ಗಣೇಶ್ ವಿ. ಕವಿತೆ-ಅಂದು-ಇಂದು

ಕಾವ್ಯ ಸಂಗಾತಿ

ಗಣೇಶ್ ವಿ

ಅಂದು-ಇಂದು

ಅಂದು-ಇಂದ ಅಂದಿನ ದಿನಗಳಲಿ ಜನ ಸಂತಸದಿ ಬಾಳುತ
ಕಣ್ತುಂಬ, ಬಾಯ್ತುಂಬ ನಗು ನಗುತಲಿತ್ತಿದ್ದರು
ಮಂದಿಮಂದಿಎಲ್ಲ ರೂ ಮನದಾಳದೊಳಗಿಂದ
ಮನಬಿಚ್ಚಿ ನಗು ನಗುತ ನಲಿದಾಡುತದಲಿದ್ದರು

ಇಂದು ನಕ್ಕರು ಕೂಡ ಸಿಡುಕಿನಲಿ ನಗುವರು
ನಗುವಿನಲಿ ಉರಿನೋಟ ತುಂಬಿಕೊಂಡಿರುವುದು
ಆ ಉರಿನೋಟದೊಳಡಗಿರುವ ಹಗೆತನದ ಸೇಡು
ನಮ್ಮಲಿರುವ ದೋಷಗಳನು ಹುಡುಕಾಡುತಿಹುದು

ನಗುನಗುತ ಅವರಂದು ಕೈ ಕುಲುಕುತ್ತಿದ್ದ ಪರಿ
ಹೃದಯದ ಪ್ರೀತಿಯನು ಎತ್ತಿ ತೋರಿಸುತಲಿತ್ತು
ಮುದವಿಲ್ಲದೆ ಕೈ ಕುಲುಕುವ ಇಂದಿನ ಈ ಪರಿ
ನಮ್ಮಿಂದ ಬರುವ ಲಾಭಕೆ ಹಾತೊರೆಯುತಿಹುದು.

‘ನಿಮ್ಮ ಮನೆ ಎಂದೇ ತಿಳಿಯಿರಿ, ಆಗಾಗ ಬನ್ನಿ’
ಎಂದೇನೋ ಹೇಳುತ್ತಾರೆಂದಾಗಾಗ ಬಂದರೆ,
ಒಂದೆರಡು ಬಾರಿ ಸರಿ, ಮೂರನೇ ಬಾರಿಯಲಿ
ಕದವೇ ಮುಚ್ಚಿಹೋಗುವುದು ನಮ್ಮ ಪಾಲಿಗೆ

ಈಗೀಗ ನಾನೂ ಆ ಪರಿ ನಗುವುದ ಕಲಿತಿಹೆ
ಮನಬಿಚ್ಚಿ ನಗುವುದನು ಮರೆತಿರುವೆನಾಗಲೆ
“ನಿಮ್ಮನು ನೋಡಿ ಹಾಲು ಕುಡಿದಂತಾಯಿತು”
ಎನುತ ಹೃದಯಹೀನನಾಗಿ ಕೈಕುಲುಕುವೆನು.

ಸಾಕಷ್ಟು ಕೊರೆಸಿಕೊಂಡರೂ ಅವರ ಹೊಗಳುತ
ತುಂಬಾ ಚೆನ್ನಾಗಿ ಮಾತನಾಡಿದಿರಿ ಎಂದೆನುವೆನು.
‘ಹೋಗಿ ಬನ್ನಿರಿ’ ಎಂದು ಮಾತಿನಲಿ ಹೇಳಿದರೂ
‘ಪೀಡೆ ತೊಲಗಿತಲ್ಲ’ ಎನುತ ಸಂತಸಪಡುವೆನು
————————————————-

ಗಣೇಶ್ ವಿ.

Leave a Reply

Back To Top