ಡಾ ಅನ್ನಪೂರ್ಣ ಹಿರೇಮಠ-ನಾವಿಂದು ಸಂಪೂರ್ಣ ಸ್ವತಂತ್ರರೇ??

ನಾವಿಂದು ಸಂಪೂರ್ಣ ಸ್ವತಂತ್ರರೇ ಎಂಬುದು ಕೇವಲ ಚರ್ಚಿಸುವ ವಿಷಯವಲ್ಲ. ಚಿಂತಿಸುವ ಮಂಥಿಸುವ ವಿಷಯವಾಗಿದೆ. ಸ್ವತಂತ್ರ ಬಂದು 75 ವರ್ಷಗಳನ್ನು ನಾವು ಹೇಗೆ ಕಳೆದೆವು? ನಾವು ಗಳಿಸಿದ ಸಾಧನೆ ಪ್ರಗತಿಯ ಬಗ್ಗೆ ಚಿಂತಿಸಲೇಬೇಕು. ಹಲವು ರಂಗಗಳಲ್ಲಿ ಪ್ರಗತಿ ಸಾಧಿಸಿದ್ದರೂ, ಹಲವಾರು ರಂಗಗಳಲ್ಲಿ ಅವನತಿ ಕಂಡಿರುವುದು ದುರದೃಷ್ಟಕರ ಸಂಗತಿ. ಬ್ರಿಟಿಷರು ಆಳ್ವಿಕೆಯಲ್ಲಿದ್ದ ಭಾರತ ,ಇಂದಿನ ಭಾರತ ಯಾವ ಯಾವ ಬದಲಾವಣೆ ದೇಶದುನ್ನತಿಗೆ ಕಾರಣವಾಗಿದೆ? ನಾವು ಸಂಪೂರ್ಣ ಸ್ವತಂತ್ರರು ಎಂದರೆ ತಪ್ಪಾಗುವುದಿಲ್ಲವೇ? ಗಾಂದಿ ಕಂಡ ರಾಮ ರಾಜ್ಯ ಎಲ್ಲಿದೆ? ಹೆಣ್ಣು ಮಗಳೊಬ್ಬಳು ರಾತ್ರಿ 12 ಗಂಟೆಯಲ್ಲಿ ಬೀದಿಯಲ್ಲಿ ಒಬ್ಬಳೆ ನಿರ್ಭಿತಳಾಗಿ ಓಡಾಡಲಾಗಿದೆಯೇ? ಎಲ್ಲೆಲ್ಲೂ ಹೆಣ್ಣಿನ ಮೇಲೆ ಸಾಮೂಹಿಕ ಅತ್ಯಾಚಾರ ,ಹೆಣ್ಣಿನ ಮಾರಾಟ, ಜೊತೆಗೆ ಹೆಣ್ಣು ಭ್ರೂಣ ಹತ್ಯೆ, ಎಷ್ಟು ಕೆಳಮಟ್ಟಕ್ಕೆ ಇಳಿದಿದ್ದೇವೆ?ಎಂಬುದು ಇದರಿಂದ ತಿಳಿಯುತ್ತದೆ. ಸ್ವತಂತ್ರವೆಂದರೆ ಸ್ವೇಚ್ಛೆ ಅಲ್ಲ, ಮದವೇರಿದಷ ಗೂಳಿಯಂತೆ ವರ್ತಿಸುವುದಲ್ಲ ಎಂದು ತಿಳಿಯುವುದು ಯಾವಾಗ?

ಎಲ್ಲೆಲ್ಲೂ ಭ್ರಷ್ಟತೆಯ ಕರಾಳ ಛಾಯೆ, ತುಳಿದು ಬಾಳುವಲ್ಲಿ ಚತುರತೆ ತೋರುವ ಚಾಣಾಕ್ಷರು. ಪ್ರತಿಯೊಂದರಲ್ಲಿ ನನಗೆಷ್ಟು ಸಿಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಶಕುನಿಯಂತೆ ಮೋಸದಾಟ, ಕಪಟ ಬುದ್ಧಿಯ ದುರ್ಯೋಧನನ ಮೀರಿಸುವವರು ತುಂಬಿ ಹೋಗಿದ್ದಾರೆ. ಸತ್ಯ ಮಾಯವಾಗಿ ಎಲ್ಲೆಲ್ಲೂ ಸುಳ್ಳಿನ ಸೂತಕ ಬೆರಗುಗೊಳಿಸುವ ನಾಟಕೀಯ ನಡೆ,ಚಟಕ್ಕೆ ಬಲಿಯಾಗಿ ಹಠಬಿಡದೆ ಹಾಳಾಗುತ್ತಿರುವ ಯುವಕರು. ಅಂದು ಸ್ವತಂತ್ರ ಒಂದಕ್ಕೇ ಹೋರಾಟ ಈಗ ಎಲ್ಲದಕ್ಕೂ ಹೋರಾಟ. ಎಲ್ಲಾ ಕಬಳಿಸುತ್ತಿರುವ ಭೂಗತ ಜಗತ್ತು, ಭಯೋತ್ಪಾದಕರ ಅಟ್ಟಹಾಸ ಭಯಪಡಿಸುತ್ತಿದೆ. ಹಣ, ಅಧಿಕಾರ, ಅಂತಸ್ತಿನ ಮದವೆಂಬ ಗರಬಡಿದು ಸ್ವಚ್ಛಾಚಾರದಲ್ಲಿ ನೆಮ್ಮದಿ ಕಿತ್ತು ತಿನ್ನುವ ರಣಹದ್ದುಗಳಿಂದ ದೇಶವಿಂದು ನರಳುತ್ತಿದ್ದರೆ, ಸ್ವತಂತ್ರ ಯಾವುದು? ಎಲ್ಲಿದೆ ಸ್ವತಂತ್ರ? ತಿಳಿಯದಾಗಿದೆ. ಎಲ್ಲಿ ನೋಡಿದಲ್ಲಲ್ಲಿ ತುಳಿಯುವ ಕಾಲುಗಳು ತುಳಿತಕ್ಕೊಳಗಾದವರ ಅರ್ಥನಾದ. ಕೆಲವರಿಗೆ ರಾಜ ವೈಭೋಗ ಇನ್ನು ಕೆಲವರಿಗೆ ನರಕದಂತ ಜೀವನ ಇದು ಸ್ವತಂತ್ರವೇ.? ಧರ್ಮ ಜಾತಿಗಳ ಕಚ್ಛಾಟ ,ಮಾನವೀಯತೆಯ ಕಗ್ಗೊಲೆ. ತಂತ್ರಜ್ಞಾನ ವಿಜ್ಞಾನ ಬೆಳೆದರೆ ಅದು ಭಾರತದ ಪ್ರಗತಿಯೇ,,? ನಾಗರಿಕನಾಗದ ಪ್ರಜೆಗಳ ಪ್ರಜಾಪ್ರಭುತ್ವ. .ಕೊಲೆ ,ಸುಲಿಗೆ, ಅತ್ಯಾಚಾರ, ಅನಾಚಾರಗಳ ಮೆರವಣಿಗೆ ಸಾಗುತ್ತಿದೆ ಎಲ್ಲಿ ನೋಡಿದಲ್ಲಲ್ಲಿ.


Leave a Reply

Back To Top