ವಾಣಿ ಯಡಹಳ್ಳಿಮಠ ಅವರ ಗಜಲ್

ಬರೆದು ಬರೀ ನಿನ್ನನೇ , ನನ್ನ
ಕವಿತ್ವ ಬರಿದಾಗಿ ಹೋಗುವುದೇನೋ ಎಂದೆನಿಸುತಿದೆ
ಎರೆದು ಪ್ರೀತಿಯ ಕವಿತೆಗಳಿಂದ ನಿನ್ನನು
ಪದಗಳ ಝರಿಯೇ ಬತ್ತುವುದೇನೋ ಎಂದೆನಿಸುತಿದೆ

ಜಗದ ಬಾಂಧವ್ಯಗಳಿಗಿಂತ ತುಸು
ಭಿನ್ನವೇನೋ ನಮ್ಮಿಬ್ಬರ ಬಂಧ
ಹೆಸರಿಗೂ ನಿಲುಕದ ಆತ್ಮಗಳ ಅನುಬಂಧ
ಬೆಸೆದುಕೊಂಡಿರುವುದೇನೋ ಎಂದೆನಿಸುತಿದೆ

ಒಂದಾಗುವ ಶರತ್ತಿಲ್ಲ , ದೂರಾಗುವ ದುಗುಡವಿಲ್ಲ
ನಮ್ಮೊಲವಿನ ಕಥೆಗೆ ನಲ್ಲ
ಮಾತು ಮೌನಗಳಿಗೂ ಮೀರಿದ ಪ್ರೇಮ
ನಮ್ಮಿಬ್ಬರದಾಗಿರುವುದೇನೋ ಎಂದೆನಿಸುತಿದೆ

ಆ ಬಾನು ಭುವಿಗೆ ಪ್ರೀತಿ ತೋರಲು
ಮಳೆಯೊಂದೇ ಮಾಧ್ಯಮವಂತೆ
ನಿನ್ನೊಂದಿಗೆ ಸಂಭಾಷಿಸಲು ಸವಿ ನೆನಪೇ
ಸೇತುವೆಯಾಗಿರುವುದೇನೋ ಎಂದೆನಿಸುತಿದೆ

ವಾಣಿಯ ಏಕ್ ತರ್ಫಾ ಮೊಹಬ್ಬತ್ತಿನ
ಸೀಮೆಯನು ನೋಡು ನೀ ಸಾಕಿ
ನಿನಗೂ ತಿಳಿಯದಂತೆ ನಿನ್ನನೇ ಪ್ರೀತಿಸುವ
ರೀತಿ ಹೊಸದಾಗಿರುವುದೇನೋ ಎಂದೆನಿಸುತಿದೆ


Leave a Reply

Back To Top