ಶಾಲ್ಮಲಾ ಓ ನನ್ನ ಶಾಲ್ಮಲಾ’ದ  ಚಂದ್ರಶೇಖರ ಪಾಟೀಲರು..!

ವಿಶೇಷ ಲೇಖನ

ಶಾಲ್ಮಲಾ ಓ ನನ್ನ ಶಾಲ್ಮಲಾ’ದ  

ಚಂದ್ರಶೇಖರ ಪಾಟೀಲರು..!

ಶಾಲ್ಮಲಾ ನನ್ನ ಶಾಲ್ಮಲಾ  ಚಂದ್ರಶೇಖರ ಪಾಟೀಲರು..!

‘ಚಂಪಾ’ ಎಂದೇ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಇರುವ ಚಂದ್ರಶೇಖರ ಪಾಟೀಲರು ಕವಿ, ನಾಟಕಕಾರ. ಅಲ್ಲದೇ ಕನ್ನಡನಾಡಿನ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಚಳುವಳಿಗಳ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ’ಚಂಪಾ’ ಅವರದು..!

ಚಂಪಾ ಅವರು ಹಾವೇರಿ ಜಿಲ್ಲೆಯ ಹತ್ತೀಮತ್ತೂರಿನಲ್ಲಿ ಜನಿಸಿದವರು. ತಂದೆ ಬಸವರಾಜ ಹಿರೇಗೌಡ ಪಾಟೀಲ ಅಂತ. ತಾಯಿ ಮುರಿಗೆವ್ವ ಅಂತ. ಹತ್ತೀಮುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸವಾಯಿತು ಚಂದ್ರಶೇಖರ ಪಾಟೀಲರದು. ಹಾವೇರಿಯಲ್ಲಿ ಹೈಸ್ಕೂಲು ಶಿಕ್ಷಣ ಪಡೆದ ಅವರು ಹೆಚ್ಚಿನ ಅಧ್ಯಯನಕ್ಕಾಗಿ ಧಾರವಾಡದ ಕರ್ನಾಟಕ ಕಾಲೇಜು ಸೇರಿದವರು. ಕಾಲೇಜಿನಲ್ಲಿದ್ದ ದಿನಗಳಲ್ಲಿಯೇ ‘ಚಂಪಾ’ ಅವರ ಅಕ್ಷರಗಳಿಗೆ ಕಾವ್ಯದ ಗರಿ ಮೂಡಿದವು. ಆಗ ಖ್ಯಾತ ಕವಿ ಗೋಕಾಕವರು ಕರ್ನಾಟಕ ಕಾಲೇಜಿನಲ್ಲಿದ್ದರು.

’ನಮಗೆಲ್ಲ ಕಾವ್ಯಲೋಕದ ರಹಸ್ಯಗಳನ್ನು ತೋರಿಸಿಕೊಟ್ಟವರು ಗುರು ವಿ.ಕೃ. ಗೋಕಾಕರು’ ಎನ್ನುವ ಚಂಪಾ ಅವರು ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ಅವರ ಪ್ರಥಮ ಕವನ ಸಂಕಲನ ‘ಬಾನುಲಿ’ ಪ್ರಕಟವಾಯಿತು.

ನವ್ಯ ಮಾರ್ಗದಲ್ಲಿ ತಮ್ಮ ಕಾವ್ಯ ಕೃಷಿ ಆರಂಭಿಸಿದ ಚಂದ್ರಶೇಖರ ಪಾಟೀಲ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 1962ರಲ್ಲಿ ಇಂಗ್ಲಿಷ್ ಎಂ.ಎ. ಪದವಿಯನ್ನು ಮುಗಿಸಿದರು.

