ಲೇಖನಸಂಗಾತಿ
ವಿಷ್ಣು ಆರ್.ನಾಯ್ಕ
“ಬಾಳಿಗೆ ರೂಪ ಕೊಡುವ
ಹಿರಿತನವೆಂಬ ಫೀನಿಕ್ಸ್”

ಬಾಳಿಗೆ ರೂಪ ಕೊಡುವ ಹಿರಿತನವೆಂಬ ಫೀನಿಕ್ಸ್*
” ಓಹ್….! ಬಸಳೆ ಸೊಪ್ಪು ರೇಟೆಷ್ಟು ಅಜ್ಜಿ.. ” ಪಕ್ಕದಿಂದ ಬಂದ ಧ್ವನಿ ಕೇಳಿ ಮಾರ್ಕೆಟ್ ನಲ್ಲಿ ನಿಂತಿದ್ದ ನಾನು ಸಣ್ಣ ಕುತೂಹಲದಿಂದ ಆ ಕಡೆ ತಿರುಗಿದೆ . ಒಳ್ಳೆಯ ವೇಷಭೂಷಣ ಧರಿಸಿದ್ದ ಯುವಕನೊಬ್ಬ ರಸ್ತೆಯ ಬದಿ ಬಸಳೆಸೊಪ್ಪು ಮಾರುತ್ತಿದ್ದ ಸುಮಾರು ಆಜುಬಾಜು ಎಪ್ಪತ್ತರ ವಯಸ್ಸಿನ ಅಜ್ಜಿಯನ್ನು ಪ್ರಶ್ನಿಸುತ್ತಿದ್ದ . “ಐವತ್ತು ರೂಪಾಯಿ ಮಗಾ ..ನಲವತ್ತಾದರೆ ಕೊಡ್ತೇನೆ ನೋಡು ತಗೋ…” ಎಂದಳು ಅಜ್ಜಿಯುವಕ ಬಸಳೆ ಸೊಪ್ಪಿನ ಕಟ್ಟನ್ನು ಪರೀಕ್ಷಿಸುವಂತೆ ನೋಡಿ “ಅಜ್ಜಿ , ಅಷ್ಠೇನೂ ಚೆನ್ನಾಗಿಲ್ಲ. ಇಪ್ಪತ್ತೈದು ರೂಪಾಯಿ ತಗೋ.. ಇಲ್ದಿದ್ರೆ ಬೇಡ”ಎಂದ. “ಆಗೋದಿಲ್ಲ ಮಗ, ಬೆಳ್ದಿದ್ಕೆ ಏನಾದ್ರು ಹುಟ್ಬೇಕಲ್ಲ…” ಅಂದಳು ಅಜ್ಜಿ. ” ಇಲ್ಲ ಇಪ್ಪತೈದೇ ಕೊಡ್ತೇನೆ ಇಲ್ದಿದ್ರೆ ಬೇಡ”. ಅಜ್ಹಿ ಬೇಸರದ ಮುಖ ಮಾಡಿಕೊಂಡಳು. ಚೌಕಾಸಿ ನಡೆದೇ ಇತ್ತು. ಕೊನೆಗೆ ಇಪ್ಪತೈದು ರೂಪಾಯಿಗೇ ಆತ ವ್ಯವಹಾರ ಮುಗಿಸಿದ. ಅಜ್ಜಿಯ ಮುಖ ಮ್ಲಾನವಾಯಿತು. ಸ್ವಲ್ಪ ದಿನದ ನಂತರ ಇದೇ ಯುವಕನನ್ನು ಸೂಪರ್ ಮಾರ್ಕೆಟ್ ವೊಂದರಲ್ಲಿ ನೋಡಿದೆ. ತುಂಬಾ ತರಕಾರಿ ,ಸೊಪ್ಪುಗಳನ್ನು ಖರೀದಿಸಿ ಬಿಲ್ ಕೌಂಟರ್ ಗೆ ಹೋದ ಆತ ಬಿಲ್ ಮಾಡಿದೊಡನೆ ಹೇಳಿದಷ್ಟು ಹಣ ಕೊಟ್ಟು ಹೊರ ನಡೆದ. ಆತನ ನಡವಳಿಕೆಯನ್ನು ನೋಡಿ ಬೇಸರವಾಯಿತು.