ವಿನೂತನ ಪ್ರಯತ್ನಕೆ ಸಾಕ್ಷಿಯಾದ ಪ್ರೊ ದೊಡ್ಡಣ್ಣ ಭಜಂತ್ರಿಯವರ “ಸೂಜಿ‌ ಮಲ್ಲಿಗೆ” ವೈ.ಎಂ.ಯಾಕೊಳ್ಳಿ

ಪುಸ್ತಕ ಸಂಗಾತಿ(ಅಂಕಣ)
ಲೇಖಕರ ಹೆಸರು ಪ್ರಾ.ದೊಡ್ಡಣ್ಣ‌ಭಜಂತ್ರಿ
ವಿಜಯಪುರ
ಕೃತಿಯ ಹೆಸರು- ಸೂಜಿಮಲ್ಲಿಗೆ
ಪುಟಗಳು-೫೮
ಬೆಲೆ-೯೦ರೂ
ಪ್ರಕಾಶನ-ಗಂಗಾಪ್ರಕಾಶನ ವಿಜಯಪುರ
ಲೇಖಕರ ಪೋನ್ ನಂ-೯೪೪೯೨೭೯೮೭೨

ಕವಿತೆ ಎಷ್ಟು ಸಾಲಿನದಿರಬೇಕು ? ಎಂಬ‌ ಪ್ರಶ್ನೆಗೆ ಅದು ….ಎಷ್ಟೇ ಸಾಲಿನದಿರಲಿ ಅದು ಕವಿತೆಯಾಗಿರಬೇಕು ಎಂಬುದೇ ಉತ್ತರ. .ನಾವು ಅನೇಕ ಪ್ರಕಾರದ ಕಿರು ಪದ್ಯಗಳನ್ನು ನೋಡುತ್ತ ಬಂದಿದ್ದೇವೆ.ಕನ್ನಡದಲ್ಲಿ ಕಿರು ಪದ್ಯಗಳಿಗೆ ರೋಚಕವಾದ ಇತಿಹಾಸವಿದೆ.ಎರಡನೆಯ ನಾಗವರ್ಮ ಅದನ್ನು‌ ಇಡುಕುಂಗಬ್ಬ( ಅಡಗಿಸಿಟ್ಟ ಕಾವ್ಯ) ಎಂದು ಕರೆದಿದ್ದನು .ಪ್ರಾಚೀನ‌ ಕನ್ನಡದ ಕವಿಗಳು ನಾಲ್ಕಾರು ಸಾಲಿನ‌ ಮುಕ್ತಕದಂತಹ ವಚನಗಳನ್ನು ,ಮೂರು ಸಾಲಿನ ತ್ರಿಪದಿಗಳನ್ನು, ಎರಡು ಸಾಲಿನ ಏಳೆ , ದ್ವಿಪದಿ, ನಾಲ್ಕು ಸಾಲಿನ ಚೌಪದಿ, ಆರು ಸಾಲಿನ ಷಟ್ಪದಿ ಪ್ರಯೋಗಗಳನ್ನು ಈ ಕಿರು ಪದ್ಯ ಪ್ರಕಾರದಲ್ಕಿ ಮಾಡಿದ್ದರು.

