ಸಮುದ್ರ ಸೇತುಗಳು, ಮೆಟ್ರೋ, ಅಂಡರ್ ಗ್ರೌಂಡ್ ಸಾರಿಗೆ ವ್ಯವಸ್ಥೆ, ಇನ್ನೂ ಮುಂತಾದವೆಲ್ಲವೂ ಸೇರಿ ಈ ಮಹಾನಗರವನ್ನು ಕಲ್ಲು ಮತ್ತು ಕಬ್ಬಿಣದ ವಸ್ತುಗಳ ಆಗರವನ್ನಾಗಿ ಮಾಡತೊಡಗಿವೆ..ಇಲ್ಲಿನ‌ ಅಪಾರ ಜನಸಂದಣಿ, ಜಾಗದ ಕೊರತೆ, ವಾಹನ ಸಂಚಾರದ ಸಮಸ್ಯೆಗಳಿಂದಾಗಿ ಮುಂಬಯಿ ಕೃತಕ ಕಾಂಕ್ರೀಟಿನ ಕಾಡಾಗಿ ಬದಲಾಗುತ್ತಿದೆ..
ಮುಂಬಯಿಯ ಕೇಂದ್ರ ಭಾಗಗಳಲ್ಲಿ ಅಲ್ಲದೆ ಹೊರವಲಯದ ಪ್ರದೇಶಗಳಲ್ಲೂ ಆಕಾಶ ಚುಂಬಿ ಕಟ್ಟಡಗಳು ಮತ್ತು ವಾಣಿಜ್ಯ ಕೇಂದ್ರಗಳೇ ಹೆಚ್ಚಾಗುತ್ತಿವೆ. ದೇಶ-ವಿದೇಶದ ದೊಡ್ಡ ಕಂಪನಿಗಳು ಇಲ್ಲಿ ತಮ್ಮ ಬಲವನ್ನು ಪ್ರದರ್ಶಿಸಲು ಪೈಪೋಟಿ ನಡೆಸುತ್ತಿವೆ. ಈ ಎಲ್ಲದರ ಮಧ್ಯೆ ಪ್ರಾಕೃತಿಕ ಪರಿಸರವನ್ನು ಉಳಿಸುವುದು ಅತ್ಯಂತ ಕಷ್ಟಕರವಾದ ಕಾರ್ಯವಾಗಿದೆ..ಹೊಸ ಕಟ್ಟಡಗಳ ನಿರ್ಮಾಣಕ್ಕಾಗಿ ಪ್ರಾಕೃತಿಕ ಕಾಡುಗಳು ಕಡಿದು ಹಾಕಲ್ಪಡುವುದು, ಕಡಲತೀರದ ಪ್ರದೇಶಗಳಲ್ಲಿ ನಗರದ ಕೊಳೆಗೇರಿ ಪ್ರದೇಶಗಳಲ್ಲಿ ಮಾಲಿನ್ಯ ಹೆಚ್ಚಾಗಿ, ಪರಿಸರ ಹಾನಿಗೊಳಗಾಗುತ್ತಿದೆ..ದಿನೇ ದಿನೇ ನಗರದ ವಿಸ್ತರಣೆ ಹೆಚ್ಚುತ್ತಿದ್ದು ಮುಂಬಯಿ ಕಾಂಕ್ರೀಟ್ ಕಾಡು ಮತ್ತು ಗಜಿಬಿಜಿ ನಗರವಾಗಿ‌ ಬದಲಾಗುತ್ತಿದೆ..

