ಕಾವ್ಯ ಸಂಗಾತಿ
“ಹೆತ್ತವರ ಮುಸ್ಸಂಜೆಯಲ್ಲಿ ಊರುಗೋಲಾಗಿ. ಮಕ್ಕಳೇ”-
ಜಯಶ್ರೀ.ಭ.ಭಂಡಾರಿ

ಅಮ್ಮನೆಂದರೆ ನೆಮ್ಮದಿಯ ಆಗರ,ಅಮ್ಮನ ಮಡಿಲೆಂದರೆ ಪರಮಾತ್ಮನಿಗಿಂತ ಮಿಗಿಲು.ಅಮ್ಮ ಎಂದರೆ ಮೈ ಮನವೆಲ್ಲ ಹೂವಾಗುವುದಮ್ಮ ಎರಡಕ್ಷರದಲಿ ಏನಿದೆಯೋ .ಕಾಣೆ.. ಅಮ್ಮಾ.. ಅಮ್ಮಾ…..
ಈ ಅಮ್ಮ ಬಣ್ಣನೆಗೆ ಸಿಗದವಳು.ಸದಾ ಕಕ್ಕುಲಾತಿಯ ಕರುಳು.ತನ್ನನೆ ಸುತ್ತಿಕೊಂಡು ನೋವನುಂಗಿ ನಗುವಳು ಜಗವ ನಗಿಸುವಳು.
ತನಗಾಗಿ ಹಠವ ಮಾಡಳು.ಸದಾ ಸಂತೃಪ್ತಿಯನು ತೋರುವಳು. ಇಲ್ಲಗಳ ಸಂತೆಯಲ್ಲಿ ನಿಂತಿದ್ದರೂ ಸಂತಸ ಬೀರುವಳು.ಕೊರತೆಗಳ ಕೊರಗನು ದಾಟಿಕೊಂಡು ಮೇಲೆಳುವಳು.ಸಂಸಾರದ ನೊಗಕೆ ಹಗಲಿರುಳು ಕೊರಳ ನೀಡಿ ದಣಿಯದೆ ಮುನ್ನುಗ್ಗುವಳು.ತನಗಾಗಿ ಬದುಕ ಮರೆತವಳು.ಮಕ್ಕಳ ಹಿತದಲ್ಲಿ ತನ್ನ ಹಿತ ಕಂಡವಳು.ಮಗು ಹೊಟ್ಟೆ ತುಂಬ ಉಂಡರೆ ಹಸಿವನ್ನೆ ಮರೆತು ಸಗ್ಗವಾಗುತ್ತಾಳೆ. ತಂದೆಯಾದವನು ಹೊರಗೆ ದುಡಿದು ಮಕ್ಕಳ ಜವಾಬ್ದಾರಿಯನ್ನು ಹೊತ್ತುಕೊಂಡು ಭಾವಿ ಭವಿಷ್ಯತ್ತಿನ ರೂವಾರಿಯಾಗುತ್ತಾನೆ. ತನಗಾಗಿ ಏನನ್ನು ಕೊಳ್ಳದೆ ಎಲ್ಲವನ್ನು ಮಕ್ಕಳಿಗಾಗಿ ಖರೀದಿಸುತ್ತಾನೆ. ತನ್ನ ಹೆಗಲ ಮೇಲೆ ಕೂಡಿಸಿಕೊಂಡು ಪ್ರೀತಿಯಿಂದ ಸಲಹುತ್ತಾನೆ. ಅಪ್ಪನೆಂದರೆ ಆಕಾಶ ಅಂತ ಸುಮ್ಮನೆ ಹೇಳಿಲ್ಲ. ತಾಯಿ ಮಗುವಿನ ಹೊಟ್ಟೆ ನೆತ್ತಿಯನ್ನು ನೋಡಿ ಮುಚ್ಚದೆ ಬೆಳೆಸುತ್ತಾಳೆ ತಂದೆಯಾದವನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ನೈತಿಕವಾಗಿ ಒಬ್ಬ ಜವಾಬ್ದಾರಿಯುತ ಮನುಷ್ಯನನ್ನಾಗಿ ಮಾಡುತ್ತಾನೆ. ಬಡತನವೇನಿದ್ದರೂ ನಮ್ಮ ಪಾಲಿಗೆ ಇರಲಿ ನಮ್ಮ ಮಕ್ಕಳು ಬಡತನ ಸೋಕದಂತೆ ಬೆಳೆಯಲಿ ಎಂದು ತಮ್ಮ ನೋವುಗಳನ್ನು ಹಿಂದಕ್ಕೆ ಇರಿಸಿ ಅವರನ್ನು ಚೆನ್ನಾಗಿ ಇರಿಸಿ ಬೆಳೆಸುತ್ತಾರೆ. ಅವರಿಗೆ ಉತ್ತಮ ಭವಿಷ್ಯ ಕಟ್ಟಿಕೊಡಲು ಹೆಣಗುತ್ತಾರೆ. ಮಕ್ಕಳಿಗೆ ಸಾಕ್ಸ್ ಶೂ ಯುನಿಫಾರ್ಮ್ ಸ್ಕೂಲ್ ಬ್ಯಾಗ್ ಏನೆಲ್ಲಾ ಕೊಡಿಸುತ್ತಾನೆ ತಾನು ಮಾತ್ರ ಹವಾಯಿ ಚಪ್ಪಲಿ ಧರಿಸಿ ಸಾದಾ ಸೀದಾ ಬಟ್ಟೆ ಹಾಕುತ್ತಾನೆ. ತಾವು ಕಡಿಮೆ ಉಂಡರು ಚಿಂತೆ ಇಲ್ಲ ಮಕ್ಕಳು ಮಾತ್ರ ಹೊಟ್ಟೆ ತುಂಬಾ ಉಣ್ಣಬೇಕು ಹಾಗೂ ಅವರು ಕೇಳಿದ್ದನ್ನೆಲ್ಲ ತಂದುಕೊಟ್ಟು ಸಂತೃಪ್ತಿ ಪಡುತ್ತಾರೆ. ಇಷ್ಟೆಲ್ಲ ಮಾಡಿದಾಗಲೂ ಕೂಡ ಬೆಳೆದು ದೊಡ್ಡವರಾದ ಮಕ್ಕಳು ತಂದೆ ತಾಯಿಗಳ ಮುಸ್ಸಂಜೆಯಲ್ಲಿ ಅವರನ್ನು ಯಾಕೆ ನೋಡಿಕೊಳ್ಳುವುದಿಲ್ಲ ಎಂಬುದೇ ಯಕ್ಷಪ್ರಶ್ನೆ.
,”ಮಕ್ಕಳ ಕೊಡು ಶಿವನೇ ಮತ್ತೊಂದು ನಾವಲ್ಲೆ.,
ಹತ್ತು ಮಂಡ್ಯಾಗ ಹರಿ ನೀರು ತರುವಂತ
ಮುತ್ತೈದೆತನ ಕೊಡು ಶಿವನೇ.”..
“ಆಡಿ ಬಾ ನನ್ನ ಕಂದ ಅಂಗಾಲ ತೊಳೆದೆನ
ತೆಂಗಿನ ತಿಳಿ ನೀರ ತಕ್ಕೊಂಡು
ಬಂಗಾರದ ಮಾರಿ ತೊಳೆದೆನ.”..
ಜಾನಪದ ತಾಯಿ ಕೋರುತ್ತಾಳೆ. ಈ ತಾಯಿಗೆ ಮಕ್ಕಳೆಂದರೆ ಅದೆಷ್ಟು ಪ್ರೀತಿ. ತನ್ನ ರಕ್ತ ಹಂಚಿಕೊಂಡು ಹುಟ್ಟಿದ ಮಗುವಿಗೆ ಕೊಂಚ ಕೂಡ ಕಷ್ಟ ತಾಗದಂತೆ ಬೆಳೆಸುತ್ತಾಳೆ.
