
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿಯ ವಚನ

ಗಿರಿಯೊಳು ಮನದೊಳು ಗಿಡಗಿಡದತ್ತ ದೇವ, ಎನ್ನ ದೇವ,
ಬಾರಯ್ಯಾ, ತೋರಯ್ಯಾ ನಿಮ್ಮ ಕರುಣವನೆಂದು, ನಾನು
ಅರಸುತ್ತ ಅಳಲುತ್ತ ಕಾಣದೆ ಸುಯಿದು ಬಂದು ಕಂಡೆ.
ಶರಣರ ಸಂಗದಿಂದ ಆರಸಿ ಹಿಡಿದಿಹೆನಿಂದು ನೀನಡಗುವ ಠಾವ
ಹೇಳಾ ಚೆನ್ನಮಲ್ಲಿಕಾರ್ಜುನಾ
ಗಿರಿಯೊಳು ಮನದೊಳು ಗಿಡಗಿಡದತ್ತ ದೇವ, ಎನ್ನ ದೇವ, ಬಾರಯ್ಯಾ, ತೋರಯ್ಯಾ ನಿಮ್ಮ ಕರುಣವನೆಂದು, ನಾನು ಅರಸುತ್ತ ಅಳಲುತ್ತ ಕಾಣದೆ ಸುಯಿದು ಬಂದು ಕಂಡೆ.
ಶರಣರ ಸಂಗದಿಂದ ಆರಸಿ ಹಿಡಿದಿಹೆನಿಂದು ನೀನಡಗುವ ಠಾವ ಹೇಳಾ ಚೆನ್ನಮಲ್ಲಿಕಾರ್ಜುನಾ
ನಿಜವಾದ ಇಷ್ಟ ಲಿಂಗವನ್ನು ಬಿಟ್ಟು ಕಂಡ ಕಂಡ ದೇವರಿಗೆ ಹೋಗಿ ಕೈ ಮುಗಿಯುವ ಆ ನಿಮ್ಮ ದೇವರು ಎಲ್ಲಿ ಇರುವನು ,ಆತ ಇರುವ ಠಾವು (ಜಾಗ) ಎಲ್ಲಿ ಇರುವುದು ಎಂದು ಜನರನ್ನು ಅಕ್ಕ ಪ್ರಶ್ನೆಯ ಮುಖಾಂತರ ಜನರನ್ನು ಎಚ್ಚರಿಸುವುದು ಕಂಡು ಬಂದಿದೆ.
ಮನುಷ್ಯ ಬಹಿರಂಗಕ್ಕೆ ಮಾರು ಹೋಗಿ ಅಂತರಂಗದ ನಿಜದ ಆವಾಸ ಸ್ಥಾನವಾದ ಇಷ್ಟ ಲಿಂಗವನ್ನು ಮರೆತು ಸಾಗುತ್ತಿದ್ದಾನೆ. ಕಾಣದ ದೇವನನ್ನು ಹುಡುಕುತ್ತಾ ತೀರ್ಥಯಾತ್ರೆ, ಅರ್ಚನೆ ,ಪೂಜೆ, ಕೇಶಮುಂಡನ, ಉರುಳು ಸೇವೆ ,ಎಲೆಸೇವೆ, ಅನ್ನ ಸಂತರ್ಪಣೆ ಎಂದು ಅರಸುತ್ತಾ ಹೋಗುವ ಬದಲು, ಕರದಲ್ಲಿ ಪ್ರತಿಷ್ಠಾಪಿಸಿಕೊಂಡ ಇಷ್ಟ ಲಿಂಗವನ್ನು ,ಶರಣರ ನಡೆ ನುಡಿ ವಿಚಾರಗಳನ್ನು, ಮಣನ ಮಾಡಿಕೊಂಡು ನಡೆಯಬೇಕೆಂದು ಅಕ್ಕ ಹೇಳುತ್ತಾರೆ .
