“ಹಿತ್ತಲ ಗಿಡ ಮದ್ದಲ್ಲ”ಶುಭಲಕ್ಷ್ಮಿ ಆರ್ ನಾಯಕ

ಇದೊಂದು ಗಾದೆ ಮಾತು. ಗಾದೆ ಅನುಭವ ಜನ್ಯ. ಹಾಗಾಗಿ ಅದು ಸತ್ಯವೂ ಮನಸ್ಸಿಗೆ ನಾಟುವಂತಹುದೂ ಆಗಿದೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬುದು ಅನುಭವಿಗಳ ಮಾತು.
ಈ ಗಾದೆಯ ಮಾತನ್ನು ಅರ್ಥ ಮಾಡ ಹೊರಟರೆ, ನಮ್ಮದೇ  ಹಿತ್ತಲಿನಲ್ಲಿ ( ತೋಟದಲ್ಲಿ) ಬೆಳೆದು ಔಷಧೀಯ ಗುಣ ಹೊಂದಿದ ಸಸ್ಯವಾದರೂ ಅದು ಔಷಧಿಯಲ್ಲ ಎಂಬ ತಾತ್ಸಾರ ಭಾವದಲ್ಲಿ ಅದು ಮದ್ದಲ್ಲ  ( ಔಷಧಿಯಲ್ಲ) ಎಂಬ ರೀತಿ.
ಇಲ್ಲಿ ಎರಡು ಅಂಶ ಗಮನಿಸಬಹುದು. ಅದು ನಮ್ಮ ಹಿತ್ತಲಿನಲ್ಲಿ ಬೆಳೆದಿದೆ, ಹಾಗೂ ನಮ್ಮಹತ್ತಿರವೇ ಇರುವ ಕಾರಣ ಅದು ತಾತ್ಸಾರಕ್ಕೆ ಒಳಗಾಗಿರುವುದು.  ಬದುಕಿನಲ್ಲೂಇಂಥಹ ಅನೇಕ ಸಂದರ್ಭಗಳಲ್ಲಿ  ತಾತ್ಸಾರಕ್ಕೆ ನಾವು ಒಳಗಾಗಿರುತ್ತೇವೆ.

ಅದೊಂದು ಹಳ್ಳಿ, ಅಲ್ಲಿಯ  ಒಬ್ಬ ಕೃಷಿಕನ ಮನೆಯಲ್ಲಿ ಅವರ ಮಗಳಿಗೆ ಅಕಸ್ಮತ್ತಾಗಿ ಆರೋಗ್ಯ ಹದಗೆಟ್ಟಾಗ ದೂರದಲ್ಲಿಯ ವೈದ್ಯರಿಗೆ ತೋರಿಸಿದರಂತೆ ಅವರು ಅದೇನೋ ಬಾಟಲಿಯಲ್ಲಿಟ್ಟ ಕಷಾಯ ನೀಡಿದರು ಅದನ್ನು ನೀಡಿದ ಮೇಲೆ ಗುಣವಾಯಿತು. ಆದರೆ ಅವರ ಪತ್ನಿ  ತಮ್ಮ ತೋಟದಲ್ಲಿರುವ ಆಕಷಾಯದ ಬಳ್ಳಿ ದಿನಾಲೂ ಕಾಲಿಗೆ ತಾಗುತ್ತಿದ್ದರೂ, ಅದರ ಗೊಡವೆಗೇ ಹೋಗುತ್ತಿರಲಿಲ್ಲ. ಆದೊಂದು ದಿನ ವೈದ್ಯರಿಗೆ ಇವರದೇ ತೋಟದಲ್ಲಿ ಆ ಬಳ್ಳಿ ದೊರೆತಾಗ “ಇದರದೇ ಕಷಾಯ ಮಾಡಿ ನಿಮ್ಮ ಮಗಳಿಗೆ ಕುಡಿಸಿದ್ದು ” ಎಂದಾಗ ತಮ್ಮ ನಿರ್ಲ್ಯಕ್ಷತನದ ಅರಿವು ಅವರಿಗೆ ಆಯಿತಂತೆ.
ಈ ಮೇಲಿನ ಕತೆಯಂತೆ ನಮ್ಮ ಬದುಕಿನಲ್ಲಿಯೂ ಎಷ್ಟೋಬಾರಿ ನಮ್ಮದೇ ನೆಲದಲ್ಲಿ, ನಮ್ಮದೇ ಜನರಿರುವಲ್ಲಿ, ಪರಿಚಿತರೆಂದು ಹೇಳಿಕೊಳ್ಳುವಲ್ಲಿ ಜೊತೆಗೆ ಉತ್ತಮ  ಅಥವಾ ಸಾಮಾನ್ಯ ಅವಕಾಶವನ್ನೂ ಕೊಡದೇ  ಯಾವುದಕ್ಕೂ ಉಪಯೋಗವಿಲ್ಲದವರಂತೆ ಕಂಡಾಗ ನಾವು  ಇವರಿಗೆ ಹಿತ್ತಲ ಗಿಡದಂತೆ ಎಂಬ ಭಾವನೆ ಬರುತ್ತದೆ ಅಷ್ಟೇ ಅಲ್ಲ ಮನಸ್ಸಿಗೆ ಘಾಸಿಯಾಗುತ್ತದೆ.
ಸಾರ, ಸತ್ವ , ಔಷಧೀಯ ಗುಣ ದ ಆಗರವಾಗಿದ್ದರೂ ಗಿಡವನ್ನು  ಗುರುತಿಸದಾಗದಂತಹ, ನಿರ್ಲಕ್ಷ್ಯ ತೋರುವ , ಇಂಥಹ ಅನುಭವಗಳು ನಮ್ಮ ಸುತ್ತಲಿನ ಪರಿಸರ, ಮನೆ,  ಆಫೀಸು, ಸಮಾಜದ  ಹತ್ತು ಹಲವು ಕಡೆಗಳಲ್ಲಿ  ಕಾಣಸಿಗುತ್ತದೆ. ಪ್ರತಿಭೆ, ಸದ್ಗುಣ ಏನೇ ಬಂಡವಾಳವಿರಲಿ ತುಳಿಯುವ, ತಿರಸ್ಕಾರದ ಮನಸ್ಥಿತಿಯವರ ನಿರ್ಲಕ್ಷ್ಯಕ್ಕೆ ಗುರಿಯಾಗುತ್ತೇವೆ, ಅಥವಾ ಗುರಿಮಾಡುತ್ತೇವೆ. ಆದರೆ ಇದು ಸಹ್ಯವೇ? ಇಲ್ಲ ಖಂಡಿತವಾಗಿ ಸಹ್ಯವಲ್ಲ. ಅವರವರ ಪ್ರತಿಭೆ, ಸಚ್ಚಾರಿತ್ರ್ಯ, ಕಾರ್ಯವೈಖರಿಗನುಗುಣವಾಗಿ ಅವರನ್ನು ಮದ್ದಿನಂತೆ ಸ್ವೀಕರಿಸುವ ಮನೋಭಾವಬೇಕು.

