ಲೀಲಾಕುಮಾರಿ ತೊಡಿಕಾನ ಅವರ ಕವಿತೆ-ಬಾಳಸಂತೆ

ಬಾಳ ಸಂತೆಯಲಿ
ಗದ್ದಲಗಳೇ ಸರಕು
ಮಾರಿಬಿಟ್ಟಿದ್ದೇನೆ ನಾನೂ..
ಮೌನವನು!

ಕೊಂಡುಕೊಳ್ಳುವುದೇನನ್ನು?
ನಳನಳಿಸುತ್ತಿದ್ದ ಹಣ್ಣುಗಳೆಲ್ಲ
ನಿತ್ರಾಣಗೊಂಡಿವೆ..
ರಸಹೀನಗೊಂಡು!

ಅರಳಿ ನಗುತ್ತಿದ್ದ
ಹೂಗಳೆಲ್ಲ ಬಾಡಿ
ಮಸುಕಾಗಿವೆ
ಕೆಂಪು ಧೂಳಿಗೆ…

ಮುಗಿಬಿದ್ದ ಜನರಿಗೋ
ಕೊಳ್ಳುವ ಧಾವಂತ
ಚೌಕಾಸಿ ಕೂಗಟ ಪ್ರತಿಧ್ವನಿಸಿದೆ
‘ಮಾಲ್’ ನ ಗೋಡೆಗೆ ಬಡಿದು!

ಕಂತೆ ಎಣಿಸಿದಷ್ಟೂ
ಮುಗಿಯದ ಚಿಂತೆಯ
ಸಂತೆಯಲಿ ಸುತ್ತಿದಷ್ಟೂ..
ಮುಗಿಯದ ದಾರಿ!

ಹಠಕ್ಕೆ ಬಿದ್ದ ಕಾಲ್ಗಳು
ನಡೆಯುತ್ತಲೇ ಇವೆ…
ನಿಶ್ಯಬ್ದ ಊರಿನೆಡೆಗೆ!


Leave a Reply

Back To Top