ಇಂತಹ ಅಗಾಧ ಕಾಂಕ್ರೀಟ್ ಕಾಡಿನ ನಡುವೆಯೂ ಹಸಿರು ,ಉಸಿರುಗಳನ್ನು ನೀಡುತ್ತ ಪ್ರಕೃತಿ ಮಾತೆ ಮುಂಬಯಿ ಮಹಾನಗರವನ್ನು ಆಶೀರ್ವದಿಸಿ ಕಾಯುತಿರುವಳೆಂಬುದು ಅತ್ಯಂತ ಸಮಾಧಾನದ ವಿಷಯ..ಪ್ರಾಕೃತಿಕ ಸಂಪತ್ತಿನಿಂದ ತುಂಬಿ ತುಳುಕುತ್ತಿರುವ‌ ಹಲವು ಭೂ ಭಾಗಗಳು ಅರಣ್ಯ ಮತ್ತು ನಗರ ಜೀವನಗಳ ಅಪೂರ್ವ ಸಂಗಮವಾಗಿವೆ..ಕೆಲವು ಅಪರೂಪದ, ಸಂರಕ್ಷಿತ, ಹಾಗೂ ನೈಸರ್ಗಿಕ ವೈವಿಧ್ಯತೆಯನ್ನು ಹೊಂದಿರುವ ಕಾಡುಗಳು ಇಲ್ಲಿ ಅಸ್ತಿತ್ವದಲ್ಲಿವೆ. ಮುಂಬಯಿಯ ಈ ಅರಣ್ಯ ಪ್ರದೇಶ ಆಧುನಿಕತೆ ಮತ್ತು ಪ್ರಕೃತಿಯ ಸಮತೋಲನದ ನಿದರ್ಶನವಾಗಿವೆ..
ಇಂದು ಮುಂಬಯಿ ನಗರದ ಹಲವು ಸಂರಕ್ಷಿತ ಅರಣ್ಯಗಳ ಪರಿಚಯ ಮಾಡಿಕೊಳ್ಳೋಣ‌ ಬನ್ನಿ.‌

ಮುಂಬಯಿ‌ ನಗರದ ಮಧ್ಯ ಭಾಗದಲ್ಲಿ ಹಸಿರು ನಂದನವನವಾಗಿ ಹರಡಿರುವ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನ (SGNP) ಭಾರತದ ಪ್ರಪ್ರಥಮ ನಗರ ಅರಣ್ಯಗಳಲ್ಲಿ ಒಂದು..ವಿಶ್ವದ ಯಾವುದೂ ಭಾಗದಲ್ಲಿಲ್ಲದ ವಿಶಿಷ್ಟ ಸಂರಕ್ಷಿತ ನಗರಾರಣ್ಯವಿದು..

ಸುಮಾರು 103 ಚದರ ಕಿಮೀ ವಿಸ್ತೀರ್ಣವನ್ನು ಹೊಂದಿರುವ ಈ ಕಾಡು ಅಸಂಖ್ಯಾತ ಪ್ರಾಣಿಗಳು, ಹಕ್ಕಿಗಳು, ಮತ್ತು ಸಸ್ಯ ಸಂಕುಲವನ್ನು ತನ್ನೊಳಗೆ ತುಂಬಿಕೊಂಡಿದೆ. ಮುಂಬಯಿನ ಉತ್ತರ ಭಾಗದ ಬೊರಿವಲಿ (ಪೂರ್ವ)ದಲ್ಲಿ ಇದರ ಪ್ರವೇಶ ದ್ವಾರವಿದೆ. ಅರಣ್ಯದ ಮಧ್ಯದಲ್ಲಿ ಹಳಿಯ ಮೇಲೆ ಸಂಚರಿಸುವ “ವನರಾಣಿ” ಟ್ರೈನ್ ಮಕ್ಕಳ ಆಕರ್ಷಣೆಯ ಕೇಂದ್ರವಾಗಿದೆ..ಪ್ರವಾಸಿಗರಿಗೆ ಹುಲಿ, ಸಿಂಹ, ಚಿರತೆ ಮುಂತಾದ ವನ್ಯಜೀವಿಗಳನ್ನು ನೇರವಾಗಿ ನೋಡುವ ಅವಕಾಶ..ಈ ಸಫಾರಿಗೆ ವಿಶೇಷ ಬಸ್ ವ್ಯವಸ್ಥೆಯೂ ಇದೆ.ಇಲ್ಲಿ ಹಲವಾರು ನಡು ದಾರಿಗಳು, ಹಸಿರು ಪಾದಚಾರಿ ಮಾರ್ಗಗಳು ಇವೆ, ಇವು ನಿಸರ್ಗಪ್ರಿಯರಿಗೆ ಅತ್ಯಂತ ಸುಂದರ ಅನುಭವ ನೀಡುತ್ತವೆ. ಕಂಗಳಿಗೆ ತಂಪನೀವ
ಹಸಿರು ಸಮೃದ್ಧಿಯಲ್ಲಿ ಓಡಾಟ, ವಾಯುವಿಹಾರ, ಹವ್ಯಾಸಿ ಛಾಯಾಗ್ರಹಣ, ಹಾಗೂ ವನ್ಯಜೀವಿಗಳನ್ನು ಪತ್ತೆ ಹಚ್ಚುವ ಅನುಭವದ ಅವಕಾಶ, ಇವೆಲ್ಲವೂ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ.
ಬೆಳಗಿನ ವಾಕಿಂಗ್ ಗಾಗಿ ಇಲ್ಲಿ ನೆರೆಯುವ ಜನಸಂದಣಿಯನ್ನು ನೋಡಿದರೆ ನನಗೆ ಸಹಜವಾಗಿಯೇ ಹಳ್ಳಿ ಜಾತ್ರೆಯ ನೆನಪಾಗುತ್ತದೆ..