ಹೊಸಗನ್ನಡಕ್ಕೆ ಬಂದೊಡನೆ ಈ‌ ಪರಿವರ್ತನೆ ಇನ್ನೂ ಅಧಿಕವಾಯಿತು. ಕಾರಣ ಕಾಲದ ಮಹಿಮೆ. ಇದು‌ ಹೇಳಿ‌ ಕೇಳಿ ಹೊಸತನದ ಅನೇಕ ಪ್ರಭಾವಗಳ , ಅನುಕರಣೆಗಳ‌ ಕಾಲ.ಜಗತ್ತಿನ‌ ಅನೇಕ ಕಿರು ಪದ್ಯ ಪ್ರಕಾರಗಳು ಕನ್ನಡಕ್ಕೆ  ಬಂದವು. ಎರಡು ಸಾಲಿನ ದ್ವಿಪದಿ(ಷೇರ್) (ಉರ್ದು) ಮೂರು ಸಾಲಿನ ಹೈಕು (ಜಪಾನ್) ನಾಲ್ಕುಸಾಲಿನ ತನಗ,(ಪಿಲಿಪೈನ್ಸ)ರುಬಾಯಿ, ಐದು ಸಾಲಿನ ಟಂಕಾ  …ಹೀಗೆ ಅನೇಕ  ದೇಶಗಳ ಕಾವ್ಯಪ್ರಕಾರಗಳೂ ಕನ್ನಡದಲ್ಲಿ‌ ಬಂದವು. ಯಾವುದೆ ದೇಶದ ಯಾವುದೆ‌ ಪ್ರಕಾರದ‌ ಪ್ರಭಾವಿಲ್ಲದೆಯೂ ನಮ್ಮ ವಚನ, ತ್ರಿಪದಿಗಳ ಓದಿನ‌ ಪರಿಣಾಮದಿಂದ ಹೊಸಗನ್ನಡದಲ್ಲಿ ಚುಟುಕು,ಹನಿ ಮೊದಲಾದ‌ ಕಿರುಪದ್ಯಗಳು‌ ಮೆರೆದವು. ಸದಾ‌ ಹೊಸತನ್ನು ಸೃಷ್ಟಿಸುವವರಿಗೆ ಆಸರೆಯ ನೆಲವಾದ ಕನ್ನಡ ಸಾಹಿತ್ಯ ಯಾವುದಕ್ಕೂ ಹಿನ್ನಡೆ ಉಂಟುಮಾಡಲೇ ಇಲ್ಲ.
ಈ ಪ್ರಯೋಗ, ಪರಿವರ್ತನೆ ಈಗಲೂ‌ ಮುಂದುವರಿದಿದೆ. ಹುನಗುಂದದ‌ ಕವಿ ಎಂ.ಡಿ. ಚಿತ್ತರಗಿ ೧/೨/೩/೪/೫ ಅಕ್ಷರಗಳ  ಐದು ಸಾಲಿರುವ ಪಂಚಪದಿಗಳ ಸಂಕಲನವನ್ನೇ ತಂದಿದ್ದಾರೆ.ಅದು ಸಂಕಲನವಾಗಿಯೂ ಬಂದಿದೆ.ಮತ್ತೊಂದು ಹೊಸಪ್ರಯತ್ನ ವಿಜಯಪುರದ ಹಿರಿಯ ಕವಿ ದೊಡ್ಡಣ್ಣ ಭಜಂತ್ರಿಯವರಿಂದ ನಡೆದಿದೆ ಅದೇ “ಸೂಜಿ‌ಮಲ್ಲಿಗೆ ” ಎಂಬ ಸಂಕಲನ.

ಪ್ರಾ.ದೊಡ್ಡಣ್ಣ ಭಜಂತ್ರಿಯವರು ವಿಜಯಪುರದ ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆಯ ಅನೇಕ ಪದವಿ ಪೂರ್ವ ಮಹಾವಿದ್ಯಾಲಯಗಳಲ್ಲಿ ಕನ್ನಡ ಉಪನ್ಯಾಸಕರಾಗಿ‌ ಕಾರ್ಯ‌ ನಿರ್ವಹಿಸಿ‌ ತೆರದಾಳದ ಪ್ರಭು ಲಿಂಗ ಪದವಿ ಪೂರ್ವ ಮಹಾವಿದ್ಯಾಲಯದಿಂದ ಪ್ರಾಚಾರ್ಯರಾಗಿ‌ ನಿವೃತ್ತರಾದವರು. ಕವಿಗಳಾಗಿ ಆರು‌ ಕವನ ಸಂಕಲನ, ನಾಟಕ ಕ್ಷೇತ್ರದಲ್ಲಿ ಎರಡು ನಾಟಕಗಳು ಒಂದು ಜಾನಪದ ಲೇಖನ ಸಂಕಲನ ,ಒಂದು ವಿಮರ್ಶಾ ಸಂಕಲನ ,ಒಂದು ಸಂಪಾದನ ಕೃತಿ ಹೀಗೆ ಹತ್ತು‌ ಕೃತಿಗಳನ್ನು ರಚಿಸಿದ್ದಾರೆ. ಮೆದು ಮಾತಿನ ಗಟ್ಟಿ ಹೋರಾಟಗಾರರು ದೊಡ್ಡಣ್ಣ ಭಜಂತ್ರಿಯವರು. ಇದೀಗ ವಿನೂತನವಾದ ಕವನ ಸಂಕಲನವೊಂದನ್ನು ಹೊರ ತರುವ ಮೂಲಕ  ಮತ್ತೆ ಹೆಸರು‌ ಮಾಡಿದ್ದಾರೆ.

