
ಧಾರಾವಾಹಿ 81
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಎಸ್ಟೇಟ್ ನ ಎಲ್ಲರಿಗು ಗೊತ್ತಾದ
ಸುಮತಿಯ ಕಲಾ ಪ್ರತಿಭೆ

ಬಂಗಲೆಯಲ್ಲಿ ರಾತ್ರಿಯ ಊಟಕ್ಕೆ ಚಪಾತಿ, ತರಕಾರಿಯ ಪಲ್ಯ, ಹಬೆಯಾಡುವ ಬಿಸಿ ಅನ್ನ, ತಿಳಿಸಾರು, ತರಕಾರಿ ಪಲ್ಯ, ಮಾವಿನ ಮಿಡಿ ಉಪ್ಪಿನಕಾಯಿ ಜೊತೆಗೆ ಹುಳಿಯಿರದ ಗಟ್ಟಿ ಮೊಸರು ಇತ್ತು. ದೇವರಿಗೆ ಕೃತಜ್ಞತೆ ಸಲ್ಲಿಸುತ್ತಾ ಸುಮತಿ ಮತ್ತು ಮಗಳು ರುಚಿಕರವಾದ ಊಟವನ್ನು ತೃಪ್ತಿಯಿಂದ ಮಾಡಿದರು. ಊಟ ಮಾಡುವಾಗ ತನ್ನ ತಾಯ್ನಾಡಿನ ಮತ್ತು ಕುಟುಂಬದ ನೆನೆಪು ಸುಮತಿಗೆ ಬಾರದೇ ಇರಲಿಲ್ಲ. ಬಾಲ್ಯದಲ್ಲಿ ಎಷ್ಟು ಐಷಾರಾಮ ಜೀವನ ನಡೆಸಿದ್ದ ತನ್ನ ಜೀವನವನ್ನು ಹಾಗೂ ಇಂದು ತನ್ನ ಮಕ್ಕಳು ಈಗ ಬದುಕುತ್ತಿರುವ ಜೀವನವನ್ನು ನೆನೆದು ನಾನೆಂತಹಾ ನತದೃಷ್ಟ ತಾಯಿ ಇಂದು ನನ್ನ ಮಕ್ಕಳು ಎಲ್ಲೋ ನಾನೆಲ್ಲೋ ರುಚಿಕರವಾದ ಊಟವನ್ನು ಕೊಡುವಷ್ಟು ಯೋಗ್ಯತೆ ಕೂಡಾ ನನಗಿಲ್ಲವಲ್ಲ. ತಾಯಿಯ ಮಮತೆಯಿಂದ ಇಬ್ಬರನ್ನೂ ಬಹಳ ಚಿಕ್ಕ ವಯಸ್ಸಿನಲ್ಲಿಯೇ ದೂರ ಇಟ್ಟಿರುವೆನಲ್ಲಾ….ಹಿರಿಯ ಮಗಳು ಮದುವೆ ಆಗುವವರೆಗೂ ಮತ್ತು ಕಿರಿಯ ಮಗಳು ಈಗ ನನ್ನ ಜೊತೆ ಇದ್ದು ಅಲ್ಪ ಸ್ವಲ್ಪ ನನ್ನ ವಾತ್ಸಲ್ಯ ಹಾಗೂ ಆರೈಕೆಯಲ್ಲಿ ಕಳೆದಿದ್ದಾರೆ ಆದರೆ ನಡುವಿನ ಇಬ್ಬರು ಮಕ್ಕಳು ಈ ಎಲ್ಲದರಿಂದ ವಂಚಿತರು ಎಂದು ನೆನೆದಾಗ ದುಃಖ ಉಕ್ಕಿ ಬಂದರೂ ತಡೆದುಕೊಂಡು ಊಟ ಮಾಡಿ ಮುಗಿಸಿದಳು. ತನ್ನ ಮಕ್ಕಳು ಜೊತೆ ಇಲ್ಲದ ಮೇಲೆ ತಾನೆಷ್ಟು ಮೃಷ್ಟಾನ್ನ ತಿಂದರೇನು? ಎಂದು ಮನಸು ಹೇಳಿದರೂ ಕೂಡಾ ಇಷ್ಟು ಪ್ರೀತಿಯಿಂದ ಉಣ ಬಡಿಸಿದ ಮಾಲಿಕರ ಕುಟುಂಬಕ್ಕೆ ಮನಸ್ಸಲ್ಲೇ ಕೃತಜ್ಞತೆ ಸಲ್ಲಿಸಿದರು. ಮಾಲಿಕರ ಕುಟುಂಬವನ್ನು ಸದಾ ಚೆನ್ನಾಗಿ ಇಟ್ಟಿರು ಎಂದು ಶ್ರೀ ಕೃಷ್ಣನನ್ನು ಬೇಡಿಕೊಂಡಳು. ಸುಮತಿ ಮನೆಗೆ ಹೊರಡುವಾಗ ಭಟ್ಟರು ಮರೆಯದೇ ಒಂದು ಬಾಟಲಿಯಲ್ಲಿ ಮಜ್ಜಿಗೆಯನ್ನು ಕೊಟ್ಟು ಕಳುಹಿಸಿದರು.