ಇದೇ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ಕಾನ್ಹೇರಿ ಗುಹೆಗಳು ಪುರಾತನ ಕಾಲದ ಬೌದ್ಧ ಧರ್ಮಕೇಂದ್ರಗಳಾಗಿವೆ.
ಇ.ಸ. ಪೂರ್ವ 1ನೇ ಶತಮಾನದಿಂದ 10ನೇ ಶತಮಾನದವರೆಗೆ ಅಭಿವೃದ್ಧಿಗೊಂಡ ಈ ಗುಹೆಗಳು ಅಂದಿನ ಬೌದ್ಧ ಸನ್ಯಾಸಿಗಳ ವಾಸಸ್ಥಾನವಾಗಿದ್ದವೆಂಬ ಇತಿಹಾಸವಿದೆ. ಬಸಾಲ್ಟ್ ಕಲ್ಲಿನ ಬೆಟ್ಟವನ್ನು ಕೊರೆದು ನಿರ್ಮಿಸಲಾದ 109 ಗುಹೆಗಳಲ್ಲಿಯೇ ಚೈತ್ಯಗಳು (ಆರಾಧನಾ ಮಂದಿರ) ಹಾಗೂ ವಿಹಾರಗಳು ಇವೆ.ಇಲ್ಲಿನ ಬೌದ್ಧಸ್ತೂಪ,
ಶಿಲಾಲೇಖಗಳು,  ಮತ್ತು‌ ಸುಂದರ ಶಿಲ್ಪಕಲಾಕೃತಿಗಳು ಪ್ರವಾಸಿಗರನ್ನು ಆಕರ್ಷಿಸಿ ಮನಸೂರೆಗೊಳ್ಳುತ್ತವೆ..
ಇಲ್ಲಿನ ಮಳೆ ನೀರಿನ ಸಂಗ್ರಹ ವ್ಯವಸ್ಥೆಯು ವಿಭಿನ್ನವಾಗಿದ್ದು ಈ ಸ್ಥಳದ ವೈಶಿಷ್ಟ್ಯತೆಯನ್ನು ಎತ್ತಿ ಹಿಡಿಯುವಂತಿದೆ..

ಇತಿಹಾಸ, ನೈಸರ್ಗಿಕ ಸೌಂದರ್ಯ ಮತ್ತು ಆಧ್ಯಾತ್ಮಿಕ ಶಾಂತಿಯ ಸಂಯೋಜನೆಯಾದ ಕಾನ್ಹೇರಿ ಗುಹೆಗಳು ಮುಂಬಯಿ ನಗರದ ಗದ್ದಲದಿಂದ ದೂರವಾಗಿದ್ದು ಧ್ಯಾನ ಮತ್ತು ಅಧ್ಯಯನ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತವೆ. ಬೋರಿವಲಿಯ ಪ್ರವೇಶದ್ವಾರದ ಮೂಲಕ ಇಲ್ಲಿಗೆ ತಲುಪಬಹುದು. ಪ್ರವಾಸಿಗರಿಗೆ ಬೆಳಿಗ್ಗೆ 7:30 ರಿಂದ ಸಂಜೆ 5:30ರವರೆಗೆ ಪ್ರವೇಶ ಅವಕಾಶವಿದೆ..ಈ ಸ್ಥಳವು ಮುಂಬಯಿಯ ಐತಿಹಾಸಿಕ ಪರಂಪರೆಯ ಪ್ರತಿಬಿಂಬವಾಗಿದೆ.

