ವ್ಯಾಸ ಜೋಶಿ ಅವರ ತನಗಗಳು

ನನ್ನ ಬೂಟು ಕಚ್ಚೋದು
ನನಗೆ ಮಾತ್ರ ಗೊತ್ತು ,
ತಿದ್ದಿ ನಡೆಯುವಲ್ಲಿ
ಸಹನೆಯು ಗೆದ್ದಿತ್ತು.

ಮದುವೆ ಆಗದಿದ್ರೆ
ಆವಾಗದೊಂದೇ ಚಿಂತೆ ,
ಮದುವೆ ಆದ ಮೇಲೆ
ಚಿಂತೆಯೊ ಕಂತೆ ಕಂತೆ.

ನನ್ನವಳ ತೂಕವು
ಅಂದು ಏಳು ಮಲ್ಲಿಗೆ ,
ನಾನು ಹೇಳುವೆನಿಂದು
“ಏಳು ಮೆಲ್ಲಗೆ” ಎಂದು.

ಮಂದ್ಯಾಗ ಹೊಗಳುವ
ಮನಿಯಾಗ ಬೈಯುವ,
ತಾಯ್ಗರುಳ ಅಪ್ಪನು
ಅರ್ಥವಾಗದವನು.

ಮಗು ಇದ್ದಾಗ “ಕೃಷ್ಣ”
ಎಂದರೂ, ಹರೆಯದಿ-
ರಾಮನಂತಿರು ಚೊಕ್ಕ
ಇದು ತಾಯಿಯ ಲೆಕ್ಕ.

ಅನುಭವ ಇಲ್ಲದೇ
ಆನಂದದ ಭ್ರಮೇಲಿ,
ಈಜಲು ಕರೆಯೋದು
ಸಂಸಾರ ಸಾಗರವು.

Leave a Reply

Back To Top