ಇದು ಮೂರು ಸಾಲಿನ ಪದ್ಯಗಳ ಗುಚ್ಚ .ಪ್ರತಿ ಸಾಲಿನಲ್ಲು ೭/೩/೭ ಅಕ್ಷರಗಳಿವೆ. ನೋಡಿದೊಡನೆಯೆ ಹೈಕು ನೆನಪಾಗುತ್ತವೆ.ಅಲ್ಲಿಯೂ ೧೭ ಅಕ್ಷರವಿದ್ದರೆ ಇಲ್ಲಿಯೂ ೧೭ ಅಕ್ಷರವಿವೆ.ಆದರೆ ಇವು ಹೈಕಗಳಲ್ಲ,  ಹೈಕುಗಳಲ್ಲಿ ೭/೫/೭ ಅಕ್ಷರಗಳಿರಬೇಕು.ಇಲ್ಲಿ ಅಕ್ಷರಗಳ ಭಿನ್ನತೆ ಯಿದೆ. ಹೀಗಾಗಿ ಇವುಗಳನ್ನು ಕವಿಯೆ  ‘ಬನಿಯ ಹನಿಗವಿತೆ’ ಗಳು ಎಂದು ಕರೆದಿದ್ದಾರೆ.ಹನಿ ಕಾವ್ಯದ ಸ್ವರೂಪ ಮತ್ತು ಬನಿ( ಸೌಂದರ್ಯ) ಎರಡನ್ನು ಒಳಗೊಂಡ ಈ ಮೂರು ಸಾಲಿನ ಕಾವ್ಯಕ್ಕೆ ತನ್ನದೆ ಆದ ವಿಶಿಷ್ಟತೆ ಪ್ರಾಪ್ತವಾಗಿದೆ. ಹೀಗಾಗಿನಕನ್ನಡದಲ್ಲಿ ಈ ಬಗೆಯ‌ ಪ್ರಯೋಗ ಮಾಡಿದ ಮೊದಲ ಕವಿಗಳಾಗಿ ದೊಡ್ಡಣ್ಣ ಭಜಂತ್ರಿಯವರನ್ನು ಗುರುತಿಸಬೇಕಾಗುತ್ತದೆ.

ನಾನು ಆರಂಭದಲ್ಲಿ ಎತ್ತಿದ ಪ್ರಶ್ನೆಗೆ ಮತ್ತೆ ಬರುತ್ತೇನೆ.ಕವಿತೆ ಎಷ್ಟೇ ಸಾಲಿನದಿರಲಿ,  ಅಲ್ಲಿ ಕಾವ್ಯ ಒಸರಬೇಕು . ಓದಿದೊಡನೆ ಓಹ್ ಎನ್ನುವ ಉದ್ಘಾರ ನಮ್ಮದಾದರೆ ಆ ಕಾವ್ಯ ಸಾರ್ಥಕವಾಗುತ್ತದೆ. ಒಂದು ಅರ್ಥ,ಒಂದು ಸಂದೇಶ, ಹೊರಹೊಮ್ಮಬೇಕು ಆಗ ಕಿರು ಕಾವ್ಯವೂ ಸಾರ್ಥಕವಾಗುತ್ತದೆ.

