ಕಾವ್ಯಯಾನ

ಉರಿಪಾದವ ಊರಿನಿಂತ ಹೆಜ್ಜೆಗೆ

ಎಸ್.ಕೆ.ಮಂಜುನಾಥ್

ಇಟ್ಟಿಗೆ ಕಲ್ಲು ಹೊತ್ತು ಕಟ್ಟಿದ
ಯಾವ ಮಹಲು ನಮ್ಮದಲ್ಲ
ನೆರಳನು ನೀಡುತ್ತಿಲ್ಲ
ಕೈಬೀಸಿ ಕರೆದ ನಗರ
ಕತ್ತು ಹಿಡಿದು ನೂಕಿತ್ತಲ್ಲ

ಹಸಿವೆಂದು ಬಂದೆವು
ಹಸಿವಿಗಾಗಿ ದುಡಿದೆವು
ಮತ್ತೆ ಮತ್ತೆ ಹಸಿವ ಹೊಟ್ಟೆ
ಬೆನ್ನ ಮೇಲೆ ಹೊರೆಯ ಕಟ್ಟೆ
ಹಸಿವಿನಿಂದ ಅಳುವ ಮಗು
ಬೀದಿಬದಿಯ ಅನ್ನದೊಡೆಯ
ಕಾಣದಾದನು ಎಲ್ಲಿಗೋದನು

ಕರೆತಂದು ಬಿಟ್ಟ ಯಾವ
ಬಸ್ಸು ರೈಲು ಕಾಣುತ್ತಿಲ್ಲ
ಈ ಹೆಜ್ಜೆಗೂ ಈ ದಾರಿಗೂ
ನಂಟು ಇನ್ನು ಮುಗಿದಿಲ್ಲ

ಹಸಿವ ಗಂಟುಮೂಟೆ ಕಟ್ಟಿಕೊಂಡು
ತಲೆಯ ಮೇಲೆ ಹೊತ್ತುಕೊಂಡು
ತಾವೇ ಮಾಡಿದ ಹೆದ್ದಾರಿಯ ಮೇಲೆ
ಮೈಲುಗಲ್ಲು ಎಣಿಸುತ್ತ ಹೆಜ್ಜೆ ಇಟ್ಟುಕೊಂಡು
ಭಾರತ ಬರಿಗಾಲಲಿ ನಡೆಯುತ್ತಿದೆ

ಬಿಟ್ಟುಬಂದ ಹುಟ್ಟಿದೂರ
ದಾರಿ ಹಿಡಿದು ಹೊರಟರು
ಯಾರಾದರು ಅಪ್ಪತಪ್ಪಿ ಅಲ್ಲಿ
ಕೇಳದಿರಲಿ ಇವರ ಹೆಸರು

(ಅಲೆಮಾರಿ ಪಾದಗಳಿಗೆ ಅರ್ಪಿತ)

**********

Leave a Reply

Back To Top