ಲಹರಿ ಸಂಗಾತಿ
ಜಯಲಕ್ಷ್ಮಿ ಕೆ.
“ರೆಕ್ಕೆ ಬಲಿತ ಮೇಲೆ….”

ಶರ್ಮಣ್ಣಾ.. ನಮ್ಮ ಮನೆಯ ಎಲೆಕ್ಟ್ರಿಕ್ ಬೋರ್ಡ್ ಬಾಕ್ಸ್ ಒಳಗಡೆ ಯಾವುದೋ ಒಂದು ಪಕ್ಷಿ ಭದ್ರವಾಗಿ ಗೂಡು ಕಟ್ಟಿದೆ.” ಎಂದು ದಿನದ ವಿಶೇಷವೆಂಬಂತೆ ಅಣ್ಣನಿಗೆ ಫೋನ್ ನಲ್ಲಿ ಹೇಳಿದಾಗ ” ಇರಲಿ ಬಿಡು, ಪಕ್ಷಿ ಗೂಡು ತಾನೇ..? ಹಾವಲ್ಲವಲ್ಲ..? ಅದಕ್ಕೇಕೆ ಅಷ್ಟು ಆತಂಕ? ” ಎಂದರು ನಮ್ಮಣ್ಣ ಜಯಶಂಕರ್ ಶರ್ಮ. ಇರಲಿ, ಯಾವ ಪಕ್ಷಿ ಬರುತ್ತದೆ ನೋಡುವ ಎಂದು ನಾನು ಆಗಾಗ ಗೂಡಿನತ್ತ ದಿಟ್ಟಿ ಹರಿಸುತ್ತಲೇ ಇದ್ದೆ.ಆದರೆ ಒಂದು ದಿನ ಬ್ಯಾಂಕ್ ನಲ್ಲಿನ ಏನೋ ಕೆಲಸದ ನಿಮಿತ್ತ ನಾನು ಪೇಟೆಗೆ ಹೋಗಿ ಬರುವಷ್ಟರಲ್ಲಿ ಆ ಪಕ್ಷಿ ಗೂಡು ಪುಡಿ ಪುಡಿಯಾಗಿ ನೆಲದಲ್ಲಿ ಬಿದ್ದಿತ್ತು. ಏನಾಗಿರಬಹುದು… ಹಾವೇನಾದರೂ ಬಂದು ಗೂಡನ್ನು ಕೆಡವಿರಬಹುದು ಎಂದು ಭಾವಿಸಲು ಆ ಗೂಡಿನಲ್ಲಿ ಮೊಟ್ಟೆಗಳೇ ಇರಲಿಲ್ಲ! ಮತ್ತೆ ಗೊತ್ತಾಯ್ತು.. ಕರೆಂಟ್ ಬಿಲ್ ಕೊಡುವಾತ ಮೀಟರ್ ಓದಿ, ಅಲ್ಲಿದ್ದ ಗೂಡನ್ನು ಕಿತ್ತು ಹಾಕಿದ್ದ. ಸಂಜೆ ಸಿಕ್ಕಾಗ ಇವರ ಬಳಿ ” ಪಕ್ಷಿ ಗೂಡು ಕಟ್ಟಿ ಅಲ್ಲಿ ಮೊಟ್ಟೆ ಇಟ್ಟರೆ ಮತ್ತೆ ಅಲ್ಲಿ ಹಾವುಗಳು ಬಂದು ಸೇರಿಕೊಳ್ಳುತ್ತವೆ. ಅದಕ್ಕೆ ಗೂಡನ್ನು ಕಿತ್ತು ಹಾಕಿದ್ದೇನೆ ” ಎಂದು ಹೇಳಿದ್ದ. ಆ ವರದಿಯನ್ನು ಕೂಡಾ ಶರ್ಮಣ್ಣನಿಗೆ ಒಪ್ಪಿಸಿದೆ. ಇದಾದ ಎರಡೇ ದಿನಗಳಲ್ಲಿ ನಮ್ಮ ಮನೆಯ ಬಾಗಿಲಿನ ಹತ್ತಿರದ ಕಿಟಕಿಯ ಬಳಿಯಲ್ಲಿ ಸಮೃದ್ಧವಾಗಿ ಬೆಳೆದಿದ್ದ ಹಸಿರು ಗಿಡಗಳ ಕೊಂಬೆಯಲ್ಲಿ ಮತ್ತೆ ಭದ್ರವಾದ ಪಕ್ಷಿಗೂಡು ರಚನೆಯಾಗಿತ್ತು!! ಆ ದಿನವೇ ಕೆಂಪು ಮೀಸೆಯ ಬುಲ್ ಬುಲ್ ಪಕ್ಷಿಗಳೆರಡು ನಮ್ಮ ಅಂಗಳದಲ್ಲಿ ಖುಷಿಯಾಗಿ ಹಾರಾಡುವುದು ಕಂಡಿತು. ನಮ್ಮ ಕಿಟಕಿಯ ಬದಿಯ ಗೂಡು ಈ ಬುಲ್ ಬುಲ್ ಪಕ್ಷಿಗಳ ಪ್ರೇಮದರಮನೆ ಎನ್ನುವುದು ಆಗ ಸ್ಪಷ್ಟವಾಯಿತು. ಅಂದಿನಿಂದ ಹೂ ಗಿಡಗಳಿಗೆ ನೀರು ಹಾಕುವ ಸಂದರ್ಭದಲ್ಲೆಲ್ಲ ನಮ್ಮವರು ಪಕ್ಷಿಗೂಡು ನೆನೆಯದಂತೆ ಕಾಳಜಿ ವಹಿಸತೊಡಗಿದರು. ಬುಲ್ ಬುಲ್ ಪಕ್ಷಿ ಎಂದು ಮೊಟ್ಟೆಗಳನ್ನಿಡುವುದೋ ಎಂಬ ಕುತೂಹಲದಲ್ಲಿ ನಾನಿದ್ದೆ. ಎರಡೇ ದಿನಗಳಲ್ಲಿ ಮೂರು ಮೊಟ್ಟೆಗಳು ಗೂಡನ್ನು ಅಲಂಕರಿಸಿದವು!! ತಂದೆ – ತಾಯಿ ಪಕ್ಷಿಗಳೆರಡೂ ಮೊಟ್ಟೆಗಳ ಬಗ್ಗೆ ಕಾಳಜಿ ವಹಿಸತೊಡಗಿದವು. ಬೆಳಗಿನಿಂದ ರಾತ್ರಿಯವರೆಗೂ ಮೊಟ್ಟೆಗಳ ಮೇಲೆಯೇ ಕುಳಿತಿರುತ್ತಿದ್ದ ತಾಯಿ ಪಕ್ಷಿಗೆ ಹಸಿವು ಬಾಯಾರಿಕೆಗಳ ಪರಿವೆಯೇ ಇರಲಿಲ್ಲ. ನಾವು ಗೂಡಿನ ಸಮೀಪವೇ ಸುಳಿದಾಡಿದರೂ ಅದಕ್ಕೆ ಭಯವಿಲ್ಲ. ಭಯ ಆಗುತ್ತಿರಲಿಲ್ಲವೋ ಅಥವಾ ನಾವು ಗೂಡನ್ನು ಕೆಡವಿ ಬಿಡಬಹುದು ಎಂದು ಮೊಟ್ಟೆಗಳನ್ನು ಬಿಟ್ಟು ಹಾರಲು ಧೈರ್ಯವಿರಲಿಲ್ಲವೋ.. ಗೊತ್ತಿಲ್ಲ. ಅಂತೂ ಒಮ್ಮೆ ತಾಯಿ ಪಕ್ಷಿ ಗೂಡನ್ನು ಬಿಟ್ಟು ಹಾರಿದ ಸಮಯ ನೋಡಿ ನಾನು ಒಂದು ಫೋಟೋ ಕ್ಲಿಕ್ಕಿಸಿದೆ. ಒಂದೇ ಒಂದು ಫೋಟೋ… ಅಷ್ಟರಲ್ಲಿ ಹಾರಿ ಬಂತು ನೋಡಿ ಗಂಡು ಪಕ್ಷಿ!! ನನ್ನ ಮುಖದೆದುರು ಕಣ್ಣಿಗೆ ತೀರಾ ಸಮೀಪದಲ್ಲಿ ” ರಪ್ಪನೆ ” ಗರಿ ಬಿಚ್ಚಿ ಮೈ ಉಬ್ಬಿಸಿ ಹಾರಿದ ಆ ಪಕ್ಷಿಯ ಆಕ್ರಮಣ ಎಷ್ಟು ಒರಟಾಗಿ ಇತ್ತು ಎಂದರೆ… ನಿಜಕ್ಕೂ ಭಯ ಹುಟ್ಟಿಸಿತ್ತು. ಆ ಗಳಿಗೆಯಲ್ಲಿಯೇ.. ತಕ್ಷಣವೇ ತಾಯಿ ಪಕ್ಷಿ ಬಂದು ಮೊಟ್ಟೆಗಳ ಮೇಲೆ ಕುಳಿತುಬಿಟ್ಟಿತು. ರಿಲೀವರ್ ಆಗಿ ಆ ಗಂಡು ಪಕ್ಷಿ ಬಂದಿದ್ದು ಎಂದು ಆಗ ತಿಳಿಯಿತು.ನಾವು ಬಾಗಿಲು ತೆರೆದು ಮನೆಯ ಒಳ ಹೊರಗೆ ಓಡಾಡುವಾಗ ಮೊಟ್ಟೆಗಳ ಮೇಲೆ ಕುಳಿತಿದ್ದ ಪಕ್ಷಿ ಬಹು ಹತ್ತಿರದಿಂದ ನಮ್ಮನ್ನು ದುರುಗುಟ್ಟಿ ನೋಡುತ್ತಿತ್ತೇ ಹೊರತು ಅಲ್ಲಿಂದ ಎದ್ದು ಹಾರುತ್ತಿರಲಿಲ್ಲ. ನಮ್ಮನ್ನು ನೋಡಿದಾಗಲೆಲ್ಲ ಮೈ ಉಬ್ಬಿಸಿ ದಿಟ್ಟಿಸುತ್ತಿದ್ದ ಅದರ ಆಕ್ರಮಣಕಾರಿ ನೋಟ ಕಂಡು ನಾವು ಸದ್ದಿಲ್ಲದೇ ಬಾಗಿಲು ತೆರೆಯುವ ಅಭ್ಯಾಸ ಮಾಡಿಕೊಂಡೆವು. ಆದರೂ ಅದೆಷ್ಟೋ ಬಾರಿ ನಾವು ಹೊರಗಡೆ ಹೋಗುವ ನಿಮಿತ್ತ ಬಾಗಿಲು ಹಾಕಿ ಲಾಕ್ ಮಾಡಿಕೊಳ್ಳುವುದಕ್ಕೂ ಅನುವು ಮಾಡಿ ಕೊಡದ ತಾಯಿ ಪಕ್ಷಿ ಗೂಡಿನಿಂದ ಹೊರ ಬಂದು ನಮ್ಮ ಮುಖಕ್ಕೆ ಅಪ್ಪಳಿಸುವಂತೆ ರೆಕ್ಕೆ ಬಡಿದು ನಮ್ಮನ್ನು ಹೆದರಿಸುತ್ತಿತ್ತು. ನಾಲ್ಕೈದು ದಿನಗಳಲ್ಲಿ ಮೊಟ್ಟೆ ಒಡೆದು ಎಳೆ ಮರಿಗಳು ಕೊಕ್ಕು ಹೊರ ತೋರಲಾರಂಭಿಸಿದವು.ತಾಯಿ ಹೊತ್ತು ತಂದಾಗಲಂತೂ ಇವುಗಳ ಸಂಭ್ರಮ ಹೇಳತೀರದು. ತಾಯಿ ಕೊಕ್ಕಿನಿಂದ ಮರಿಗಳಿಗೆ ಗುಟುಕು ಕೊಡುವ ಚಿತ್ರಣ ನಿಜಕ್ಕೂ ಅಪೂರ್ವ! ತಾಯಿ ಆಹಾರ ತರಲು ಹೋಗಿದ್ದ ಸಮಯ ನೋಡಿ ಭಯದಿಂದಲೇ ಮರಿಗಳ ಫೋಟೋ ತೆಗೆದೆ. ಆಗಲೂ ಅಷ್ಟೇ.. ದಿಡೀರ್ ಪಕ್ಷಿ ಪ್ರತ್ಯಕ್ಷ! ತಾಯಿ ಪಕ್ಷಿ ಗುಟುಕು ಕೊಡುವಾಗ ಹತ್ತಿರದಿಂದ ಫೋಟೋ ತೆಗೆಯಬೇಕೆಂಬ ನನ್ನ ಆಸೆ ಈಡೇರಲೇ ಇಲ್ಲ. ಒಮ್ಮೆ ತಾಯಿ ಕೊಕ್ಕಿನಿಂದ ಉಣಿಸುತ್ತಿರಬೇಕಾದರೆ ಕಿಟಕಿ ಗಾಜಿನೊಳಗಿನಿಂದಲೇ ನಾನು ಫೋಟೋ ತೆಗೆದರೂ ತಾಯಿ ಪಕ್ಷಿ ಹಾರಿ ಬಂದು ಕಿಟಕಿ ಗಾಜನ್ನು ಕುಕ್ಕಿ ತನ್ನ ಸಿಟ್ಟನ್ನು ಪ್ರದರ್ಶಿಸಿತ್ತು. ಎಷ್ಟು ಸೂಕ್ಷ್ಮ…!!ಅದೆಷ್ಟು ಕಾಳಜಿ..!ಮರಿಗಳ ಬಗ್ಗೆ ಅದೆಂಥ ಮಮತೆ!! ಯಾವ ವಿಶ್ವವಿದ್ಯಾಲಯದ ಟ್ರೇನಿಂಗೊ!! ದಿನವೊಂದಕ್ಕೆ ಏಳು -ಎಂಟು ಬಾರಿ ಹುಳು- ಹುಪ್ಪಟೆಗಳನ್ನು ತನ್ನ ಕೊಕ್ಕಿನಲ್ಲಿ ಹೊತ್ತು ತರುತ್ತಿದ್ದ ತಾಯಿ ಪಕ್ಷಿ ತನ್ನ ಕೊಕ್ಕಿನೊಳಗೆಯೇ ಆಹಾರವನ್ನು ಹದಗೊಳಿಸಿ ಮರಿಗಳಿಗೆ ಗುಟುಕು ಕೊಡುವ ದೃಶ್ಯ ನೋಡಲು ಚಂದ.. ಆಪ್ಯಾಯಮಾನ.
ಈ ಬುಲ್ ಬುಲ್ ಪಕ್ಷಿ ನಮ್ಮನ್ನು ಮಾತ್ರ ಹೆದರಿಸುತ್ತಿದ್ದುದಲ್ಲ, ಬೇರಾವ ಪಕ್ಷಿಗಳನ್ನೂ ಸುಳಿಯಲು ಬಿಡುತ್ತಿರಲಿಲ್ಲ. ಇವುಗಳ ಆಕ್ರಮಣ ಹಾರಾಟಕ್ಕೆ ಅಂಜಿ ಪ್ರತಿನಿತ್ಯ ನಮ್ಮ ಮನೆ ಅಂಗಳದಲ್ಲೇ ಓಡಾಡಿಕೊಂಡು, ಹಾರಿಕೊಂಡು, ಹೂ ಗಿಡಗಳಿಂದ ಹುಳ ಕೀಟಗಳನ್ನು