ಅಂದು ಅಜ್ಜಿಯೊಡನೆ ಆತ ವ್ಯವಹರಿಸಿದ ರೀತಿ ನೆನಪಾಗಿ ಖೇದವೆನಿಸಿತು. ಇದೊಂದು ಸಣ್ಣ ಘಟನೆಯಷ್ಟೇ! ಹಾಗಂತ ಈ ಘಟನೆಯ ಮೂಲಕ ನಾನು ಹೇಳುವುದು ವ್ಯಾವಹಾರಿಕ ಬದುಕಿನಲ್ಲಿ ಚೌಕಾಸಿಯನ್ನೇ ಮಾಡಬಾರದೆಂದೆನಲ್ಲ. ಕೆಲವೊಂದು ಕಡೆ ‘ಬೋಳೆ ಶಂಕರ’ರಾದರೆ ಮೋಸ ಮಾಡುವವರಿಗೇನು ನಮ್ಮಲ್ಲಿ ಕೊರತೆ ಇಲ್ಲ. ಆದರೆ ಚೌಕಾಸಿ ಎಲ್ಲಿ ? ಯಾರೊಡನೆ..? ಎಂಬ ಪ್ರಶ್ನೆಯೂ ನಮ್ಮನ್ನು ಕಾಡಬೇಕು. ಅದೆಲ್ಲೋ ಯಾವುದೋ ವ್ಯಾಪಾರ, ವ್ಯವಹಾರಕ್ಕೆ ಹೋಗಿ ಒಂದಕ್ಕೆ ಎರಡರಷ್ಟು ಕುಯ್ಯಿಸಿಕೊಳ್ಳುವ ನಮಗೆ, ಆನ್ಲೈನ್ ಶಾಪಿಂಗ್ ಮಾಡಿ ಸಾವಿರಾರು ರೂಪಾಯಿ ಕಳೆದುಕೊಂಡು ವಸ್ತುವನ್ನು ಹಿಂದಿರುಗಿಸಲು ಆಗದೇ, ಬಳಸಲು ಆಗದೇ ಪೇಚಾಟಕ್ಕಿಟ್ಟುಕೊಳ್ಳುವ ನಮಗೆ ತೀರಾ ಬಡತನದಲ್ಲಿ ಸೊಪ್ಪನ್ನೋ , ತರಕಾರಿಯನ್ನೋ ಮಾರಲು ಬರುವ, ಇಳಿ ವಯಸ್ಸಿನಲ್ಲಿಯೂ ಸಂಸಾರದ ನೊಗ ಹೊತ್ತಿರುವ ಈ ಅಜ್ಜಿಯಂಥವರೊಡನೆ ಹತ್ತೋ, ಐದು ರೂಪಾಯಿಯ ಚೌಕಾಸಿಯ ಅವಶ್ಯಕತೆ ಬೇಡವೆನಿಸುತ್ತದೆ. ಅಷ್ಟಕ್ಕೂ ಅಜ್ಜಿ ಮಾರಾಟಕ್ಕಿಳಿದದ್ದು ಆನ್ಲೈನ್ ಮೂಲಕ ಅಲ್ಲವೇ ಅಲ್ಲ; ಮೋಸವಂತೂ ಇಲ್ಲವೇ ಇಲ್ಲ. ಆದರೆ ಇಂತಹವರೊಡನೆ ತೀರಾ ಚೌಕಾಸಿ ನಡೆಸುವ ಮಾನಸಿಕತೆ ನಮ್ಮಲ್ಲಿ ಇಂದು ಢಾಳಾಗಿ ಬೆಳೆಯುತ್ತಿದೆ.