ಮುಂಬಯಿಯ ಮಧ್ಯ ಭಾಗದಲ್ಲಿ ಪಶ್ಚಿಮ ಉಪನಗರದ ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಆರೇ ಕಾಲೋನಿಯ ಕಾಡು (Aarey Forest) ಅತ್ಯಧಿಕ ಪ್ರಾಕೃತಿಕ ಸೌಂದರ್ಯ, ವೈವಿಧ್ಯಮಯ ಜೈವಿಕ ಸಂಪತ್ತನ್ನು ಹೊಂದಿದೆ..
ಪರಿಸರದ ನಿರ್ವಹಣೆಗೆ ಮುಖ್ಯವಾದ ಹಸಿರು ಗಿಡಮರಗಳಿಲ್ಲಿ ಹೇರಳವಾಗಿವೆ..ಇದು ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನದ ಹೆಚ್ಚುವರಿ ಭಾಗವಾಗಿದ್ದು. ಇಲ್ಲಿನ ಹಸಿರು ಆವರಣವು ನಗರದಲ್ಲಿ ತಾಜಾ ವಾತಾವರಣವನ್ನು ನೀಡುತ್ತದೆ..
ಅನೇಕ ಕಾಡುಮೃಗಗಳು, ವಿವಿಧ ಹಕ್ಕಿಗಳ ನೆಲೆಯಾಗಿರುವ ಈ ಕಾಡಿನಲ್ಲಿ ಚಿರತೆಗಳು ಭಾರೀ ಪ್ರಮಾಣದಲ್ಲಿ ಕಾಣ ಸಿಗುತ್ತವೆ. ಮುಂಬಯಿಯ “ಹಸಿರು ಶ್ವಾಸಕೋಶ” ಎಂದು ಕರೆಯಲಾಗುವ ಆರೇ ಕಾಡು, ನಗರದ ಮಾಲಿನ್ಯ ಮತ್ತು ತಾಪಮಾನ ಹೆಚ್ಚಳವನ್ನು ನಿಯಂತ್ರಿಸಲು ಬಹುಮುಖ್ಯ ಪಾತ್ರ ವಹಿಸುತ್ತದೆ.

(ನಮ್ಮ ಮನೆಯ ಎಡಭಾಗದಿಂದ ಹತ್ತು ನಿಮಿಷಗಳ ಅಂತರದಲ್ಲಿ ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕ್ ಮತ್ತು ಬಲಭಾಗದಿಂದ ಇಪ್ಪತ್ತು ನಿಮಿಷಗಳ ಅಂತರದಲ್ಲಿ ಆರೇ‌ ಜಂಗಲ್ ಸ್ಥಿತವಾಗಿವೆ).

ತುಳಸಿ ಡ್ಯಾಂ ಮುಂಬಯಿಯ ಪ್ರಮುಖ ನೀರು ಸರಬರಾಜು ಮಾಡುವ ಭಾಗವಾಗಿದ್ದು, ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಬರುತ್ತದೆ. ಇದು ಮುಂಬಯಿಯ
 ದೊಡ್ಡ ಸರೋವರವಾಗಿದೆ..
1897ರಲ್ಲಿ ನಿರ್ಮಿತವಾದ ಈ ಡ್ಯಾಂ ತುಳಸಿ ಸರೋವರಕ್ಕೆ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪರಿಸರ ಮಾಲಿನ್ಯದಿಂದ ದೂರವಿದೆ.. ಈ ಜಲಾಶಯ ಹಕ್ಕಿಗಳ ವಲಸೆ ಪ್ರದೇಶವೆಂದೂ ಪ್ರಸಿದ್ಧಿ ‌ಪಡೆದಿದೆ..

