ಸುಮಾ ರಮೇಶ್ ಕವಿತೆ-“ಅಪರಾಧ ಸಾಬೀತಾಗಿದೆ”

ಕಾವ್ಯ ಸಂಗಾತಿ

ಸುಮಾ ರಮೇಶ್

ಅಪರಾಧ ಸಾಬೀತಾಗಿದೆ”

ಅಮಾಯಕಳ ಮೇಲೆಸೆಗಿದ ಘೋರ
ದೌರ್ಜನ್ಯಕ್ಕೆ ಶಿಕ್ಷೆಯಾಗಲೇ ಬೇಕಲ್ಲವೆ?
ನಿಸ್ವಾರ್ಥ ಪ್ರೀತಿ ತೋರಿದವಳ ಒಡಲನ್ನೇ
ಬಗೆದು ಅವಳ ಸಂಪತ್ತನ್ನೇ
ಅಪಹರಿಸಿ ಮೆರೆದವರಲ್ಲವೆ?
ಬಯಸಿದ ಸುಖಗಳನ್ನೆಲ್ಲಾ ಅನುಭವಿಸಿ
ಬಯಕೆ ತೀರಿದ ಮೇಲೆ ಮುಖ ತಿರುಗಿಸಿ
ಅನಾದರ ತೋರಿದವರಲ್ಲವೆ?
‘ನಿಮ್ಮಿಂದ ನನಗೇನೂ ಬೇಕಿಲ್ಲ;
ನಾನಿಲ್ಲದೆ ನಿಮಗುಳಿವಿಲ್ಲ’
ಎಂದವಳ ಅಂಗಾಂಗಳನ್ನು
ಸ್ವಾರ್ಥಕ್ಕಾಗಿ ಊನಗೊಳಿಸಿದವರಲ್ಲವೇ?
ಪ್ರತಿ ಸಲವೂ ನೋವಿನಿಂದ
ಹೊತ್ತವಳು ನರಳಿದಾಗ
ನಿರ್ಲಕ್ಷ್ಯ ತೋರಿದವರಲ್ಲವೆ?
ತನ್ನ ತಾನು ಉಳಿಸಿಕೊಳ್ಳಬೇಕೆಂಬ
ಅವಳ ಉತ್ಕಟ ಬಯಕೆಗೆ
ಕಣ್ಣಿದ್ದೂ ಕುರುಡಾದವರಲ್ಲವೆ?
ತನ್ನವರಿಂದ ಸಿಗದ ಬೆಂಬಲಕ್ಕೆ ಎದುರು
ನೋಡದೆ ಆದ ಗಾಯಕ್ಕೆ ತಾನೇ
ಮುಲಾಮು ಹಚ್ಚಿಕೊಂಡರೆ ತಪ್ಪೇನಿದೆ?
ತನ್ನ ನಿಟ್ಟುಸಿರಿನಿಂದ ಅವಳ ಮೈಭಾರ
ಕಡಿಮೆ ಮಾಡಿಕೊಂಡರೆ ವ್ಯಥೆಯೇಕೆ?
ಎಲ್ಲಾ ತಿಳಿದಿರುವ ನಾವು ತಿಳಿಯಲಾರೆವೆ
ಇದರ ಪರಿಣಾಮವೇನು ಎಂಬ
ಸಣ್ಣ ಸಂಗತಿಯನ್ನು?
ಕರ್ಮವೆಂದರೆ ಇದೇ ಅಲ್ಲವೇನು?
ಈಗ ಮಾಡಿದ್ದನ್ನು ಉಣ್ಣಲೇಬೇಕಲ್ಲವೇನು?

—————————————–


ಸುಮಾ ರಮೇಶ್

5 thoughts on “ಸುಮಾ ರಮೇಶ್ ಕವಿತೆ-“ಅಪರಾಧ ಸಾಬೀತಾಗಿದೆ”

    1. ಧನ್ಯವಾದಗಳು ತಮ್ಮ ಪ್ರೋತ್ಸಾಹದ ನುಡಿಗಳಿಗೆ…

      1. ಸಮಯ ಸಂದರ್ಭಗಳಿಗನುಸಾರವಾಗಿದೆ. ಛಿದ್ರ ವಿಕಾರ ಬಿಕಾರಿ ಮಾನಸಿಕ ಸ್ಥಿತಿ ಗತಿಯ ‘ಪೌರುಷ’ ಗಳ ಬಗ್ಗೆಯೂ ವಿಶ್ಲೇಷಿಸಬೇಕಿದೆ. Root Cause of both males who commit these and why women get attracted to erratic men like that, often with symptoms known early enough. ಗಂಡಸಿಗೇಕೆ ನಿರಾಕರಣೆಯನ್ನು ಅರಗಿಸಿಕೊಳ್ಳಲಾಗದಷ್ಟು ಮುಂಗೋಪ?

        1. ನಿಮ್ಮ ಕಾಳಜಿ ಅರ್ಥವಾಯಿತು. ಇದು ಕರೋನಾ ಕಾಲದ ಕವಿತೆ. ಪ್ರಕೃತಿ ಹಾಗೂ ಹೆಣ್ಣನ್ನು ಸಮೀಕರಿಸಿರುವೆನಿಲ್ಲಿ. ಧನ್ಯವಾದಗಳು ತಮ್ಮ ಪ್ರತಿಕ್ರಿಯೆಗೆ.

          1. ನನಗೆ ಮೊದಲು ಅನಿಸಿದ್ದೇ ಭೂತಾಯಿಯ ಮೇಲಿನ ಅತ್ಯಾಚಾರದ ಉಪಮೇಯ. ಆಮೇಲೆ ಇತ್ತೀಚಿನ ಕೆಲವು ದುರ್ಘಟನೆಗಳ ಹಿನ್ನೆಲೆಯಿರಬಹುದೆಂದುಕೊಂಡೆ. ಸ್ತ್ರೀ /ಪ್ರಕೃತಿ -ಪುರುಷ ಸಂಬಂಧ ಚಿತ್ರಣ ನಮ್ಮ ಪ್ರಾಚೀನ ಅಲಂಕಾರ, ಅನುಭಾವ. Cliche ಯ ಮಟ್ಟಿಗೆ. 🙂

Leave a Reply

Back To Top