ಕವಿ ,ನಾಟಕಕಾರ , ವಿಮರ್ಶಕ ದೊಡ್ಡಣ್ಣನವರ ಆರನೆಯ‌ ಕವನ ಸಂಕಲನ “ಸೂಜಿ‌ಮಲ್ಲಿಗೆ” .ಈಗಾಗಲೆ ರಚನೆಯಾದ ಐದು ಸಂಕನಗಳಲ್ಲಿನ ಅವರ ಅನೇಕ‌ ಕವಿತೆಗಳು ವಿಜಯಪುರ , ಕಲಬುರಗಿ ವಿಶ್ವವಿದ್ಯಾಲಯಗಳ‌ ಪದವಿ ತರಗತಿಗಳಿಗೂ ಪಠ್ಯವಾಗಿವೆ. ನಾಟಕರಚನೆ ಯಲ್ಲಿಯೂ ಅವರು ಪ್ರಾವಿಣ್ಯತೆ ಪಡೆದಿದ್ದಾರೆ.

ಪ್ರೊ ದೊಡ್ಡಣ್ಣನವರ ಈ ಸಂಕಲನದಲ್ಲಿ೨೨೫ ಸುಂದರ ಹೂವುಗಳಿವೆ.ಕವಿ ಈ ಸಂಕಲನಕ್ಕೆ ಸೂಜಿ ಮಲ್ಲಿಗೆ ಎಂಬ ಸುಂದರವಾದ ಹೆಸರಿಸಿದ್ದಾರೆ.ಕೇಳಿದೊಡನೆಯೆ ಪ್ರಸಿದ್ದ ಕವಿ ಸತ್ಯಾನಂದ ಪಾತ್ರೋಟರ ಜಾಜಿ ಮಲ್ಲಿಗೆ ನೆನಪಾಗುತ್ತದೆ. ಅದು ಹೆಸರಿನ ನೆನಪಷ್ಟೇ. ಹೆಸರೇ ಹೇಳುವಂತೆ ಸೂಜಿಯ ಸೂಕ್ಷ್ಮತೆ, ಚುಚ್ಚುವ ಗುಣ‌ ಮತ್ತು ಹೊಲಿಯುವ ಗುಣ  ಎರಡೂ ಈ ರಚನೆಗಳಲ್ಲಿವೆ.ಮಲ್ಲಿಗೆಯ ಸೌಗಂಧ ಮತ್ತು ಆಕರ್ಷಕತೆ ಇವೂ‌ ಇವೆ.ಎಲ್ಲ ೨೨೫ ರಚನೆಗಳೂ ೭/೩/೭ ಅಕ್ಷರಗಳ ನಿಯಮ ಪಾಲನೆ ಮಾಡಿರುವದು ಈ ಅಕ್ಷರ ನಿಯನದ ನಡುವೆ ಕಾವ್ಯ ಸೋರದಂತೆ  ನೋಡಿಕೊಂಡಿರುವದು ಅಚ್ಚರಿ‌ಮೂಡಿಸಿದೆ.

ಗಂಭೀರ ವಸ್ತುವನ್ನು ಅತ್ಯಂತ ಸಲೀಸಾಗಿ ಕವಿತೆ ಯಾಗಿಸುವ ಕವಿ‌ ಮೆಚ್ಚುಗೆ ಪಡೆಯುತ್ತಾರೆ.ರೈತ ಜಗವ ಪೊರೆಯುವ ತಾಯಿ.ಅವನು ಅನ್ನ‌ಕೊಡದಿರೆ ನಾವಾರೂ ಬದುಕಲಾರೆವು.ಒಕ್ಕಲಿಗನೊಕ್ಕದಿರೆ ಬಿಕ್ಕುವದು ಜಗವೆಲ್ಲ ಎಂದಿದ್ದ ಸರ್ವಜ್ಞ ಕವಿ .ಅದನ್ನೇ ಭಜಂತ್ರಿಯವರು‌ ಪದ್ಯ‌ಮಾಡಿರುವ ರೀತಿ ಅಚ್ಚರಿ‌ ಮೂಡಿಸುತ್ತದೆ.

