ಕಾವ್ಯಯಾನ

ಪ್ರೀತಿ ಬಡತನ

Buy Hope and Despair Handmade Painting by Aakash Jain. Code ...

ವಾಣಿ ಭಂಡಾರಿ

ಅವ್ವನ ಸದ್ದಿರದ ಖಾಲಿ ಅಡಿಗೆ ಮನೆಯು,
ಬಣಬಣ ಎನುತಲಿ ಮನವನು ಹಿಂಡಿದೆ.
ಒಡಲೊಪ್ಪತ್ತಿಗೆ ಕೂಳು ತರಲು ಆಚೆಮನೆ,
ಕಂಡ್ಲಿಲಿ ನಿಂತ ಅವ್ವನ ಬಂಗಿ ಕಾಣದಾಗಿದೆ.

ಒಲೆಯೊಳು ಉರಿವ ಬೆಂಕಿಗೆ ಬೇಸರವು,
ಚೆರ್ಗೆಯೊಳು ಕಾದಾರಿದ ಎಸರ್ನೀರಿತ್ತು.
ತಣ್ಣಗಾಗಿ ಮತ್ತೊತ್ತುರಿಯಲು ಮನಸಿಲ್ಲದೆ, ಹೊಗೆಯುಗುಳುತಲಿ ನೋವಲಿ ಮಲಗಿತು.

ಹಸಿ ಸೌದೆಯೊಳು ಉಗುಳೊ ಹೊಗೆಯಂತೆ,
ಮನವು ಜಡ್ಡುಗಟ್ಟಿದಂತಹ ಮಸಿಯರಬೆ.
ಇಲ್ಲಣವಿರದ ಖಾಲಿಪಾತ್ರೆ ಹೊರಳಿ ಮಲಗಿ,
ಗಿಲಾವಿರದ ಗೋಡೆ ಕಥೆ ಹೇಳಿ ಮನದಲಿ ಹಬೆ.

ತೊಳೆದ ಪಾತ್ರೆಯೊಳು ಪಾವಕ್ಕಿಯಿರದೆ,
ಮನೆಮನದ ಮೂಲೆಯಲ್ಲಿ ರಶ್ಮಿ ಚೆಲ್ಲಿದೆ.
ಬಡತನಕಿರುವ ಸಾವು ಪ್ರೀತಿಗಿರದಿಲ್ಲಿ ಎನುತ,
ನೆಮ್ಮದಿ ತಾಣವೆ ಅಮ್ಮನಡಿಗೆ ಮನೆಯಾಗಿದೆ.

ಸುತ್ತ ಕೂತುಂಡರೂ ಸೆಗಣಿ ನೆಲವೆ ತಂಪಲ್ಲಿ,
ಮೇಜು ಮಂಚದಲಿರದ ಸುಖ ನೆಲದಲಿತ್ತು.
ಹಾಸಿಗೆಲಿ ಮಮಕಾರದ ಮಡಿಲ ಸ್ವರ್ಗದಲ್ಲಿ,
ಇಕ್ಕುತಲುಂಡು ತುತ್ತುನ್ನದಲಿ ಹರ್ಷವಿತ್ತು.

ಮೂರು ದಿನದ ಕಹಿಸಿಹಿ ಬಾಳ ಯಾನದಲಿ,
ಬೊಗಸೆ ಪ್ರೀತಿಗೂ ಬಡಿವಾರ ಬಂದಿತೀಗ.
ಏಳು ಬೀಳಿನ ಭಾವನೊಗ ಹೊತ್ತ ಭಾರದಲಿ,
ಪ್ರೀತಿ ಚಿಲುಮೆ ಚಿಮ್ಮುತಾ ಹರಿಯುತ್ತಿತ್ತಾಗ.

**********

One thought on “ಕಾವ್ಯಯಾನ

Leave a Reply

Back To Top