ಏನಿವಳ ಮಹಿಮೆ?…..ಯಾರು ತುಂಬಿದರು ಈ ಬಣ್ಣನೆಗೆ ಸಿಗದ ಗುಣಗಳನು.ತಾಳಿ ಕಟ್ಟಿಕೊಂಡು ತಾಳ್ಮೆಯಿಂದ ಗಂಡನ ಹೆಗಲೇಣಿಯಾಗಿ ಬದುಕಿನ ಅತ್ಯಂತ ಸುಂದರ ಉತ್ಸಾಹದ ಒರತೆಯಾಗುತ್ತಾಳೆ. ಇಡೀ ಸಂಸಾರಕ್ಕೆ ಕಿಂಚಿತ್ ನೋವಬಾರದಂತೆ ಸಲಹುತ್ತಾಳೆ.ಬಳ್ಳಿಗೆ ಕಾಯಿ ಭಾರವೆಂಬಂತೆ ಎಲ್ಲ ಮಕ್ಕಳನ್ನು ಸಮನಾಗಿ ಪೋಷಿಸುತ್ತಾಳೆ.ಹತ್ತು ಮಕ್ಕಳಿದ್ದರೂ ಸಾಯಿ.ಆದರೆ ದುರದೃಷ್ಟವೆಂದರೆ ಹತ್ತು ಮಕ್ಕಳಿದ್ದರೂ ಒಬ್ಬ ತಾಯಿಯನ್ನ ನೋಡಿಕೊಳ್ಳುತ್ತಿಲ್ಲ. ಸಾಹಸಕೆ,ಧೈರ್ಯಕೆ ತನ್ನನೆ ಒಡ್ಡಿಕೊಳ್ಳುತ್ತಾಳೆ. ಬಂದದ್ದೆಲ್ಲ ಬರಲಿ ದೇವನ ಒಲುಮೆ ಇರಲಿ ಎಂದು ಸದಾ ದೇವರಲಿ ಕೋರುತ್ತಾಳೆ ವಿನಃ ಕೊರಗಲಾರಳು.
ಜಗತ್ತನ್ನು ಮರೆತು ಇರಬಹುದು ತಾಯಿಯನ್ನು ಮರೆತು ಕ್ಷಣ ಇರಲಾಗದು.ಸೃಷ್ಠಿಯ ಅದಮ್ಯಚೇತನಕೆ ಈ ತಾಯಿ ಇವಳಿಗೆ ಅದಾವ ಹೋಲಿಕೆ ಸಾಟಿ ಹೇಳಿ?
ಒಂದು ಜೀವದ ಸೃಷ್ಠಿಗೆ ತನ್ನ ಜೀವವನ್ನೇ ಪಣವಾಗಿಸುತ್ತಾಳೆ
ಬಸಿರು ಬಾಣಂತನ ಅಂತ ತನ್ನ ದೇಹವನ್ನೆ ದಂಡಿಸುವಲ್ಲಿ ವಿನೂತನ ಸುಖ ಅನುಭವಿಸುತ್ತಾಳೆ. ಮಗುವಿನ ಲಾಲನೆ ಪಾಲನೆಯಲ್ಲಿ ತನ್ನ ತಾ ಮರೆಯುತ್ತಾಳೆ.ಸಂಸಾರದ ಏನೇ ಜಂಜಡವಿದ್ದರೂ ಮಗುವಿಗೆ ತಾಕದಂತೆ ಸೋಕದಂತೆ ಬೆಳೆಸುತ್ತಾಳೆ.
ಮಗುವಿನ ಪ್ರತಿಹಂತದ ಬೆಳವಣಿಗೆಯಲ್ಲಿ ಆಸರೆಯಾಗಿ ನಿಲ್ಲುತ್ತಾಳೆ.
ತಾಯಿಯೇ ದೇವರು:- ದೇವರು ತಾನು ಎಲ್ಲಕಡೆ ಇರಲಾಗುವುದಿಲ್ಲವೆಂದೆ ಪ್ರತಿಮನೆಗೂ ತಾಯಿಯನ್ನು ಸೃಷ್ಠಿಸಿದನಂತೆ.ಮಾತೃದೇವೋ ಭವ ಎಂಬ ವಾಣಿ ಸದಾ ಎಲ್ಲಕಡೆ ಜನಜನಿತವಾಗಿದೆ.
