‘ಶಿಕ್ಷಕ ಎಂಬುದೆ ಒಂದು ಹೆಮ್ಮೆಯ ಬಿರುದು’ ಅಂದು-ಇಂದು ?ಸಿದ್ದಾರ್ಥ ಟಿ ಮಿತ್ರಾ

ಒಂದು ಕಲ್ಲಿನ ಮೂರ್ತಿಯನ್ನು ಉತ್ತಮ ಶಿಲ್ಪವನ್ನಾಗಿ ಮಾಡುವವನು ಶಿಲ್ಪಿಯಾದರೆ.ವಿದ್ಯಾರ್ಥಿಯೆಂಬ ಕಲ್ಲನು ದೇಶದ ನಾಳಿನ ಸತ್ಪ್ರಜೆಯೆಂಬ ಶಿಲ್ಪವನ್ನಾಗಿ ರೂಪಿಸುವವರೆ ಶಿಕ್ಷಣ ಶಿಲ್ಪಿಗಳು ಎಂದರೆ ಅದು ಶಿಕ್ಷಕರು.ವಿದ್ಯಾರ್ಥಿಗಳಲ್ಲಿಯ ಸೂಕ್ತವಾದ, ಅಗತ್ಯವಾದ ಚೈತನ್ಯಶೀಲವಾದ ಪ್ರತಿಭೆಯನ್ನು ಹೊರಗೆಳೆದು ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವ ರೂವಾರಿಗಳೆ ಶಿಕ್ಷಕರು ಎಂದು ಹೇಳಬಹುದು.ಅಂದರೆ ಉತ್ತಮ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಜ್ಞಾನದಾಹ ಹೆಚ್ಚಿಸಿ ತಮ್ಮಿಂದ ತಾವೆ ಜ್ಞಾನಾರ್ಜನೆ ಬೆಳೆಸಿಕೊಳ್ಳುವಂತೆ ಮಾಡುವರು.ಹಿನ್ನಲೆಯಾಗಿದ್ದುಕೊಂಡೇ ಮಕ್ಕಳಿಗೆ ಮಾರ್ಗದರ್ಶನ ನೀಡಿ ಮುನ್ನುಗ್ಗಿ ಪ್ರಗತಿ ಮಾರ್ಗದಲ್ಲಿ ನಡೆಯುವಂತೆ ಮಾಡುವರು.ಆದರ್ಶ ಶಿಕ್ಷಕರು ತಮ್ಮ ಭೋಧನೆಯ ವಿಷಯದಲ್ಲಿ ಅಪಾರ ಪಾಂಡಿತ್ಯ ಹೊಂದಿ ಉತ್ತಮ ಚರ್ಚೆಯಿಂದ ವಿನೋದದಿಂದ ,ಮಾತಿನ ಚಾತುರ್ಯದಿಂದ ಮಕ್ಕಳಲ್ಲಿ ಆಸಕ್ತಿ ಕೆರಳಿಸಿ ವಿಷಯ ಬೋಧನೆ ಮಾಡಬೇಕು.ಶಿಕ್ಷಕನಾದವನು ಸಂಬಳಕ್ಕಾಗಿ ದುಡಿಯುವ ಭಾವನೆ ಹೊಂದದೆ ರಾಷ್ಟ್ರ ನಿರ್ಮಾಪಕರನ್ನು, ರಾಷ್ಟ್ರದ ಸತ್ಪ್ರಜೆಗಳನ್ನು ನಿರ್ಮಿಸುವ ದೊಡ್ಡ ಜವಾಬ್ದಾರಿ ತಮ್ಮ ಮೇಲಿದೆ ಎಂಬ ಭಾವನೆ ಹೊಂದಿರಬೇಕು.ಮಕ್ಕಳಲ್ಲಿಯ ಸುಪ್ತ ಚೈತನ್ಯವನ್ನು ಹೊರಹಾಕಿ ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಮಾಡಲು ಶಿಕ್ಷಕರು ಹೆಚ್ಚು ಚಟುವಟಿಕೆನ್ನು ವಿದ್ಯಾರ್ಥಿಗಳಿಗೆ ಕೊಡುತ್ತಿರಬೇಕು.ಮಕ್ಕಳ ಶಾರೀರಿಕ ಮಾನಸಿಕ ಬೌದ್ಧಿಕ,ಸಾಂಸ್ಕೃತಿಕ,ವಿಕಾಸ ಮತ್ತು ಅವರ ಸರ್ವತೋಮುಖ ಬೆಳವಣಿಗೆಗೆ ಮಾರ್ಗದರ್ಶನ ಮಾಡುವುದು ಶಿಕ್ಷಕರ ಅದಮ್ಯ ಕರ್ತವ್ಯ ಆದ್ದರಿಂದ ಶಿಕ್ಷಕ ಈ ರಾಷ್ಟ್ರದ ಶಿಲ್ಪಿ ಎಂದು ಹೇಳಲಾಗಿದೆ.