ಬಹುಶಃ ಈ ಅಜ್ಜಿಯ ವಯಸ್ಸು ನಮಗಾಗುವ ಕಾಲಕ್ಕೆ ನಾವೇನಾಗುತ್ತೇವೋ ಗೊತ್ತಿಲ್ಲ. ನಡೆಯಲು ತ್ರಾಣವಾದರೂ ಇರುತ್ತದೆಯೋ ಇಲ್ಲವೋ ಅದು ಗೊತ್ತಿಲ್ಲ . ಬೆಳ್ಳಂಬೆಳಿಗ್ಗೆ ಎದ್ದು ‘ಕಾಯಕವೇ ಕೈಲಾಸ’ ಎಂದು ಭಾವಿಸಿ ಮಳೆ, ಚಳಿ, ಸೆಖೆಯೆನ್ನದೆ ತನ್ನ ಕೈಂಕರ್ಯದಲ್ಲಿ ತೊಡಗುವ ಅಜ್ಜಿಯ ವ್ಯಕ್ತಿತ್ವದೆದುರು ನಾವೆಲ್ಲ ‘ಆರಂಭ ಶೂರತ್ವ’ದವರು. ಈ ಇಳಿ ಬದುಕಿನ ಸಂಧ್ಯಾ ಕಾಲದಲ್ಲೂ ಆಕೆಯ ಸಹನೆ, ತಾಳ್ಮೆ, ಬದುಕಿನ ವ್ಯಥೆಯ ಕತೆಯನ್ನೆಲ್ಲ ಅಂತರಂಗದಲ್ಲಿ ಬಚ್ಚಿಟ್ಟು ಇತರರೊಂದಿಗೆ ಸದಾ ಹಸನ್ಮುಖಿಯಾಗಿರುವ ಪರಿ ಇವೆಲ್ಲ ಶಾಲೆಯಲ್ಲಿ ಪಡೆಯುವ ಶಿಕ್ಷಣ, ಸಂಸ್ಕಾರಕ್ಕಿಂತಲೂ ಹೆಚ್ಚಿನದು. ಇದು ಒಬ್ಬ ಬಡ ಅನಕ್ಷರಸ್ತೆ ಅಜ್ಜಿ ಮುಂದಿನ ತಲೆಮಾರಿಗೆ ನೀಡುವ ಮೌಲ್ಯಗಳ ಹೂರಣ; ಬದುಕಿಗೆ ನೀಡುವ ಸ್ಫೂರ್ತಿಯೂ ಹೌದು. ಒಬ್ಬ ಸಾಲುಮರದ ತಿಮ್ಮಕ್ಕ , ಒಬ್ಬ ಸುಕ್ರಜ್ಜಿಯಂತವರು ಇಂದಿಗೂ ಇಂತಹ ಸಾಮಾನ್ಯ ಕಾರಣಗಳಿಗಾಗಿಯೇ ನಮಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಆದ್ದರಿಂದ ಹಿರಿಯರ ಜೊತೆ ಕ್ರಮಿಸುತ್ತಾ ಅವರ ಅನುಭವದ ಪಾಕವನ್ನು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಸವಿದು ಬದುಕಿನ ಜೀವಂತ ಮೌಲ್ಯಗಳನ್ನು ನಮ್ಮದಾಗಿಸುವ ಜಾಣ್ಮೆ ನಮಗಿಂದು ಬೇಕಾಗಿದೆ.
‘ಹಿರಿದು’ ಎಂಬುದಕ್ಕೆ ವಯಸ್ಸಾದ, ದೊಡ್ಡದು, ಶ್ರೇಷ್ಟ ವಾದುದು ಇತ್ಯಾದಿ ಅರ್ಥಗಳಿವೆ. ಸದ್ಯ ನಾವು ‘ಹಿರಿಯ’ ಎಂಬುದನ್ನು ಶ್ರೇಷ್ಟ ಎಂಬರ್ಥದಲ್ಲಿ ತಿಳಿಯಬೇಕಾದುದು ಬಹುಮುಖ್ಯವಾದುದು. ರಾಮನ ಹಿರಿತನದ ಆದರ್ಶದ ಮೇಲೆ ಲೋಕಕ್ಕೆ ಮಾದರಿಯಾದ ‘ರಾಮರಾಜ್ಯ’ ಸ್ಥಾಪಿತವಾಯಿತು. ” ಧರ್ಮ ಸಂಸ್ಥಾಪನಾರ್ಥಾಯ ಯುಗೇ ಯುಗೇ!” ಎಂದ ಶ್ರೀ ಕೃಷ್ಣನ ಧರ್ಮ ಸಾಮ್ರಾಜ್ಯ ರೂಪಿತವಾದದ್ದು ಧರ್ಮ ಸ್ವರೂಪಿಯಾದ ಧರ್ಮರಾಯನ ಹಿರಿತನದಲ್ಲಿ! ನಮ್ಮ ಎಲ್ಲಾ ಮಹಾಕಾವ್ಯಗಳು, ಪುರಾಣಗಳು , ಉಪನಿಷತ್ತುಗಳು, ವೇದಗಳು ರೂಪಿತವಾದದ್ದು ವೇದವೇದಾಂಗ ಪಾರಂಗತರಾದ ಋಷಿ ಮುನಿಗಳ ಹಿರಿತನದಲ್ಲಿ! ವಿಜಯ ನಗರದಂತಹ ಮಹಾ ಸಾಮ್ರಾಜ್ಯ ನಿರ್ಮಿಸಲು ಹಕ್ಕ ಬುಕ್ಕರಿಗೆ ಗುರು ವಿದ್ಯಾರಣ್ಯರಂತಹ ಹಿರಿತನದ ಅವಶ್ಯಕತೆ ಉಂಟಾಯಿತು, ಶಿವಾಜಿ ಮಹಾರಾಜರಿಗೆ ಸಮರ್ಥ ರಾಮದಾಸರ ಅವಶ್ಯಕತೆ, ಚಂದ್ರಗುಪ್ತ ಮೌರ್ಯನಿಗೆ ಚಾಣಕ್ಯರ ಅನುಭವದ ಸಾಂಗತ್ಯ, ಸಾತತ್ಯ ಉಂಟಾಯಿತು . ಹೀಗಾಗಿ ದೇಶದ ಭವಿಷ್ಯವೇ ಇರಲಿ; ಸಮಾಜದ ಭವಿಷ್ಯವೇ ಇರಲಿ; ವ್ಯಕ್ತಿಗತ ಬದುಕೇ ಇರಲಿ , ಸಾಧನೆಗಳೇ ಇರಲಿ ಇವೆಲ್ಲವೂ ಹಿರಿತನದ ಅನುಭವದ ತಳಹದಿಯ ಮೇಲೆ ಮಾರ್ಗದರ್ಶಿತವಾಗಿ ರೂಪಿತವಾಗುವಂತಹದು. ಹೀಗಾಗಿ ಹಿರಿಯರು ಯಾರೇ ಇರಲಿ ಧರ್ಮ ಬೇದ ಭಾವ ಮರೆತು, ಅವರ ಸಂಸ್ಕಾರ , ಅನುಭವದ ಪರಿಪಕ್ವತೆ, ಕಷ್ಟ ಸಹಿಷ್ಣುತೆ, ಮಾನಸಿಕ ಶೋಭೆಯನ್ನು ಗುರುತಿಸಿ ಮಾನವೀಯ ಭಾವವನ್ನು ತೋರಬೇಕಾದ, ಗೌರವಿಸಬೇಕಾದ ಅನಿವಾರ್ಯತೆ ಇಂದಿದೆ. ಇಂದಿನ ಜನಾಂಗವಾದ ನಾವು ಆ ಭಾವವನ್ನು ಮುಂದಿನ ತಲೆಮಾರಿಗೆ ದಾಟಿಸಬೇಕಾದ ಅನಿವಾರ್ಯತೆ ಕೂಡಾ ಖಂಡಿತಾ ಇದೆ. ” ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತಗಳಿಂ ಕೇಳುತಂ, ಕೆಲವಂ ಮಾಳ್ಪವರಿಂದ ಕಂಡು, ಕೆಲವಂ ಸುಜ್ಞಾನದಿಂ ನೋಡುತಂ, ಕೆಲವಂ ಸಜ್ಜನ ಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ” ಎಂದು ಸೋಮನಾಥ ಕವಿ ಹೇಳುವುದು ಈ ಕಾರಣಕ್ಕಾಗಿಯೇ! ಹಿರಿಯರಿಂದ ಪಡೆದ ಅನುಭವದ ಸಾರ ಫಲಪ್ರದವಾದಲ್ಲಿ ಅನುಭವವೇ ಭಾವವಾಗಿ , ಸ್ವಭಾವವಾಗಿ, ಸ್ವರೂಪಿಯಾಗಿ, ಸುಸ್ವರೂಪದ ಮಹಾದರ್ಶನ ಮಾಡಬಲ್ಲದು.
