ಕಾವ್ಯ ಸಂಗಾತಿ
ಸುಜಾತ ಲಕ್ಷ್ಮೀಪುರ.
ಜಗಳದ ಮಾತಾಡುತ್ತಾರೆ
ಅವರು ಸದಾ ಜಗಳದ ಮಾತನಾಡುತ್ತಾರೆ
ನಾವು ಹಸಿದವರಿಗೆ ಅನ್ನ ನೀಡುತ್ತೇವೆ
ಅವರು ಯುದ್ದವನು ಸಂಭ್ರಮಿಸುತ್ತಾರೆ
ನಾವು ಹಬ್ಬದ ಅಡಿಗೆ ಮಾಡಿ ಬಡಿಸುತ್ತೇವೆ.
ಅವರು ಮುಳ್ಳುಗಳನ್ನೇ ಹಾಸಿ ನೆತ್ತರಿನ ಹೆಜ್ಜೆ ಗುರುತುಗಳನು ಕಣ್ತುಂಬಿಕೊಳ್ಳತ್ತಾರೆ.
ನಾವು ಹೂವಾದ ದೇಹವನೆ ತೇದು ಮಾತು,ನಡೆಯಲ್ಲು ಜೀವಪರ ಕಾಳಜಿಯನ್ನೇ ಮೆರೆಯುತ್ತೇವೆ
ಅವರು ಜಗದುದ್ದಗಲ ತಿರುಗಿ ಜ್ಞಾನ ವಿಜ್ಞಾನ
ಬ್ರಹ್ಮಾಂಡದ ಆಳ ಅಗಲ ತಿಳಿಯಲು ಹೆಣಗುತ್ತಾರೆ
ನಾವು ನಿಂತಲ್ಲೇ ನಿಂತು ಆಳಕೆ ಬೇರಿಳಿಸಿ
ಮನೆಯ ಪ್ರತಿಯೊಬ್ಬರ ಬೇಕುಬೇಡಗಳಲ್ಲಿ ಕಳೆದುಹೋಗುತ್ತೇವೆ
ಅವರು ಸದಾ ಹೊರಗೆ,ಮುಗಿಲೆತ್ತರಕೆ ಪಾದ ಬೆಳೆಸಿ
ಮೋಡ,ನಕ್ಷತ್ರ,ಸೂರ್ಯ ಚಂದ್ರರ ಕನಸು ಕಾಣುತ್ತಾರೆ
ನಾವು ಸದಾ ಎಲ್ಲರೊಳಗೆ ಒಂದಾಗಿ ಮಮತೆಯ ಮಳೆಯಾಗಿ,ಮಕ್ಕಳ ಕಣ್ಣಲ್ಲಿ ನಕ್ಷತ್ರಗಳ ಕಂಡು
ನಮ್ಮವರನ್ನೇ ಸೂರ್ಯ ಚಂದ್ರರೆಂದು ಬದುಕುತ್ತೇವೆ.
ಅವರು ಜಗಳದ ಮಾತಾಡಿದಾಗೆಲ್ಲಾ…
ನಾವು ಮೌನವಾಗಿ ಪ್ರೀತಿ ಮಾಡುತ್ತೇವೆ.
ಸುಜಾತ ಲಕ್ಷ್ಮೀಪುರ
ತುಂಬಾ ಇಷ್ಟ ಆಯ್ತು ಮೇಡಂ
ತುಂಬ ಚೆನ್ನಾಗಿದೆ