ಎ. ಹೇಮಗಂಗಾ-ಆಧುನಿಕ ವಚನಗಳು

ಕಾವ್ಯ ಸಂಗಾತಿ

ಎ. ಹೇಮಗಂಗಾ

ಆಧುನಿಕ ವಚನಗಳು.

ವಚನ ಬರಿಯ ಮಾತಲ್ಲ
ಮಥಿಸಿ ತೆಗೆದ ಅಮೃತವದು
ಅನುಭವದ ಕಡಲಾಳವನು
ವಚನ ಬರಿಯ ಸಂದೇಶವಲ್ಲ
ಹದಗೊಂಡ ಚಿನ್ನವದು
ಜ್ಞಾನದ ಮೂಸೆಯಲಿ

ಚಿಂತನ – ಮಂಥನವೇ ಜ್ಞಾನದ ಹುಟ್ಟು

ಸಿಡಿಲು ಮಲ್ಲಿಕಾರ್ಜುನ

ಬಾಳಿಗೊಂದು ಗುರಿ ಇರಲು
ಗುರಿ ಮುಟ್ಟುವ ಛಲವಿರಲು
ಸಾಧನೆಯ ಗಿರಿಶಿಖರ ದೂರವೆಂತು ?
ಇದೆ ಸಾಧಕ ಬಾಧಕಗಳ
ಅರಿವು ನಿಜ ಸಾಧಕನಿಗೆ
ಸಾಗುವ ಹಾದಿ ಕಡಿದಾದಷ್ಟೂ

ಭಯವೆಲ್ಲಿದೆ ಎತ್ತರಕ್ಕೇರಲು ?

                    ಸಿಡಿಲು ಮಲ್ಲಿಕಾರ್ಜುನ
---

‘ ಮುಟ್ಟುವೆನೋ ಇಲ್ಲವೋ ‘
ತೊರೆದು ನೀ ಅನುಮಾನವ
ಚಲಿಸುತಿರು ನಿನ್ನ ಗುರಿಯತ್ತ
ದೃಢತೆ ಇರಲಿ ಚಿತ್ತಕೆ
ಸ್ಪಷ್ಟತೆ ಇರಲಿ ದೃಷ್ಟಿಗೆ
ಅವಿಶ್ವಾಸ ಬೇಡ ಮನದೊಳಗೆ

ಪ್ರಯತ್ನ ನಿನ್ನದು ಪ್ರತಿಫಲ ಅವನದು

                 ಸಿಡಿಲು ಮಲ್ಲಿಕಾರ್ಜುನ
---

ನೀಡುವವನು ಅವನೇ
ಹಿಂಪಡೆವವನೂ ಅವನೇ
ನಗಿಸುವವನು ಅವನೇ
ಅಳಿಸುವವನೂ ಅವನೇ
ಬೆಳಕ ಹರಿಸುವವನೂ ಅವನೇ
ತಮವ ತುಂಬುವವನೂ ಅವನೇ

ಸಕಲವೂ ಅವನ ಅಧೀನದಲ್ಲಿ

                  ಸಿಡಿಲು ಮಲ್ಲಿಕಾರ್ಜುನ
---

ಕಲಿತಿಲ್ಲ ವಿಹಗ ಯಾರಿಂದಲೂ
ಎತ್ತರಕೆತ್ತರಕೆ ಹಾರುವುದನ್ನು
ಕಲಿತಿಲ್ಲ ಮತ್ಸ್ಯ ಯಾರಿಂದಲೂ
ನೀರಿನೊಳಗೆ ಈಜುವುದನ್ನು
ಕಲಿಸಲಾರರು ಯಾರೂ ನಿನಗೆ
ಬದುಕಿನ ರೀತಿ ನೀತಿಯನ್ನು