ಅನುಭವಿಗಳಾದವರು ಹೇಳ್ತಾರೆ. ‘ಮನೆಗೊಬ್ಬ ಹಿರಿಯರಿರಬೇಕು’ ಎಂದು… ಏಕೆಂದರೆ ತಮ್ಮ ಬಾಳ ಪಯಣದಲ್ಲಿ ಕಂಡ ಗೆಲುವು- ಸೋಲು, ನೋವು ನಲಿವುಗಳನ್ನು ವಿಶ್ಲೇಷಿಸಿ ಭಾವೀ ಜನಾಂಗಕ್ಕೆ ಮಾರ್ಗದರ್ಶಿಸಿ ಸಂಭಾವ್ಯ ತಪ್ಪುಗಳನ್ನು ತಡೆಯುವವರು ಅವರು. ಹಿರಿಯರು ಅಕ್ಷರಸ್ಥರೋ! ಅನಕ್ಷರಸ್ಥರೋ! ಆದರೆ ಅವರಲ್ಲಿ ಹಿರಿದಾದೊಂದು ಸಂಪನ್ಮೂಲವಿದೆ. ಹಿರಿತನದ ಸಲಹೆಯನ್ನು ಮಾನ್ಯ ಮಾಡದಿದ್ದಲ್ಲಿ ತಪ್ಪುಗಳು ಖಂಡಿತಾ ಘಟಿಸುತ್ತವೆ. ಬಹುಶಃ ರಾಮಾಯಣದ ಕಾಲಕ್ಕೆ ಮಾವ ಮಾರೀಚನ ವಿವೇಕದ ನುಡಿಗಳನ್ನು ಪಾಲಿಸಿದರೆ ರಾವಣ, ಭೀಷ್ಮ -ವಿದುರರ ಹಿತ ವಿವೇಕದ ವಾಣಿಯನ್ನು ಆಲಿಸಿದರೆ ಮಹಾಭಾರತದ ಕಾಲಕ್ಕೆ ಕೌರವ ಕೆಡಬೇಕಾದ, ಸರ್ವನಾಶ ಹೊಂದಬೇಕಾದ ಪರಿಸ್ಥಿತಿಗಳು ಉಗಮವಾಗುತ್ತಿರಲಿಲ್ಲ ಎಂಬುದು ಇದಕ್ಕೊಂದೆರಡು ದೃಷ್ಟಾಂತವಷ್ಟೇ!
” ಹೊಸ ಚಿಗುರು ಹಳೆಬೇರು ಕೂಡಿದೊಡೆ ಮರ ಸೊಬಗು
ಹೊಸ ಯುಕ್ತಿ ಹಳೆ ತತ್ವ ದೊಡಗೂಡೆ ಧರ್ಮ ” ಎಂಬ ಮಾತು ಸರ್ವ ಕಾಲಕ್ಕೂ ಸತ್ಯವಾದುದು. ಹಿರಿತನದ ಅನುಭವದ ಜಲ್ಲೆಯನ್ನು ಸವಿಯುತ್ತಾ, ಹೊಸ ಚಿಂತನೆಗಳೊಡನೆ ಬದುಕು ನಡೆಸಿದಲ್ಲಿ ಮಾತ್ರ ವ್ಯಕ್ತಿಯ ಬದುಕು ಹಸನಾಗಬಲ್ಲದು.
ಬಹುಶಃ ಇಂದಿನ ಜನಾಂಗವು ಹಿರಿತನವನ್ನು ದಿಕ್ಕರಿಸಿದುದರ ಪರಿಣಾಮವೇ ಇಂದಿನ ಸಮಾಜದ ಸ್ಥಿತಿಗತಿಗಳು ಎಂಬುದು ನಗ್ನ ಸತ್ಯ. ಕಷ್ಟವನ್ನೇ ಕವಚವಾಗಿ ಧರಿಸಿ ಹೋರಾಡಿ ಗಂಗೆಯನ್ನು ಧರೆಗಿಳಿಸಿ ಜಯ ಪಡೆದ ಭಗೀರಥ, ಕೆಡುಗಾಲದ ಕಷ್ಸದೊಡನೆ ಅತೀವ ಸಹನೆಯಿಂದ ಹೋರಾಡಿ ಗೆಲುವು ಪಡೆದ ಹರಿಶ್ಚಂದ್ರ, ಕಷ್ಟವನ್ನು ಇಷ್ಟವಾಗಿಸಿಕೊಂಡೇ ಸಾರ್ಥಕ ಗೆಲುವು ಪಡೆದ, ಬದುಕಿನ ಯಶೋಗಾಥೆಯ ಮೂಲಕ ಇತರರಿಗೆ ದಾರಿದೀಪವಾದ ಆಧುನಿಕ ತಲೆಮಾರಿನ ಗಾಂಧೀಜಿ, ಅಂಬೇಡ್ಕರ್ , ವಿಶ್ವೇಶ್ವರಯ್ಯನಂತವರು ಇಂದು ನಮ್ಮ ಯುವ ಜನಾಂಗಕ್ಕೆ ಸ್ಪೂರ್ತಿಯಾಗುತ್ತಿಲ್ಲ. ಏಕೆಂದರೆ ನಮ್ಮ ಹಿರಿಯರು ಸಾಗಿ ಬಂದ ಅಥವಾ ನಮ್ಮನ್ನು ಈ ಹಂತಕ್ಕೆ ತರಲು ಅವರು ಸವೆಸಿದ ಸುದೀರ್ಘ ಪಯಣದ ಹಾದಿಯ ಸುಮದ ಗಂಧವನ್ನು ಯಾರೂ ಆಘ್ರಾಣಿಸುತ್ತಿಲ್ಲ. ನಮ್ಮ ಕಣ್ಣೆದುರು ಇಂದು ಆದರ್ಶವಾಗಿರುವುದು ಸಿನೆಮಾ ನಟನಟಿಯರು, ಕ್ರಿಕೆಟ್ ಆಟಗಾರರು, ರಾಜಕಾರಣಿಗಳು. ಮಂಡಿನೋವನ್ನು ಲಕ್ಷಿಸದೆ, ಅಂತರಂಗದಲ್ಲಿ ಕೇವಲ ಹಣವೊಂದನ್ನೇ ಮುಖ್ಯ ಉದ್ದೇಶವಾಗಿರಿಸಿ ಕ್ರಿಕೆಟ್ ಆಡುವ ಆಟಗಾರನನ್ನು ಕಂಡು ಅಬ್ಬಾ ! ಎಂದು ಮೂಗಿನ ಮೇಲೆ ಬೆರಳಿಡುವ, ಅವನ ಸ್ಟೇಟಸ್ ಹಾಕಿ ಸಂಭ್ರಮಿಸುವ ನಮಗೆ ಒಪ್ಪೊತ್ತಿನ ಊಟದಲ್ಲಿಯೇ ದಿನಕಳೆಯುತ್ತಾ ಸ್ವಾರ್ಥವಿಲ್ಲದೇ ಬದುಕಿನುದ್ದಕ್ಕೂ ದುಡಿದು ಇಂದಿನ ಚೆಂದದ ಬದುಕನ್ನು ಕಟ್ಟಿದ ನಮ್ಮ ತಂದೆ ತಾಯಿ, ಅಜ್ಜ ,ಮುತ್ತಜ್ಜರ ತ್ಯಾಗ ಜೀವನ ನೆನಪಾಗುವುದಿಲ್ಲ. ಡ್ಯೂಪ್ ಬಳಸಿ ಪೈಟ್ ಮಾಡುವ ಸಿನೆಮಾ ಹೀರೋವನ್ನು ಮಹಾನ್ ಆಗಿ ಕಾಣುವ ನಮಗೆ ಸ್ವಾತಂತ್ರ್ಯ ಕ್ಕಾಗಿ ಬ್ರಿಟಿಷರ ವಿರುದ್ದ ಹೋರಾಡಿದ , ಸರ್ವ ಸಮರ್ಪಣಾ ಭಾವದಿಂದ ತನುಮನಧನವನ್ನರ್ಪಿಸಿ ತ್ಯಾಗಗೈದ ಈ ದೇಶದ ಕೋಟ್ಯಾಂತರ ಸ್ವಾತಂತ್ರ್ಯ ಸೇನಾನಿಗಳು ನೆನಪಾಗುವುದಿಲ್ಲ. ಭ್ರಷ್ಟಾಚಾರವನ್ನು ಮೈಗೂಡಿಸಿಕೊಂಡು ಕಾರಿನಲ್ಲಿ ಝುಮ್ಮೆಂದು ಬರುವ ರಾಜಕಾರಣಿಯನ್ನು ಇಂದು ಯುವ ಜನಾಂಗದ ಪಾಲಿನ ದೊಡ್ಡ ಆದರ್ಶವಾಗಿ ಕಾಣುವ ನಮಗೆ ಗಾಂಧೀಜಿ, ಶಾಸ್ತ್ರೀಜಿ ನೆನಪಾಗುವುದಿಲ್ಲ. ನಾವು ಸಾಗಿಬಂದ ಬದುಕಿನ ಹಾದಿಯನ್ನು ಕಣ್ದೆರೆದು ನೋಡದೇ , ಇತಿಹಾಸದ ಗಂಧಗಾಳಿಯನ್ನು ಅರಿಯದೇ ನೇರವಾಗಿ ಸರ್ವಜ್ಞರಾಗಿ ಷರಾ ಬರೆಯುವ ವ್ಯಕ್ತಿಗಳು ಇಂದು ಎಲ್ಲೆಡೆ ರಾರಾಜಿಸುತ್ತಿದ್ದಾರೆ.