ನಮ್ಮ ಸಮಾಜ ಪ್ರಾಚೀನ ಕಾಲದಿಂದಲೂ ಶಿಕ್ಷಕರಿಗೆ ಉನ್ನತ ಸ್ಥಾನಮಾನ ನೀಡಿ ಗೌರವಿಸಿದೆ. ಮಾತೃ ದೇವೋ ಭವ, ಪಿತೃ ದೇವೋ ಭವ, ಗುರು ದೇವೋ ಭವ ಎಂದು ತಂದೆ-ತಾಯಿಯರ ಜೊತೆ ಸ್ಥಾನಮಾನ ಕಲ್ಪಿಸಿದೆ. ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ತಮ್ಮ ಮಕ್ಕಳನ್ನು ಗುರುಕುಲಗಳಲ್ಲಿ ಬಿಟ್ಟು, ವಿದ್ಯಾಭ್ಯಾಸಕ್ಕೆ ಅನುವುಮಾಡಿಕೊಟ್ಟು, ಪ್ರಜೆಗಳಿಗೆ ವಿದ್ಯೆಯ ಮಹತ್ವಕ್ಕಾಗಿ ಮಾರ್ಗದರ್ಶಕರಾಗಿ ಇದ್ದರು. ಶಿಕ್ಷಣದ ಪ್ರಚಾರಕ್ಕಾಗಿ ತಮ್ಮ ಪ್ರದೇಶಗಳಲ್ಲಿ ಅನೇಕ ದತ್ತಿ ದಾನಗಳನ್ನು ನೀಡಿ, ಶಿಕ್ಷಣ ಪಡೆಯಲು ಮಕ್ಕಳಿಗೆ ಅನುವು ಮಾಡಿಕೊಟ್ಟಿದ್ದು ಪ್ರೋತ್ಸಾಹ ನಿಡಿದ್ದು ಅಷ್ಟಕಷ್ಟೇ. ಅವರು ಆ ಮುಖಾಂತರ ತಮ್ಮ ಧರ್ಮ ಪ್ರಚಾರ ಮತ್ತು ಆಡಳಿತಕ್ಕೆ ಅನುಗುಣವಾದ ವಿದ್ಯೆಯನ್ನು ಶಿಕ್ಷಣವನ್ನು ಮಾತ್ರ ನೀಡುತ್ತಾ ಬಂದಿದ್ದರು. ಆದ್ದರಿಂದ ನಮ್ಮ ಅಂದಿನ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ದೊರೆಯುತ್ತಿರಲಿಲ್ಲ.
ಅಂದಿನ ಶಿಕ್ಷಕ ತನ್ನ ವೈಯಕ್ತಿಕ ಜೀವನದಲ್ಲಿ ಶಿಸ್ತು, ತಾಳ್ಮೆ ವ್ಯವಹಾರ ಜ್ಞಾನದಿಂದ ಸಮಾಜದಲ್ಲಿ ಸಮಾತೋಲನ ಕಾಪಾಡಿಕೊಂಡು ಶಿಕ್ಷಕ ಶಿಕ್ಷಕನೇ ಆಗಿದ್ದ.