ಅವಳು ನೋಡಲು ಹೇಗೆ ಇರಲಿ ಮಾಸಿದ ಸೀರೆಯೇ ಇರಲಿ ಗುಣದಲ್ಲಿ ವಾತ್ಸಲ್ಯಮಯಿ. ಅಮ್ಮನೆಂದರೆ ಆನಂದ, ಅಮ್ಮನೆಂದರೆ ಅಂಬರ,ಅಮ್ಮನೆಂದರೆ ದಿವ್ಯೌಷಧ,ಅಮ್ಮನೆಂದರೆ ಅಮೃತ,ಅಮ್ಮನೆಂದರೆ ಕಡಲು,
ಅಮ್ಮನೆಂದರೆ ನೆಮ್ಮದಿಯ ಆಗರ,ಅಮ್ಮನ ಮಡಿಲೆಂದರೆ ಪರಮಾತ್ಮನಿಗಿಂತ ಮಿಗಿಲು.
ಜಾನಪದದಲ್ಲಿ ಅಮ್ಮನಿಗೆ ಸಾಕಷ್ಟು ತ್ರಿಪದಿ ರೂಪದ ಹಾಡುಗಳಿವೆ. “ತಾಯಿ ಇಲ್ಲದ ತವರಿಗೆ ಹೋಗದಿರು
ನನ್ನ ಮನವೇ, ನೀರಿಲ್ಲದ ಕೆರೆಗೆ ಕರು ಹೋಗಿ ಬಂದಂತೆ ಎಲೆ ಮನವೇ..
“ಹಾಲುಂಡ ತವರಿಗೆ ಏನೆಂದು ಹರಸಲೇ
ಹೊಳೆ ದಂಡೆಲಿರುವ ಕರಕೀಯ ಕುಡಿಯಂಗ
ಹಬ್ಬಲೆ ಅವರ ರಸಬಳ್ಳಿ.”
ಹೀಗೆ ತಾಯಿ ಹಾಗೂ ತವರಿನ ಕುರಿತು ಸಾಕಷ್ಟು ಹಾಡುಗಳು ಸಿಗುತ್ತವೆ. ತನ್ನೆಲ್ಲ ನೋವು, ನಲಿವುಗಳಿಗೆ ಶಬ್ದರೂಪ ನೀಡಿ ಹಾಡಿ ಮರೆಯುತ್ತಿದ್ದಳು. ಆಗಿನ ಕಾಲದಲ್ಲೂ ತಾಯಿ ಸುಖವನ್ನು ಪಡೆದವಳೇ ಅಲ್ಲ.ನೋವನ್ನು ಸೆರಗಿನಲ್ಲಿ ಕಟ್ಟಿಕೊಂಡು ಬದುಕಿದವಳು. ಇಂದಿನ ಆಧುನಿಕ ಯುಗದಲ್ಲಿ ವಯಸ್ಸಾದ
ತಂದೆ ತಾಯಿಗಳನ್ನು ನೋಡಿಕೊಳ್ಳುವುದೇ ಸವಾಲಾಗಿ ಪರಿಣಮಿಸಿದೆ. ವೃದ್ಧಾಶ್ರಮಗಳು ಹೆಚ್ಚಾಗುತ್ತಲೇ ಸಾಗಿವೆ. ಎಷ್ಟೆಲ್ಲಾ ದುಡಿದು ಶ್ರಮಪಟ್ಟು ಆಸ್ತಿ ಮಾಡಿ ಮಕ್ಕಳನ್ನು ಓದಿಸಿ ಬೆಳೆಸಿದರೂ ಕೂಡ ವೃದ್ಧಾಪ್ಯದಲ್ಲಿ ಮಕ್ಕಳು ಆಸರೆ ಮೊಮ್ಮಕ್ಕಳ ಆಟ ಪಾಠ ಅವರಿಗೆ ಸಿಗುತ್ತಿಲ್ಲ. ಎಷ್ಟೋ ಮಕ್ಕಳು ವಿದೇಶಗಳಲ್ಲಿ ನೆಲೆಸಿ ತಮ್ಮ ಹೆತ್ತವರನ್ನು ಮರೆತು ಬಿಡುತ್ತಾರೆ ಕೊನೆಗಾಲದಲ್ಲಿಯೂ ಕೂಡ ಬರಲಾಗದ ದುಸ್ಥಿತಿ ಬಂದೊದಗಿದೆ .ತಂದೆ ತಾಯಿಗಳು ಮಾನಸಿಕ ತೊಳಲಾಟಕ್ಕೆ ಗುರಿಯಾಗುತ್ತಿದ್ದಾರೆ. ಮುಸ್ಸಂಜೆಯ ಬಾಳಿನಲ್ಲಿ ಬದುಕು ದುಸ್ತರವಾಗಿ ಕಣ್ಣೀರಾಗುತ್ತಿದೆ. ಎಷ್ಟೋ ಹಿರಿಯರು ಅನಾಥವಾಗಿ ಸಾಯುವುದನ್ನ ಕಣ್ಣಾರೆ ಕಾಣಬಹುದಾಗಿದೆ. ಮನುಷ್ಯನ ಜೀವಕೆ ಬೆಲೆಯೇ ಇಲ್ಲ. ವಸ್ತುಗಳನ್ನು ಹೆಚ್ಚಾಗಿ ಪ್ರೀತಿಸುವ ಜನ ಬಂದುತ್ವವನ್ನು ಕಡೆಗಣಿಸುತ್ತಿದ್ದಾರೆ.ಅಲ್ಲವೇ.. ಅಪ್ಪ ಅಮ್ಮ ಕಟ್ಟಿಸಿದ ಮನೆಯಲ್ಲಿ ಮಕ್ಕಳು ಬದುಕುತ್ತಾರೆ ಮಕ್ಕಳು ಕಟ್ಟಿಸಿದ ಮನೆಯಲ್ಲಿ ತಂದೆ ತಾಯಿಗಳು ಬದುಕಲು ಆಗುತ್ತಿಲ್ಲ. ಕಾರಣ ವಯಸ್ಸಾದವರು ಮನೆಯಲ್ಲಿದ್ದರೆ ಮನೆಯ ಸೌಂದರ್ಯವು ಹಾಳಾಗುತ್ತದೆ. ತಮಗೂ ಒಂದು ದಿನ ವಯಸ್ಸಾಗುತ್ತದೆ ಅನ್ನೋದನ್ನ ಈ ಮಕ್ಕಳು ಮರೆತೆ ಬಿಟ್ಟಿದ್ದಾರೆ. ಮೊದಲಿನ ಅವಿಭಕ್ತ ಕುಟುಂಬ ಪದ್ಧತಿ ನಿಜವಾಗಿಯೂ ಸ್ಮರಣೀಯ ಹಾಗೂ ಶ್ಲಾಘನೀಯ.
. ಇಂದಿನ ವಿಭಕ್ತ ಕುಟುಂಬ ಪದ್ಧತಿ ಶೋಚನೀಯ ಹಾಗೂ ಅಡ್ಡಿ ಆತಂಕಗಳಿಂದ ಕೂಡಿದೆ.