ಜಗದ ಉದರಕೆ
ರೈತನೇ
ಅನ್ನದ ದಾಸೋಹಿಗ

ಎಷ್ಟೊಂದು ಅದ್ಭುತ ವ್ಯಾಖ್ಯಾನ ! .ದಾಸೋಹ ಎಂಬ ಪದ ರೈತನ‌ ಕಾಯಕಕ್ಕೆ ತುಂಬ ಗೌರವಾನ್ವಿತ ಪದ.ಆತ ಮಾಡುವದು ಶರಣರು ತೋರಿದ ದಾಸೋಹ ಕಾಯಕ ಎನ್ನುವ ಅರ್ಥಪೂರ್ಣತೆ ತಂದಿರುವ ರೀತಿಗೆ ಖುಷಿ ಯಾಗುತ್ತದೆ.

ಸರ್ವಜ್ಞನೆ ಸಂಸಾರದ ಸಾರ್ಥಕತೆ ಎಲ್ಲಿದೆ ಎಂದು ಚರ್ಚಿಸುತ್ತ ಬೆಚ್ಚನೆಯ ಮನೆ, ವೆಚ್ಚಕೆ  ಹೊನ್ನು, ಇಚ್ಛೆ ಅರಿತು ನಡೆವ ಸತಿ ಇರಲು ಸ್ವರ್ಗ ವೇಕೆ? ಎಂದಿದ್ದ . ಅವನ ವಿಚಾರವನ್ನು ಇನ್ನೂ ಅಡಕಗೊಳಿಸಿದ ಕವಿ

ಇರಲು ನಿಜ ಸತಿ
ಪತಿಗೆ
ಬೇಕಿಲ್ಲ ಸಗ್ಗ ದ್ವಾರ

ಎನ್ನುತ್ತಾನೆ.ಅರಿತು ನಡೆವ ಸತಿ ದೊರೆತರೆ ಹಣ ಮನೆ ಎರಡೂ ಹಿಂಬಾಲಿಸಿ ಬರುತ್ತವೆ.ಆಕೆ ಎಲ್ಲವನ್ನೂ ತಂದೇ ತರುವ ದಾರಿ ತೋರುತ್ತಾಳೆ ಎಂಬ ವಿಶ್ವಾಸ ಅಲ್ಲಿದೆ.

ಸನ್ಯಾಸ ಜೀವನ‌ ಕಣ್ಣಿಗೆ ಚಂದ.ಆದರೆ ಅವರ ಸಂಷದಟ ಅವರಿಗೆ ಗೊತ್ತು.ಆಸೆಗಳ ಗೆದ್ದು ವಿರಕ್ತನಾಗುವದು ಅಷ್ಟು ಸರಳವಲ್ಲ .ಲೌಕಿಕದ ಬದುಕೇ ಅತ್ಯಂತ ಪ್ರಿಯ ಎನ್ನುವದನ್ನು ಅವರ‌ ಒಂದು ಸೂಜಿಮೊನೆ ಹೀಗೆ ಚುಚ್ಚುತ್ತದೆ

ಲೌಕಿಕ ಬದುಕಿನ
ಅರಿವು
ಕಾವಿ ತೊಟ್ಟಾಗ ಗೊತ್ತು

ಇದಕ್ಕಿಂತ ತೀವ್ರವಾದ ಇರಿತ ಸಾಧ್ಯವೇ ಇಲ್ಲ.ವ್ಯಂಗ್ಯ ಕರುಳಿರಿಯುತ್ತದೆ. ಲೌಕಿಕ ಬದುಕಿನ ಸುಖದ ಅರಿವಾ ಗಿರುತ್ತದೆ . ಆದರೆ ಮರಳಿ ಬಾರದ ದಾರಿ.. ನೋಡುತ್ತ ಇರಬೇಕಷ್ಟೇ…ಎನ್ನುವದನ್ನು‌ ಕವಿತೆ ಧ್ವನಿಸುತ್ತದೆ.

 ನಮ್ಮ‌ ಪುರಾಣ,  ಇತಿಹಾಸವನ್ನು ಕವಿ  ವ್ಯಂಗ್ಯವಾಡುವ ರೀತಿ ಅರ್ಥಪೂರ್ಣ ವಾಗಿದೆ.ದ್ರೋಣರು ಎಲ್ಲಿ ತಪ್ಪಿದರು ಎನ್ನುವ ಜಿಜ್ಞಾಸೆ ಹೊಸಗನ್ನಡ ದಲ್ಲಿ ಅನೇಕ‌ನಾಟಕಗಳಿಗೆ ವಸ್ತು ವಾಗಿದೆ. ಆದರೆ ಈ‌ ಕವಿ ಅದೆಲ್ಲವನ್ನೂ‌ ಕೇವಲ‌ ಮೂರೆ ಸಾಲಲ್ಲಿ  ಹುದುಗಿಸಿಡುವ ಪರಿ ಅದ್ಭುತ ವಾಗಿದೆ.

ಗುರು‌ಕಾಣಿಕೆ ಬೇಡಿ
ಗುರುತ್ವ
ಕಳೆದುಕೊಂಡ ದ್ರೋಣ

ಎಷ್ಟೊಂದು‌ ಮಾರ್ಮಿಕ! ಶಿಷ್ಯನ ಹೆಬ್ಬೆರಳನ್ನು‌ ಒಂದು ವೇಳೆ ಕಾಣಿಕೆಯಾಗಿ ಬೇಡದಿದ್ದರೆ …ಅವನ ಘನತೆ ಎಷ್ಟಿರುತಿತ್ತು? ಇತ್ಯಾದಿ‌ ಪ್ರಶ್ನೆಗಳು ಹೊಳೆಯುತ್ತಾ ಹೋಗುತ್ತದೆ.ಹೀಗೆ ನಿಜವಾದ ಕಾವ್ಯ ಅರ್ಥ ಪರಂಪರೆಯನ್ನು ವಿಸ್ತರಿಸುತ್ತಾ ಹೋಗುತ್ತದೆ.

ಆಧುನಿಕ ಜೀವನದ ಸಂಗತಿಗಳೂ ಇಲ್ಲಿ‌ ಕವಿತೆಯಾಗಿವೆ. ಕರೋನಾ ಕಾಲದ ಅನೆಕ ದುರಂತಗಳು ಇಲ್ಲಿ ಕವಿತೆ ರೂಪ ಪಡೆದಿವೆ.  ಭವ್ಯ ಮನೆಗಳ ನಿರ್ಮಾಣ  ಎಷ್ಟೊ ಗಿಡಗಳ ಹನನ ವಾಗಿದೆ ಎಂದು‌ಕವಿ ಚಿಂತಿಸುತ್ತಾರೆ.

ಮನೆಯ ಅಂಕಣವ
ನೊಡಿದೆ
ಸಾಲು‌ಮರ ಕಂಡವು

ಬಹಳ ಸೂಕ್ಷ್ಮವಾದ ಟೀಕೆ ಅಲ್ಲಿ ಅಡಗಿದೆ. ಹೀಗೆ ಕವಿ ಅನೇಕ ವಿಷಯಗಳಲ್ಲಿ ಬಹಳ ಸೂಕ್ಷ್ಮ ಸಂವೇದನೆಗಳನ್ನು ಇರಿಸಿಕೊಂಡಿರಬೇಕಾಗುತ್ತದೆ. ಕಸಪೊರಕೆಯನ್ನು ಕುರಿತು ಈ ಹಿಂದೆ ಕೂಡ ಜಿ.ಎಸ್ ಶಿವರುದ್ರಪ್ಪನವರು ಕೂಡ ಅರ್ಥಪೂರ್ಣ ಕವಿತೆಯಾಗಿಸಿದ್ದರು. ಇಲ್ಲಿ ಭಜಂತ್ರಿಯವರು ಅದನ್ನು ದುಡಿಸಿಕೊಂಡ ರೀತಿ ಅವರೊಳಗಿನ‌ ಕವಿತ್ವಕ್ಕೆ  ಸಾಕ್ಷಿಯಾಗಿದೆ.

