ಕಾವ್ಯ ಸಂಗಾತಿ
ಗಜಲ್ ಖಜಾನೆ
ವಾಣಿ ಭಂಡಾರಿಯವರ ಗಜಲ್ ಗಳು
ಗಜಲ್ ಒಂದು
ಎದೆಯಾಳದ ನೋವಿಗೆ ಈಗೀಗ ಮುಲಾಮು ಬೇಡವಾಗಿದೆ.
ಮಡುಗಟ್ಟಿದ ಮೌನಕ್ಕೆ ಈಗೀಗ ಮಾತು ದೂರವಾಗಿದೆ.
ತೆರೆದ ದಿಲ್ ನಲ್ಲಿ ಚುಚ್ಚಿದ ಮುಳ್ಳುಗಳು ಲೆಕ್ಕವಿಲ್ಲದಷ್ಟು
ಬಡಿಯುವ ನೋವಿನಲೆಗಳಿಗೆ ಈಗೀಗ ನನ್ನೆದೆಯೇ ಹಿತವಾಗಿದೆ.
ದೂರವಿದ್ದ ಬಂಧಗಳು ರಕ್ತ ಕಾರುತ್ತಿವೆ ಕಣ್ಣಿನಲ್ಲೇ
ಸೋಲುತ್ತಿರುವ ಹೆಜ್ಜೆಗೆ ಈಗೀಗ ಕನವರಿಕೆಯೇ ಭಯವಾಗಿದೆ
ನಸೀಬ್ ಗೆ ಬಂದಳಿಕೆ ಬಡಿದು ಬೆಪ್ಪಾಗಿ ನರಳಿ ಕೂತಿದೆ
ಬಾಡಿದ ಮನಸಿಗೆ ಈಗೀಗ ಸಂಬಂಧವು ದುಬಾರಿಯಾಗಿದೆ.
ವಾಣಿಯ ಮನದಾಳ ಮೊಗದಂಗಳಕೆ ಮಳೆಬಿಲ್ಲ ಚೆಲ್ಲಲಿ
ಒಂಟಿ ಪಯಣಕ್ಕೆ ಈಗೀಗ ಮುಂದಿನ ದಾರಿ ಗೋಚರಿಸಿದೆ.
***
ಗಜಲ್–ಎರಡು
ಆಗಾಗ ಚುಚ್ವಿದ ಗಾಯಗಳು ಮಾಯುತ್ತಿಲ್ಲ ಬುದ್ದಿ ಬರಲೆಂದೆ ಇರಬೇಕು.
ಆಗಾಗ ಲದ್ದಿ ಹಿಡಿದ ಬುದ್ದಿ ಓಡುವುದಿಲ್ಲ ಸಮಯ ನನ್ನದಲ್ಲವೆಂದೆ ಇರಬೇಕು.
ಬಗಲಿಗೆ ಇರಿದ ಅದೆಷ್ಟೋ ಚೂರಿಗಳು ನೆನಪಿಸುತ್ತಿವೆ ನಾಳೆಯನ್ನು
ಆಗಾಗ ಬೆಂದ ನೋವುಗಳು ರೋದಿಸುತ್ತಿಲ್ಲ ದಾರಿ ದೀಪವಾಗಲೆಂದೆ ಇರಬೇಕು.
ಚಿಂತೆಗೆ ಬಡತನವಿಲ್ಲ ಚಿತೆ ನಿತ್ಯ ಉರಿಯುವುದು ಅಗಸೆ ಬಾಗಿಲಿನಲಿ
ಈಗೀಗ ಗಾಳಿ ಮಾತುಗಳು ನಡೆಯುವುದಿಲ್ಲ ಸತ್ವ ಸಾಯದಿರಲೆಂದೆ ಇರಬೇಕು.
ಬಾಜಿಕಟ್ಟಿದ ಬಯಲು ಈಗ ಅಳುತ್ತಿದೆ ಬಿಕಾರಿಯಂತೆ ಬೀಕ್ಷೆ ಬೇಡುತಾ
ಆಗಾಗ ನಿಂತ ನೆರಳು ಕಾಣುವುದಿಲ್ಲ ಲೋಕಕ್ಕೆ ಉತ್ತರ ನೀಡಲೆಂದೆ ಇರಬೇಕು.
ಬಾಳು ಕನ್ನಡಿ ನೆನಪಿಸುತ್ತಿದೆ ಒಡೆಯದಂತೆ ಬಾಚಿ ಬದುಕಬೇಕು
ಆಗಾಗ ವಾಣಿಗಳು ಮಥಿಸುತ್ತಿವೆ ತೋರುತ್ತಿಲ್ಲ ಜಗಕೆ ಶಾಂತಿ ಸಾರಲೆಂದೆ ಇರಬೇಕು.
***
ಗಜಲ್ ಮೂರು
ತೆರೆದ ಹೃದಯದ ಮೇಲೆ ಹೂವ ಹಾಸಿ ಕಾದಿದ್ದೆ ನೀ ಬರಲೇ ಇಲ್ಲ
ಮನದ ಕದ ತೆರೆದು ಮಲ್ಲಿಗೆ ಘಮ ಬೀರಿದ್ದೆ ನೀ ಬರಲೇ ಇಲ್ಲ.
ಸಂಜೆ ಹೊಂಬಣ್ಣದಲ್ಲಿ ಚಿತ್ತಾರ ಬರೆಯಲು ನಿನ್ನ ನಗುವಿನಂಬಾರಿ ಕಾಣಲಿಲ್ಲ
ಇರುಳ ತೊರೆದು ಹಗಲ ತಂಗಾಳಿ ತಬ್ಬಿದ್ದೆ ನೀ ಬರಲೇ ಇಲ್ಲ.
ಮುಂಗುರುಳಿನ ಕಾತುರ ಮಲ್ಲೆ ಆತುರ ತಣಿಸದೆ ಮೌನಿಯಾದೆ
ಕಣ್ಣಂಚಿನಲಿ ಪ್ರೀತಿ ತುಂಬಿ ಕಾಡಿಗೆಲಿ ಕಾದು ಕೂತಿದ್ದೆ ನೀ ಬರಲೇ ಇಲ್ಲ.
ಕನಲಿದ ಕನಸುಗಳು ತತ್ರಾಣಿಯಲ್ಲಿ ಮಿಂದು ಶುದ್ದವಾಗುತಿವೆ
ಭಾವ ತುಂಬಿ ಶೃತಿ ಬೆರೆಸಿ ನಿನಗಾಗಿ ಹಾಡಿದ್ದೆ ನೀ ಬರಲೇ ಇಲ್ಲ.
ವಾಣಿ ಮೆಲ್ಲುಸಿರು ಮೀಟುತಲಿತ್ತು ಬಯಲಿನಲ್ಲಿ ಬಯಲಾಗಿ
ಭಾವಕ್ಕೆ ಬಣ್ಣದೋಕುಳಿ ಬೆರಸಲು ಬಯಸಿದ್ದೆ ನೀ ಬರಲೇ ಇಲ್ಲ.
ವಾಣಿ ಭಂಡಾರಿ