ಅಂದಿನ ಶಿಕ್ಷಕ ತಾನು ವಾಸಿಸುವ ಪರಿಸರಕ್ಕೆ ಅನುಗುಣವಾಗಿ ಅಗತ್ಯವಾದ ವೈದ್ಯಶಾಸ್ತ್ರ, ಗೃಹ ಶಾಸ್ತ್ರ, ಕಾರಣಿಕ ಇತ್ಯಾದಿಗಳನ್ನು ತಿಳಿದುಕೊಂಡು ಸರ್ವಜ್ಞನಂತಾಗಿ ಸಮಾಜದಲ್ಲಿ ತಲೆದೋರುವ ಜಗಳ, ಅನ್ಯಾಯ, ಅಧರ್ಮ, ಅನೈತಿಕತೆಗಳನ್ನು ತೊಡೆದುಹಾಕಲು ತನ್ನ ಕೈಲಾದ ಪ್ರಯತ್ನ ಮಾಡುತ್ತಿದ್ದ. ಇದರಿಂದ ಅವನು ಸಮಾಜದ ಎಲ್ಲಾ ವರ್ಗದ ಜನರ ಪ್ರೀತ್ರಿಗೆ ಪಾತ್ರನಾಗಿದ್ದು, ಆತನಿಗೆ ಸಲ್ಲುತ್ತಿದ್ದ ಅಲ್ಪ ಆದಾಯದಿಂದ ಸಂತೃಪ್ತವಾದ ಜೀವನ ನಡೆಸುತ್ತಿದ್ದ. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೇ ತನ್ನ ಹಿತಮಿತವನ್ನು ಪಡೆದಿದ್ದ ಅಂದು ಸಮಾಜದ ಹಿರಿ-ಕಿರಿಯರೆಲ್ಲರಿಗೂ ಶಿಕ್ಷಕನ ಜೊತೆ ಒಡನಾಟ ಮಾಡುವುದು ಒಂದು ಹಿರಿತನವೇ ಆಗಿತ್ತು.
ಆದರೆ ಇಂದು ಮೇಲಿನ ಎಲ್ಲಾ ಸಂಗತಿಗಳು ತಿರುವು-ಮರುವು ಆಗಿವೆ.ಇಂದಿನ ಸರ್ಕಾರವು ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸಿ, ಅಪಾರ ಹಣ ಖರ್ಚು ಮಾಡುತ್ತಿದೆ. ಈ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಹಲವು ಪಂಡಿತರು ಹಾಗೂ ರಾಜಿಕೀಯ ಮುತ್ಸದಿಗಳು ಗೊಂದಲಮಯ ವಾತಾವರಣ ಸೃಷ್ಟಿಸಿ ಶಿಕ್ಷಣ ಕ್ಷೇತ್ರವನ್ನು ಕಲುಷಿತಗೊಳಿಸುತ್ತಿದ್ದಾರೆ. ಇವರ ಪ್ರತಿಷ್ಠೆ-ಪಾಂಡಿತ್ಯಗಳ ಹಾದಿಯಲ್ಲಿ ಸಿಕ್ಕು ಬಲಿಯಾಗುತ್ತಿರುವವರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು. ಪಠ್ಯ ಜ್ಞಾನದ ಅಪೂರ್ಣತೆಯಿಂದಾಗಿ ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವೆ ಆಂತರಿಕ ಭಿನ್ನ ಭೇದಗಳುಂಟಾಗಿ ಶಿಕ್ಷಕ ಸಮಾಜದ ದೂಷಣೆಗೆ ಪಾತ್ರನಾಗುತ್ತಿದ್ದಾನೆ.