‘ಮೊಸರಲ್ಲಿ ಕಲ್ಲು ಹುಡುಕುವ ‘ಹಿರಿಯರ ಸಾಧನೆಗಳಲ್ಲಿ ದೋಷವನ್ನು ಹುಡುಕುತ್ತಾ, ಮೂದಲಿಸುವ ನಮಗೆ ಆಕಾಲದ ಅಗಾಧ ಸಾಧನೆಗಳ, ಆ ಕಾಲದ ಸ್ಥಿತಿಗತಿಗಳ ಜ್ಞಾನವೂ ಇಲ್ಲವಾಗಿರುವುದು ದುರಂತ.
‘
ಹಾಗಾದರೆ ಇಂತಹ ಮನೋಭಾವಕ್ಕೆ ಯುವ ಜನರಷ್ಟೇ ಕಾರಣೀ ಭೂತರೇ? ಎಂದು ಪ್ರಶ್ನಿಸಿಕೊಂಡರೆ ಈ ಮಾರ್ಪಾಡಿಗೆ ವರ್ತಮಾನದ ಹಿರಿಯರ ಕೊಡುಗೆಗಳು ತುಂಬಾ ಇವೆ ಎಂದು ತಿಳಿಯುತ್ತದೆ.
ಘಟನೆಯೊಂದು ನೆನಪಾಗುತ್ತದೆ. ಸರ್ಕಾರಿ ಕಛೇರಿಯಲ್ಲಿ ನೌಕರನಾಗಿರುವ ತಂದೆಗೆ ಅವರ ಮಗನ ಸ್ಕೂಲ್ ಟೀಚರ್ ” ನಿಮ್ಮ ಮಗ ಶಾಲೆಯಲ್ಲಿ ಪೆನ್ನು ಕದಿಯುತ್ತಾನೆ “ಎಂದು ದೂರು ನೀಡಿದರಂತೆ. ಮನೆಗೆ ಬಂದ ತಂದೆ ಮಗನನ್ನು ಬೈದು ” ನೀನು ಶಾಲೆಯಲ್ಲಿ ಯಾಕೆ ಕದಿಯಲು ಹೋದೆ , ಹೇಳಿದರೆ ಆಫೀಸಿನಿಂದ ತಂದು ಕೊಡುತ್ತಿರಲಿಲ್ಲವಾ? ” ಎಂದು ಗದರಿಸಿದರಂತೆ. ನಮ್ಮ ನೈತಿಕತೆ ಪ್ರಾಮಾಣಿಕತೆ ಇಂದು ಭಾಷಣದ ಹಳಸು ಸರಕಲಾಗಿದೆ. ಬಸ್ ಬರುವವರೆಗೆ ಭ್ರಷ್ಟಾಚಾರದ ಬಗ್ಗೆ ಉಗ್ರ ಭಾಷಣ ಬಿಗಿದು ಬಸ್ ಹತ್ತಿದ ಮೇಲೆ ಟಿಕೆಟ್ ತೆಗೆದುಕೊಳ್ಳದೆ ಪ್ರಯಾಣಿಸುವ ಪ್ರಯಾಣಿಕನ ಜಾಯಮಾನ ಹೆಚ್ಚಿನವರಲ್ಲಿ ಗೋಚರವಾಗುತ್ತಿದೆ. ಇನ್ನು ಬದುಕಿನ ಭವಿಷ್ಯವನ್ನು ಬರೆಯುವ ಶಿಕ್ಷಣವೆಂಬುದು ಇಂದು ವ್ಯಾಪಾರದ ಸರಕಾಗಿದೆ.
