ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ಗಡಿಯಾರ

ಎಲ್ಲ ದಿಕ್ಕುಗಳು ನನ್ನ ಸುತ್ತಲೂ
ತಿರುಗುವುದೊಂದೆ ಕೆಲಸ ನನಗೆ,

ಊರು ಬದುಕಿದರೇನು‌..?
ಸತ್ತರೇನು..?
ನಾನು ಮಾತ್ರ ತಿರುಗುತ್ತಲೆ ಇದ್ದೇನೆ..
ಬೇಸರವಿರದ ಚಕ್ಕಡಿಯ ಗಾಲಿಯಂತೆ,
ಹಾಸುಗಂಬಿಯ ಮೇಲೆ ಉರುಳುತ್ತಲೆ
ಇದ್ದೇನೆ,
ನಾನು ಜಗವ ನೋಡಿಲ್ಲ
ಜಗವೇ ನನ್ನನ್ನು ದಿಟ್ಟಿಸುವಂತೆ
ಮಾಡಿದ್ದೇನೆ…!

ಕಾಯುವ ಪ್ರೇಮಿ ಶಪಿಸಿ
ಬುಸುಗುಡುತ್ತಿದ್ದಾನೆ,
ಹಾಳಾದ್ದು ಸಮಯ ಹೋಗುವುದೆ ಇಲ್ಲವೆಂದು,
ಹಡೆದ ತಾಯಿಗೆ ಇದರದ್ದೆ ಚಿಂತೆ
ಹೊತ್ತು ಹೊತ್ತಿಗೆ ಹೊಟ್ಟೆಗೆ ಹಾಕಬೇಕೆಂದು
ನೋಡುತ್ತಿದ್ದಾಳೆ,
ಇನ್ನು ಸಮಯವಾಗಿಲ್ಲ….!

ಇಲ್ಲೊಬ್ಬ,
ನೌಕರಿಗೆ ಪರೀಕ್ಷೆ ಬರೆಯುತ್ತಿದ್ದಾನೆ,
ವರ್ಷಗಟ್ಟಲೆ ಓದಿ ಗುಡ್ಡಹಾಕಿದ ಜ್ಞಾನ
ಒರೆಗಚ್ಚಿ ಸಮಯ ನೋಡುತ್ತಲೆ ಇದ್ದಾನೆ,
ಮೂಕ ಬಸವನಂತೆ,…!

ಅಲ್ಲೊಬ್ಬ,ತಿರುಕ ಪುಡಿಗಾಸಿಗೆ ಅಲೆದು
ಸುಸ್ತಾಗಿ ನಡೆದು ಬೀದಿ ಬದಿಯಲ್ಲಿ
ಹಣೆಬರಹವ ನೆನೆಯುತ್ತ,..!
ನನ್ನ ಟೈಂ ಚೆನ್ನಾಗಿಲ್ಲ, ಇದ್ದರೆ ನಾನು
ಏನೋನೊ ಆಗುತ್ತಿದ್ದೆ ಎಂದು
ಕುಳಿದ್ದಾನೆ ಗೊಣಗುತ್ತ…!!

ಒಳಿತು ಕೆಡಕಾಗಲು ಗಡಿಯಾರವೆ
ಕಾರಣ ಜ್ಯೋತಿಷಿ ಹೇಳಿದ್ದು,,,!
ಬೆಳಿಗ್ಗೆ ರಾಹುಕಾಲ, ಮಧ್ಯಾಹ್ನ
ಯಮಗಂಡಕಾಲ, ಹತ್ತು ಹಲವು
ಗೋಜಲುಗಳ ಕಿರಿಕಿರಿ,
ಎಲ್ಲವು ತರ್ಕಕ್ಕೆ ನಿಲುಕದ್ದು,..!!

ಟ್ರೈನ್ ತಪ್ಪಿಸಿಕೊಂಡವನೊಬ್ಬ
ಹಿಡಿಶಾಪ ಹಾಕಿದ್ದು ನನ್ನ ಟೈಂ ಸರಿಯಿಲ್ಲ,..!
ಈಗಷ್ಟೆ ಟ್ರೇನ್ ಹೋಯಿತು,
ತಪ್ಪು ಟ್ರೈನಿನದಲ್ಲ
ಇವನದೆ ಎಂಬುದು ಗೊತ್ತಿಲ್ಲ,,,!!

ಆದರೂ ಗಡಿಯಾರ ಯಾರು ಬೈದರೂ,
ತಿರುಗುತ್ತಲೆ ಇದೆ ನಿಂತೆ ಇಲ್ಲ…!
ಇದೊಂದು ಓಡುವ ಕುದುರೆಯಂತೆ
ನಿಂತರೆ ಪ್ರಯೋಜನವಿಲ್ಲ…!!


ಶಂಕರಾನಂದ ಹೆಬ್ಬಾಳ

About The Author

1 thought on “ಶಂಕರಾನಂದ ಹೆಬ್ಬಾಳ-ಗಡಿಯಾರ”

Leave a Reply

You cannot copy content of this page

Scroll to Top