ಮಾಲಾ ಚೆಲುವನಹಳ್ಳಿ ಅವರ ಕವಿತೆ-ಮಾಯಾವಿ ಕನಸು

 ಹೃದಯದಲೇನೋ ತಳಮಳವಾಗಿ
ಮನದ ತುಂಬ  ಕವಿದು ಮಂಕು
ಹೇಳಲಾರದ ಮಾಯಾವಿ ನೀನಾಗಿ
ಮರೆತೇ ಹೋಯ್ತು ಬೇಡ ಬೇಕು

ನಿದಿರೆ ತೊರೆದು ಮದಿರೆ ಮದವು
ಹಸಿವು ಇರದಂತ ಅನಪೇಕ್ಷದಿ
ಎಲ್ಲರೊಡನಿದ್ದರೂ ಒಂಟಿತನವು
ಸೌಖ್ಯವಿಹುದು ಸತ್ಯ ಸಾಂಗತ್ಯದಿ

ಕಣ್ಣ ನೋಟ ಬೆರೆತ ಮಧುರ ಕ್ಷಣದಂತೆ
ಆವರಿಸಿದೆ ಮನೆ ಮನದ ತುಂಬೆಲ್ಲ
ಮೊಗ್ಗೊಂದು ಹೂವಾಗಿ ಪಲ್ಲವಿಸಿದಂತೆ
ಆದಿ ಅಂತ್ಯಕು ನೀನಿರು ಜೊತೆ ನಲ್ಲ

ನಿನ್ನಿಂದಾಗಿದೆ ಬಾಳಿಂದು ಅರ್ಥಪೂರ್ಣ
ಸಹಸ್ರ ಮಿಂಚುಗಳು ಹೊಳಹುಗಳು
ಮೂಡಿದವದೆಂತೋ ನಾನರಿಯೆ ಕಾಣ
ಬದುಕಿನಾದಿಯಲಿ ಹಾಸಿವೆ ಸುಮಗಳು

ಮಣಭಾರ ಬದುಕಿoದು ಹಗುರಾಗಿದೆ
ಹೂವೆಸಳ ಎತ್ತಿರುವ ಅನುಭೂತಿಯು
ಜಿಜ್ಞಾಸೆ ದುಗುಡ ಎದೆಭಾರವ ತೊರೆದೆ
ನಿನ್ನಿರುವೆ ಜೀವನದಿ ಸುಖಸ್ವಪ್ನ ಸವಿಯು.

ಸಾಗೋಣ ಬಾ ಇನಿಯ ಜೊತೆಯಾಗಿಯೆ
ಸವಿಯೋಣ ಪ್ರೀತಿ ಜೇನು ನಲಿವಿಂದಲಿ
ಬೇಕಿಲ್ಲ ಬಡತನ ಸಿರಿತನದ ನಂಟೆಮಗೆಯೆ
ಜೀಕೋಣ ಉಯ್ಯಾಲೆ ಭರವಸೆಯಿಂದಲಿ

———————————————

Leave a Reply

Back To Top