ಪ್ರಚಾರದ ಅಬ್ಬರದ ಈ ಆಧುನಿಕ ಜಗತ್ತಿನಲ್ಲಿ ಅದೆಷ್ಟೋ ಜನರು ಪ್ರತಿಭೆಯಿದ್ದರೂ ಮೂಲೆಗುಂಪಾಗುತ್ತಲೇ ಇದ್ದಾರೆ.
ಮನಸ್ಸಿನ ಮೂಲೆಯಲ್ಲಿರುವ ಸ್ವಾರ್ಥ, ಪರರ ಏಳಿಗೆಯನ್ನು ಸಹಿಸದ ಮನಸ್ಥಿತಿ, ಒಡಲಲ್ಲಿ ತುಂಬಿರುವ ಮತ್ಸರ ತಮ್ಮವರ, ಹತ್ತಿರದವರ ಅಥವಾ ಇತರರ ಪ್ರತಿಭೆಯನ್ನು, ಒಳ್ಳೆಯತನವನ್ನು ಒಪ್ಪಿಕೊಳ್ಳಲು ಅಡ್ಡವಾಗಿರುವ ಗೋಡೆಗಳು. ಆಗೋಡೆಗಳನ್ನು ಕೆಡವಿ ವಿಶಾಲ ಮನೋಭಾವ ಬೆಳೆಸಿಕೊಂಡಾಗಲೇ ನಮ್ಮ ಜೀವನಕ್ಕೊಂದು ಬೆಲೆ ಎಂಬುದನ್ನು ಅರಿಯಬೇಕಾದದ್ದು ಇಂದಿನ ಸುಶಿಕ್ಷಿತ ಆಧುನಿಕ ಸಮಾಜದಲ್ಲಿ ಬಹಳವಿದೆ. ಅಲ್ಲದೇ
ಪರಿಚಯ, ಪ್ರಭಾವಗಳೇ ಪ್ರತಿಭೆಯ ಮಾನದಂಡಗಳು ಆಗಬಾರದು. ನಮ್ಮದೇ ಹಿತ್ತಲಿನಲ್ಲಿ ಬೆಳೆದ ಗಿಡದಲ್ಲಿನ ಔಷಧೀಯ ಗುಣವನ್ನು ನೋಡುವ  ಮನಸ್ಸು, ಹೃದಯವಂತಿಕೆ ನಮ್ಮೆಲ್ಲರಿಗೂ ಬೇಕು.ಸಿಕ್ಕವರಿಗೇ ಅವಕಾಶಗಳು ದಕ್ಕಿದಾಗ ಎಲ್ಲೋ ಅಸಮಾನತೆಯ ಭಾವ ಎದ್ದು ಕಾಣುತ್ತದೆ.
ಹಳ್ಳಿಗಳಲ್ಲಿ, ಸಮಾಜದಲ್ಲಿ ನಮ್ಮ ನಮ್ಮ ಹತ್ತಿರದಲ್ಲಿನ ಪ್ರತಿಭೆಗಳನ್ನು ಗುರುತಿಸಬೇಕು ಅದರಿಂದ ಎಲ್ಲರಿಗೂ ಪ್ರೋತ್ಸಾಹ ದೊರೆತಂತೆ ಆಗುತ್ತದೆ ಅವರವರ ಮನೆಯಲ್ಲಿ, ಅವರ ಸಮಾಜ,  ಊರುಗಳಲ್ಲಿ  ಸಾಧಕರ ಪ್ರತಿಭೆಗಳನ್ನು ಗುರುತಿಸುವ ಕಾರ್ಯವಾಗಬೇಕು. ಆದರೆ ಎಷ್ಟು ಕಡೆ ಅದು