ಲಕ್ಷ ಲಕ್ಷ ಡೊನೇಷನ್ ಕೊಟ್ಟು ಮಕ್ಕಳಿಗೆ ಮೆಡಿಕಲ್, ಇಂಜಿನೀಯರಿಂಗ್ ಕೊಡಿಸುವ ನಾವು ಅಲ್ಲಿಂದ ಹೊರಬರುವ ಇಂಜಿನೀಯರ್ , ಡಾಕ್ಟರ್ ಗಳಿಂದ ಯಾವ ಪ್ರಾಮಾಣಿಕತೆಯನ್ನು ನಿರೀಕ್ಷಿಸಬಹುದು ಹೇಳಿ? ಹಣದ ಹಪಾಹಪಿತನವೇ ಶಿಕ್ಷಣದ ಧ್ಯೇಯೋದ್ದೇಶವಾದಾಗ ಎಂತಹ ಬಾವೀ ಪ್ರಜೆಗಳು ದೇಶಕ್ಕೆ ಸಿಗಬಹುದು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರುಷಗಳೇ ಗತಿಸಿದರೂ ನಮ್ಮ ಸರ್ಕಾರಿ ಕಛೇರಿಗಳಲ್ಲಿ ಅವೇ ಗಾಂಧೀ, ನಹರು , ವಿವೇಕಾನಂದ, ತಿಲಕರಂತವರ ಪೋಟೋಗಳು. ಇತ್ತೀಚೆಗೆ ಅಂತಹ ಹೀರೋಗಳು ಜನತೆ ಸದಾ ನೆನೆಯಬಲ್ಲ ಧೀಮಂತರು ಹುಟ್ಟುತ್ತಿಲ್ಲ ಏಕೆ? ವರ್ತಮಾನದ ಬೆಳಕಿನಲ್ಲಿ ಭೂತಕಾಲದ ಗೋರಿಯನ್ನಗೆದು ಮುತ್ತು ಮಾಣಿಕ್ಯಗಳನ್ನು ಹೆಕ್ಕಿ ತೆಗೆಯುವ ನಮಗೆ ಅವರ ಒಂದಷ್ಟು ಉತ್ತಮ ಗುಣಗಳಾದರೂ ನಮ್ಮಲ್ಲಿ ಸ್ಥಾಯಿಯಾಗಬೇಕಿತ್ತಲ್ಲವೇ? ಇಲ್ಲ ಸಾಧ್ಯವಿಲ್ಲ. ಏಕೆಂದರೆ ಉಳುವೀಶ ಕವಿ ಹೇಳುವಂತೆ
” ನವ್ಯ ನಾಗರಿಕತೆಯ ಪಿತ್ತದಿಂ ಮತ್ತೇರಿ
ಸುತ್ತಿ ಸುತ್ತಿರುಗುತಿದೆ ನರನ ತಲೆಯು
ಎದೆಯ ಕುಂಡದಿ ಸ್ವಾರ್ಥದಗ್ನಿ ಧಗಧಗಿಸುತಿದೆ
ತತ್ತರಿಸುತಿದೆ ಶಾಂತಿ ತಪ್ಪಿ ನೆಲೆಯು”
ಎಂಬಂತಾಗಿದೆ ಇಂದಿನ ಜನಮನದ ಸ್ಥಿತಿ. ಹಿರಿತನದ ಮೌಲ್ಯವನ್ನು ಧರಿಸದೆ ಮುನ್ನಡೆಯುತ್ತಿರುವ ಯುವ ಜನಾಂಗಕ್ಕೆ
“ಕುರುಡನ ಹೆಗಲೇರಿ ಹೆಳವ ಕುಳಿತಿದ್ದಾನೆ ದಾರಿ ಸಾಗುವುದೆಂತೋ ನೋಡಬೇಕು” ಎಂಬ ಅಡಿಗರ ಸಾಲುಗಳು ಎಷ್ಟು ಸುಂದರವಾಗಿ ಹೊಂದಿಕೊಳ್ಳುತ್ತವೆ ಅಲ್ಲವೇ?
—————
ವಿಷ್ಣು ಆರ್.ನಾಯ್ಕ

ಇಂದಿನ ವಾಸ್ತವಿಕ ಬದುಕಿಗೆ ಹಿಡಿದ ಕೖಗನ್ನಡಿ ಎಂತಿದೆ ನಿಮ್ಮ ಈ ಬರವಣಿಗೆ.. ಜನತೆಗೆ ಸೂಕ್ತ ಅರಿವು ಮೂಡಿಸುವಂತೆ……
ಧನ್ಯವಾದಗಳು