ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ
ಮುಚ್ಚಿದ ಬಾಗಿಲು-ತೆರೆಯದ ಕಿಟಕಿ
ಕೊನೆಯ ಕಂತು

ಸಮಸ್ಯೆ ಉಳಿದಿದೆ ಬಾಗಿಲು ತೆರೆದಿದೆ…
ಕೊರೊನಾ ಆತಂಕವನ್ನು ಕಟ್ಟಿಟ್ಟು ಅದೆಷ್ಟೋ ಮನೆಗಳ, ಅಂಗಡಿಗಳ ಬಾಗಿಲು ಮತ್ತೆ ಮೊದಲಿನಂತೆಯೇ ತೆರೆದಿವೆ! ಒಂದೆಡೆ ಕೊರೊನಾ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದಾಯರಹಿತ ಜೀವನ ನಡೆಸಲಾಗುವುದಿಲ್ಲ, ಹಸಿವಿನಿಂದಲೇ ಹಲವರು ಸಾಯಬಹುದು ಎನ್ನುವ, ಎಲ್ಲವೂ ಪುನರಾರಂಭಗೊಳ್ಳಬೇಕು ಎನ್ನುವ ಒತ್ತಡ, ಒತ್ತಾಯದಿಂದ ತೆರೆದಿರುವ ಬಾಗಿಲುಗಳು ಬದುಕಿನ ಆತಂಕಗಳನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯುತ್ತಿದೆ.
ಮತ್ತದೇ ಭೋಗ ಜೀವನವನ್ನು ಬಾಚಿ ತಬ್ಬಿಕೊಳ್ಳುವ ಹಲವರ ನಡೆ ‘ನಾಯಿಯ ಬಾಲ ನಳಿಗೆಯಲ್ಲಿ ಹಾಕಿದರೂ ಡೊಂಕು’ ಎನ್ನುವ ಮಾತನ್ನು ನೆನಪಿಸುತ್ತಿದೆ. ‘ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹರಿಸಿ’ ಎಂದು ಎಚ್ಚರಿಸುವ ಮಾಧ್ಯಮಗಳ ಮಾತು ಬರಹ ಗಮನಿಸುವ ವ್ಯವಧಾನ ಕೆಲವರಲ್ಲಷ್ಟೇ ಉಳಿದಿದೆ.
ಇಷ್ಟು ದಿನವೂ ತಮ್ಮ ಬದುಕನ್ನು ಪಣವಾಗಿಟ್ಟು ದುಡಿದ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ನರ್ಸ ಗಳು ಎಲ್ಲಕ್ಕಿಂತ ಮುಖ್ಯವಾಗಿ ಡಾಕ್ಟರುಗಳ ತ್ಯಾಗ, ಸಂಯಮ, ಸೇವೆಯ ಫಲವಾಗಿ ಅನೇಕರು ಕೊರೋನಾದಿಂದ ಗುಣಮುಖರಾಗಿದ್ದಾರೆ.
ಆದರೆ ಜನರ ವಿವೇಚನಾರಹಿತ ವ್ಯವಹಾರದಿಂದ ರೋಗಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗುವ ಡಾಕ್ಟರುಗಳ ತಾಳ್ಮೆಯನ್ನು ನಿಕಷಕ್ಕೊಡ್ಡುವ ಎಲ್ಲ ಲಕ್ಷಣಗಳೂ ಕಂಡು ಬರುತ್ತಿವೆ. ಹೆಣ ಸುಡುವ ಬೆಂಕಿಯಲ್ಲಿ ಅಡುಗೆ ಬೇಯಿಸಲೆತ್ನಿಸುವ ರಾಜಕೀಯದವರ ನಡೆ ವಾಕರಿಕೆ ಹುಟ್ಟಿಸುತ್ತಿದೆ. ಸತ್ತವರು ಒಂದು ಸಮುದಾಯದವರಾದರೆ ಎಡಗಣ್ಣಿನಲ್ಲಿ ನೀರು, ಸತ್ತವರು ಇನ್ನೊಂದು ಸಮುದಾಯದವರಾದರೆ ಬಲಗಣ್ಣಿನಲ್ಲಿ ನೀರು..ತಥ್.. ಸಿದ್ಧಾಂತದಲ್ಲಿ ಸಿಲುಕಿದವರಿಗೆ ಅರ್ಥವಾಗುವುದು ಅರೆಬರೆ ಬೆಂದ, ಅರ್ಧಸತ್ಯಗಳು ಮಾತ್ರ. . ನಿಜವಾಗಿಯೂ ಮಾನವೀಯತೆ ಇದ್ದರೆ ಎಡ ಬಲಗಳ ಹಂಗು ಹರಿದು ಎಲ್ಲ ಅನ್ಯಾಯವನ್ನು ಪ್ರಶ್ನಿಸಿ, ಎಲ್ಲರ
ಕಷ್ಟಕ್ಕೂ ಸ್ಪಂದಿಸುವಂತಾಗಲಿ. ತೆರೆದ ಬಾಗಿಲಿನಾಚೆ ವೈರಾಣುವಿನ ರೂಪದಲ್ಲಿ ಸಾವು ಹೊಂಚು ಹಾಕುತ್ತಲೇ ಇದೆ.. ಜಾತಿ ಮತ ಬೇಧಭಾವ ಮಾಡದೇ ಯಾರನ್ನು ಆವರಿಸಲಿ ಎಂದು ಕಾಯುತ್ತಿದೆ. ಸಾಮರಸ್ಯವೆನ್ನುವುದು ಕಟ್ಟಲಾರದ ಕವಿತೆಯಾಗದಿರಲಿ. ನಮ್ಮನ್ನು ನಾವು ಕಾಪಾಡಿಕೊಳ್ಳುವ, ದೇಶ ಉಳಿಸುವ
ಸಂಯಮ ಬದುಕಿನ ಗೀತವಾಗಲಿ.
******
ಮುಗಿಯಿತು

ಮಾಲತಿ ಹೆಗಡೆ