ಅನುರಾಧಾ ರಾಜೀವ್ ಸುರತ್ಕಲ್-ಪ್ರಕೃತಿ ಮಾತೆ

ಕಾವ್ಯ ಸಂಗಾತಿ

ಅನುರಾಧಾ ರಾಜೀವ್ ಸುರತ್ಕಲ್

ಪ್ರಕೃತಿ ಮಾತೆ

ತಲೆಯ ಬಗ್ಗಿಸಿ ಚಿಂತೆಯ ಹೊತ್ತು
ಕುಳಿತಂತೆ ಶಿಲ್ಪಿಯ ಕೆತ್ತನೆ
ಬಾಲೆಯು ಬರಲು ತಾಯಿಯ ಪ್ರೇಮ
ಉಕ್ಕಿ ಹರಿದಂತೆ ಚಿಂತನೆ

ಹಸುರಿನ ಮಡಿಲಿಗೆ ಬೇಲಿಯ ಬಿಗಿಯುತ
ತಡೆಯ ಹಾಕಿಹುದು ನೋಡು
ಬಿಸಿಲದು ಜಾರುತ ಮೋಡವು ಕವಿದಿದೆ
ಬೆಳ್ಳಕ್ಕಿ ಸೇರುತಿದೆ ಗೂಡು

ದೇವನ ಸೃಷ್ಟಿಯಲಿ ಪ್ರಕೃತಿಯ ಸೌಂದರ್ಯ
ಕಣ್ಣ ತಣಿಸುತಿದೆ ಮುದದಿ
ಭಾವನೆ ಚಿಗುರಿದೆ ಮಮತೆಯ ಬಂಧದಿ
ಮಾತೃ ವಾತ್ಸಲ್ಯ ಮನದಿ

ಕಲಾವಿದನ ಕುಂಚದಿ ಮೂಡಿದೆ ಚಿತ್ತಾರ
ಪರಿಸರ ರಕ್ಷಿಸು ಎನುತ
ಮಳೆಯೂ ಬರಲಿ ಬೆಳೆಯೂ ಆಗಲಿ
ಮರಗಿಡಗಳ ನೆಡುತ


ಅನುರಾಧಾ ರಾಜೀವ್ ಸುರತ್ಕಲ್

Leave a Reply

Back To Top