ನಿಮಗಿದೆ ಅಂತ್ಯ…

ಕಾವ್ಯಸಂಗಾತಿ

ನಿಮಗಿದೆ ಅಂತ್ಯ…

ಸಿ.ಶಿವಾನಂದ

ಸುಳ್ಳು ಮಾರಾಟ ಮಾಡುವವರೆ
ಸತ್ಯವನ್ನು ಕಾಲಡಿಗೆ ತಳ್ಳಿದವರೆ
ನಿಮಗಿದೆ ಅಂತ್ಯ..

ಮಿಥ್ಯದ ಬಿರುಗಾಳಿಯ ಅಕ್ರಮಣಕ್ಕೆ
ಸತ್ಯದ ಮೌನವೇ ಪ್ರತಿರೋಧ ಒಡ್ಡಿದಂತಿದೆ.
ಅಂಧತ್ವದ ಪ್ರತಿಪಾದಕರೆ,ಅಮಾನವೀಯ ಗುಣದವರೆ
ನಿಮಗಿದೆ ಅಂತ್ಯ….

ಕೊಳಕು ಮನಸ್ಸಿನ ಕಿರಾತಕರೆ
ಬಾಯಲ್ಲಿ ಶಾಂತಿ ಮಂತ್ರ
ಮನಸ್ಸಲ್ಲಿ ಬರೀ ಕುತಂತ್ರ ತುಂಬಿಕೊಂಡವರೆ
ನಿಮಗಿದೆ ಅಂತ್ಯ…

ಸಾಮರಸ್ಯದ ತಿಳಿ ನೀರು ಕಲಕಿದವರೆ
ಸಹಬಾಳ್ವೆಯ ಬದುಕನ್ನು ಛಿದ್ರಗೊಳಿಸಿದವರೆ
ವಿಕೃತ ಖುಷಿಪಡುವ ಅತೃಪ್ತ ಜೀವಗಳೆ
ನಿಮಗಿದೆ ಅಂತ್ಯ…

ದುರಾಸೆಯ ಹಪಾಹಪಿಗಾಗಿ
ವಿಷ ಬೀಜ ಬಿತ್ತಿ ಎಳೆ ಮೊಗ್ಗುಗಳ ಚಿವುಟಿದ
ರಕ್ತ ಪಿಪಾಸುಗಳೆ
ನಿಮಗಿದೆ ಅಂತ್ಯ…


ಸಿ.ಶಿವಾನಂದ

Leave a Reply

Back To Top