ಆದರೆ ವಿಭಕ್ತ ಕುಟುಂಬಗಳಲ್ಲಿ ನಾವು ಚೆನ್ನಾಗಿದ್ದೇವೆ ಅಂತ ಅಂದುಕೊಂಡಿದ್ದಾರೆ. ಆದರೆ ಅವರ ಮಾನಸಿಕ ಸ್ವಾಸ್ಥ ಹಾಗೂ ದೈಹಿಕ ಸ್ವಾಸ್ಥ ಹಾಳಾಗುತ್ತಿರುವುದನ್ನು ಅವರು ಕಡೆಗಣಿಸುತ್ತಿದ್ದಾರೆ. ಒಂದೇ ಅಥವಾ ಎರಡು ಮಕ್ಕಳು ಹಠಮಾರಿಗಳಾಗಿ ಬೆಳೆಯುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಒಂಟಿತನದ ಬದುಕು. ವಿಭಕ್ತ ಕುಟುಂಬಗಳಲ್ಲಿ ತಂದೆ ತಾಯಿಗಳು ಇಬ್ಬರು ದುಡಿಯುವುದರಿಂದ ಮಕ್ಕಳು ಮನೆಯಲ್ಲಿ ಏಕಾಂಗಿತನವನ್ನು ಅನುಭವಿಸುತ್ತಾರೆ ತಂದೆ ತಾಯಿಗಳ ಪ್ರೀತಿ ಸಿಗದೇ ವಂಚಿತರಾಗುತ್ತಿದ್ದಾರೆ. ಎಲ್ಲವೂ ಕೆಲಸದ ಅಳುಗಳ ಮೇಲೆ ನಿರ್ಧರಿತವಾಗಿ ಮಕ್ಕಳ ಜೀವನ ಅಯೋಮಯವಾಗಿದೆ. ಅಜ್ಜ ಅಜ್ಜಿಯರ ಸಾಮೀಪ್ಯವಂತೂ ದೂರದ ಮಾತು ಆದರೆ
ಸಾವೃದ್ಧಾಪ್ಯದಲ್ಲಿ ತಂದೆ ತಾಯಿಗಳಿಗೆ ಮಕ್ಕಳ ಮೊಮ್ಮಕ್ಕಳ ಸಾಮಿಪ್ಯ ಬೇಕು. ಮೊಮ್ಮಕ್ಕಳ ಆಟ ಪಾಠ ನೋಡುತ್ತಾ ಅವರ ಬದುಕಿನ ಮುಸ್ಸಂಜೆ ಅವರಿಗೆ ಇದೆ. ಅಂತೆಯೇ ಮೊಮ್ಮಕ್ಕಳು ಕೂಡ ಅಜ್ಜ ಅಜ್ಜಿಯರ ಜೊತೆಗೆ ಬೆಳೆದರೆ ಅವರಿಗೂ ಆಯಗಳು , ಕೆರಟೇಕರ ಕಿರಿಕಿರಿಯ ಸಾಮಿಪ್ಯದಿಂದ ಮುಕ್ತವಾಗಿ ಆರಾಮವಾಗಿ, ಆರೋಗ್ಯವಾಗಿ ಬೆಳೆಯುತ್ತಾರೆ. “ಕೂಡಿ ಬಾಳಿದರೆ ಸ್ವರ್ಗ ಸುಖ.” ಎಂಬ ನಾಣ್ಣುಡಿ ಯಾವಾಗಲು ಸುಳ್ಳಾಗಲಾರದು. “ಹಿರಿಯರನ್ನು ಗೌರವಿಸಿದರೆ ದೇವರನ್ನು ಪೂಜಿಸಿದಂತೆಯೇ” ಸರಿ. ಇಂದು ಈ ಸಂಗತಿಯನ್ನು ನಮ್ಮ ಆಧುನಿಕ ಪೀಳಿಗೆ ತಿಳಿದುಕೊಂಡು ಜಾಗೃತವಾಗಬೇಕಿದೆ. ವೃದ್ಧಾಶ್ರಮಕ್ಕೆ ತಂದೆ ತಾಯಿಗಳನ್ನು ದೂಡಿ ಕೈ ತೊಳೆದುಕೊಳ್ಳುವ ಕೆಟ್ಟ ಪದ್ದತಿ ಸಮಾಜದಿಂದ ನಿರ್ನಾಮವಾಗಬೇಕು ಕೂಡು ಕುಟುಂಬ ಎಲ್ಲರಿಗೂ ಮಾನಸಿಕ ನೆಮ್ಮದಿ, ಉತ್ಸಾಹ ,ಬದುಕಿನ ಭರವಸೆ ತುಂಬಿಕೊಡುತ್ತವೆ ನೆನಪಿರಲಿ.
ಜಯಶ್ರೀ.ಭ.ಭಂಡಾರಿ.
