ವಿಜಯಪ್ರಕಾಶ್ ಸುಳ್ಯ ಗಜಲ್

ಕಾವ್ಯ ಸಂಗಾತಿ

ವಿಜಯಪ್ರಕಾಶ್ ಸುಳ್ಯ

ಗಜಲ್

ಕಾವೇರಿಯ ಮಡಿಲು ಬರಿದಾಗುತಿರಲು ಜಲವಿಲ್ಲದೆ ಹಾಹಾಕಾರ
ಕರುನಾಡಿನ ನೆಲವು ಬರಡಾಗುತಿರಲು ಬೆಳೆಯಿಲ್ಲದೆ ಹಾಹಾಕಾರ

ನೊಂದು ಬೆಂದ ರೈತನ ವದನದಲಿ ಮಾಯವಾಗಿದೆ ಮಂದಹಾಸ
ಬೆಂದಕಾಳೂರಿನವರ ತೃಷೆಯು ನೀಗದೆ ಭುಗಿಲೆದ್ದಿದೆ ಹಾಹಾಕಾರ

ಕೈ ಬೀಸಿ ಕರೆಯುತ ಹಸಿವನು ನೀಗಿಸುತಿದೆ ಕರ್ನಾಟಕ ಎಲ್ಲರಿಗೂ
ನೆರೆಮನೆಯವರು ಖ್ಯಾತೆ ತೆಗೆಯುತಿರಲು ಕೇಳಿಸುತ್ತಿದೆ ಹಾಹಾಕಾರ

ಹರಿವನು ಮರೆತಿಹಳು ಈ ನೆಲದ ಜೀವನಾಡಿ ದಕ್ಷಿಣದ ಗಂಗೆಯು
ಬಾಯಾರಿದರೂ ನೀರು ಹರಿಸೆನ್ನುತಿರಲು ಹರಡುತ್ತಿದೆ ಹಾಹಾಕಾರ

ವಿಜಯವನು ಬೆನ್ನಟ್ಟುವುದಕೆ ಇದು ಶತ್ರುಗಳ ನಡುವಣ ಕಲಹವಲ್ಲ
ವಿವೇಚಿಸಿ ವ್ಯವಹರಿಸುವ ತನಕ ಸ್ಫೋಟಗೊಳ್ಳುತ್ತಿರುತ್ತದೆ ಹಾಹಾಕಾರ


ವಿಜಯಪ್ರಕಾಶ್ ಸುಳ್ಯ

Leave a Reply

Back To Top