ಅಂಬೇಡ್ಕರ್ ಜಯಂತಿ ವಿಶೇಷ

ಈರಪ್ಪ ಬಿಜಲಿ.ಕೊಪ್ಪಳ

ಗಝಲ್

ಸಂವಿಧಾನ ರಚಿಸಿ ಪ್ರಜಾಪ್ರಭುತ್ವದ ಮೌಲ್ಯ ಜಗಕೆ ತೋರಿದೆಯಾ ಬಾಬಾ ಸಾಹೇಬ ಅಂಬೇಡ್ಕರ
ಸಮಾನತೆ ಶಿಕ್ಷಣ ಸಂಘಟನೆಗಾಗಿ ಜನರಲಿ ಕಿಚ್ಚು ಹಚ್ಚಿದೆಯಾ ಬಾಬಾ ಸಾಹೇಬ ಅಂಬೇಡ್ಕರ ||

ಹೆಜ್ಜೆ ಹೆಜ್ಜೆಗೂ ಅವಮಾನಗಳ ಸಹಿಸುತ ಮುನ್ನಡೆದೆಯಲ್ಲ ನೀನು
ಹೆಜ್ಜೆ ಗುರತು ಚರಿತೆ ಪುಟದಲಿ ಅಳಿಸದಂತೆಮುದ್ರೆ ಒತ್ತಿದೆಯಾ ಬಾಬಾ ಸಾಹೇಬ ಅಂಬೇಡ್ಕರ ||

ಸಮಾಜದ ತಲ್ಲಣಗಳಿಗೆ ಅನ್ಯರು ನಿನ್ನಂತೆ ಸ್ಪಂದಿಸಲಿಲ್ಲವೇಕೆ
ವಿಷಮತೆಯ ಆಚರಣೆಗಳ ವಿರುದ್ಧ ಒಂಟಿ ಧ್ವನಿ ಕೂಗಿದೆಯಾ ಬಾಬಾ ಸಾಹೇಬ ಅಂಬೇಡ್ಕರ ||

ನವಭಾರತವು ಕಂಡ ಬೆಂಕಿಯಲ್ಲಿ ಅರಳಿದ ಹೂವಾದೆಯಲ್ಲ
ಲೋಕವೇ ಸದಾ ಸ್ಮರಿಸುವ ಪರಂಜ್ಯೋತಿಯೆ ನೀನಾದೆಯಾ ಬಾಬಾ ಸಾಹೇಬ ಅಂಬೇಡ್ಕರ ||

ದಲಿತ ಶೋಷಿತ ವರ್ಗದವರ ಬಾಳಲಿ ಬಿಜಲಿ ಮೂಡಿಸಿದೆಯಲ್ಲ
ಸ್ವಾತಂತ್ರ್ಯ ಸಹಬಾಳ್ವೆಗಾಗಿ ಕಾನೂನುಗಳ ಹೊತ್ತಿಗೆ ನೀಡಿದೆಯಾ ಬಾಬಾ ಸಾಹೇಬ ಅಂಬೇಡ್ಕರ ||


Leave a Reply

Back To Top