ಸುಧಾ ಹಡಿನಬಾಳ ಅವರ ಕವಿತೆ “ಆತ್ಮಾಹುತಿ”

ವಸಂತದಾಗಮನದೊಂದಿಗೆ
ಬರಲಿಲ್ಲ ನನ್ನ ಒಲವಿನ ಹಾಡು ಹಕ್ಕಿ
ಬಂದಿದ್ದು ಉದ್ದ ನಳಿಕೆಯಂತ ಕೊಕ್ಕಿನ
ಹಳದಿ ಕಪ್ಪಿನ ಮರ ಕುಟುಗನ ಹಕ್ಕಿ

ಬರಲಿ ಬಿಡಿ ಎಂದು ಮುಕ್ತ ಮನದಿ
ಸ್ವಾಗತಿಸಿದರೆ ಮನೆಯ ಮಾಳಿಗೆಯ
ಕಿಟಕಿಯ ಗಾಜಿನಲಿ ಇಣುಕಿಣುಕಿ
ನೋಡಿ ಕೊಕ್ಕು ಬಡಿದುಕೊಳ್ಳಲೇಕೆ?

ಕಟ್ ಕಟ್ ಎಂದು ಜೋರಾಗಿ
ಬಡಿಯುತ್ತಾ ನೋಯುವ ಹಕ್ಕಿಯ
ದ್ವೇಷ ಅದೆಷ್ಟು ಜನ್ಮದ್ದೋ ನಾಗರ
ಹಾವಿನಂತೆ! ಅಯ್ಯೋ ಸುಖಾ ಸುಮ್ಮನೆ ಸಾಯುವುದ ನೋಡುವುದೆಂತ ಕ್ರೌರ್ಯ?

ಓಡಿಸಿದಷ್ಟು ಪುರ್ರನೆ ಹಾರಿ ಪಕ್ಕದ ಕಿಟಕಿಯಲಿ ಮತ್ತದೆ ಬಡಿತ
ಊಹೂಂ ಕೈಗೆ ಸಿಗದು ಮಾತು ಕೇಳದು!
ಸೇಡಿನ ರಾಜಕಾರಣವಿದು ದಿನಾ
ಸಾಯುವವರಿಗೆ ಅಳುವವರಾರು??

ಆದರೂ ಬಡಿತದ ಹೊಡೆತ ಎದೆಗೆ ಬಡಿದು
ನೋವಿನ ಎಳೆ ದಿನವೂ ಮಿಡಿವುದು
ಕಿಟಕಿ ಗಾಜು ಒಡೆಯುತ್ತದೆಂದಲ್ಲ
ವ್ಯರ್ಥವಾಗಿ ಉಸಿರು ಕಳೆದುಕೊಳ್ಳುವುದೊ ಎಂದು
ಮದವೇರಿದ ಪುಂಡ ಹುಡುಗರಂತೆ!

ನಸು ಬೆಳಕಲಿ ಎದ್ದು ಕತ್ತೆತ್ತಿ ಕಿಟಕಿ
ಬಳಿ ನೋಡಲು ರುಂಡ ಮುಂಡ
ಬೇರೆಯಾಗಿ ಛಿದ್ರಗೊಂಡ ರೆಕ್ಕೆಪುಕ್ಕ
ದೊಂದಿಗೆ ಕುಟುಗನ ಆತ್ಮಾಹುತಿ!

ಮುಂಜಾನೆಯ ವಾಯುವಿಹಾರಕ್ಕೆ
ಸಾಥ್ ನೀಡುವ ನನ್ನೊಲವಿನ
ಹಕ್ಕಿಯ ಕೊರಳ ಯಾರೋ
ಎಂದೋ ಹಿಚುಕಿದ್ದಾಗಿದೆ
ಪಹಲ್ಗಾಮ್ ಉಗ್ರರಂತೆ

ಇಂದು ದ್ವೇಷಕ್ಕೆ ಆಹುತಿಯಾದ
ಮತ್ತೊಂದು ಮುಗ್ಧ ಹಕ್ಕಿಯ ಕಳೆಬರವ
ಕಂಡು ಅನಾಥವಾಗಿ ಶವವಾಗುವ ಕೋಮು ದಳ್ಳುರಿಗೆ ಬಲಿಯಾಗುವ

ಬಡವರ ಮನೆಯ ಕರುಳು ಬಳ್ಳಿಯ
ನೆನಪಾಗಿ ಹೃದಯ ಮೌನವಾಗಿ ನರಳಿತು
ಶಮನಗೊಳ್ಳಲಿ ದ್ವೇಷ ದಳ್ಳುರಿಯ ಕಿಚ್ಚು ಅಂತ್ಯವಾಗಲಿ ಜಾತಿ ಧರ್ಮದ ಹುಚ್ಚು
ಎಂದು ಮನ ತಣ್ಣಗೆ ಮಿಡಿಯಿತು


Leave a Reply

Back To Top