ಕಾವ್ಯಸಂಗಾತಿ
ಎಸ್ ವಿ ಹೆಗಡೆ
ಸಾಹುಕಾರನ ಸ್ವಗತ

ಓ ದು ಬರಹ ಬರುವದಿಲ್ಲ
ಏಕೆಂದರೆ ಶಾಲೆಗೆ ಕಳಿಸಲಿಲ್ಲ
ಹೊಲದ ದುಡಿಮೆ ಹೊಟ್ಟೆಗಷ್ಟೇ
ಕಿಸೆಯಲ್ಲಿ ಕಾಸು ಅಷ್ಟಕಷ್ಟೆ
ದೇವರಿಟ್ಟ ಗಟ್ಟಿ ಕಾಲು ರಟ್ಟೆ
ಸುಮ್ಮನೆ ಕಾಲ ಕಳೆಯಲಿಲ್ಲ ಅಷ್ಟೇ
ಊರ ನಡುವೆ ಅಂಗಡಿಯೊಂದ ಇಟ್ಟೆ
ಪಟ್ಟಣದ ಸಣ್ಣ ಪುಟ್ಟ ಸಾಮಾನು ತಂದಿಟ್ಟೆ
ಅಪ್ಪ ಅಮ್ಮ ಕಲಿಸಿದ ಪಾಠ
ದುಡಿಮೆಯಲಿ ಇರಲಿ ಶ್ರದ್ದೆ
ಮೋಸ ವಂಚನೆ ಮಾಡಬಾರದಷ್ಟೇ
ಬದುಕಿನಿಂದಲೂ ಬಹಳ ಕಲಿತು ಬಿಟ್ಟೆ
ತಿಂಗಳ ಪಗಾರು ಮಾತ್ರ ನಿಕ್ಕಿಯಿಲ್ಲ
ಯಾರದೋ ಕೈಕೆಳಗಿನ ನೌಕರಿಯಲ್ಲ
ಆದರೂ ಗೊತ್ತಿರಲಿ ನಿಮಗೆ
ತಿಂಗಳಿಗೆ ಲಕ್ಷ ಕಿಂತ ಕಡಿಮೆಯಿಲ್ಲ
ದಿನದಿಂದ ದಿನಕ್ಕೆ ಕುದುರಿದ ವ್ಯವಹಾರ
ಇನ್ನೆರಡು ಅಂಗಡಿ ಕೆಲಸುಗಾರರ ಸಹಕಾರ
ಕೆಲವು ಕಲಿತವರಿಗೆ ನೌಕರಿಯ ಉಪಕಾರ
ನಾನೀಗ ಊರಿಗೇ ಸಾಹುಕಾರ.
ಎಸ್ ವಿ ಹೆಗಡೆ
