ನಯನ. ಜಿ. ಎಸ್. ಕವಿತೆ-ಆತ್ಮ ಜ್ಯೋತಿ

ಕಾವ್ಯ ಸಂಗಾತಿ

ಆತ್ಮ ಜ್ಯೋತಿ

ನಯನ. ಜಿ. ಎಸ್

ಸರ್ವ ಸ್ವಾರ್ಥವನ್ನು ಮರೆತು
ಬದುಕಿನರ್ಥದೊಳಗೆ ಕಲೆತು
ವಿನಯದಲಿ ಜ್ಞಾನ ಅರಿತು
ಸಾಗು ಸಾಗು ಭಾವವೇ,
ಮನ ಬೆಳಗುವ ಆತ್ಮವೇ.

ಸಂಚು – ಚೋದ್ಯ ಅಸುವಿಗೇಕೆ
ಹುಸಿ ತತ್ವ ಸೊಲ್ಲಿಗೇಕೆ
ಚಿಗುರಿಸುತಲಿ ನವ್ಯ ಬಯಕೆ
ಸಾಗು ಸಾಗು ಭಾವವೇ,
ಮನ ಬೆಳಗುವ ಆತ್ಮವೇ.

ಅಂತೆ ಕಂತೆಗಳನು ತೊರೆದು
ಹೃನ್ಮನದಿ ಚೆಲುವು ಮೆರೆದು
ಮಾನವತೆಗೆ ಭಾಷ್ಯ ಬರೆದು
ಸಾಗು ಸಾಗು ಭಾವವೇ,
ಮನ ಬೆಳಗುವ ಆತ್ಮವೇ.

ದರ್ಪ ಮೋಹಗಳನು ಮೆಟ್ಟಿ
ಪ್ರಾಂಜಲತೆಯೊಳು ಕನಸು ಕಟ್ಟಿ
ಆಗುತಲಿ ಗುರಿಗೆ ಜಟ್ಟಿ
ಸಾಗು ಸಾಗು ಭಾವವೇ,
ಮನ ಬೆಳಗುವ ಆತ್ಮವೇ.

ನಗುವಿಗೇಕೆ ಹಿಂಸೆ ಸುಲಿಗೆ
ಕಿಡಿಯದೇಕೆ ಮನದ ಇಳೆಗೆ
ಹಸನುಗೊಳಿಸಿ ನಿತ್ಯ ಬಾಳ್ಗೆ
ಸಾಗು ಸಾಗು ಭಾವವೇ,
ಮನ ಬೆಳಗುವ ಆತ್ಮವೇ.


Leave a Reply

Back To Top