ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅರುಣಾ ನರೇಂದ್ರ

ಗಜಲ್

ಅಲ್ಲಿ ನಿನ್ನ ನೆರಳಷ್ಟೇ ಇತ್ತು ನೀನಿರಲಿಲ್ಲ
ನಿನ್ನ ಹೆಜ್ಜೆಯ ಜಾಡಷ್ಟೇ ಇತ್ತು ನೀನಿರಲಿಲ್ಲ

ಅಲ್ಲಿಯ ಗಿಡ ಮರಕೆ ಏನು ಹೇಳಿದ್ದೆಯೋ
ನೀ ಉಸಿರುವ ಗಾಳಿಯಷ್ಟೇ ಇತ್ತು ನೀನಿರಲಿಲ್ಲ

ಉರಿ ಬಿಸಿಲಲ್ಲೂ ನಳನಳಿಸುವ ರಾಜೋದ್ಯಾನ
ಆದರಿಸುವ ಹಸಿರಷ್ಟೇ ಇತ್ತು ನೀನಿರಲಿಲ್ಲ

ಹಾಳಾದ ಅವಶೇಷ ಮತ್ತೆ ವಿಜೃಂಭಿಸಿದೆ
ಅರಮನೆ ವೈಭವವಷ್ಟೇ ಇತ್ತು ನೀನಿರಲಿಲ್ಲ

ಕಾವ್ಯ ಗೋಪುರ ಕಟ್ಟಿ ಕಳಸವಿಟ್ಟಿರುವಿ
ತಂಬೂರಿ ಶೃತಿಯಷ್ಟೇ ಇತ್ತು ನೀನಿರಲಿಲ್ಲ

ಬೆನ್ನ ಹಿಂದೆ ಬಚ್ಚಿಟ್ಟುಕೊಳ್ಳುವ ಖಯಾಲಿ ನಿನಗೆ
ಕಣ್ಣ ಮುಂದೆ ಬೆಳಕಷ್ಟೇ ಇತ್ತು ನೀನಿರಲಿಲ್ಲ

ಬೇರೇನು ಬೇಕಿಲ್ಲ ಹೊನ್ನ ಭಂಡಾರ ಸೂರಾಡಿರುವಿ
ಅಂತರಾತ್ಮದ ಒಲವಷ್ಟೇ ಇತ್ತು ನೀನಿರಲಿಲ್ಲ

ಒಂದೆಡೆಗೆ ನಿಲ್ಲದ ಜಗದ ಜಂಗಮ ನೀನು
ಹಾವುಗೆಯ ದೂಳಷ್ಟೇ ಇತ್ತು, ನೀನಿರಲಿಲ್ಲ

ಅರುಣಾಗೆ ಒಮ್ಮೆ ಮುಖಾಮುಖಿಯಾಗು ಕನಕ
ನಿನ್ನೆದೆಯ ಪ್ರೀತಿಯಷ್ಟೇ ಇತ್ತು ನೀನಿರಲಿಲ್ಲ


     

About The Author

Leave a Reply

You cannot copy content of this page

Scroll to Top