ಮನ್ಸೂರ್ ಮೂಲ್ಕಿ ಅವರ ಕವಿತೆ-ಬದುಕಿನ ಶ್ರೇಷ್ಠತೆ

ನಲಿನಲಿವ ಬದುಕಲ್ಲಿ ಬಿರುಕೊಂದು ಮೂಡಿಹುದು
ಹೊಳೆ ಹೊಳೆವ ಕಣ್ಣುಗಳು ಮಂಕಾಗಿ ನಿಂತಿಹುದು
ಬಾಲ್ಯದ ನೆನಪಿನಲ್ಲಿ ಯವ್ವನದ ಸವಿಗಳು
ಮುಪ್ಪಿನಲ್ಲಿ ಮಧುರತೆಗೆ ಬೇಕಿದೆ ಕಣ್ಣುಗಳು

ಲಾಲಿತ್ಯದ ಸೇವೆಯಲಿ ಅಮೃತದ ರುಚಿ ಇದೆ
ಬದುಕೆಂಬ ಹಾದಿಯನು ನಗುನಗುತ ದಾಟಿದೆ
ಇಬ್ಬನಿಯ ಹನಿಗಳು ಕಣ್ಣಲ್ಲಿ ತೇಲುತ್ತಾ
ನಗುವನ್ನೆ ನೀಡಿದೆ
ಬೆಳಕಿಗೆ ಹಾತೊರೆದು ಕಥೆಯನ್ನು ಹೇಳುತ್ತಾ ಬದುಕುತಿದೆ

ಶಾಂತಿಯಲಿ ಬದುಕನ್ನು ಸಾಗಿಸಿದ ಜೀವಗಳು
ನಡೆದಿಹ ಹಾದಿಯು ಸರಳತೆ ಸೌಮ್ಯತೆ ನಿರ್ಮಲತೆ
ತರತರದ ನೋವುಗಳು ಬದುಕಲ್ಲಿ ಬಂದಿರಲು
ನೋವೆಲ್ಲ ಮಾಯವೋ ಮುಪ್ಪಿನಲಿ

ದ್ವೇಷವಿರದ ಬದುಕೇ ಜಗದಲ್ಲಿ ಶ್ರೇಷ್ಠವು
ಅರಿತಿಹ ಮನುಜನಿಗೆ ದಾನವೇ ಕರ್ಮವು
ಸಹಜತೆಯ ಬದುಕಲ್ಲಿ ಸಮಾನತೆಯು ಇರಲಿ
ನಮ್ಮವ ಎಂಬುದನ್ನು ಬಿಟ್ಟು ಎಲ್ಲರು ನಮ್ಮವರೆ ಎಂದಿರಲಿ.


Leave a Reply

Back To Top