ಹೆಕ್ಕಿ ತಿನ್ನುತ್ತಾ, ನೀರು ಕುಡಿಯುತ್ತಾ ಖುಷಿ ಖುಷಿಯಾಗಿದ್ದ ಕೆಂಬೂತ, ಮಿಂಚುಳ್ಳಿ, ಗುಬ್ಬಚ್ಚಿ ಮೊದಲಾದ ಪಕ್ಷಿಗಳು ಆಹಾರ ನೀರು ಸೇವಿಸುವುದಿರಲಿ, ಇತ್ತ ಹಾರಿ ಬರಲೂ ಹೆದರುತ್ತಿದ್ದವು. ಅಷ್ಟು ತಾಕತ್ತಿದೆ ಈ ಪುಟ್ಟ ಬುಲ್ ಬುಲ್ ಪಕ್ಷಿಗೆ!!! ಪಕ್ಷಿ ಗೂಡು, ಮೊಟ್ಟೆಗಳು, ಕೊಕ್ಕು ಹೊರ ಚಾಚಿ ಆಹಾರ ಕೇಳುವ ಮರಿಗಳು… ಹೀಗೆ ಹಂತ ಹಂತವಾಗಿ ಅವುಗಳ ಫೋಟೋ ತೆಗೆದು ನಾನು ಸ್ಟೇಟಸ್ ಗೆ ಹಾಕುತ್ತಿದ್ದೆ. ಅದನ್ನು ನೋಡಿದ ಸ್ನೇಹಿತರಲ್ಲಿ ಕೆಲವರು ” ಇದು ಶುಭ ಸಂಕೇತ”ಎಂದರೆ ಇನ್ನು ಕೆಲವರು ” ಬುಲ್ ಬುಲ್ ಪವಿತ್ರ ಪಕ್ಷಿ, ಇದು ಅದೃಷ್ಟವನ್ನು ಹೊತ್ತು ತರುವ ಪಕ್ಷಿಯಾದ್ದರಿಂದ ಮನೆಯ ಬಳಿ ಗೂಡು ಕಟ್ಟಿದರೆ ಸೌಭಾಗ್ಯ ” ಎಂದರು. ಮತ್ತೆ ಕೆಲವರು ” ಹೊಸ ಅತಿಥಿಗಳು ಮನೆಗೆ ಬರುವ ಸಂಕೇತ ಎಂದರು. ಅವರವರ ನಂಬಿಕೆಯ ಸಂದೇಶಗಳನ್ನು ಕಳಿಸಿದ್ದರವರು. ನಂಬಿಕೆ ಏನೇ ಇರಲಿ.. ಗೂಡು ಕಟ್ಟುವಲ್ಲಿ ಆ ಪಕ್ಷಿಗಳು ತೋರಿದ ಚಾಕಚಕ್ಯತೆ, ಕುಶಲತೆ, ಹಸಿವು ಬಾಯಾರಿಕೆಗಳನ್ನು ನಿರ್ಲಕ್ಷಿಸಿ ಮೊಟ್ಟೆಗೆ ಕಾವು ಕೊಟ್ಟು ಮರಿಗಳನ್ನು ಹೊರ ತರುವ ಆ ಮಮತೆ, ಮರಿ ಪಕ್ಷಿಗಳು ಕೇಳಿದಷ್ಟೂ ಬಾರಿ ಅವುಗಳಿಗೆ ಗುಟುಕು ನೀಡುವ ಆ ಪ್ರೀತಿ.. ಪುಟ್ಟ ಮರಿಗಳ ರೆಕ್ಜೆ ಬಲಿತಾಗಿನ ಪೋಷಕ ಪಕ್ಷಿಗಳ ಆ ಸಂಭ್ರಮ ಇವೆಲ್ಲ ನಮಗೆ ಖುಷಿ ಕೊಟ್ಟದ್ದಂತೂ ಸತ್ಯ.