ಶರಣರು ತನ್ನ ಅರಿವಿನ ಕುರುಹು ಆದ ಲಿಂಗವನ್ನು, ದೇವರೆಂದರು. ಅರಿದರೇ ಶರಣ ಮರೆದೊಡೆ ಮಾನವ ಎನ್ನುವ ಹಾಗೆ, ಮಾನವೀಯ ತತ್ವಗಳ ನೆಲೆಯಲ್ಲಿ, ವೈಜ್ಞಾನಿಕ ವಿಚಾರ ಮಾಡಿ ಒಪ್ಪಿಕೊಂಡು ನಡೆಯುವುದು.
ಪ್ರತಿಯೊಬ್ಬ ವ್ಯಕ್ತಿಯ ಮೊದಲ ಆದ್ಯತೆಯಾಗಿದೆ .
ಅದು ಬಿಟ್ಟು ಕಲ್ಲು ಸುತ್ತಿ ಸುತ್ತಿ ಬಳಲಿ, ಮರ ಸುತ್ತಿ ಸುತ್ತಿ, ದೇವರನ್ನು ಹುಡುಕುವ ಮಾನವರಿಗೆ ಕಾಣುವ, ನೀ ಎನಗೆ ಏಕೆ? ಕಾಣುತ್ತಿಲ್ಲ. ಚೆನ್ನಮಲ್ಲಿಕಾರ್ಜುನ ಬಾರಯ್ಯ ತೋರಯ್ಯಾ, ನಿನ್ನ ಕರುಣೆಯ ಕಂದನೆಂದು ಬಂದು ಕರಪಿಡಿದು ನಡೆಸಯ್ಯಾ ಭಗವಂತ .ನಾನು ನಿನ್ನನ್ನೇ ಅರಸುತ್ತಿರುವೆ .
ಅರಸುತ್ತ ಅರಸುತ್ತ ಹೋಗುವ ಈ ಕಾಯ ನಿನಗೆ ಕಾಣದಾಯಿತೆ? ಭಗವಂತ.
ಶರಣರ ಸಂಗವಿಂದು ಎನಗೆ ಸನ್ಮಾರ್ಗ ತೋರಿಸಿತು. ಶರಣರ ಸಂಗದಿಂದ ನೀನಿರುವ ಠಾವನ್ನು ಅರಸುತ್ತಾ ಬಂದೇ ಭಗವಂತ. ಹೇಳು ಚೆನ್ನಮಲ್ಲಿಕಾರ್ಜುನಾ, ಅದಾವಗಿರಿ ,ಪರ್ವತ ,ಮರದಲ್ಲಿ, ಮರೆಯಾಗಿ ಮೌನವಾದೆಯಾ? ಚೆನ್ನಮಲ್ಲಿಕಾರ್ಜುನಾ .
ಈ ಸೃಷ್ಟಿಯ ಪ್ರತಿ ಹಂತದಲ್ಲೂ ನೀನು ಇರುವೆ ,ಎಂದು ನಂಬಿದ ನಿನ್ನ ಭಕ್ತಳು .ಶರಣರ ಸ್ನೇಹದಲ್ಲಿ ಕೂಡಿ, ನಿಮ್ಮನ್ನು ಕೂಡಿದೆ. ನಿಮ್ಮನ್ನು ಕಾಣುವ ಪರಿಪೂರ್ಣ ಭಾವ. ಅರಿವಿನ ಸಾಮಾಜಿಕ ಪ್ರಜ್ಞೆಯ ಸುಂದರ ಬದುಕಿನ ಸಾಕಾರ ಮೂರ್ತಿಯೇ ಎಲ್ಲಿರುವೆ, ಚೆನ್ನ ಮಲ್ಲಿಕಾರ್ಜುನಾ ಎಂದು ಅಕ್ಕನವರು ಹಂಬಲಿಸುವ ವಚನ ಇದಾಗಿದೆ.
ಡಾ ಸಾವಿತ್ರಿ ಕಮಲಾಪೂರ