ರಾತ್ರಿ ಸಣ್ಣ ಸಾಹುಕಾರರು ಮಲಗಲು ತೋಟದ ಬಂಗಲೆಗೆ ಹೋಗುವಾಗ ಸುಮತಿ ಹಾಗೂ ಮಗಳನ್ನು ಕಾರಿನಲ್ಲಿ ಜೊತೆಗೆ ಕರೆದುಕೊಂಡು ಅವರ ಮನೆಗೆ ಬಿಟ್ಟು ಬಂಗಲೆಯ ಕಡೆಗೆ ಹೋದರು. ಮಗಳ ಜೊತೆ ಮನೆಗೆ ಬಂದು ಮಲಗಿದ ಸುಮತಿಗೆ ನಿದ್ರೆಯೇ ಬರಲಿಲ್ಲ. ಮಗಳನ್ನು ತಟ್ಟಿ ಮಲಗಿಸುತ್ತಿದ್ದ ಅವಳ ಮನಸ್ಸು ಗತ ಜೀವನದ ನೆನಪುಗಳಿಂದ ತುಂಬಿ ಹೋಯಿತು. ಹಾಗೆಯೇ ಎಷ್ಟೋ ಹೊತ್ತು ಮಲಗಿದ್ದ ಅವಳಿಗೆ ನಿದ್ರೆ ಯಾವಾಗ ಆವರಿಸಿತೋ ತಿಳಿಯಲಿಲ್ಲ. ಬೆಳಗ್ಗೆ ಬೇಗನೇ ಎದ್ದಳು ಸ್ನಾನ ಮಾಡಿ ತಯಾರಾದಳು. ಹಿಂದಿನ ದಿನ ಪೂರ್ತಿ ಮಾಡದೇ ಉಳಿದ ಚಿತ್ರವನ್ನು ಹೇಗಾದರೂ ಮಾಡಿ ಇಂದು ಪೂರ್ತಿ ಮಾಡಲೇಬೇಕು ಎನ್ನುವ ಹಂಬಲ ಅವಳಿಗಿತ್ತು. ಬೆಳಗ್ಗೆ ಸಣ್ಣ ಸಾಹುಕಾರರು ಹೊರಡುವಾಗ ಹಿಂದಿನ ದಿನದಂತೆ ಇಂದೂ ಸುಮತಿ ಮತ್ತು ಮಗಳನ್ನು ಜೊತೆಗೆ ಕಾರಿನಲ್ಲಿ ಕರೆದುಕೊಂಡು ಹೋದರು. ಬೆಳಗ್ಗಿನ ತಿಂಡಿಯ ನಂತರ ಚಿತ್ರ ಬಿಡಿಸಲು ಪ್ರಾರಂಭಿಸಿದಳು. ಚಿತ್ರವನ್ನು ಬಹಳ ಸುಂದರವಾಗಿ ಪೆನ್ಸಿಲ್ ನಿಂದ ಬಿಡಿಸಿದ್ದಳು. ಚಿಕ್ಕ ಯಜಮಾನರು ಒಮ್ಮೆ ಬಂದು ನೋಡಿ ಸರಿ ಇದೆ ಎಂದು ಹೇಳಿದರು. ಮಧ್ಯಾಹ್ನದ ಊಟದ ನಂತರ ಚಿತ್ರಕ್ಕೆ ಬಣ್ಣವನ್ನು ತುಂಬುವ ಕೆಲಸವನ್ನು ಮಾಡಿದಳು. ಸಂಜೆಯಾಗುತ್ತಿದ್ದಂತೆ ಚಿತ್ರ ಬಿಡಿಸಿ ಬಣ್ಣ ತುಂಬುವ ಕೆಲಸವೆಲ್ಲವೂ ಪೂರ್ಣವಾಯಿತು. ಸಣ್ಣ ಸಾಹುಕಾರರು ಬಂದು ನೋಡಿದಾಗ ಖುಷಿಯಿಂದ ಅವರ ಕಣ್ಣುಗಳು ಅರಳಿದವು. ತಾವು ಕೊಟ್ಟ ಚಿತ್ರದ ತದ್ರೂಪದಂತೆಯೇ ಇದ್ದ ಚಿತ್ರವನ್ನು ಕಂಡು ಅವರಿಗೆ ಬಹಳ ಸಂತೋಷವಾಯಿತು.
