ಎ.ಎನ್.ರಮೇಶ್.ಗುಬ್ಬಿ.ರಾಧಾ-ಮಾಧವರ ಒಲವಿನಕಾವ್ಯದ ಹನಿಗಳು

ಕಾವ್ಯ ಸಂಗಾತಿ

ಎ.ಎನ್.ರಮೇಶ್.ಗುಬ್ಬಿ.

ರಾಧಾ-ಮಾಧವರ ಒಲವಿನಕಾವ್ಯದ ಹನಿಗಳು

  1. ನಿನಾದ.!

ಕೇಳಿದೊಡನೆ ಮುರಳಿಯ
ಮಧುರ ಸ್ವರಗಳ ರಿಂಗಣ
ಮಾಯವಾಯ್ತು ರಾಧೆಯ
ಕಾಯುವಿಕೆಯ ಅಸಂಖ್ಯ
ಬೇಗುದಿ ಅಸಹನೆ ತಲ್ಲಣ.!

  1. ಆರಾಧನೆ.!

ಗೋಕುಲದ ಗೋಪಿಕೆಯರಿಗೆಲ್ಲ
ಗೋಪಾಲ ಎಂದು ಒಲಿಯಲಿಲ್ಲ
ಕಾರಣ ರಾಧೆಯಷ್ಟು ಮತ್ಯಾರು
ಕೃಷ್ಣನ ಅನವರತ ಆರಾಧಿಸಲಿಲ್ಲ.!

  1. ವಿಷಾದ.!

ಪರಿಹರಿಸುವುದರಲ್ಲಿ ಶ್ರೀಕೃಷ್ಣ
ಕೌರವಪಾಂಡವರ ರಾಜಕಾರಣ
ಮರೆತೆಹೋದ ತನಗಾಗಿ ಅನುಕ್ಷಣ..
ಪರಿತಪಿಸುವ ರಾಧೆ ಅಂತಃಕರಣ.!
ರಾಜಧರ್ಮದ ಭವ್ಯ ಪ್ರಭೆಯೆದುರು
ನಂದಿತು ಪ್ರೇಮಧರ್ಮದ ಹೊಂಗಿರಣ.!

  1. ಬವಣೆ.!

ಗಂಟಾನುಗಟ್ಟಲೆ ಕಾಯುವಿಕೆಯ
ಚಡಪಡಿಕೆ ತುಮುಲಗಳ ತಲ್ಲಣ
ಕನಲಿಕೆ ನಿನಗೇನು ಗೊತ್ತು ಕೃಷ್ಣ?
ಕಾಲವೇ ಕಲ್ಲಾಗಿ ನಿಂತಂತೆ ಭಾಸ
ಕ್ಷಣಕ್ಷಣವೂ ಭಾರವಾದಂತೆ ಶ್ವಾಸ.!

  1. ಒಲವಿನವತರಣ

ಯುಗಯುಗಕು ಮುಗಿಯದು
ಜಗವಿರುವವರೆಗು ಮರೆಯದು
ರಾಧಾಮಾಧವರ ಪ್ರೇಮಲಹರಿ
ಒಲವಿಗೆ ನವ ಭಾಷ್ಯ ಬರೆದು
ಚಿರಂತನ ಅಮರಗೊಳಿಸಲೆಂದೆ
ಅಂದು ಅವತರಿಸಿದನು ಶ್ರೀಹರಿ.!

  1. ಕುರುಹು.!

ಮಧುವನಕೆ ಇಂದಿಗು
ರಾಧಾಮಾಧವರ ಗುಂಗು
ಅನುಕ್ಷಣವೂ ಅಡಿಗಡಿಗು
ಅವ್ಯಕ್ತ ಒಲವಿನ ಗುನುಗು
ಇದುವೆ ಚಿರಪ್ರೇಮದ ರಂಗು.!


ಎ.ಎನ್.ರಮೇಶ್.ಗುಬ್ಬಿ.

Leave a Reply

Back To Top