ಮೀನಾಕ್ಷಿ ಸೂಡಿ ಅವರ ಕವಿತೆ-ಮನಸಾರೆ ಮಾದೇವನ ನೆನೆದೇವೋ.

ಜಗ್ಗನಕ್,ಜಗ್ಗನಕ್,ಜಗ್ಗನಕ್
ಜಗ್ಗನಕ್,ಜಗ್ಗನಕ್,ಜಗ್ಗನಕ್

ಅಣ್ಣಯ್ಯ,ತಮ್ಮಯ್ಯ ಕೂಡ್ಯಾರೋ
ಬಣ್ಣದ ಬಂಡಿಯ ಹೂಡ್ಯಾರೋ
ಬಣ್ಣದ ಬಂಡಿಯ ಹೂಡ್ಯಾರೋ ಬಸವಣ್ಣ
ಬಂಗಾರ ಬೆಳೆಯ ಬೆಳೆದಾರೋ ||ಜಗ್ಗನಕ್||

ಭೂ ತಾಯಿ ನಮ್ಮವ್ವ
ಮಳೆರಾಯ ನಮ್ಮಪ್ಪ
ಹೊಲವೆಲ್ಲ ಹಸಿರು ಇವರಿಂದ
ಹೊಲವೆಲ್ಲ ಹಸಿರು ಇವರಿಂದ ಮಾದೇವ
ಬದುಕೆಲ್ಲ ಹುಲಸೋ ಹಸಿರಿಂದ
|ಜಗ್ಗನಕ್||

ಹಸನಾಗಿ ಹರಗೇವಿ
ಬೀಜವ ಬಿತ್ತೆವಿ
ಹುಲುಸಾದ ಬೆಳೆಯ
ಕೊಡೋ ಶಿವನೇ
ಹುಲುಸಾದ ಬೆಳೆಯ ಕೊಡುತಾನೆ ಮಾದೇವ
ಹೊಲವೆಲ್ಲ ಕೊಪ್ಪರಿಗೆ ಬಂಗಾರಾ…. ||ಜಗ್ಗನಕ್||

ನೆಲದವ್ವನ ಮಕ್ಕಳೆಲ್ಲ
ಒಲವಿಂದ ಹಾಡೇವು
ರಾಶಿಯ ಮಾಡುತ್ತ ಕಣದಾಗ
ರಾಶಿಯ ಮಾಡುತ್ತ,ಹೆಜ್ಜೆಯ ಹಾಕುತ್ತ
ಮನಸಾರೆ ಮಾದೇವನ ನೆನೆದೇವೋ….||ಜಗ್ಗನಕ್||


Leave a Reply

Back To Top