ಡಾ.ಕೆ.ಎಸ್.ಗಂಗಾಧರ ಕವಿತೆ-ಯಾರಿಗೆ ಬೇಕು ಯುದ್ಧ

ಕಾವ್ಯ ಸಂಗಾತಿ

ಡಾ.ಕೆ.ಎಸ್.ಗಂಗಾಧರ

ಯಾರಿಗೆ ಬೇಕು ಯುದ್ಧ

ಯುದ್ಧ ಯುದ್ಧ; ಎಲ್ಲಿ ನೋಡಿದರೂ ಯುದ್ಧ
ಪರಸ್ಪರ ಪರಿಚಯವಿಲ್ಲ;ಇಲ್ಲವೇ ಇಲ್ಲ ದ್ವೇಷ.
ಆದರೂ,
ಅವ ಇವನನ್ನು ಇವ ಅವನನ್ನು
ಕೊಲ್ಲುತ್ತಾನೆ ಗುಂಡಿನ ಮಳೆಗರೆದು.
ಅಪರಿಚಿತರ ಸಾವಿಗೆ ರಣಕೇಕೆ.
ಅವನ ಹೆಂಡತಿಯೂ ವಿಧವೆ;
ಇವನ ಮಕ್ಕಳೂ ಅನಾಥ.
ಹತರಾದ ಯುವಕರು;ಆಕ್ರಂದಿಸಿದ ಹಿರಿಯರು.
ನಾಲ್ಕು ದಿನದ ಬದುಕಿಗೆ ಕೊಳ್ಳಿಯಿಟ್ಟು
ವಿನಾಶಕ್ಕೆ ನೂಕುವ ಯುದ್ಧ ಯಾರಿಗೆ ಬೇಕು.

ವೈರತ್ವ ತುಂಬಿದ ಐಲು ನಾಯಕರು
ಏಳು ಸುತ್ತಿನ ಕೋಟೆಯಲವಿತು ರಕ್ಷಣಾ ವ್ಯೂಹದಲಿ
ಮೋಜು ಮಾಡುತ್ತಾ ಆಜ್ಞಿಸುತ್ತಾ ಕನಲುವ ದೊರೆಗಳು.
ರಣರಂಗಕ್ಕೆ ಕಾಲಿಡುವ ಗುಂಡಿಗೆಯಿಲ್ಲ;
ರಾಜಪರಿವಾರಕ್ಕೆ ಯುದ್ಧದಿಂದ ವಿನಾಯಿತಿ.
ಪ್ರಜೆಗಳಿಗೆ ಮಾತ್ರ ಯುದ್ಧ ಕಡ್ಡಾಯವೆಂಬ ರಾಜಾಜ್ಞೆ.
ಸರ್ವಾಧಿಕಾರಿಯ ಫಲಾಯನದ ವಿಮಾನ ಸದಾ ಸಿದ್ದ,
ಧನಕನಕಗಳ ಥೈಲಿಯ ಸಮೇತ.
ಕೆಲವರ ವಿಲಕ್ಷಣ ಮತಿಯ ಕಲರವದಿಂದ
ದೇಶ ರಣರಂಗವಾಗಿಸುವ ಯುದ್ಧ ಯಾರಿಗೆ ಬೇಕು.

ಅಲ್ಲಿ ಯುದ್ಧ; ಇಲ್ಲಿ ಅಂತರ್ಯುದ್ಧ.
ಒಂದು ಕಡೆ ರಾಮನಾಮ ಸ್ಮರಣೆ; ಅವರಿಗೆ ಸಮಯವಿಲ್ಲ.
ಇನ್ನೊಂದೆಡೆ ಭರವಸೆಗಳ ಮಹಾಪೂರ;ಇವರಿಗೆ ಅರಿವಿಲ್ಲ.
ಗರಿಗರಿ ನೋಟುಗಳ ಪೇರಣೆಗೆ ಮಾತ್ರ ಇಬ್ಬರಿಗೂ ಭೇದವಿಲ್ಲ.
ದೋಷಾರೋಪಣೆಯ ಆಟದಲಿ
ದೊಂಬಿ ಸ್ಫೋಟ ಆಸ್ಫೋಟಗಳ ಕೇಳುವರಿಲ್ಲ.
ಮಣಿಪುರದ ಮಹಿಳೆಯರಿಗೆ ಬೆತ್ತಲೆ ಭಾಗ್ಯ.
ಇಳೆ ನಾಚಿಸುವ ವಿಕೃತಿಯ ಪುರುಷನೆಂಬ ಅಯೋಗ್ಯ.
ಬುದ್ಧ ಬಸವ ಗಾಂಧಿ; ಈಗ ಸ್ಮಾರಕಗಳಲ್ಲಿ ಬಂಧಿ.
ದಾಳಿ ದಂಗೆ ಸಂಘರ್ಷಗಳಿಗೆ ಬಲಿಯಾದ
ಹುತಾತ್ಮರ ಚಿತೆಯ ಮೇಲೆ ದೇಶಕಟ್ಟುವ
ನಿತ್ಯ ಗೋಳಿನ‌ ಅಂತರ್ಯುದ್ಧ ಯಾರಿಗೆ ಬೇಕು.

ಯುದ್ಧವೂ ಬೇಡ,ಅಂತರ್ಯುದ್ಧವೂ ಬೇಡ.
ನಮ್ಮ ಪಾಡಿಗೆ ನಮ್ಮನ್ನು ಬಿಟ್ಟರೆ ಸಾಕು.


ಡಾ.ಕೆ.ಎಸ್.ಗಂಗಾಧರ

3 thoughts on “ಡಾ.ಕೆ.ಎಸ್.ಗಂಗಾಧರ ಕವಿತೆ-ಯಾರಿಗೆ ಬೇಕು ಯುದ್ಧ

Leave a Reply

Back To Top