ರೂಪಿಸಿಕೋ ನಿನ್ನ ಬಾಳ ನೀನೇ

                ಸಿಡಿಲು ಮಲ್ಲಿಕಾರ್ಜುನ
---

ಬಿತ್ತಿದ ಬೀಜಗಳೆಲ್ಲವೂ
ಮೊಳಕೆ ಒಡೆಯುವುದಿಲ್ಲ
ಉತ್ತಿದ ಭೂಮಿಯೆಲ್ಲವೂ
ಹಸಿರು ಹೊದೆಯುವುದಿಲ್ಲ
ಹಿಡಿದ ಕಾರ್ಯವೆಲ್ಲವೂ
ಸುಗಮವಾಗಿ ಸಿದ್ಧಿಸುವುದಿಲ್ಲ

ವಾಸ್ತವದ ಅರಿವಲಿ ನಡೆ ನೀ

                     ಸಿಡಿಲು ಮಲ್ಲಿಕಾರ್ಜುನ
----

ಸರ್ವಸಂಗ ಪರಿತ್ಯಾಗಿಗೆ
ಲೋಲುಪತೆ ಬೇಕೇಕೆ
ಕಾವಿಯ ಧರಿಸಿದವಗೆ
ಕಾಮದ ಸೆಳೆತವೇಕೆ
ಪಾಪಪ್ರಜ್ಞೆ ಇಲ್ಲದ ನಡೆ
ಮಾದರಿಯೆಂತು ಅನ್ಯರಿಗೆ

ಮುಖವಾಡದ ಬಾಳು ಹೆಚ್ಚು ಕಾಲ ಸಾಗದು

                ಸಿಡಿಲು ಮಲ್ಲಿಕಾರ್ಜುನ
----

ನಿನ್ನನ್ನೇ ಅರಸಿ ಬರುವ
ಅವಕಾಶವ ತಳ್ಳಿ ಹಾಕದಿರು
ಒಮ್ಮೆ ಬಂದ ಸದವಕಾಶ
ಮತ್ತೆ ಬಾರದೇ ಇರಬಹುದು
ಸದ್ಬಳಕೆ ಮಾಡಿಕೋ ಸರಿವ
ಕಾಲದ ಪ್ರತಿಕ್ಷಣವನೂ

ವಿವೇಚನೆ ನಿನ್ನೊಳಗಿನ ದಿಕ್ಸೂಚಿ

                 ಸಿಡಿಲು ಮಲ್ಲಿಕಾರ್ಜುನ
----

ತಪ್ಪದು ಸತ್ಕಾರ್ಯಕೂ
ಅಪಮಾನ ಅಪವಾದಗಳು
ತಪ್ಪದು ಸಚ್ಚಾರಿತ್ರ್ಯಕೂ
ಕಳಂಕ ನಿಂದನೆಗಳು
ಕಲಿತು ಸಾಗು ಕಿವಿಗಳನು
ಕಿವುಡಾಗಿಸುವ ಕಲೆಯ

ಬೆಂಕಿಯಲ್ಲಿ ಬೆಂದ ಮಡಕೆ ನೀನಾಗು

                ಸಿಡಿಲು ಮಲ್ಲಿಕಾರ್ಜುನ
----

ಕೂರದಿರು ಸೋತಾಗ ಕೈ ಚೆಲ್ಲಿ
ಎಲ್ಲ ದೇವರ ಆಟವೆಂದು
ದೂರದಿರು ದೂಷಿಸಿ ಅವನ
ದುರಿತಕೆ ಕಾರಣನೆಂದು
ಉಣ್ಣಲೇಬೇಕು ನೀ
ಪೂರ್ವಜನ್ಮದ ಕರ್ಮಫಲವ

ಪಲಾಯನವಾದಿ ಆಗದಿರು ಎಂದೂ

                 ಸಿಡಿಲು ಮಲ್ಲಿಕಾರ್ಜುನ
--------------------------------------

ಎ. ಹೇಮಗಂಗಾ

One thought on “ಎ. ಹೇಮಗಂಗಾ-ಆಧುನಿಕ ವಚನಗಳು

Leave a Reply

Back To Top