ಸಾಧ್ಯವಾಗುತ್ತದೆ? ಪ್ರತಿಭೆಗಳನ್ನು ಕಂಡು ಪರೋಕ್ಷವಾಗಿ ಮೂಗು ಮುರಿಯುವವರು ಇರುವವರೆಗೂ , ಇವರದೇನು ಮಹಾ ಎಂಬುದು ತಲೆಯಲ್ಲಿ ಕುಳಿತಿರುವವರೆಗೂ ಹಿತ್ತಲ ಗಿಡ ಮದ್ದಲ್ಲ ಎಂಬ ಭಾವನೆ ಇರುವ ವರೆಗೂ ಪ್ರತಿಭೆಗೆ ಪ್ರೋತ್ಸಾಹ ದೊರೆತಂತೆ ಅಲ್ಲ.
ಹಿತ್ತಲಗಿಡದ ಔಷಧೀಯ ಗುಣವನ್ನು, ಅದರಮಹತ್ವವನ್ನು ಮೊದಲು ಅರಿಯಬೇಕಾದವರು, ಗುರುತಿಸಬೇಕಾದವರು, ಮುನ್ನೆಲೆಗೆ ತರಬೇಕಾದವರು ಹಿತ್ತಲಿನ ಮಾಲಿಕರಲ್ಲವೆ? ಅಂದರೆ ಹತ್ತಿರದವರು.
ಗಿಡ ಮದ್ದಲ್ಲ ಎಂಬ ಭಾವನೆ ಮೂಡಲು ಪ್ರಮುಖವಾಗಿ ತಾತ್ಸಾರ ಭಾವನೆಯೇ ಕಾರಣ. ಆ ತಾತ್ಸಾರ ಭಾವನೆಯನ್ನು  ಬಿಟ್ಟಾಗ ಒಬ್ಬರಿಗೊಬ್ಬರು ಬೆಳೆಯಲು, ಸುಧಾರಣೆಯ ಹಾದಿ ಹಿಡಿಯಲು ಸಹಕಾರವಾಗುತ್ತದೆ. ನಮ್ಮ ಮನೆಯ ಹಿತ್ತಲಿನಲ್ಲಿ ಬೆಳೆದ ಗಿಡದಲ್ಲೂ ಔಷಧೀಯ ಗುಣವಿದೆ ಎಂದು ಅದನ್ನು ಸ್ವೀಕಾರಾರ್ಹ ವಾಗಿಸಬೇಕು. ಇದರಿಂದ ಎಲ್ಲರಿಗೂ ಶ್ರೇಯಸ್ಸು.

ಇಲ್ಲಿ ನಾವು ಮಾಡಬೇಕಾಗಿರುವ ಪ್ರಮುಖಕಾರ್ಯವೆಂದರೆ ನಮ್ಮ ನಮ್ಮ ಸಮೀಪದಲ್ಲಿರುವ  ಚಿಕ್ಕಪುಟ್ಟ ಪ್ರತಿಭೆಗಳನ್ನು ತಾತ್ಸಾರದಿಂದ ಕಾಣದೇ ಅವಕಾಶಗಳನ್ನು ನೀಡಬೇಕು ಎಂಬುದಾಗಿದೆ. ಯಾರನ್ನೂ ನಿರ್ಲಕ್ಷ್ಯ ಮಾಡಬಾರದು ಎಂಬ ಸಾಂಕೇತಿಕ ಅರ್ಥವನ್ನು ಒಳಗೊಂಡಿದೆ.


Leave a Reply

Back To Top