ತಾವು ಓದಿದ ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ‘ಚಂಪಾ’ ಅವರು ಗೆಳೆಯರಾದ ಗಿರಡ್ಡಿ ಗೋವಿಂದರಾಜು, ಸಿದ್ದಲಿಂಗ ಪಟ್ಟಣ ಶೆಟ್ಟಿ ಜೊತೆ ಸೇರಿ 1964 ರಲ್ಲಿ  ’ಸಂಕ್ರಮಣ’ ಎಂಬ ದ್ವೈಮಾಸಿಕ ಸಾಹಿತ್ಯ ಪತ್ರಿಕೆ ಆರಂಭಿಸಿದರು. 1976 ರವರೆಗೂ ‘ಸಂಕ್ರಮಣ’ವನ್ನು. ಈ ಮೂರು ಜನರು ಅಂದರೆ ಚಂದ್ರಶೇಖರ ಪಾಟೀಲ, ಗಿರಡ್ಡಿ ಗೋವಿಂದರಾಜ ಮತ್ತು ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಸಂಪಾದಕತ್ವದಲ್ಲಿ ಪ್ರಕಟವಾಯಿತು. ನಂತರ ಮುಂದೆ ಏನಾಯಿತೋ ಏನು ‘ಚಂಪಾ’ ಅವರೇ ಈ ‘ಸಂಕ್ರಮಣ’ ಸಾಹಿತ್ಯಕ ಪತ್ರಿಕೆಯ ಜವಾಬ್ದಾರಿ ವಹಿಸಿಕೊಂಡರು. ಈ ‘ಸಂಕ್ರಮಣ’ದ್ದು ಐದು ದಶಕಗಳ ಕಾಲ ಸತತವಾಗಿ ಪ್ರಕಟವಾದ ಹಿರಿಮೆ ಆಯಿತು.

ಹೈದರಾಬಾದಿನ ವಿದೇಶಿ ಭಾಷಾ ಕೇಂದ್ರೀಯ ಸಂಸ್ಥೆಯಿಂದ ಇಂಗ್ಲಿಷ್‌ನಲ್ಲಿ ಡಿಪ್ಲೊಮಾ ಪದವಿ ಪಡೆದಿರುವ ಚಂದ್ರಶೇಖರ ಪಾಟೀಲರು ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ಭಾಷಾಶಾಸ್ತ್ರದಲ್ಲಿ ಎಂ.ಎ. ಪದವಿಯನ್ನೂ ಗಳಿಸಿದರು. ಕರ್ನಾಟಕ ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾಗಿ, ಛೇರ್‌ಮನ್ ಆಗಿ ನಿವೃತ್ತರಾಗಿ ಬೆಂಗಳೂರಿನಲ್ಲಿ ವಾಸಿವಾಗಿದ್ದರು ಚಂಪಾ ಅವರು.ಎಡಪಂಥೀಯ ರಾಜಕೀಯ ಸಿದ್ಧಾಂತಗಳಿಗೆ ಬದ್ಧವಾಗಿರುವ ಲೋಹಿಯಾವಾದಿ ‘ಚಂಪಾ’ ಅವರು ತುರ್ತುಪರಿಸ್ಥಿತಿಯ ದಿನಗಳಲ್ಲಿ, ಅದನ್ನು ಪ್ರತಿಭಟಿಸಿ, ಜೆ.ಪಿ. ಚಳುವಳಿ ಬೆಂಬಲಿಸಿ ಜೈಲುವಾಸ ಅನಿಭವಿಸಿದವರು..!

ಗೋಕಾಕ್ ಚಳುವಳಿಯ ಪ್ರಮುಖ ನಾಯಕರಲ್ಲಿ ಒಬ್ಬರಾಗಿರುವ ಅವರು ಕರ್ನಾಟಕದ ಭಾಷಾ ಚಳುವಳಿಯಲ್ಲಿ ಸಕ್ರಿಯ ಪಾತ್ರವಹಿಸಿದ್ದವರು ಚಂದ್ರಶೇಖರ ಪಾಟೀಲರು ಅಂದರೆ ಚಂಪಾ ಅವರು. ಹೀಗೆಯೇ ‘ಚಂಪಾ’ರವರು ತಮ್ಮ ಸಾಹಿತ್ಯಿಕ, ಸಾಂಸ್ಕೃತಿಕ, ಮತ್ತು ‘ಜನಪರ ಚಳವಳಿ’ಯ ಮುಂದಾಳು ಆದವರು..!