ಸುಮತಿಯ ನೈಪುಣ್ಯತೆಯನ್ನು ಮೆಚ್ಚಿಕೊಂಡರು. ಶಹಬ್ಬಾಷ್ ಹೇಳಿದರು. ತಾಯಿ ಮತ್ತು ಅವಳ ಉದರದಲ್ಲಿರುವ ಒಂಭತ್ತು ತಿಂಗಳ ಮಗುವಿನ ಸುಂದರ ಚಿತ್ರವನ್ನು ತಮ್ಮ ಕಟುಂಬದ ಇತರೇ ಸದಸ್ಯರನ್ನು ಕರೆದು ತೋರಿಸಿದರು.

ಜೀವಂತ ತಾಯಿ ಮಗುವಿನಂತೆ ಕಾಣುವ ಚಿತ್ರವನ್ನು ಕಂಡು ಎಲ್ಲರೂ ತಮ್ಮ ಅಚ್ಚರಿಯನ್ನು ವ್ಯಕ್ತ ಪಡಿಸಿದರು. ಎಲ್ಲರೂ ತಾನು ಬಿಡಿಸಿದ್ದ ಚಿತ್ರವನ್ನು ಕಂಡು ಹೊಗಳಿದ್ದು ಕೇಳಿ ತಾನು ಮಾಡಿದ ಕೆಲಸವೂ ಸಾರ್ಥಕ ಎನಿಸಿತು ಸುಮತಿಗೆ. ರಾತ್ರಿಯ ಊಟದ ನಂತರ ಹೊರಡುವ ವೇಳೆಯಲ್ಲಿ ಸಣ್ಣ ಸಾಹುಕಾರರು ಒಂದು ಲಕೋಟೆಯನ್ನು ತಂದು ಸುಮತಿಯ ಕೈಲಿ ಇಟ್ಟು….” ಇದನ್ನು ಮನೆಗೆ ಹೋದ ನಂತರ ತೆರೆದು ನೋಡಿ ಸುಮತಿ ಟೀಚರ್”… ಎಂದರು ಮುಗುಳ್ನಗುತ್ತಾ, ಲಕೋಟೆಯಲ್ಲಿ ಏನಿರಬಹುದು ಎಂದು ತೆರೆದುನೋಡುವ ಕುತೂಹಲವಿದ್ದರೂ ಸಣ್ಣ ಸಾಹುಕಾರರು ಹೇಳಿದ ಮಾತಿಗೆ ಬೆಲೆ ಕೊಟ್ಟು ಲಕೋಟೆಯನ್ನು ಕೈಯಲ್ಲಿ ಭದ್ರವಾಗಿ ಹಿಡಿದು ಅವರ ಕಾರಿನಲ್ಲಿ ಕುಳಿತುಕೊಂಡಳು. ಹಿಂದಿನ ದಿನದಂತೆಯೇ ಸಾಹುಕಾರರು ಮನೆಯವರೆಗೂ ಬಿಟ್ಟಾಗ ಅವರಿಗೆ ಕೃತಜ್ಞತೆಯಿಂದ ವಂದಿಸಿ ಮಗಳ ಜೊತೆ ಮನೆಯ ಕಡೆಗೆ ಹೆಜ್ಜೆ ಹಾಕಿದಳು. ಮನೆಗೆ ಬಂದೊಡನೆ ಕುತೂಹಲ ತಾಳಲಾರದೇ ಲಕೋಟೆಯನ್ನು ತೆರೆದು ನೋಡಿದಳು. ಅದರಲ್ಲಿ ಹಣದ ನೋಟುಗಳು ಇದ್ದವು. ಇದನ್ನು ಸುಮತಿ ನಿರೀಕ್ಷಿಸಿರಲಿಲ್ಲ. ಖುಷಿಯಿಂದ ಮನದಲ್ಲೇ ಸಣ್ಣ ಸಾಹುಕಾರರಿಗೆ ಕೃತಜ್ಞತೆ ಸಲ್ಲಿಸುತ್ತಾ ಹಣವನ್ನು ಎಣಿಸಿ ನೋಡದೇ ಶ್ರೀ ಕೃಷ್ಣನ ಮುಂದೆ ಲಕೋಟೆಯನ್ನು ಇಟ್ಟು….”ಕೃಷ್ಣಾ ಇದೆಲ್ಲವೂ ನಿನ್ನ ಕೃಪೆ… ಒಂದಲ್ಲಾ ಒಂದು ರೀತಿಯಲ್ಲಿ ನೀನು ನಮಗೆ ಸಹಾಯ ಮಾಡುತ್ತಿರುವೆ….ಕಷ್ಟಗಳನ್ನು ಕೊಟ್ಟರೂ ನೀನು ಸದಾ ನನ್ನ ಜೊತೆಗೆ ಇದ್ದು ಕಾಪಾಡುತ್ತಿರುವೆ….ನಿನ್ನ ಕರುಣೆ ಅಪಾರ….ನಿನ್ನನ್ನು ನಂಬಿದ ನಮ್ಮನ್ನು ಕೈಬಿಡದೇ ಸಲಹು ಕರುಣಾಕರ”…. ಎಂದು ಕೈ ಮುಗಿದು ಸ್ವಲ್ಪ ಹೊತ್ತು ಹಾಗೆಯೇ ನಿಂತಳು. ಮನಸ್ಸಿಗೆ ಸಂತೋಷ ದುಃಖ ಏನೇ ಇದ್ದರೂ ಕೃಷ್ಣನ ಮುಂದೆ ಮನಸ್ಸು ತೃಪ್ತಿ ಆಗುವವರೆಗೂ ಕಣ್ಣು ಮುಚ್ಚಿ ನಿಂತರೆ ಅವಳಿಗೆ ಬಹಳಷ್ಟು ಸಮಾಧಾನ ಸಿಗುತ್ತಿತ್ತು. ಮಗಳು ಅಮ್ಮಾ ಎಂದು ಕೂಗಿದಾಗಲೇ ಅವಳು ವಾಸ್ತವಕ್ಕೆ ಬಂದಿದ್ದು. ಕೂಡಲೇ ಖುಷಿಯಿಂದ ಮಗಳನ್ನು ಅಪ್ಪಿಕೊಂಡು ಮುದ್ದಾಡಿದಳು.