ಶಿಕ್ಷಕರ ಸೇವೆ ಸರ್ಕಾರದ ಎಲ್ಲಾ ಇಲಾಖೆಗಳ ಯೋಜನೆಗಳ ಅಂಕಿ-ಅಂಶಗಳನ್ನು ಕ್ರೂಢ್ರೀಕರಿಸಲು ಬೇಕೇ ಬೇಕು. ಅಂದರೆ ಚುನಾವಣೆ, ಮತ ಪಟ್ಟಿ ತಯಾರಿಕೆ ಮತಎಣಿಕೆ ಹಾಗೂ ಪರಿಷ್ಕರಣೆ, ಜನಗಣತಿ, ಮನೆಗಣತಿ, ಪಶುಗಣತಿ ಇತ್ಯಾದಿ ರಾಷ್ಟ್ರೀಯ ಕಾರ್ಯಗಳಲ್ಲಿ ಶಿಕ್ಷಕನ ಸೇವೆ ಪ್ರಧಾನ. ಈ ಎಲ್ಲ ಕಾರ್ಯಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳುವುದರಿಂದ ಪಾಠ ಬೋಧನೆಗೆ ಸಿಗುವ ಅಲ್ಪ ಸಮಯ ಯಾತಕ್ಕೂ ಸಾಲುವುದಿಲ್ಲ ಎನ್ನುವುದು ಶಿಕ್ಷಕರ ಅಳಲು. ಅಲ್ಲದೇ ಸಮಾಜವು ಅಭಿವೃದ್ಧಿಯಾದಂತೆ ಶಿಕ್ಷಕನೆಗೆ ಆಸೆ-ಆಕಾಂಕ್ಷೆಗಳು ಹೆಚ್ಚಾಗಿ ತನಗೆ ದೊರೆಯುವ ಅಲ್ಪ ವೇತನ ಸಂಸಾರದ ನಿರ್ವಹಣೆಗೆ ಸಾಲದಂತಾಗಿ ಬಿಡುವಿನ ವೇಳೆಯಲ್ಲಿ ಬೆರೆ ದುಡಿಮೆ ಅನಿವಾರ್ಯವಾಗುತ್ತಿದೆ ಒಂದುಕಡೆ ಶಾಲಾ ಆಡಳಿತ ವರ್ಗ, ಅಧಿಕಾರಿಗಳ ಕಾನೂನಿನ ಹಿಡಿತ, ಇನ್ನೊಂದೆಡೆ ರಾಜಕೀಯ ಒತ್ತಡ, ಮತ್ತೊಂದೆಡೆ ಶಿಕ್ಷಕರ ಗೌರವ ರಕ್ಷಣೆ. ಇವೆಲ್ಲವುಗಳ ಹಿಡಿತದಿಂದ ಪಾರಾಗಿ ದಕ್ಷ ಆಡಳಿತ ನೀಡಿ, ಶಿಕ್ಷಣದ ಅಭಿವೃದ್ಧಿಗೆ ಶ್ರಮಿಸುವುದು ಇನ್ನೂ ಕಷ್ಟಕರವಾಗಿದೆ.