ಪವಯಿ ಸರೋವರ (Powai Lake), ಮುಂಬಯಿಯ ಇನ್ನೊಂದು ಪ್ರಮುಖ ನೀರಿನ ಆಕರ್ಷಣೆಯಾಗಿದೆ..1891ರಲ್ಲಿ ನಿರ್ಮಿಸಲಾದ ಈ ಮಾನವಸೃಷ್ಟಿ ಸರೋವರ ಪಕ್ಷಿ ಪ್ರೇಮಿಗಳ, ಪ್ರವಾಸಿಗರ, ಮತ್ತು ಪ್ರಾಕೃತಿಕ ಸೌಂದರ್ಯಾಸಕ್ತರ ಆಕರ್ಷಣೆಯ ಕೇಂದ್ರವಾಗಿದೆ. ಪವಯಿ ಸರೋವರದ ತೀರದಲ್ಲಿ ಐಐಟಿ ಮುಂಬಯಿ (IIT Bombay) ಸ್ಥಿತವಾಗಿದೆ..

ಇದು ಮುಂಬಯಿಯ ಗರ್ಜಿಸುವ ವಾಹನಗಳ ಶಬ್ದದಿಂದ ದೂರವಾಗಿ ಪ್ರಾಕೃತಿಕ ಶಾಂತಿಯ ತೊಟ್ಟಿಲು ಎಂದು ಹೆಸರು ಪಡೆದಿದೆ.! ಆರೆ ಕಾಲೋನಿಯ ಒಳಭಾಗದಲ್ಲಿರುವ ಈ ಸುಂದರ ತಾಣ ಶೀತಲ ವಾತಾವರಣ, ಹಸಿರು ಬೆಟ್ಟಗಳು, ಹಾರುವ ಹಕ್ಕಿಗಳು, ಮತ್ತು ಶಾಂತ ಹೃದಯಾಕಾರದ ಸರೋವರದಿಂದ city’s lungs ಎಂದೇ ಕರೆಯಲ್ಪಡುವ ಪ್ರದೇಶಗಳಲ್ಲಿ ಒಂದಾಗಿದೆ.

ಈ ಪ್ರದೇಶವು ಮುಂಬಯಿಯ ನಾಗರಿಕರಿಗೆ ಸ್ವಲ್ಪ ಮಟ್ಟಿಗೆ ಶಾಂತಿ, ಸಮಾಧಾನಗಳನ್ಮು ನೀಡುವ ಪಿಕ್ನಿಕ್ ಹಾಗೂ ಫೋಟೋಗ್ರಫಿಯ ಸ್ಥಳ ಎನ್ನಬಹುದು. ಇಲ್ಲಿ ಬೋಟಿಂಗ್ ಸೌಲಭ್ಯವೂ ಇದ್ದು ಪೂರ್ಣ‌ಪ್ರದೇಶವೇ ಶೀತಲತೆಯ ಅನುಭವ ನೀಡುತ್ತದೆ. ಇದು ಚಿತ್ರಿಕರಣದ ಪ್ರಸಿದ್ಧ ತಾಣವೂ ಆಗಿದ್ದು, ನೂರಾರು ಬಾಲಿವುಡ್ ಚಲನಚಿತ್ರಗಳು ಇಲ್ಲಿ ಚಿತ್ರೀಕರಿಸಲ್ಪಟ್ಟಿವೆ. ವಾಸ್ತವವಾಗಿ, ಛೋಟಾ ಕಾಶ್ಮೀರ ಎಂದು ಕರೆಯಲ್ಪಡುವುದು ಇದರ ತಂಪಾದ ವಾತಾವರಣ ಮತ್ತು ಪ್ರಾಕೃತಿಕ ಸೌಂದರ್ಯದ ಕಾರಣ. ನಗರದ ಸದ್ದು ಗದ್ದಲಗಳಿಂದ ದೂರವಾಗಿ  ವಿಶ್ರಾಂತಿಯನ್ನು ಬಯಸುವವರಿಗಾಗಿ ಇದು ಹೇಳಿ ಮಾಡಿಸಿದಂತಿದೆ..

