ಜಯಶ್ರೀ ಭ ಭಂಡಾರಿ ಕವಿತೆ-ಗೌರಿ ಮತ್ತು ಗುಲಾಬಿ

ಕಾವ್ಯ ಸಂಗಾತಿ

ಗೌರಿ ಮತ್ತು ಗುಲಾಬಿ

ಜಯಶ್ರೀ ಭ ಭಂಡಾರಿ

ಟೀಚರ್ ಟೀಚರ್ ಕೂಗುತ್ತಾ ಬಂದಳು ಗೌರಿ
ಯಾಕೆ ಗೌರಿ ಕೇಳಿದೆನು  ನಸು ನಗುತಾ
ನಮ್ಮ ಹಿತ್ತಲಿನ ಗುಲಾಬಿ ಅರಳಿದೆ ಎಂದಳು.
ಹೌದಾ ತುಂಬಾ ಸಂತೋಷದ ಸಂಗತಿ ಎಂದೆ.

ಸುಂದರ ಕೆಂಪಾದ ಗುಲಾಬಿಯು ಮುಳ್ಳಿನ
ಗಿಡದಲ್ಲಿ ಮುದ್ದಾಗಿ ಕಾಣುವುದು ಟೀಚರ
ಕೀಳಲು ಹೋದರೆ ಚುಚ್ಚಿ ರಕ್ತ ಬರುವುದು
ಗುಲಾಬಿಯಲಿ ಮುಳ್ಳು ಇರದಿರೆ ಚಂದಿತ್ತು

ಹೌದು ಗೌರಿ ಆದರೆ ಅದು ಗುಲಾಬಿಯ
ದೋಷವಲ್ಲ ಮುಳ್ಳಿನ‌ ದೋಷವಷ್ಟೆ
ಮುಳ್ಳಿನಲಿ ಅರಳಿ ನಗುವುದ ನೋಡಿ ತಿಳಿ
ಕಷ್ಟಗಳಲ್ಲಿ ನಾವು ನಗುವುದ ಕಲಿಯಬೇಕು.

ಮನುಷ್ಯ ಪ್ರಾಣಿ ಪಕ್ಷಿ ಎಲ್ಲರ ಸ್ವಭಾವಗಳು
ಭಿನ್ನ-ಭಿನ್ನ ಗುಣಗಳನ್ನ  ಹೊಂದಿರುತ್ತವೆ.
ದೋಷವನ್ನು ಬಿಟ್ಟು ಒಳ್ಳೆಯದನ್ನು ಮಾತ್ರ
ನಾವು ತೆಗೆದುಕೊಳ್ಳಬೇಕು ಕ್ಷೀರ ಪಕ್ಷಿಯಂತೆ.

ಹಂಸ ಪಕ್ಷಿ ಕೇವಲ ಹಾಲನ್ನು ಹೀರಿ ನೀರನು
ಬಿಟ್ಟು ತನಗೆ ಬೇಕಾದ್ದನ್ನು  ಸ್ವೀಕರಿಸುವುದು
ಅಂತೆಯೇ ಸರ್ವರಲಿ ಶ್ರೇಷ್ಠ ಗುಣವ ಮಾತ್ರ
ಅರಿತು ಸರ್ವಜ್ಞನಂತೆ ಸಾಗಬೇಕು ಗೌರಿ.

ಓಹೋ ಹಾಗಾ, ಆಯ್ತು ಮಿಸ್ ನಾನು ತಂದಿರುವ 
ಮೊದಲ ಪುಷ್ಪ ನೀವೇ ಮುಡಿಯಬೇಕು ಎಂದಳು
ಅಲ್ಲ ಗೌರಿ, ದೇವರಿಗೆ ಮೊದಲು ಅರ್ಪಿಸಬೇಕಿತ್ತು
ನನ್ನ ಕಣ್ಣಿಗೆ ಕಾಣುವ ದೇವರು ನೀವೇ ಟೀಚರ್.

ಚಾಚಾ ನೆಹರುಜಿ ಗುಲಾಬಿ ಇಷ್ಟಪಟ್ಟು ಸದಾ 
    ತಮ್ಮ ಕೋಟಿನ ಜೇಬಿನಲ್ಲಿ ಧರಿಸುತ್ತಿದ್ದರಲ್ಲವೇ
    ಮಕ್ಕಳು ಹಾಗೂ ಕೆಂಪು ಗುಲಾಬಿ ಅವರಿಗೆ ಪ್ರೀತಿ
    ಮಕ್ಕಳ ದಿನಾಚರಣೆಯಲಿ ಹೇಳಿದ ನೆನಪು    

ಮುಗ್ಧ ಮನಸ್ಸಿನ ಗೌರಿಯ  ಪೂಜ್ಯ ಭಾವನೆಗೆ
ನನ್ನ ಮನಸ್ಸು ತುಂಬಿ ಬಂದು ಮೂಕಳಾಗಿ ನಿಂತೆ
ದೋಷವಿಲ್ಲದ ಮಕ್ಕಳ ಮನಸ್ಸು ನಗುವ ಗುಲಾಬಿಯಂತೆ.

—————————–


            
    

3 thoughts on “ಜಯಶ್ರೀ ಭ ಭಂಡಾರಿ ಕವಿತೆ-ಗೌರಿ ಮತ್ತು ಗುಲಾಬಿ

Leave a Reply

Back To Top