ಕಾವ್ಯ ಸಂಗಾತಿ
ಮೂಕ ರೋದನ…
ಹಮೀದಾ ಬೇಗಂ ದೇಸಾಯಿ

ಹೇಳಲಾಗದ ವೇದನೆಯ
ಮೂಕ ರೋದನ ಕೇಳುತಿದೆ
ಕಲ್ಲು ಕಲ್ಲಿನಲ್ಲೂ
ಕಳೆದ ಗತವೈಭವದ ದಿನಗಳ
ನೆನಪು ಮರುಕಳಿಸಿ…
ಛತ್ರ ಚಾಮರಗಳ
ಹೊನ್ನ ಪಲ್ಲಕ್ಕಿಯ
ಆ ಮೆರವಣಿಗೆ,
ಅಶ್ವಗಳ ಖುರಪುಟಗಳ ಸದ್ದಿನಲಿ
ಗಜಗಳ ಗಂಭೀರ ನಡಿಗೆ ಗಳ
ಆ ರಾಜ ಪಥವೆಲ್ಲಿ…
ಬಳ್ಳದಿಂದ ಅಳೆದು
ಮುತ್ತು ರತ್ನಗಳ ಮಾರಿದ
ಆ ಸಂತೆ ಬೀದಿ
ಜನ ಕಲ್ಯಾಣಕೆ ಹರಿದ
ತುಂಗೆಯ ಕಲ್ಲು ಕಾಲುವೆಗಳು
ಭವ್ಯ ವಿಶ್ರಾಮ ಮಂಟಪಗಳು
ಮಹಾ ಮೌನದಲಿವೆ ಇಂದು..
ವೀರ ಹುಕ್ಕ ಬುಕ್ಕರ
ವಿದ್ಯಾರಣ್ಯರ ಹರಕೆಯ
ಪಾವನ ನೆಲವಿಂದು
ಅಸಹಾಯಕನಂತೊರಗಿದೆ…
ರಾಜಾಧಿರಾಜ ರಾಯನ
ಜೈತಯಾತ್ರೆಯ ಜಯಘೋಷ. ಪರಾಕುಗಳ ಉದ್ಘೋಷಗಳಿಂದು
ಮರೆಯಾಗಿವೆ ಮುಗಿಲಿನಲಿ…
ದತ್ತಿ ದಾನ ಧರ್ಮಗಳ
ಕೆತ್ತಿದ ಶಿಲಾ ಶಾಸನಗಳ
ಅನ್ನದಾತರು ಬೆವರಿಳಿಸಿ ಬೆಳೆದ
ಹಸಿರು ಉಸಿರುಗಟ್ಟಿದೆ..
ಸಾಹಿತ್ಯ ಸಂಗೀತ ಕಲೆಗಳ ಸ್ವರ ನಾದದಿ
ಝೇಂಕರಿಸಿದ ರಾಜಸಭೆಯ ಮೆರುಗು
ಕರಗಿಹೋಯಿತು ಕಾಲಗರ್ಭದಿ…
ಮಸಣ ಮೌನದಲಿ
ಮಿಂದಂತಿದೆ ಹೆಮ್ಮೆಯ
ಮಾನೋಮಿ ದಿಬ್ಬ ಮರುಗಿ..
ಪಂಪಾಪತಿಯ ಇಚ್ಛೆಯೋ
ವರವೋ ಶಾಪವೋ
ಹಂಪೆಯ ದುರ್ವಿಧಿಯೋ
ಬಂಡೆಗಲ್ಲುಗಳ ರಾಶಿಯ
ಕೊಂಪೆಯಾದುದಿಂದು
ಕೊರಗಿ ಸೊರಗುತ…
ಹಮೀದಾ ಬೇಗಂ ದೇಸಾಯಿ

ಮೌನ ರೋದನದ ಕವಿತೆ ಅರ್ಥಪೂರ್ಣವಾಗಿ ಮೂಡಿಬಂದಿದೆ.
ನಿಜ ಮೇಡಂ.. ಅಂದಿನ ವೈಭವದ ಹಂಪಿ ಇಂದು ಹಾಳು ಕೊಂಪೆ..ಆದರೂ ಇತಿಹಾಸ ಮಾತ್ರ ರೋಚಕ.. ಅಷ್ಟೇ ದುಃಖಕರ..ಚಂದದ ಕವಿತೆ..