ಈ ಹಣದಿಂದ ಮಕ್ಕಳಿಗೆ ಬಟ್ಟೆ ಹಾಗೂ ತನಗೂ ಒಂದು ಸೀರೆಯನ್ನು ಖರೀದಿ ಮಾಡಬೇಕು ಎಂದು ಮನಸ್ಸಿನಲ್ಲಿಯೇ ಅಂದುಕೊಂಡಳು. ನೆಮ್ಮದಿಯಿಂದ ಅಂದು ನಿದ್ರೆ ಮಾಡಿದಳು. ಮಾರನೇ ದಿನದಿಂದ ಶಾಲೆಗೆ ಹೋಗುವ ದಿನಚರಿ ಪ್ರಾರಂಭವಾಯಿತು. ಅದಾಗಲೇ ಸುಮತಿ ಚಿತ್ರ ಬಿಡಿಸಿದ ಸುದ್ಧಿ ಎಸ್ಟೇಟ್ ಮ್ಯಾನೇಜರ್, ರೈಟರ್ ಗಳು, ಮೇಸ್ತ್ರಿ ತೋಟದ ಕೆಲಸಗಾರರು ಎಲ್ಲರಿಗೂ ತಲುಪಿತ್ತು. ಎಲ್ಲರಿಗೂ ಅಚ್ಚರಿಯಾಯಿತು. ಸೌಮ್ಯ ಸ್ವಭಾವದ ಮಿತಾಭಾಷಿಯಾದ ಸುಮತಿಯ ಬಗ್ಗೆ ಯಾರಿಗೂ ಹೆಚ್ಚೇನೂ ತಿಳಿದಿರಲಿಲ್ಲ. ತನ್ನ ಜೀವನದ ಬಗ್ಗೆಯಾಗಲೀ, ಕಷ್ಟಗಳ ಬಗ್ಗೆಯಾಗಲೀ ಯಾವುದೇ ವಿಷಯವನ್ನು ಹಂಚಿಕೊಳ್ಳದ ಸುಮತಿ ಎಲ್ಲರಿಗೂ ಒಗಟಾಗಿಯೇ ಇದ್ದಳು. ಸುಮತಿ ಟೀಚರ್ ಬಗ್ಗೆ ಈಗ ಎಲ್ಲರಿಗೂ ಗೌರವ ಹೆಚ್ಚಿತು. ದಾರಿಯಲ್ಲಿ ಕಂಡಾಗ ಎಲ್ಲರೂ ವಂದನೆಗಳನ್ನು ತಿಳಿಸಲು ಪ್ರಾರಂಭಿಸಿದರು. ಖುಷಿ ಬಂದಾಗ ಹಿಗ್ಗದೇ ಸಂಕಟ ಬಂದಾಗ ಕುಗ್ಗದೇ ಸಹಜವಾಗಿ ಇರುವುದು ಸುಮತಿಯ ಗುಣ ಹಾಗಾಗಿ ಸಹಜವಾಗಿ ಇರುತ್ತಿದ್ದಳು. ತನ್ನ ಅನಾರೋಗ್ಯ ಹಾಗೂ ಅದಕ್ಕಾಗಿ ಪಥ್ಯ, ಜೀವನ ನಿರ್ವಹಣೆಗಾಗಿ ಶಿಕ್ಷಕವೃತ್ತಿ ಹೀಗೆಯೇ ಅವಳ ಜೀವನವು ಸಾಗಿತ್ತು. ಹೀಗಿರುವಾಗ ನಿಧಾನಗತಿಯಲ್ಲಿ ಅವಳ ಕಣ್ಣುಗಳು ಮಂಜಾಗ ತೊಡಗಿದವು. ಕಾರಣವೇನು ಎಂದು ಅವಳಿಗೆ ತಿಳಿಯಲಿಲ್ಲ. ದೂರದಲ್ಲಿ ನಿಂತಿರುವವರ ಮುಖವು ಅಸ್ಪಷ್ಟವಾಗಿ ಕಾಣುತ್ತಿತ್ತು. ಬೆಳಕು ಹೆಚ್ಚಿದ್ದಾಗ ತನ್ನ ಸುತ್ತಲಿನ ಎಲ್ಲವೂ ಅವಳಿಗೆ ಇನ್ನೂ ಹೆಚ್ಚು ಮಸುಕಾಗಿ ಕಾಣುತ್ತಿತ್ತು. ರಾತ್ರಿಯ ವೇಳೆಯಲ್ಲಿ ತಡಕಾಡಿ ಬಿದ್ದು ಮೊಣಕೈಗೆ ಪೆಟ್ಟು ಕೂಡಾ ಮಾಡಿಕೊಂಡಳು. ಅಕ್ಷರಗಳು ಸರಿಯಾಗಿ ಅಸ್ಪಷ್ಟವಾಗಿ ಕಾಣುತ್ತಿತ್ತು. ತನ್ನ ಕಣ್ಣಿಗೆ ಏನೋ ತೊಂದರೆ ಆಗುತ್ತಿದೆ ಎನ್ನುವುದು ಸುಮತಿಯ ಅರಿವಿಗೆ ಬಂತು.
ರುಕ್ಮಿಣಿ ನಾಯರ್
