ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಗಜಲ್

ಉಷಾಜ್ಯೋತಿ

ಹೇಗೆ ಹೇಳಲಿ ಮನದ ತಳಮಳ ಕೇಳಲೊಲ್ಲನು ಇನಿಯನು
ಬೇಗ ತಿಳಿಸುವೆ ಎದೆಯ ಕಳವಳ ತಿಳಿಯಲೊಲ್ಲನು ಇನಿಯನು

ಹಗಲು ಇರುಳನು ಒಂದುಗೂಡಿಸಿ ಕನಸನೊಂದನು ಹೊಸೆದೆನು
ಒಲವ ಗಾನವ ಹಾಡಿದಾಗಲೂ ಅರಿಯಲೊಲ್ಲನು ಇನಿಯನು

ಬೆಳ್ಳಿ ಚಂದಿರ ಬೆಳಕು ಚೆಲ್ಲುತ ಮೆಲ್ಲನೆ ಕರೆದನಲ್ಲವೆ ನಮ್ಮನು
ಬಳಿಗೆ ಕುಣಿಯುತ ಬಂದರೂ ಹಟ ಬಿಡಲೊಲ್ಲನು ಇನಿಯನು

ಮುನಿಸು ತೋರುತ ಮನವ ಕಾಡುತ ದೂರದಲಿ ನಿಂತನು
ಚೆಲುವ ಕಂಗಳಿನ ಮೌನ ಕಾವ್ಯವ ಓದಲೊಲ್ಲನು ಇನಿಯನು

ಉಷೆಯ ಮಾನಸ ಸರೋವರದಲಿ ಈಜಾಡುವ ಜಾಣನು
ವಿರಹದುರಿಯಲಿ ಬೆಂದರೂ ಬಳಿಗೆ ಬಾರಲೊಲ್ಲನು ಇನಿಯನು


About The Author

Leave a Reply

You cannot copy content of this page

Scroll to Top