ಕಾವ್ಯ ಸಂಗಾತಿ
ಸ್ಮಿತಾ ರಾಘವೇಂದ್ರ
ನಿನ್ನೆದೆಯ ಬಯಲು


ಒಳಗೆ ನಿಡುಸುಯ್ವ ನೋವುಗಳು
ನಿನ್ನೊಳಗೆ ಪ್ರತಿಧ್ವನಿಸುವುದಾದರೆ
ಗ್ರೀಷ್ಮ ಋತುವಿನಲ್ಲೂ
ಹಸಿ ಪ್ರೇಮ ಸೂಸುವ ಮರ
ಬಿರು ಜ್ವಾಲೆಯೊಳಗೆ ಸಿಲುಕಿ
ಮತ್ತೆ ಉದುರುವ ಹನಿ
ಒಡಲಾಳದಿಂದ ಹಂಬಲವ ಹೊತ್ತು
ಮತ್ತೆ ಮತ್ತೆ ಅಪ್ಪಳಿಸುವ ಅಲೆ
ಇವೆಲ್ಲದರ ಅಪರಿಮಿತ ಒಲವನ್ನು ನೀನೆಂದೂ
ಅನುಮಾನಿಸಲಾರೆ.
ಬರೀ ಸೋಜಿಗವನ್ನಷ್ಟೇ ಹರವಿ
ಕಡು ಮೋಹದ ಮುದ್ದಿನಲಿ
ಒಂದೊಂದೇ ಪೋಣಿಸುತ್ತ
ಕೊರಳ ಬಳಸಿದ ಹಾರಕ್ಕೆ
ಪ್ರೇಮ ಕಾಮಗಳ
ಹೇಳುವ ಪೆದ್ದು ತನ
ನಾನೆಂದೂ ಮಾಡಲಾರೆ.
ಯಾವ ಹಮ್ಮು ಬಿಮ್ಮುಗಳಿಲ್ಲದೇ
ಅದಮ್ಯ ಪ್ರೇಮದಲ್ಲಿ
ತೆಕ್ಕೆಯ ಗುಡಿಕಟ್ಟಿ
ಹುದುಗಿಸಿ ಕೊಳ್ಳುವೆಯಾದರೆ
ಹೊಸ ಕನಸು ಮೊಳೆಯಲು
ಕೇವಲ ನಿನ್ನೆದೆಯ
ಬಯಲು ಮಾತ್ರ
ಅಸ್ತಿತ್ವ..