ಪ್ರಮೋದ ಜೋಶಿ ಅವರ ಕವಿತೆ-ಕಳೆದುಬಿಟ್ಟೆ ಎಲ್ಲವನ್ನಾ

ಹೀಗೆಕೆ ಮಾಡಿದೆ ದ್ರೌಪದಿ
ಉತ್ತಮ ಕುಲದವಳು ನೀ
ಎಲ್ಲವನ್ನು ಬಲ್ಲವಳು
ಆ ಒಂದು ಕ್ಷಣಕೆ ಅವಿವೇಕಿಯಾದೆ

ಆಗರ್ಭ ಸಿರಿತನ ಪಂಚಪತಿ ಗೆಳೆತನ
ಹಮ್ಮು ಬಿಮ್ಮಿನಲಿ ಮರೆತುಬಿಟ್ಟೆಯಾ
ಸಂಬಂಧಗಳ ಒಡೆತನ
ಒಡೆದುಬಿಟ್ಟೆ ಎಲ್ಲವನು ಕ್ಷಣದೊಳಗೆ

ಮಾಯಾ ಪ್ರಪಂಚದ ಮಾಯಾವಿಮನೆ
ನಿನಗೊಂದೇ ಗೊತ್ತು ಎಲ್ಲವೂ
ಅರಿವರೆ ಉಳಿದವರು ನಿಮ್ಮನೆ ಸೊತ್ತು
ಆಡಿ ಕೆರಳಿಸಿ ತಂದುಕೊಂಡೆ ಕುತ್ತು

ಸಂಬಂಧಗಳ ಬಂಧ ಮರೆತು
ತುಚ್ಛದಿ ಕಂಡೆ ಸುಯೋಧನನ
ಅಪಹಾಸ್ಯ ಮಾಡಿ ನಕ್ಕು ಆಡಿದೆ
ಮಾವನ ದೃಷ್ಟಿಹೀನತೆಯನ್ನ

ಏನು ಶೋಭೆ ಬಂತು ನಿನಗೆ
ಯುದ್ಧವನ್ನೆ ಪಡೆದುಕೊಂಡೆ
ದ್ಯೂತದಲ್ಲಿ ನಿನ್ನೇ ಸೋತರು
ಹಮ್ಮು ಬಿಡದೆ ತೆಗಳೆದೆ ಎಲ್ಲರನು

ರೊಚ್ಚಿಗೆದ್ದ ಮನ ಬಿಟ್ಟೀತಾ ನಿನ್ನ
ಅವಮಾನಗೊಳಿಸಿದರೆಲ್ಲರೆದುರು
ಮಾನ ಕಾಪಾಡಿದಾ ಕೃಷ್ಣ
ಋಣ ಮುಕ್ತಿ ಪಡೆದಾ ಕ್ಷಣಕೆ

ಆ ಒಂದು ಮಾತೇ ಯುದ್ಧಕೆ ನಾಂದಿ
ಹತರಾದರೆಷ್ಟೋ ಅರಿಯದ ಮಂದಿ
ಶವ ಹೊತ್ತು ನಿಂತಿತು ಕುರುಕ್ಷೇತ್ರ
ಇದೆಯೆ ಇದಕೆ ಉತ್ತರ ನಿನ್ಹತ್ರ

ಆಡುವ ಮುನ್ನ ಅರಿಯಬೇಕಿತ್ತು
ಸಂಬಂಧದ ಬೆಲೆಯನ್ನಾ ಸತ್ಕಾರತೆಯನ್ನಾ
ಆಡಿ ತಂದುಕೊಂಡು
ಕಳೆದುಬಿಟ್ಟೇ ಎಲ್ಲವನ್ನಾ


3 thoughts on “ಪ್ರಮೋದ ಜೋಶಿ ಅವರ ಕವಿತೆ-ಕಳೆದುಬಿಟ್ಟೆ ಎಲ್ಲವನ್ನಾ

  1. ಮುತ್ತಾಗಿ ಒಡೆದ ಕಥೆಯ ವ್ಯಥೆ ನಾವಾಡುವ ಮಾತುಗಳೆ ಕಾರಣ ಎಂಬುದಕ್ಕೆ ಇದು ಸಾಕ್ಷಿ ……

Leave a Reply

Back To Top