ನಾಗರಾಜ ಬಿ.ನಾಯ್ಕ-ಒಂದು ಕವಿತೆ

ಕಾವ್ಯ ಸಂಗಾತಿ

ನಾಗರಾಜ ಬಿ.ನಾಯ್ಕ

ಒಂದು ಕವಿತೆ

ಕಾವ್ಯದೊಳಗೆ ಅಡಗಿಬಿಡು ನನ್ನ ಮನದ ಒಲವೇ
ಹಸಿರಾಗಿ ಉಸಿರಾಗಿ ಬದುಕು ನೀ ಉಯಿಲೊಳಗೆ
ಇಳೆಯೆಲ್ಲಾ ನಗುತಿರೆ ರವಿಯುದಯದ ಗಳಿಗೆಗೆ
ಹಕ್ಕಿಗಳ ಇಂಚರದ ಸವಿಮಾತಿನೊಳಗೆ…….

ನಗುವಾಗಿ ಉಳಿದುಬಿಡು ನನ್ನ ಮನದ ಒಲವೇ
ಹೂವಾಗಿ ಅರಳಿ ಸೌಗಂಧ ಬೀರುತಾ
ಮುಂಜಾನೆಯ ಇಬ್ಬನಿ ಹನಿ ಸ್ಪರ್ಶಕೆ
ಕೌತುಕವಾಗಿ ಉಳಿದುಬಿಡು ಗೆಲುವೊಳಗೆ…..

ಮೌನವಾಗಿ ಕುಳಿತುಬಿಡು ನನ್ನ ಉಸಿರಿನ ಗೆಲುವೇ
ಬಂದ ದಾರಿಗೊಂದು ಗುರುತು ಹಾಕಿ
ನೋಟ ಭಾವಕ್ಕೊಂದು ಬೆಸುಗೆ ಹಾಕುತ
ಉಳಿದು ಬಿಡು ನವ್ಯಕ್ಕೊಂದು ಸಂದೇಶ ಸಾರುತ್ತ……

ಹನಿಯಾಗು ತುಂತುರು ಮಳೆಯಾಗು ಮನವೇ
ಜೀವಕ್ಕೊಂದು ಭಾವವಾಗಿ ಭಾವಕ್ಕೊಂದು ಗೆಲುವಾಗಿ
ನಂಟಿಗೊಂದು ಬದುಕಾಗಿ ಬದುಕಿಗೊಂದು ಹರುಷವಾಗಿ
ಬದುಕಿಬಿಡು ಒಲವೇ ಗೆಲುವು ಸಾರುವ ನೆಲದೊಳಗೆ……


ನಾಗರಾಜ ಬಿ.ನಾಯ್ಕ


Leave a Reply

Back To Top