ಮುಂಬಯಿಯಿಂದ ಸುಮಾರು 120 ಕಿಲೋಮೀಟರ್ ದೂರದಲ್ಲಿರುವ ಡಹಾಣು-ಪಾಲ್ಘರ್ ಪ್ರದೇಶ, ತನ್ನ ಹಸಿರು ಕಾಡುಗಳು, ಸಮುದ್ರ ತೀರದ ಪ್ರಕೃತಿ ವೈಭವ, ಮತ್ತು ವಿಶಿಷ್ಟ ಆದಿವಾಸಿ ಜೀವನಶೈಲಿಯಿಂದ ಪ್ರಸಿದ್ಧವಾಗಿದೆ..

ದಟ್ಟವಾದ ಕಾಡುಗಳು, ಹಳ್ಳಿಗಳು, ತಗ್ಗು ಪ್ರದೇಶಗಳನ್ನು ಹೊಂದಿದ್ದು, ವಿವಿಧ ವನ್ಯಜೀವಿಗಳು  ಸಸ್ಯ ಸಂಪತ್ತುಗಳಿಲ್ಲಿ ಕಂಡುಬರುತ್ತವೆ..
ಡಹಾಣು ಪ್ರದೇಶದಲ್ಲಿ  ಸಪೋಟ ಹಣ್ಣಿನ ತೋಟಗಳು ಅಧಿಕವಾಗಿದ್ದು, ಸ್ವಚ್ಛ ಮನಮೋಹಕ ಬೀಚುಗಳು ಕಣ್ಮನಗಳನ್ನು ತಣಿಸುತ್ತವೆ..ಸಮುದ್ರ ತೀರಕ್ಕೆ ಹತ್ತಿರವಿರುವ ಈ ತೋಟ, ಹೊಲಗಳು ಪ್ರಕೃತಿಯೊಂದಿಗೆ ಜೀವಿಸುವ ಆದಿವಾಸಿಗಳ ಜೀವನದ ಒಂದು ಭಾಗವಾಗಿವೆ..

ಈ ಕಾಡುಗಳು ಮುಂಬಯಿಯ ಜೀವನಾಡಿಗಳಿದ್ದಂತೆ. ಇವುಗಳನ್ನು ಕಾಪಾಡುವುದು ನಗರದ ಪರಿಸರ ಸ್ಥಿರತೆಗೆ ಅತಿ ಅಗತ್ಯ. ಆಧುನಿಕತೆಯ ಬೆಳವಣಿಗೆಯ ಮಧ್ಯೆ ಪ್ರಕೃತಿಯ ಅಸ್ತಿತ್ವ ಉಳಿಯಬೇಕಾದರೆ ಈ ಕಾಡುಗಳನ್ನು ಸಂರಕ್ಷಿಸುವ ‌ಜವಾಬ್ದಾರಿಯ ಗಂಭೀರತೆಯನ್ನು ಎಲ್ಲರೂ ಅರಿಯಬೇಕು..ಹೀಗಾಗಿ ಮುಂಬಯಿ ಆಧುನಿಕ ಮಹಾನಗರವೂ ಸಹ ತನ್ನ ಹಸಿರು ಆವರಣವನ್ನು ಉಳಿಸಿ ಬೆಳೆಸಲು ಸತತ ಪ್ರಯತ್ನಗಳನ್ನು ಮಾಡುತ್ತಿದೆ..ಪರಿಸರ ಮಾಲಿನ್ಯ ಮಾಡದಂತೆ ಎಚ್ಚರಿಕೆ ವಹಿಸುವ ಜವಾಬ್ದಾರಿ ಈ ಸುಂದರ ಪ್ರದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರದೂ ಹೌದು..

ನಿಮಗೆ ಮುಂಬಯಿ ದರ್ಶನ ಮಾಡುವ‌‌ ಇಚ್ಛೆ ಇದ್ದರೆ ನವೆಂಬರ್ ತಿಂಗಳಿನಿಂದ ಫೆಬ್ರವರಿ ತಿಂಗಳಿನೊಳಗೆ ಭೇಟಿ ಕೊಡಿ..

————————̲————————————————————————————-

Leave a Reply

Back To Top