ಸರ್ಕಾರದ ಅನೇಕ ಯೋಜನೆಗಳ ಅನುಷ್ಠಾನದಲ್ಲಿ ಅಂದರೆ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ಸೈಕಲ್, ವಿದ್ಯಾರ್ಥಿವೇತನ ವಿತರಣೆ, ಬಾ ಮರಳಿ ಶಾಲೆಗೆ, ಚಿಣ್ಣರ ಅಂಗಳ ನಲಿ ಕಲಿ ಮುಂತಾದವುಗಳಲ್ಲಿ ಅನೇಕ ಅಡೆತಡೆಗಳು ಉಂಟಾಗಿ ಇವೆಲ್ಲಕ್ಕೂ ಶಿಕ್ಷಕನೇ ನೇರ ಹೊಣೆಗಾರನಾಗುತ್ತಿದ್ದಾನೆ. ಹೀಗೆ ಎಲ್ಲಾ ಹೊಣೆಗಾರಿಕೆ ಮತ್ತು ಜವಾಬ್ದಾರಿಗಳು ಶಿಕ್ಷಕನ ಮೇಲೆ ತೂಗುವ ಕತ್ತಿಯಾಂತಾಗಿರುವುದರಿಂದ ಶಿಕ್ಷಕ ಗಲಿಬಿಲಿಗೊಂಡು ಸಮರ್ಪಕ ಸೇವೆ ಒದಗಿಸುವಲ್ಲಿ ಒದ್ದಾಡುತ್ತಿದ್ದಾನೆ. ಅಲ್ಲದೇ ಇಂದಿನ ಕೆಲವು ಶಿಕ್ಷಕರು ಆಲಸ್ಯದಿಂದ, ಮೈಗಳ್ಳತನದಿಂದ, ದುರಾಭ್ಯಾಸಗಳ ದಾಸರಾಗುತ್ತಿರುವುದರಿಂದ, ಹಾಗೂ ಶಿಕ್ಷಣಕ್ಕೆ ಸಂಬಂಧವಿಲ್ಲದ ಕಾರ್ಯಗಳಲ್ಲಿ ತೊಡಗುತ್ತಿರುವುದರಿಂದ ಸಮಾಜದ ಕೆಂಗಣ್ಣಿಗೆ ಗುರಿಯಾಗಿ ನಿಂದನೆಗೆ ಪಾತ್ರರಾಗುತ್ತಿದ್ದಾರೆ. ಆದಾಗ್ಯೂ ಇಷ್ಟೆಲ್ಲವನ್ನು ತನ್ನ ಜಾಣ್ಮೆಯಿಂದ ಹೊಂದಣಿಕೆ ಮಾಡಿಕೊಂಡು ಶಿಕ್ಷಣದ ಅಭಿವೃದ್ಧಿಗಾಗಿ ಶ್ರಮಿಸುವ ಶಿಕ್ಷಕ ಸಮಾಜದಿಂದ ದೂರವಾಗಿ ಉಳಿಯುತ್ತಿದ್ದಾನೆ. ಶಿಕ್ಷಕ ಎಲ್ಲದಕ್ಕೂ ಬೇಕು. ಆದರೆ ಯಾವುದಕ್ಕೂ ಬೇಡ?! ಇವರ ಸ್ನೇಹ, ವಿಶ್ವಾಸ, ಭಾಂದವ್ಯ ಸಮಾಜದ ಹಿರಿಯರಿಗೆ ಬೇಡವಾಗುತ್ತಿದೆ. ಹೀಗಾದಾಗ ಇದನ್ನು ಸರಿಪಡಿಸುವರು ಯಾರು ಎಂಬ ಪ್ರಶ್ನೆಗೆ ಉತ್ತರ ನಿಗೂಢವಾಗಿ ಉಳಿದಿದೆ.
ಶಿಕ್ಷಕರಾದರು ಎಲ್ಲರು ಸಹ ಘನತೆ-ಗೌರವಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಲು ಸದಾ ಪರಿಶ್ರಮ ಪಡುತ್ತಿರಬೇಕು. ಈ ದಿಸೆಯಲ್ಲಿ ಶಿಕ್ಷಕನಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ, ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ಹಾಗೂ ಉತ್ತೇಜನಗಳು ಅನಿವಾರ್ಯವಾಗಿವೆ.

One thought on “‘ಶಿಕ್ಷಕ ಎಂಬುದೆ ಒಂದು ಹೆಮ್ಮೆಯ ಬಿರುದು’ ಅಂದು-ಇಂದು ?ಸಿದ್ದಾರ್ಥ ಟಿ ಮಿತ್ರಾ

Leave a Reply

Back To Top