ಬೇಕಾಗಿದೆ ದೇಶಕೆ
ಹೊಲಸು
ತೊಳೆಯಲು ದೇಶಕೆ

ಹದಿನೇಳೇ ಅಕ್ಷರಗಳ ಮೂರೇ ಈ ಸಾಲಿನ ಈ‌ ಪದ್ಯ ಸೂಚಿಸುವ ಅರ್ಥ ಕಡಲ ವಿಸ್ತಾರದ್ದು.

ಇಲ್ಲಿನ ಎಲ್ಲ ರಚನೆಗಳೂ ಯಶಸ್ವಿ ರಚನೆಗಳು ಎಙದು ನಾನು ವಾದಿಸುವದಿಲ್ಲ.ಒಂದು‌ಕವನ ಸಂಕಲನವೆಂದಾಗ ಕೆಲವು ಪೇಲವ ರಚನೆಗಳು ಇರುವವೇ. ೭/೩/೭ ಅಕ್ಷರ ನಿಯಮ ಪಾಲಿಸಲು ಹೋಗಿ ಅಷ್ಟೇನು ಅರ್ಥ ಸಮಂಜಸವೆನಿಸದ ರಚನೆಗಳು,ಕೃತ್ರಿಮ ಪದ‌ಗಳ ಉತ್ಪತ್ತಿಯೂ ಆಗಿವೆ. ಅಂಥ ಕೆಲವನ್ನು ಕೈ ಬಿಡಬಹುದಿತ್ತು.ಕೆಲವೊಮ್ಮೆ ಆಕರ್ಷಕ ಹೇಳಿಕೆಗಳೇ  ಕವಿತೆಯನಿಸವಂತಿವೆ. ಅದೆಲ್ಲ‌ ಇಲ್ಲಿ ನಗಣ್ಯ.

ಮಾತು‌ ಕೇಳದಿದ್ದರ
ಹಿರ್ಯಾರ್ದ
ವಿವೇಕನಾಗಲಾರ

ಒಂದು ಸಂದೇಶವಿದ್ದರೂ ಬರಿ ಸಂದೇಶ ಕವಿತೆಯಾಗಲಾರ ದು ಎಂಬ ಸೂಕ್ಷ್ಮವನ್ನುಪ್ರತೀಯೊಬ್ಬ  ಕವಿ ಅರಿಯಬೇಕು.ಕೆಲವು ರಚನೆ ಓದುವಾಗಲೆ ಒಂದಿಷ್ಟು ಬದಲಾಗಿದ್ದರೆ ಚಂದ ಇದ್ದಿತು ಎನಿಸುತ್ತದೆ.

ವೈರಿಗಳಾಗುವದು
ಸುಲಭ
ಮಿತ್ರರಾಗ್ವುದು ಕಷ್ಟ

ಏಳು ಅಕ್ಷರ ಹೊಂದಿಸಲು ಸರ್ಕಸ್ಸು ಮಾಡಿದಂತಿದೆ. ಅದನ್ನೆ ‘ ಮಿತ್ರತ್ವವದು ಕಷ್ಟ’ ಎಂದಾಗಿಸಬಹುದಿತ್ತು. ಸಂಕಲನದಲ್ಲಿ ಅಲ್ಲೊಂದು ಇಲ್ಲೊಂದು‌  ಹುಡುಕಿದರೆ ಇಂಥ ಪದ ಪ್ರಯೋಗ  ಸಿಗುತ್ತವೆ.ಒಂದು ಸಂಕಲನದಲಿ ,ಹೊಸ ಪ್ರಯೊಗ ದಲ್ಲಿ ಇದೆಲ್ಲ ಸಾಮಾನ್ಯವೇ.