ಇಂತಹ ಚಂದ್ರಶೇಖರ ಪಾಟೀಲರು ಅಂದರೆ ‘ಚಂಪಾ’ ಅವರು 2022 ರ ಜನೆವರಿ 10 ರಂದು ಅವರು  ಬೆಂಗಳೂರಿನಲ್ಲಿ ನಿಧನರಾದರು..!

ಚಂದ್ರಶೇಖರ ಪಾಟೀಲರ ಅಂದರೆ ಚಂಪಾ ಅವರ ಬಹು ಇಷ್ಟದ ಧಾರವಾಡದ ಶಾಲ್ಮಲಾ ನದಿಯ ಕುರಿತು ಗುಣಗಾನ ಮಾಡಿರುವ ಕವನ ‘ಶಾಲ್ಮಲಾ ಓ ನನ್ನ ಶಾಲ್ಮಲಾ’ ಕವನ ನನಗೆ ಬಹು ಇಷ್ಟವಾದ ಕವನವು.

ಇಂದು ಏಕೋ ಏನೋ ಈ ಚಂಪಾ ಮತ್ತು ಅವರ ‘ಶಾಲ್ಮಲಾ ಓ ನನ್ನ ಶಾಲ್ಮಲಾ’ ನೆನಪಿಗಾಗಿ ಹಾಗೆಯೇ ಈ ಲೇಖನ ಗೀಚಿದೆನು..!ಆ ಚಂಪಾ ಅವರ ‘ಶಾಲ್ಮಲಾ ಓ ಶಾಲ್ಮಲಾ’ ಕವನವನ್ನು ಮೆಲಕು ಹಾಕಿದೆನು. ಆ ಕವನ ಹೀಗಿದೆ ನೋಡಿ..!

ಶಾಲ್ಮಲಾ ನನ್ನ ಶಾಲ್ಮಲಾ

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಒಳಗೊಳಗೇ ಹರಿಯುವವಳು

ಜೀವ ಹಿಂಡಿ ಹಿಪ್ಪೆ ಮಾಡಿ ಒಳಗೊಳಗೇ ಕೊರೆಯುವವಳು, ಸದಾ….

ಗುಪ್ತಗಾಮಿನಿ ನನ್ನ ಶಾಲ್ಮಲಾ..

ಹಸಿರು ಮುರಿವ ಎಲೆಗಳಲ್ಲಿ ಬಸಿರ ಬಯಕೆ ಒಸರುವವಳು

ತುಟಿ ಬಿರಿಯುವ ಹೂಗಳಲ್ಲಿ ಬೆಂಕಿ ಹಾಡು ಉಸುರುವವಳು, ಸದಾ….

ತಪ್ತಕಾಮಿನಿ ನನ್ನ ಶಾಲ್ಮಲಾ..

ಭೂಗರ್ಭದ ಮೌನದಲ್ಲಿ ಧುಮ್ಮೆನುತ ಬಳುಕುವವಳು

ಅರಿವಿಲ್ಲದೆ ಮೈಯ ತುಂಬಿ ಕನಸಿನಲ್ಲಿ ತುಳುಕುವವಳು, ಸದಾ….

ಸುಪ್ತಮೋಹಿನಿ ನನ್ನ ಶಾಲ್ಮಲಾ..

ನನ್ನ ಬದುಕ ಭುವನೇಶ್ವರಿ ನನ್ನ ಶಾಲ್ಮಲಾ,

ನನ್ನ ಹೃದಯ ರಾಜೇಶ್ವರಿ ನನ್ನ ಶಾಲ್ಮಲಾ, ಸದಾ….

ಗುಪ್ತಗಾಮಿನಿ ನನ್ನ ಶಾಲ್ಮಲಾ..


ಕೆ.ಶಿವು.ಲಕ್ಕಣ್ಣವರ

Leave a Reply

Back To Top