ಅದೊಂದು ದಿನ ಬೆಳಗ್ಗೆ ಎದ್ದು ನೋಡುತ್ತೇನೆ, ಪುಟ್ಟ ಪಕ್ಷಿ ಗೂಡಿನಿಂದ ಹೊರ ಬಂದು ಗಿಡದ ಮೇಲೆ ಕುಳಿತಿದೆ! ಗುಂಡು ಗುಂಡಾಗಿ ಎಷ್ಟು ಮುದ್ದಾಗಿತ್ತು ಎಂದರೆ ಎತ್ತಿ ಮುದ್ದಾಡುವಷ್ಟು. ಅದನ್ನು ನೋಡಿದೊಡನೆಯೇ ಮನೆಯೊಳಗೆ ಬಂದು ಇವರನ್ನು ಕರೆದು ಪಕ್ಷಿ ಮರಿ ತೋರಿಸಿದ್ದಷ್ಟೇ. ಆ ತಾಯಿ ಪಕ್ಷಿ ಮನೆಯೊಳಗೇ ಹಾರಿ ಬಂದು ” ನನ್ನ ಮಗುವನ್ನು ಎತ್ತಿಕೊಳ್ಳುವುದಿರಲಿ, ದಿಟ್ಟಿಸಿ ನೋಡಿ ದೃಷ್ಟಿ ಹಾಕುವುದನ್ನೂ ನಾನು ಸಹಿಸುವುದಿಲ್ಲ ” ಎನ್ನುವಂತೆ ವಿಚಿತ್ರವಾಗಿ ರೆಕ್ಕೆ ಬಡಿದು ಸದ್ದು ಮಾಡಿ ಎಚ್ಚರಿಸಿ ಹೋಯಿತು. ಬಹುಶಃ ಮರಿಗಳಿಗೆ ಹಾರಲು ತರಬೇತಿ ಕೊಡುತ್ತಿರಬೇಕು ಕ್ಲಾಸ್ ತೆಗೆದುಕೊಳ್ಳುವಾಗ ತೊಂದರೆ ಆಗಬಾರದಲ್ಲ ಎಂದು ನಾವು ಬಾಗಿಲು ಹಾಕಿಕೊಂಡು ಒಳಗೆ ಕೂತೆವು. ಒಂದೈದು ನಿಮಿಷದಲ್ಲಿ ಪೇಪರ್ ಬಂತು. ತೆಗೆದುಕೊಂಡು ಓದೋಣವೆಂದು ಬಾಗಿಲು ತೆರೆದಿದ್ದೇ ಕುತೂಹಲದಿಂದ ಗೂಡಿನತ್ತ ದೃಷ್ಟಿ ಹರಿಸಿದೆ. ಗೂಡಿನ ಸುತ್ತ ಮುತ್ತ ಪಕ್ಷಿಗಳ ಸುಳಿವಿಲ್ಲ. ಗೂಡು ಖಾಲಿಯಾಗಿತ್ತು!!! ಮೂರೂ ಮರಿಗಳು ಹಾರಿ ಹೋಗಿದ್ದವು. ಪೋಷಕತ್ವದ ಗುರುತರ ಜವಾಬ್ದಾರಿ ಮುಗಿಸಿದ ಹಿರಿಯ ಪಕ್ಷಿಗಳೂ ಕಾಣಿಸಲಿಲ್ಲ. ಛೇ.. ಆ ಮುದ್ದು ಪಕ್ಷಿಗಳನ್ನು ಕಣ್ತುಂಬಾ ನೋಡಬೇಕಿತ್ತು, ಅವುಗಳ ಫೋಟೋ ಕ್ಲಿಕ್ಕಿಸಬೇಕಿತ್ತು, ಅವುಗಳ ಆರಂಭಿಕ ಹಾರಾಟ ನೋಡಬೇಕಿತ್ತು.. ಯಾವುದೂ ಸಾಧ್ಯ ಆಗಲಿಲ್ಲವಲ್ಲಾ ಎಂದು ಬೇಸರವಾಯಿತು. ಮನುಷ್ಯ ಸಂಚಾರ ವಲಯದಲ್ಲಿಯೇ ಗೂಡು ಕಟ್ಟಿ, ಮೊಟ್ಟೆ ಇಟ್ಟು ಮರಿ ಮಾಡಿ ತೀವ್ರ ಕಾಳಜಿ ವಹಿಸಿ ಮರಿಗಳನ್ನು ಹಾರಿಸಿಯೇ ಬಿಟ್ಟು, ತಾವೂ ಹಾರಿ ಹೋದ ಪಕ್ಷಿಗಳ ಬಗ್ಗೆ ಹೆಮ್ಮೆ ಎನಿಸಿತು. ರೆಕ್ಕೆ ಬಲಿತು ಮರಿಗಳು ಹಾರುವವರೆಗಷ್ಟೇ ಜೊತೆಗಿದ್ದು ಪ್ರೀತಿಸುವ, ಎಳೆತನದಲ್ಲಿ ಕೊಕ್ಕು ಚಾಚಿ ಚಾಚಿ ಕೇಳುತ್ತಿದ್ದಷ್ಟೂ ಬಾರಿ ಆಹಾರ ನೀಡಿ ಪೋಷಿಸಿದ, ಮರಿಗಳನ್ನು ಬೆಳೆಸುವ ಅಷ್ಟೂ ಸಮಯ ಗಂಡು ಹೆಣ್ಣು ಪಕ್ಷಿ ಗಳೆರಡೂ ಸಮಾನ ಜವಾಬ್ದಾರಿ ವಹಿಸಿದ,ನಮ್ಮನ್ನೂ ಒಳಗೊಂಡಂತೆ ಯಾವುದೇ ಕಣ್ಣುಗಳು ಮರಿಗಳ ಮೇಲೆ ಬೀಳದಂತೆ ರಕ್ಷಿಸಿದ, ಹಾರಿ ಹೋದ ಪಕ್ಷಿಗಳನ್ನು ಸ್ವತಂತ್ರವಾಗಿ ಬಿಟ್ಟು ದೂರಕ್ಕೆ ಹಾರಿದ ಹಿರಿ ಪಕ್ಷಿಗಳು ಪೋಷಕರು, ಕರ್ತವ್ಯ, ಹಕ್ಕು ಎಂದೆಲ್ಲ ಸದಾ ಕೊರಗುವ ಮಾನವ ಸಮಾಜಕ್ಕೆ ಏನೋ ಮಹತ್ತರ ಸಂದೇಶ ನೀಡಿ ಹೋದಂತೆ ಭಾಸವಾಯಿತು. ಈಗಲೂ ಬಾಗಿಲು ತೆರೆದಾಗ ಕಣ್ಣುಗಳು ಆ ಗಿಡದತ್ತ ಸರಿಯುತ್ತವೆ. ಮತ್ತೊಮ್ಮೆಆ ಮುದ್ದು ಮರಿಗಳು ಇತ್ತ ಹಾರಿ ಬಂದಾವೇ.. ಎಂದು ಮನ ಹಂಬಲಿಸುತ್ತದೆ. ಗೂಡು ಖಾಲಿಯಾದ ದಿನವೇ ಇದೆಲ್ಲವನ್ನು ಪಕ್ಷಿ ಪ್ರೇಮಿ ಶರ್ಮಣ್ಣನೊಡನೆ ಹೇಳಿ ” ಮರಿಗಳು ಮತ್ತೆ ಈ ಗೂಡಿನತ್ತ ಬಂದಾವೇ? ” ಎಂದು ಕೇಳಿದೆ. ಅದೆಷ್ಟೋ ಪಕ್ಷಿಗಳ ವರಸೆಯನ್ನು ನೋಡಿ ಬಲ್ಲ ಅವರು ” ಇಲ್ಲ, ಇನ್ನೆಂದೂ ಅವು ಆ ಗೂಡಿನತ್ತ ಬರಲಾರವು. ರೆಕ್ಕೆ ಬಲಿತಿದೆ. ಹಾರಲು ಕಲಿತಿವೆ. ಇನ್ನು ಅವು ಸ್ವತಂತ್ರ ” ಎಂದಾಗ ಮತ್ತೆ ಅವುಗಳನ್ನು ನೋಡುವ ಆಸೆಯಿಂದ ಈಚೆ ಬಂದೆ. ಹತ್ತು -ಹದಿನೈದು ದಿನಗಳ ಕಾಲ ನಮ್ಮೊಡನೆ ಇದ್ದ ಪಕ್ಷಿಗಳು ದೂರ ಹೋದವಲ್ಲ ಎಂದು ಏನನ್ನೋ ಕಳೆದುಕೊಂಡ ಭಾವ.. ನಾವು ಮನುಷ್ಯರು ಈ ಭಾವುಕ ಪ್ರಪಂಚದಿಂದ ಹೊರ ಬರುವುದು ಯಾವಾಗ????
ಜಯಲಕ್ಷ್ಮಿ ಕೆ.

Awesome
Very nice ma’am….
Nice ma’am .
Wonderful
..
Looking forward for the next one .
Nice ma’am .