ಇಂಥದೊಂದು ವಿನೂತನ‌ ಪ್ರಯತ್ನ ,ಪ್ರಯೋಗ‌ ಮಾಡಿದ್ದರೂ ಈ ಹಿರಿಯ‌ ಕವಿಗಳಿಗೆ ಆ ಅಹಂಭಾವ ಇಲ್ಲ.ಅವರೇ ತಮ್ಮ‌ಮಾತಿನಲ್ಲಿ ” ನಾನೂ‌ಕೂಡ ಹೈಕುಗಳ ಬಗೆಗೆ ಪ್ರಭಾವಿತನಾಗಿದ್ದರೂ ಇದರಲ್ಲಿಯೆ ಹದಿನೇಳು ಅಕ್ಷರ ವೃಂದದ ಹೊಸಬಗೆಯ‌ ಪ್ರಯೋಗ ಮಾಡಬೇಕೆಂದು ಬಯಸಿ…ಬನಿಗವಿತೆ ಸಂಕಲನವನ್ನು‌ ಪ್ರಪ್ರಥಮವಾಗಿ ಹೊಸ ಪ್ರಯೋಗ ಮಾಡಿದ್ದೇನೆ.ಆದರೆ‌ ಮಾಡಿದ್ದೇನೆಂಬ ಅಹಂಭಾವವೂ ನನಗಿಲ್ಲ”  ಎನ್ನುತ್ತಾರೆ.ಈ‌ ಕಾರಣಕ್ಕೆ ಅವರು‌ ನಮಗೆ ಹೆಚ್ಚು ಪ್ರಿಯವಾಗುತ್ತಾರೆ. ಯಾವುದೆ ಕವಿ ತನ್ನ ಸಂಕಲನದ ಕುರಿತು ಇರಿಸಿಕೊಳ್ಳಬೇಕಾದ ಬಾಂಧವ್ಯ ಇಷ್ಟೇ ಎಂಬುದಕೆ ಮಾದರಿಯಾಗುತ್ತಾರೆ.

ಇಲ್ಲಿರುವ ಎಲ್ಲ ಕವಿತೆಗಳ ಅರ್ಥ ಇನ್ನಷ್ಟು ಹೆಚ್ಚುವಂತೆ ಸುಂದರವಾದ ಚಿತ್ರಗಳನ್ನು ನೀಡಿದವರು ವಿಜಯಪುರದ ಹಿರಿಯ ಕಲಾವಿದರಾದ ಶ್ರೀ ವಿದ್ಯಾಧರ ಸಾಲಿಯವರು.ಪ್ರತಿ‌ ಕವಿತೆಯ ಒಳಾರ್ಥವನ್ನು ಸೂಚಿಸುವಂತೆ ಪೂರಕವಾದ ಚಿತ್ರಗಳನ್ನು ಬಿಡಿಸಿರುವ ಕಲಾ  ನೈಪುಣ್ಯತೆ ಬಹಳಅರ್ಥವತ್ತಾಗಿದೆ .ಕವಿತೆಯನ್ನು ಅರ್ಥ ಮಾಡಿಸುವಲ್ಲಿ  ಇನ್ನಷ್ಟು ಸಹಾಯಕವಾಗಿದೆ. ಪ್ರತಿ ಕವಿತೆಗೆ ಪೂರಕವಾದ ಚಿತ್ರಗಳನ್ನು ಬಿಡಿಸಿರುವ ಶ್ರೀ ವಿ ದ್ಯಾಧರ ಸಾಲಿಯವರು ಅಭಿನಂದನೀಯರಾಗಿದ್ದಾರೆ.

ಕವಿತೆ ಸದಾ ಹೊಸತಿಗೆ ತೆರೆದಿರುತ್ತದೆ.ಅದು‌ ಜೀವಂತ ಕಾವ್ಯದ ಲಕ್ಷಣ ಕೂಡಾ ಇಂಥ‌ ಪ್ರಯೋಗಗಳನ್ನು ಪ್ರೊ.ದೊಡ್ಡಣ್ಣ ಭಜಂತ್ರಿಯವರಂಥ ಹಿರಿಯರು‌ ಮಾಡುತ್ತಿರುವದು ಇನ್ನೂ ಸಂತಸದ ಸಂಗತಿಯಾಗಿದೆ. ಅವರ ಇಂಥ ಪ್ರಯತ್ನಗಳು ಸ್ವಾಗತಾರ್ಹವಾಗಿವೆ.


Leave a Reply

Back To Top