ಕಾವ್ಯ ಸಂಗಾತಿ
ನಮ್ಮೂರು ಬದಲಾಗೈತಿ ಕವಿತೆ
ಸುರೇಶ ತಂಗೋಡ
ಊರಂದ್ರ ಹಳ್ಳ-ಕೊಳ್ಳ
ಇರ್ಲೇಬೇಕಲ್ಲ
ಅಂತಾದೊಂದು ನಮ್ಮೂರಾಗೂ ಇತ್ತಲ್ಲ
ಬ್ಯಾಸಿಗ್ಯಾಗೂ ಅದು ಜುಳು ಜುಳು ಹರಿತಿತ್ತಲ್ಲ
ಆದ್ರ ಅದು ಇಲ್ಲ
ಹಳ್ಳದೊಳಗಿನ ಉಸುಕು ತೆಗೆಯೊಕೆ ಹೋಗಿ
ಅದರ ಉಸಿರಾ ಕೊಂದಾರಲ್ಲ…
ನಮ್ಮೂರಿಗೆ ಹೋಗೊ ದಾರಿ
ಬಾಳ ದಿನ ಆತೂ ಡಾಂಬಾರಾಗಿ
ಇಲೆಕ್ಷನ್ ಟೈಮಿನ್ಯಾಗ ಮತ್ತ್ ಆಗ್ತದ್ ಅದು
ಮದುವಣಗಿತ್ತಿಯಾಗಿ.
ಆದ್ರ್ ಇತ್ ಇತ್ಲಾಗ
ಊರ ರೋಡಿನ ಮ್ಯಾಲ್
ಹತ್ತ್ ಗಾಲಿ ಗಾಡಿ ಬಲತ್ಕಾರ ಮಾಡಿ
ರೋಡ್ ಸೇಪ್ ಹಾಳ್ಮಾಡ್ಯಾವು.
ಜಾತ್ರಿಯೊಳಗ ಜನ-ಜಂಗುಳಿ ಇರ್ತಿತ್ತು
ಆದ್ರ್ ಈಗ ಇಲ್ಲ
ಅಲ್ಲೊಬ್ಬ-ಇಲ್ಲೊಬ್ರ ಕೂಡಿ ತೇರ ಎಳಿತಾರ
ಅದ್ಕ್ ಮೊಬೈಲ್ ಎಂಬ ಹೆಮ್ಮಾರಿ
ಕಾರಣಂತ
ಮನಿಬಿಟ್ಟು ಹೊರ್ಗ್ ಬರ್ದ್ ಇರೋ
ಜನರ ಮ್ಯಾಲ ಕಳಕಮಲ್ಲಪ್ಪ
ಕೋಪಗೊಂಡಾನ.
ಮುಂಜಾನೆ ನಸಿಗಿನ್ಯಾಗ ರೈತರೆಲ್ಲ
ಹೊಲದಾಗ ಕೆಲಸ ಮಾಡ್ತಿದ್ರೂ
ರೊಟ್ಟಿ ಮುಟಿಗಿ ತಿಂದು ನೂರ್ಕಾಲ ಬಾಳ್ತಿದ್ರೂ
ಆದ್ರೆ ಈಗ
ಸೂರ್ಯ ನೆತ್ತಿಮ್ಯಾಗ ಬಂದ್ರೂ ಜನ ಹೊರಗ
ಬರೋದಿಲ್ಲ.
ಎಲ್ಲದ್ಕೂ ಕಾರಣಾನ
ನಮ್ಮೂರು ಬದಲಾಗೈತಿ.
——————–